ಬೈಕ್ ಅಪಘಾತ.. ಕಾಲಿಗೆ ಪೆಟ್ಟು.. ಲಂಚ ಕೇಳಿದ್ದ ವೈದ್ಯ; ಈ ತಪ್ಪು ಇಡೀ ಪ್ರಭಾಕರ್ ಜೀವನವನ್ನೇ ತಿಂದಿದ್ದೇಗೆ?
ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟರಲ್ಲಿ ಟೈಗರ್ ಪ್ರಭಾಕರ್ ಕೂಡ ಒಬ್ಬರು. ಸಿನಿಮಾದ ಗಂಧಗಾಳಿಯೇ ಗೊತ್ತಿಲ್ಲದ ನಟ ಮುಂದೊಂದು ದಿನ ಕನ್ನಡ ಚಿತ್ರರಂಗದ ಆಸ್ತಿಯಾಗಿಬಿಟ್ಟರು. ಹಾಗಂತ ಟೈಗರ್ ಪ್ರಭಾಕರ್ಗೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಗೀಳು ಇರಲಿಲ್ಲ. ಅದಕ್ಕಾಗಿ ನಿರ್ಮಾಪಕರು, ನಿರ್ದೇಶಕರ ಮನೆ ಮುಂದೆ ಹೋಗಿ ನಿಂತವರೂ ಅಲ್ಲ.
ಸಿನಿಮಾವೇ ಟೈಗರ್ ಪ್ರಭಾಕರ್ ಅವರನ್ನು ಹುಡುಕಿಕೊಂಡು ಹೋಗಿತ್ತು. ಇವರ ಕಟುಮಸ್ತಾದ ದೇಹ, ನಡೆಯುವ ಶೈಲಿ ಹೀಗೆ ಪ್ರಭಾಕರ್ ಸಿನಿಮಾ ಮಂದಿಯನ್ನು ಒಂದೇ ನೋಟದಲ್ಲಿ ಸೆಳೆದು ಬಿಟ್ಟಿದ್ದರು. ಕನ್ನಡ ಬಾರದ ಪ್ರಭಾಕರ್ಗೆ ಮೊದಲ ಸಿನಿಮಾದಲ್ಲಿ ಹೀರೋ ರೋಲ್ ಮಿಸ್ ಆಗುವುದಕ್ಕೆ ಇದೇ ಕಾರಣವಾಗಿತ್ತು.

ಪ್ರಭಾಕರ್ ಕುಟುಂಬ ತಮಿಳುನಾಡು ಮೂಲದವರು. ಈ ಕಾರಣಕ್ಕೆ ಮನೆಯಲ್ಲಿ ತಮಿಳು ಭಾಷೆ ಮಾತಾಡುತ್ತಿದ್ದರು. ಸ್ಕೂಲ್ನಲ್ಲಿ ಇಂಗ್ಲಿಷ್ ಮಾತಾಡುತ್ತಿದ್ದರು. ಈ ಕಾರಣಕ್ಕೆ ಕನ್ನಡ ಓದಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಅದಾಗ್ಯೂ ಮುಂದೆ ಕನ್ನಡ ಕಲಿತು, ಸಂಭಾಷಣೆ ಬರೆಯುವ ಮಟ್ಟಕ್ಕೆ ಹೋದರು. ಮುಂದೊಂದು ದಿನ ಪ್ರಭಾಕರ್ ಅವರ ಪಾಲಿಗೆ ಸಿನಿಮಾವೇ ಪ್ರಪಂಚ ಆಯ್ತು. ಅವರ ಕಾಲಿಗೆ ಆದ ಪೆಟ್ಟು ಇಡೀ ಜೀವನವನ್ನೇ ಕಾಡಿತ್ತು. ಒಂದು ವೇಳೆ ಕಾಲು ಸರಿಯಿದ್ದಿದ್ದರೇ, ಪ್ರಭಾಕರ್ ಇನ್ನೂ ಆಕ್ಟಿವ್ ಆಗಿರುತ್ತಿದ್ದರೋ ಏನೋ.. ಆದರೆ, ವೈದ್ಯರು ಮಾಡಿದ ಯಡವಟ್ಟು ಜೀವನಪೂರ್ತಿ ನೋವು ಉಣ್ಣುವಂತೆ ಮಾಡಿತ್ತು.
ಬೈಕ್ ಅಪಘಾತ ಆದಾಗ ವೈದ್ಯರು ಮಾಡಿದ ಯಡವಟ್ಟು, ಲಂಚದ ಕಥೆಯನ್ನು ಹೇಳುವುದಕ್ಕೂ ಮುನ್ನ ಪ್ರಭಾಕರ್ ಬಗ್ಗೆ ಇನ್ನೂ ಕೆಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಹಿರಿಯ ಪತ್ರಕರ್ತ ಎನ್ಎಸ್ ಶ್ರೀಧರಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ. ಟೈಗರ್ ಪ್ರಭಾಕರ್ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಬಿರಿಯಾನಿಯಿಂದ ಪುಳಿಯೋಗರೆವರೆಗೂ ಸಖತ್ ಆಗಿಯೇ ಅಡುಗೆ ಮಾಡುತ್ತಿದ್ದರು.

"ಪ್ರಭಾಕರ್ ಎಷ್ಟು ಸೊಗಸಾಗಿ ಬಿರಿಯಾನಿ ಮಾಡುತ್ತಿದ್ದರೋ ಅಷ್ಟೇ ಅದ್ಭುತವಾಗಿ ಪುಳಿಯೋಗರೆ ಮಾಡುತ್ತಿದ್ದರು. ಪ್ರಭಾಕರ್ ಅಮ್ಮನ ಜೊತೆ ಅಡುಗೆ ಮನೆ ಸೇರಿಕೊಂಡಿದ್ದರು. ಹಂಗೂ ಹಿಂಗೂ ಮಾಡು ಬಿಎಸ್ಸಿ ಬರುವ ಹೊತ್ತಿಗೆ ನಾನಿನ್ನು ಓದಲ್ಲ ಅಂತ ನಿರ್ಧರಿಸಿದ್ದರು. ಬಿಎಸ್ಸಿ ವರೆಗೂ ಬಿರಿಯಾನಿ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿದ್ದರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್ಎಸ್ ಶ್ರೀಧರಮೂರ್ತಿ.
ಪ್ರಭಾಕರ್ ಒಳ್ಳೆಯ ಫುಟ್ಬಾಲ್ ಪ್ಲೇಯರ್. ಕ್ರೀಡೆ, ಜಿಮ್ ಅಂತ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡಿದ್ದರು. ಅಮ್ಮನ ಬಳಿಕ ಹಠಮಾಡಿ ಬುಲೆಟ್ ಕೊಡಿಕೊಂಡಿದ್ದ ಪ್ರಭಾಕರ್ ಜಿಮ್ ಮುಗಿಸಿ, ಮನೆಗೆ ಮರಳುತ್ತಿದ್ದರು. ಈ ವೇಳೆ ಬೈಕ್ ಅಪಘಾತ ಆಗಿತ್ತು.
"ಈ ವೇಳೆ ಎದುರುಗಡೆ ಲಾರಿ ಬರುತ್ತೆ. ಅದನ್ನು ತಪ್ಪಿಸಲು ಹೋಗಿ ಬೈಕ್ ಸಮೇತ ಮೋರಿಗೆ ಹೋಗಿ ಬೀಳುತ್ತಾರೆ. ಆ ವೇಳೆ ಪ್ರಭಾಕರ್ ಜೀವ ಉಳಿಯುತ್ತೆ. ಆದರೆ, ಅದೇ ವೇಳೆ ಕಾಲಿಗೆ ಏಟು ಬೀಳುತ್ತೆ. ಆಸ್ಪತ್ರೆಗೆ ಸೇರಿಸುತ್ತಾರೆ. ಆವೇಳೆ ವೈದ್ಯರು ಲಂಚ ಕೇಳುತ್ತಾರೆ. ಅದರೆ, ಪ್ರಭಾಕರ್ ಲಂಚ ಕೊಡುವುದಿಲ್ಲ ಎನ್ನುತ್ತಾರೆ. ಅಷ್ಟರೊಳಗೆ ವೈದ್ಯರು ಏನೇನೋ ಮಾಡಿ ರಕ್ತನಾಳವನ್ನೇ ಕತ್ತರಿಸುತ್ತಾರೆ." ಎಂದು ಹಿರಿಯ ಪತ್ರಕರ್ತ ಎನ್ಎಸ್ ಶ್ರೀಧರಮೂರ್ತಿ ಹೇಳಿದ್ದಾರೆ.
ತಾಯಿ ನರ್ಸ್ ಆಗಿದ್ದರಿಂದ ವೈದ್ಯರು ಮಾಡಿದ ಯಡವಟ್ಟು ಗೊತ್ತಾಗುತ್ತೆ. ಮತ್ತೆ ಆಪರೇಷನ್ ಮಾಡಿಸಿ, ಮನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ, ಇದು ಅವರನ್ನು ಜೀವನ ಪರ್ಯಂತ ಕಾಡುತ್ತೆ. ಈ ಒಂದು ತಪ್ಪು ಇಡೀ ಪ್ರಭಾಕರ್ ಜೀವನವನ್ನೇ ಬದಲಾಯಿಸಿತ್ತು. ಆಗಾಗ ಜೀವ ಹಿಂಡುವಂತಹ ನೋವು ಕಾಡುತ್ತಲೇ ಇತ್ತು. ಕೊನೆಯ ದಿನಗಳಲ್ಲಿ ಕಾಲಿಗಾದ ಈ ಗಾಯವೇ ಜೀವವನ್ನೂ ತೆಗೆದಿತ್ತು.


Click it and Unblock the Notifications











