ರವಿಚಂದ್ರನ್ ಸಿನಿಮಾಗೆ ಅಂತ ಹಂಸಲೇಖ ಬರೆದ 20 ಸೀನ್ ಕಾಶಿನಾಥ್ ಚಿತ್ರದ ಪಾಲಾಗಿದ್ದೇಗೆ? ಅದು ಯಾವುದು?
ರವಿಚಂದ್ರನ್ ಹಾಗೂ ಹಂಸಲೇಖ ಇಬ್ಬರ ಜೋಡಿ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವೇ ಇಲ್ಲ. ಇಬ್ಬರೂ ಜೋಡಿಯಾಗಿ ಸೃಷ್ಟಿಸಿದ ಸಿನಿಮಾಗಳು ಇಂದಿಗೂ ಮಾತಾಡುತ್ತಿವೆ. ಇವರಿಬ್ಬರದ್ದೂ ಒಂತರ ಕ್ರೇಜಿ ಜೋಡಿ. ರಿಮೇಕ್ ಸಿನಿಮಾಗಳನ್ನು ಸ್ವಮೇಕ್ ಮಾಡುವ ತಾಕತ್ತು ಇದ್ದಿದ್ದು ಇವರಿಬ್ಬರಿಗೇ. ಪ್ರೇಕ್ಷಕರು ಒರಿಜಿನಲ್ ಸಿನಿಮಾವನ್ನೇ ಮರೆತು ನೋಡುವಂತೆ ಮಾಡುತ್ತಿದ್ದ ದಿಗ್ಗಜರಿವರು.
ಕಾರಣಾಂತರಗಳಿಂದ ಈ ಜೋಡಿ ಇಂದು ಬೇರೆಯಾಗಿದೆ. ಒಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡದೇ ದಶಕಗಳೇ ಆಗಿವೆ. ಇದು ಸಿನಿ ಪ್ರಿಯರಿಗೆ ಆದ ನಷ್ಟವೇ ಸರಿ. ಹೀಗಿದ್ದರೂ, ಇದು ಕೇವಲ ಸಿನಿಮಾಗಷ್ಟೇ ಅನ್ನೋದು ಅಷ್ಟೇ ಸತ್ಯ. ವೈಯಕ್ತಿಕ ಜೀವನದಲ್ಲಿ ಇವರಿಬ್ಬರೂ ಉತ್ತಮ ಗೆಳೆಯರಾಗಿಯೇ ಮುಂದುವರೆದಿದ್ದಾರೆ. ಈ ಜೋಡಿ ಸೃಷ್ಟಿಸಿದ ಸೂಪರ್ ಹಿಟ್ ಸಿನಿಮಾಗಳ ಹಿಂದೆ ದೊಡ್ಡ ದೊಡ್ಡ ಕಥೆಗಳೇ ಇವೆ.

ಅದರಲ್ಲೊಂದು ರವಿಚಂದ್ರನ್ ನಟಿಸಿದ 'ನಾನು ನನ್ನ ಹೆಂಡ್ತಿ' ಸಿನಿಮಾ. ಈ ಸಿನಿಮಾದ ರಿಮೇಕ್ ರೈಟ್ಸ್ ತಂದು ಸಿನಿಮಾ ಮಾಡಲು ಹೊರಟಾಗ ಹಂಸಲೇಖ ಕೆಲವು ದೃಶ್ಯಗಳನ್ನು ಬದಲಾಯಿಸಿದ್ದರಂತೆ. ಸುಮಾರು 20 ಸೀನ್ಗಳನ್ನು ಬರೆದಿದ್ದರು. ಅದನ್ನು ರವಿಚಂದ್ರನ್ ಒಪ್ಪಿಕೊಳ್ಳಲಿಲ್ಲ. ಬಳಿಕ ಆ 20 ಸೀನ್ಗಳನ್ನು ಕಾಶಿನಾಥ್ ಸಿನಿಮಾಗೆ ಬಳಸಿಕೊಳ್ಳಲಾಯ್ತು. ಆ ಸಿನಿಮಾ ಸೂಪರ್ ಹಿಟ್ ಆಯ್ತು. 100 ದಿನದ ಸಂಭ್ರಮಕ್ಕೆ ಸಾಹಸ ಸಿಂಹ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ಕುಮಾರ್ ಹಾಗೂ ಶಂಕರ್ನಾಗ್ ಅತಿಥಿಯಾಗಿ ಆಗಮಿಸಿದ್ದರು. ಹಾಗಿದ್ದರೆ, ಆ ಸಿನಿಮಾ ಯಾವುದು? ಘಟನೆ ಏನು? ಅನ್ನೋದನ್ನು ಹಿರಿಯ ಪತ್ರಕರ್ತ ಎನ್. ಎಸ್. ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ.
'ನಾನು ನನ್ನ ಹೆಂಡ್ತಿ' ತೆಲುಗಿನಿಂದ ತಂದಿದ್ದನ್ನು ಹಂಸಲೇಖ ಸಂಪೂರ್ಣವಾಗಿ ಬದಲಾಯಿಸಿದ್ದರು. ಬದಲಾಯಿಸುವುದರ ಜೊತೆಗೆ ಹೊಸ ಪಾತ್ರವನ್ನು ಸೃಷ್ಟಿ ಮಾಡಿದ್ದರು. ಅವರ ಪ್ರಕಾರ, ನಾಯಕಿ ನಾಯಕನ ಮನೆಗೆ ಬಂದಿರುತ್ತಾಳೆ. ಯಾವುದೇ ಹುಡುಗಿ ಕೂಡ ಹಾಗೇ ಇನ್ನೊಬ್ಬರ ಮನೆಗೆ ಬಂದು ಇರಲ್ಲ. ಒಂದು ವೇಳೆ ಹಾಗೆ ಆದರೆ, ಅದಕ್ಕೊಂದು ಕಾರಣವಿರುತ್ತೆ. ನಾಯಕಿಗೆ ಒಬ್ಬ ಅಣ್ಣ ಇರುತ್ತಾನೆ. ಅವನು ವರದಕ್ಷಿಣೆಯಿಂದ ತೊಂದರೆಗೆ ಒಳಗಾಗಿರುತ್ತಾನೆ. ಹಾಗಾಗಿ ತನ್ನ ತಂಗಿಯನ್ನು ಸೇಡಿಗೆ ಬಳಸಿಕೊಳ್ಳುತ್ತಾನೆ. ಆ ಕಲ್ಪನೆಯಲ್ಲಿ ಒಂದು 20 ಸೀನ್ ಬರೆದಿಟ್ಟಿದ್ದರು. ಆದರೆ, ರವಿಚಂದ್ರನ್ ಅದನ್ನು ಒಪ್ಪಲಿಲ್ಲ. ಅದು ನನ್ನ ಇಮೇಜ್ಗೆ ಧಕ್ಕೆಯಾಗುತ್ತೆ ಬೇಡ ಅಂತ ಹೇಳಿದ್ದರು ಎಂದು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
"ಹಂಸಲೇಖ ಈ 20 ಸೀನ್ ಅನ್ನು ಎತ್ತಿಟ್ಟಿದ್ದರು. ಅದನ್ನು ಹಂಸಲೇಖ ಅವರ ರಂಗಭೂಮಿಯ ಗೆಳೆಯರಾದ ಎಸ್. ಉಮೇಶ್ ಮತ್ತು ಕೆ. ಪ್ರಭಾಕರ್ ಎಂಬುವವರು ಅದನ್ನು ನಾವು ಸಿನಿಮಾ ಮಾಡುತ್ತೇವೆ ಅಂದರು. ಅದನ್ನು ಹಂಸಲೇಖ ಹೊಸತರದಲ್ಲಿ ಸಿನಿಮಾ ಮಾಡಿ ಕೊಟ್ಟರು. ಆ ಸಿನಿಮಾವೇ ಅವಳೇ ನನ್ನ ಹೆಂಡ್ತಿ. ಇದು ಫೇಮಸ್ ಆಯ್ತು. ಅದರಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಮತ್ತು ಮನಸ್ಸಿದು ಹಕ್ಕಿಯ ಗೂಡು ಈ ಎರಡು ಹಂಸಲೇಖ ಅವರಿಗೆ ಪ್ರಿಯವಾದದ್ದು." ಎನ್ನುತ್ತಾರೆ ಎನ್ ಎಸ್ ಶ್ರೀಧರಮೂರ್ತಿ.

ಕಾಶಿನಾಥ್ ಹಾಗೂ ಭವ್ಯಾ ನಟಿಸಿದ 'ಅವಳೇ ನನ್ನ ಹೆಂಡ್ತಿ' ಸೂಪರ್ ಹಿಟ್ ಆಗುತ್ತೆ. ಸಿನಿಮಾದ ಶತದಿನೋತ್ಸವ ಕಾರ್ಯಕ್ರಮವನ್ನು ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗುತ್ತೆ. ಆ ಸಮಾರಂಭಕ್ಕೆ ಸಾಹಸ ಸಿಂಹ ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಕರಾಟೆ ಕಿಂಗ್ ಶಂಕರ್ನಾಗ್ ಮತ್ತು ಸೆಂಚರಿ ಸ್ಟಾರ್ ಶಿವರಾಜ್ಕುಮಾರ್ ನಾಲ್ಕು ಸ್ಟಾರ್ ನಟರು ಅತಿಥಿಗಳಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
"ಅವಳೇ ನನ್ನ ಹೆಂಡ್ತಿ ಏನು ಸಾಬೀತು ಮಾಡಿತ್ತು ಅಂದರೆ, ಯಾವುದೇ ಹೀರೋಗಳು ಇಲ್ಲದೆ, ಹಂಸಲೇಖ ಅವರ ಟ್ಯೂನ್ಗಳೇ ಸಿನಿಮಾವನ್ನು ಗೆಲ್ಲಿಸಬಹುದು ಅಂತ ಗೊತ್ತಾಗಿತ್ತು. ಹೀರೋ ಇದ್ದು, ವೀರಸ್ವಾಮಿ ಅಂತಹ ಪ್ರಡ್ಯೂಸ್ ಇದ್ದು ಗೆಲ್ಲುವುದು ಬೇರೆ. ಹಾಡುಗಳಿಂದ ಗೆಲ್ಲುವುದು ಬೇರೆ ಅಂತ ಪ್ರೂವ್ ಆಯ್ತು." ಎಂದು ಕಾಶಿನಾಥ್ ನಟಿಸಿದ 'ಅವಳೇ ನನ್ನ ಹೆಂಡ್ತಿ' ಯಶಸ್ಸಿನ ಬಗ್ಗೆ ಹೇಳಿದ್ದಾರೆ. ಇಂತಹ ಸಾಕಷ್ಟು ಪ್ರಯತ್ನಗಳನ್ನು ಹಂಸಲೇಖ ಮಾಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ 'ಅಂಜದ ಗಂಡು' ಸಿನಿಮಾಗೆ ನಾದ ಬ್ರಹ್ಮ ಹಂಸಲೇಖ ತೆಗೆದುಕೊಂಡ ರಿಸ್ಕ್ ಎಂತಹದ್ದುಅನ್ನೋದನ್ನು ಎನ್ ಎಸ್ ಶ್ರೀಧರಮೂರ್ತಿ ಸ್ವಾರಸ್ಯಕರವಾಗಿ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳನ್ನು ಹಂಸಲೇಖ ಬೆಂಗಳೂರಿನಲ್ಲಿಯೇ ರೆಕಾರ್ಡ್ ಮಾಡುವುದಾಗಿ ನಿರ್ಧರಿಸಿದ್ದರು. ಆದರೆ, ರವಿಚಂದ್ರನ್ ಯಾವಾಗಲೂ ತಮ್ಮ ಸಿನಿಮಾದ ಹಾಡುಗಳನ್ನು ಚೆನ್ನೈನಲ್ಲಿಯೇ ರೆಕಾರ್ಡ್ ಮಾಡಿಸುತ್ತಿದ್ದರು. ಹೀಗಾಗಿ ರವಿಚಂದ್ರನ್ ಅವರನ್ನು ಒಪ್ಪಿಸುವುದು ಕಷ್ಟವಾಗಿದ್ದರು. ಕೊನೆಗೂ ಸಂಕೇತ್ನಲ್ಲಿ ರೆಕಾರ್ಡ್ ಮಾಡುವುದಕ್ಕೆ ಒಪ್ಪಿದ್ದರು. ಇಲ್ಲಿಂದ ಬೆಂಗಳೂರಿನಲ್ಲಿ ಹೆಚ್ಚು ಹಾಡುಗಳ ರೆಕಾರ್ಡಿಂಗ್ ಆಗುವುದು ಶುರುವಾಯ್ತು.

ಹಂಸಲೇಖ ನಿರ್ಮಾಪಕ ಬಿ ಎನ್ ಗಂಗಾಧರ್ ಅವರ ಹತ್ತಿರ. ನೋಡಿ ನಾವು ಮಿಸ್ಟರ್ ರಾಜ ಸಿನಿಮಾವನ್ನು ಸಂಕೇತ್ನಲ್ಲಿ ರೆಕಾರ್ಡಿಂಗ್ ಮಾಡಿದ್ದೇವೆ. ಅದು ಯಶಸ್ವಿಯಾಗಿದೆ. ಇನ್ನೊಂದು ಬಾರಿ ಸಂಕೇತ್ನಲ್ಲಿಯೇ ರೆಕಾರ್ಡಿಂಗ್ ಮಾಡೋಣ. ರವಿಚಂದ್ರನ್ ಸಿನಿಮಾ ಮಾಡಿದರೆ, ಹೊಸ ಸಂದೇಶ ಹೋಗುತ್ತೆ ಅಂದರು. ರವಿಚಂದ್ರನ್ ನಾನು ಮದ್ರಾಸ್ ಬಿಟ್ಟು ಬೇರೆ ಕಡೆ ಮಾಡುವುದೇ ಇಲ್ಲ ಅಂದರು. ಬಿಎನ್ ಗಂಗಾಧರ್ ಮಿಸ್ಟರ್ ರಾಜ ಮಾಡಿದ್ದೀವಿ ಎಂದಾಗ, ಆಯ್ತು ಎರಡು ಹಾಡು ಮಾಡಿ. ಎಲ್ಲಾ ಹಾಡುಗಳನ್ನು ನಾನು ಒಪ್ಪುವುದಿಲ್ಲ ಅಂದರು. ಆಗ ಹಂಸಲೇಖ ಒಂದು ಸಲಹೆ ನೀಡಿದ್ದರು." ಎಂದು ಅಂಜದ ಗಂಡು ಹಾಡು ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
"ಒಂದು ಕೆಲಸ ಮಾಡೋಣ ಎಲ್ಲಾ ನಾವೇ ಮಾಡುವುದು ಬೇಡ. ಹಿರಿಯ ಗೀತ ರಚನೆಕಾರರ ಜೊತೆ ಒಂದು ಹಾಡು ಬರೆಸೋಣ. ಸೋತರೆ ಅವರದ್ದೂ ಒಂದು ಜವಾಬ್ದಾರಿ ಇರುತ್ತೆ. ದೊಡ್ಡೋರ ಬಳಿ ಹಾಡು ಬರೆಸಿದ್ವಿ ಅಂತ ಹೇಳಿದರೆ ಆಯ್ತು ಎನ್ನುತ್ತಾರೆ. ಹೀಗಾಗಿ ಆರ್ ಎನ್ ಜಯಗೋಪಲ್ ಅವರನ್ನು ಕರೆದುಕೊಂಡು ಬಂದರು. ಆದರೆ, ಆರ್ ಎನ್ ಜಯಗೋಪಲ್ ಅವರಿಗೆ ಹಂಸಲೇಖ ನನ್ನ ಹತ್ತಿರ ಲಿರಿಕ್ಸ್ ಯಾಕೆ ಬರೆಸುತ್ತಿದ್ದಾರೆ. ಅವರೇ ಎಲ್ಲಾ ಮಾಡಿ ಮುಗಿಸುತ್ತಾರಲ್ಲ ಎಂಬುವುದೇ ಆಶ್ಚರ್ಯ. ಇದನ್ನು ಹಂಸಲೇಖ ಹತ್ತಿರ ಹೇಳಿದಾಗ, ನಿಮ್ಮ ಹತ್ತಿರ ಕಲಿಯೋದು ಇದೆ ಎಂದು ಹೇಳಿ ತಪ್ಪಿಸಿಕೊಂಡಿದ್ದರು." ಎನ್ನುತ್ತಾರೆ ಎನ್ ಎಸ್ ಶ್ರೀಧರ ಮೂರ್ತಿ.
ಹಾಗೇ ಅಜದ ಗಂಡು ಸಿನಿಮಾದ ಟ್ಯೂನ್ಗಳು ಹೇಗೆ ರೆಕಾರ್ಡ್ ಆದವು ಅನ್ನೋದನ್ನು ಹೇಳಿದ್ದಾರೆ. "ಹಂಸಲೇಖ ಒಂದು ಟ್ಯೂನ್ ಅನ್ನು ರೆಡಿ ಮಾಡಿದರು. ಅದು ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. ಆ ಹಾಡು ತುಂಬಾನೇ ಸುಂದರವಾಗಿ ಮೂಡಿ ಬಂತು. ಸಂಕೇತ್ನಲ್ಲಿ ಯಶಸ್ವಿ ಆದ್ಮೇಲೆ ಅದನ್ನು ರೆಕಾರ್ಡ್ ಮಾಡಿಕೊಂಡು ರವಿಚಂದ್ರನ್ ಎರಡು ಕಡೆ ಪ್ಲೇ ಮಾಡಿದರು. ಒಂದು ಕಬ್ಬನ್ ಪಾರ್ಕ್ನಲ್ಲಿ ಇನ್ನೊಂದು ಮೈಸೂರು ಟೌನ್ ಹಾಲ್ ಎದುರಿಗೆ. ಸುಮ್ಮನೆ ಯಾವ ಅಂತ ಸೂಚನೆ ಕೊಡದೆ ಪ್ಲೇ ಮಾಡಿದರು. ಜನರು ಹೇಗೆ ಪ್ರತಿಕ್ರಿಯೆ ಕೊಡುತ್ತಾರೆ ಅಂತ ತಿಳಿದುಕೊಳ್ಳುವುದಕ್ಕೆ ಮಾಡಿದ್ದರು. ಜನರು ಇಷ್ಟ ಪಟ್ಟರು. ಆಗ ರವಿಚಂದ್ರನ್ ಅವರಿಗೆ ಕಾನ್ಫಿಡೆನ್ಸ್ ಬಂತು. ಆರ್.ಎನ್ ಜಯಗೋಪಲ್ ಅಂತಹ ಹಿರಿಯರನ್ನು ಕರೆಸಿದ್ದೀರಿ ಒಂದು ಹಾಡು ಬೇಡ. ಎರಡು ಹಾಡು ಬರೆಸಿ ಎಂದಿದ್ದರು. ಹೀಗೆ ಮೊದಲ ಬಾರಿ ಹಿತ್ತಲಿನಲ್ಲಿ ಮಾವ ಬಂದನು ಅನ್ನೋ ಹಾಡನ್ನು ಆರ್.ಎನ್. ಜಯಗೋಪಾಲ್ ಅವರೇ ಬರೆದರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ.


Click it and Unblock the Notifications











