"ಆಕಾಶ್ ಸಿನಿಮಾದ ಈ ಸಾಹಸ ದೃಶ್ಯದಲ್ಲಿ ಪುನೀತ್ ತೊಡೆ ಕಟ್ ಆಗಿತ್ತು"; ಕಣ್ಣಾರೆ ಕಂಡ ಕಿಶೋರ್ ಹೇಳಿದ್ದಿಷ್ಟು
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತೊಂದು ಹುಟ್ಟುಹಬ್ಬ ಸನಿಹದಲ್ಲಿದೆ. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವಿರುವುದರಿಂದ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇತ್ತ ಪಿಆರ್ಕೆ ಸಂಸ್ಥೆ ಪುನೀತ್ ನಟಿಸಿದ ಆಕಾಶ್ ಸಿನಿಮಾವನ್ನು ರಿ-ರಿಲೀಸ್ ಮಾಡುತ್ತಿದೆ.
ಹೌದು, ಮಾರ್ಚ್ 13 ರಂದು ಪುನೀತ್ ರಾಜ್ಕುಮಾರ್, ರಮ್ಯಾ, ಅವಿನಾಶ್, ಕಿಶೋರ್ ನಟಿಸಿರುವ 'ಆಕಾಶ್' ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಿಶೋರ್ ಸಿನಿಮಾ, ಪುನೀತ್ ರಾಜ್ಕುಮಾರ್ ಹಾಗೂ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನ ನಾಲ್ಕನೇ ಸಿನಿಮಾವಾಗಿದ್ದ 'ಆಕಾಶ್'ನಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದ್ದೇಗೆ? ಅನ್ನೋದರಿಂದ ಆಕ್ಷನ್ ಸೀಕ್ವೆನ್ಸ್ನಲ್ಲಿ ಅಪ್ಪು ಏಟು ಮಾಡಿಕೊಂಡಿದ್ದ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.

2025ರಲ್ಲಿ ಬಿಡುಗಡೆಯಾಗಿದ್ದ 'ಆಕಾಶ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಹಾಡುಗಳ ಜೊತೆಗೆ ಪುನೀತ್ ರಾಜ್ಕುಮಾರ್ ಅವರ ಆಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದವು. ಚಲಿಸುತ್ತಿರುವ ಕಾರ್ ಮುಂದೆ ಬಂದು ಎಗರುವ ಆಕ್ಷನ್ ದೃಶ್ಯದ ವೇಳೆ ಏನಾಯ್ತು ಅನ್ನೋದನ್ನು ಕಿಶೋರ್ ಪಿಆರ್ಕೆ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ಅದಕ್ಕೂ ಮೊದಲು ಅವರಿಗೆ ಆಕಾಶ್ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದ್ದೇಗೆ? ಅನ್ನೋದನ್ನು ಹೇಳಿಕೊಂಡಿದ್ದಾರೆ. "ಆಕಾಶ್ಗಿಂತ ಮುಂಚೆ ರಾಕ್ಷಸ ಮಾಡಿದ್ದೆ ನಾನು. ಹೀಗಾಗಿ ಶಿವಣ್ಣ ನನಗೆ ರೆಫರ್ ಮಾಡಿದ ಮೇಲೆ ಶಿವಣ್ಣ ಕರೆದು ನನಗೆ ಆ ರೋಲ್ ಕೊಟ್ಟರು. ವಜ್ರೇಶ್ವರಿ ಆಫೀಸ್ಗೆ ಹೋಗಿದ್ದೆ. ಅಲ್ಲಿ ಚನ್ನಣ್ಣ ಇದ್ದರು. ರಾಘಣ್ಣ ಇದ್ದರು. ಅವರೆಲ್ಲರೂ ಮಾತಾಡಿ ಒಳ್ಳೆಯ ರೋಲ್ ಅನ್ನೇ ಮಾಡು ನೀನು ಎಂದರು. ತುಂಬಾ ಚೆನ್ನಾಗಿ ನೆನಪಿರುವ ಘಟನೆ ಅಂದರೆ, ಆಕಾಶ್ ಮುಹೂರ್ತ ನಡೆಯುತ್ತಿತ್ತು. ಮಹಾಲಕ್ಷ್ಮಿ ಲೇ ಔಟ್ನ ಮನೆಯಲ್ಲಿ ಪೂಜೆ ನಡೀತು. ಆಗ ನಾನಿನ್ನು ಹೊಸಬ ನನ್ನ ಪಾಡಿಗೆ ನಾನು ಹೊರಗೆ ನಿಂತಿದ್ದೆ. ಪೂಜೆ ಮುಗೀತು ಅನ್ಸುತ್ತೆ. ಅಣ್ಣಾವ್ರು ಮೊದಲು ಹೊರ ಬಂದರು. ನನ್ನ ಕಡೆ ನೋಡಿ ಸ್ಮೈಲ್ ಮಾಡಿದೆ. ಹಾಗೆ ಸುತ್ತಲೂ ನೋಡಿ. ಈ ಮರ-ಗಿಡಗಳೆಲ್ಲವೂ ಎಷ್ಟು ಚೆನ್ನಾಗಿದೆ ಅಲ್ವಾ? ಅಂದರು. ಅವರಲ್ಲಿದ್ದ ಆ ಮುಗ್ಧತೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆ ಪ್ರಾಮಾಣಿಕತೆ ಇರೋಕೆ ಸಾಧ್ಯಾನಾ ಅಂತ ಅನಿಸಿತ್ತು. ಅಣ್ಣಾವ್ರು ಆಗಿದ್ದಕ್ಕೆ ಆ ನಂಬಿಕೆ ಇದ್ದೇ ಇತ್ತು. ಅದೊಂದು ನೆನಪಿನಲ್ಲಿ ಉಳಿಯುವಂತಹ ಘಟನೆ" ಎಂದು ಹೇಳಿದ್ದಾರೆ.
ಇನ್ನು ಪುನೀತ್ ರಾಜ್ಕುಮಾರ್ ಅಗಲಿದ್ದನ್ನು ಕಿಶೋರ್ಗೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. "ಅಪ್ಪು ಅವರು ಇವತ್ತು ನಮ್ಮೊಂದಿಗೆ ಇಲ್ಲ ಅನ್ನೋದೇ ನನಗೆ ನಂಬುವುದಕ್ಕೆ ಆಗಲ್ಲ. ಈಗಲೂ ಅದು ಜೀರ್ಣನೇ ಆಗಿಲ್ಲ ಅಂತ ಅನಿಸುತ್ತೆ. ಈಗಲೂ ನಮ್ಮ ಜೊತೆ ಇದ್ದಾರೆ. ಎಲ್ಲೋ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದಾರೆ ಅಂತ ಅನಿಸುತ್ತೆ. ಒಂದು ನಮಗೆ ಅವರನ್ನು ಮರೆಯೋಕೆ ಆಗಲಿಲ್ಲ. ಇನ್ನೊಂದು ಜೀರ್ಣ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಅವರ ಕೆಲಸವನ್ನು ಮೊದಲು ನೋಡಿದ್ದು, ಸದಾಶಿವನಗರದಲ್ಲಿ ಒಂದು ಆಕ್ಷನ್ ಸೀಕ್ವೆನ್ಸ್ ಮಾಡುತ್ತಿದ್ದರು. ಇವರು ಯಾಕೆ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಮಾಡ್ತಾರೆ ಅಂತ ಭಯ ಆಗೋಗಿತ್ತು." ಎಂದು ಅಪ್ಪು ಆಕ್ಷನ್ ಬಗ್ಗೆ ಮಾತಾಡಿದ್ದಾರೆ.

ಆಕಾಶ್ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಪುನೀತ್ ನಿಂತುಕೊಂಡಿರುತ್ತಾರೆ. ಎದುರುಗಡೆ ಒಂದು ಕಾರು ಬರುತ್ತೆ. ಎಗರಿ ಒದ್ದು ಆ ಗ್ಲಾಸ್ ಅನ್ನು ಒಡೆಯಬೇಕು. ಕಾರು ಗ್ಲಾಸ್ ಒಡೆಯುವ ಹಂತದಲ್ಲಿ ಮಾತ್ರ ನಿಲ್ಲುತ್ತೆ. ಆ ಮೇಲೆ ಅದು ಚಲಿಸುತ್ತಿರುತ್ತೆ. ಈ ದೃಶ್ಯದಲ್ಲೇ ಅಪ್ಪು ತೊಡೆಯೇ ಕಟ್ ಆಗಿತ್ತು. ಅದನ್ನು ಕಿಶೋರ್ ವಿವರಿಸಿದ್ದಾರೆ. "ನನಗೆ ಇವರು ಇಂತಹದ್ದೊಂದು ಶಾಟ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಿರಲಿಲ್ಲ. ನಾನು ಅಲ್ಲೇ ಪಾರ್ಕ್ನಲ್ಲಿ ಕೂತಿದ್ದೆ. ಇದ್ದಕ್ಕಿದ್ದ ಹಾಗೇ ಜೋರಾಗಿ ಸೌಂಡ್ ಆಯ್ತು. ಜನರೆಲ್ಲರೂ ತುಂಬಿಕೊಂಡಿದ್ದರು. ಏನು ಅಂತ ಹೋಗಿ ನೋಡಿದರೆ, ಕಾರಿನ ಗ್ಲಾಸ್ ಬ್ರೇಕ್ ಆದಾಗ ಒಂದು ಸೆಕೆಂಡ್ ಲೇಟ್ ಆಗಿದೆ. ಹೀಗಾಗಿ ಕಾಲು ಸ್ಲಿಪ್ ಆಗಿ ಒಂದು ಕಾಲು ಮೇಲಕ್ಕೆ ಹೊರಟು ಹೋಗಿದೆ. ಒಂದು ಕಾಲು ಮೇಲೆ.. ಇನ್ನೊಂದು ಕಾಲು ಕೆಳಗೆ ಹೋಗಿದೆ. ಒಂದು ಕಾಲಿನ ತೊಡೆ ಫುಲ್ ಕಟ್. ಭಯಾನಕವಾದ ಆಕ್ಸಿಡೆಂಟ್ ಅದು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ಅನಿಸಿತ್ತು. ಯಾಕಿಷ್ಟು ರಿಸ್ಕ್ ತಗೋತಾರೆ ಅಂತ. ಆದರೆ, ಆ ಕಮಿಟ್ಮೆಂಟ್ ಇದೆಯಲ್ಲ, ಏನಾದರೂ ಹೊಸದನ್ನು ಮಾಡಬೇಕು ಅಂತ ಅದು ಗ್ರೇಟ್." ಎಂದು ಹೇಳಿದ್ದಾರೆ.
ಇನ್ನು ಪುನೀತ್ ರಾಜ್ಕುಮಾರ್ ಅವರ ನಗುವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. "ಅವರ ನಗು ಮುಖ ಮಿಸ್ ಮಾಡಿಕೊಳ್ತೇವೆ. ಯಾವಾಗಲೂ ನಗುಮುಖ ಇರೋದು. ಅವರು ಕೆಲಸ ಮಾಡುತ್ತಿರುವಾಗಲೂ ಅಷ್ಟೇ. ಎದುರುಗಡೆ ಸಿಕ್ಕಾಗಲೂ ಅಷ್ಟೇ. ಒಂದು ಕಂಫರ್ಟ್ ಕೊಡುತ್ತಾರೆ. ಯಾರೋ ಹೊಸಬರೊಂದಿಗೆ ಕೆಲಸ ಮಾಡುತ್ತಿದ್ದೇವೆ ಅಂತ ಅನಿಸೋದೇ ಇಲ್ಲ. ನಾನು ಆ ಸಿನಿಮಾವನ್ನು ಫ್ಯಾನ್ ತರ ನಾನು ನೋಡಿದ್ದೆ ಅನಿಸುತ್ತೆ." ಎಂದು ಹೇಳಿದ್ದಾರೆ.


Click it and Unblock the Notifications











