ವಿಷ್ಣುದಾದ ಕೊಬ್ಬು ತೆಗೆಸಿಕೊಂಡಿದ್ರಾ? ಅದೇ ಮಾರಕ ಆಯ್ತಾ? ದತ್ತು ಪುತ್ರನಂತಿದ್ದ ಶ್ರೀಧರ್ ಹೇಳಿದ್ದೇನು?
2009ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ದಿಢೀರ್ ಅಗಲಿಕೆ ಕಂಡಾಗ ಅವರ ಅಭಿಮಾನಿಗಳು ಕಂಗಾಲಾಗಿದ್ದರು. ತಮ್ಮ ಕಣ್ಣುಗಳನ್ನು ತಾವೇ ನಂಬದಾಗಿದ್ದರು. ತಮ್ಮ ನೆಚ್ಚಿನ ನಟ ಹೀಗೆ ತಮ್ಮನ್ನು ಬಿಟ್ಟು ಹೋಗಬಹುದೆಂಬ ಚಿಕ್ಕ ಅನುಮಾನವೂ ಇರಲಿಲ್ಲ. ವಿಷ್ಣುದಾದ ಮಧು ಮೇಹದಿಂದ ಬಳಲುತ್ತಿದ್ದರು. ಇದರಿಂದ ಅವರ ಕಾಲಿನ ನೋವು ಉಲ್ಬಣಗೊಂಡಿತ್ತು. ಅದು ಬಿಟ್ಟರೆ, ಅವರಿಗೆ ಬೇರೆ ಏನೂ ಆರೋಗ್ಯ ಸಮಸ್ಯೆಯಿರಲಿಲ್ಲ.
ವಿಷ್ಣುವರ್ಧನ್ ಅಗಲಿದ ಬಳಿಕ ಅವರ ಸಾವಿನ ಸುತ್ತ ನೂರೆಂಟು ಕಥೆಗಳು ಹುಟ್ಟಿಕೊಂಡಿದ್ದವು. ಒಬ್ಬೊಬ್ಬರು ಒಂದೊಂದು ಸುದ್ದಿಗಳನ್ನು ಹರಿಬಿಟ್ಟಿದ್ದರು. ಆದರೆ, ಅದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು? ಅನ್ನೋದು ಅವರ ಅಭಿಮಾನಿಗಳಿಗೆ ಇನ್ನೂ ಗೊತ್ತಿಲ್ಲ. ವಿಷ್ಣುವರ್ಧನ್ ತೂಕ ಇಳಿಸಿಕೊಳ್ಳುವುದಕ್ಕೆ ಕೊಬ್ಬು ತೆಗೆಸಿಕೊಂಡಿದ್ದರು. ಅದೇ ಅವರ ಆರೋಗ್ಯ ಕ್ಷೀಣಿಸುವುದಕ್ಕೆ ಕಾರಣವಾಗಿತ್ತು ಅನ್ನೋ ಸುದ್ದಿಯೊಂದು ಹಲ್ಚಲ್ ಎಬ್ಬಿಸಿತ್ತು.

ಇತ್ತೀಚೆಗೆ ಹಿರಿಯ ಪತ್ರಕರ್ತಿ ಬಿ.ಗಣಪತಿಯ ಅವರು ವಿಷ್ಣುವರ್ಧನ್ ಅವರ ಆಪ್ತ ಶ್ರೀಧರ್ ಅವರನ್ನು ಸಂದರ್ಶನ ಮಾಡಿದ್ದರು. ಈ ವೇಳೆ ವಿಷ್ಣುವರ್ಧನ್ ಕೊಬ್ಬು ತೆಗೆಸಿಕೊಂಡಿದ್ದರು ಅನ್ನೋ ವದಂತಿಗಳಿಗೆ ಶ್ರೀಧರ್ ತೆರೆ ಎಳೆದಿದ್ದಾರೆ. ವಿಷ್ಣುದಾದನ ದೈನಂದಿನ ಲೈಫ್ ಸ್ಟೈಲ್ ಹೇಗಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಆ ಸಂದರ್ಶನದ ಹೈಲೈಟ್ ಹೀಗಿದೆ.
ವಿಷ್ಣುದಾದ ದಿಢೀರನೇ ಅಗಲಿದಾಗ, ಚಿತ್ರರಂಗದಿಂದ ನೂರೆಂಟು ಕಥೆಗಳು ಹುಟ್ಟಿಕೊಂಡಿದ್ದವು. ಕೊಬ್ಬು ತೆಗೆಸಿಕೊಂಡಿದ್ದರು ಅನ್ನೋದು ಕೂಡ ಒಂದು. ಸುಮಾರು ಎರಡು-ಮೂರು ದಶಕಗಳಿಂದ ವಿಷ್ಣುದಾದ ಜೊತೆಯಲ್ಲಿದ್ದ ಶ್ರೀಧರ್ ಅವರು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಕೊಬ್ಬು ತೆಗೆಸಿಕೊಂಡರು ಅಂತೆಲ್ಲ ಹೇಳಿದರು. ಅದೆಲ್ಲ ಶುದ್ಧ ಸುಳ್ಳು. ಆತರಹದ್ದೇನು ಇರಲಿಲ್ಲ. ಬರೀ ಯೋಗ, ಮೆಡಿಟೇಷನ್, ವಾಕಿಂಗ್, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಮಾಡೋರೆ ವಿನ: ಬೇರೆ ಏನೂ ಇಲ್ಲ. ಶುಗರ್ ಇತ್ತು. ಅದು ವೀಕ್ ಮಾಡಿಬಿಡುತ್ತೆ. ಅವರ ಮನೆಯವರಿಗೆ ಎಲ್ಲರಿಗೂ ಇತ್ತು. ಅವರ ಅಕ್ಕ-ತಂಗಿ ಎಲ್ಲರಿಗೂ ಇತ್ತು" ಎಂದು ಶ್ರೀಧರ್ ರಿವೀಲ್ ಮಾಡಿದ್ದಾರೆ.
ವಿಷ್ಣುವರ್ಧನ್ ದೈನಂದಿನ ಬದುಕಿನಲ್ಲಿ ಶಿಸ್ತು ಇತ್ತು. ಬೆಳಗ್ಗೆ ಆರು ಗಂಟೆಗೆ ಎದ್ದು, ಕಾಫಿಯಿಂದ ಶುರುವಾದ ಪೂಜೆ ಮುಗಿಸಿ ಶೂಟಿಂಗ್ಗೆ ಹೊರಟು ಬಿಡುತ್ತಿದ್ದರು. ಸಮಯಕ್ಕೆ ಹೆಜ್ಜೆ ಬೆಲೆಯನ್ನು ಕೊಡುತ್ತಿದ್ದರು. ಆದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿಲ್ಲ ಅನ್ನೋದನ್ನು ದತ್ತು ಪುತ್ರನಂತಿದ್ದ ಶ್ರೀಧರ್ ಹೇಳಿಕೊಂಡಿದ್ದಾರೆ. "ಆರೋಗ್ಯದ ಬಗ್ಗೆ ಕಾಳಜಿ ತೋರಿಸಲಿಲ್ಲ. ಆಯುರ್ವೇದ, ಅದು-ಇದು ಎಲ್ಲಾ ತೆಗೆದುಕೊಂಡರು. ನಾನು ಹೇಳುತ್ತಿದ್ದೆ, ಯಾವುದಾದರೂ ಒಂದನ್ನು ತೆಗೆದುಕೊಳ್ಳಿ ಅಂತ ಹೇಳುತ್ತಿದ್ದೆ. ಏನಾಗುತ್ತೆ ಅಂದರೆ, ನಾಲ್ಕು ಜನ ನಾಲ್ಕು ಹೇಳೋರು. ಆವಾಗ ಏನಾಗುತ್ತಿತ್ತು ಅಂದರೆ, ಇದು ತೆಗೆದುಕೊಂಡರೆ ಸರಿ ಹೋಗುತ್ತೇನೋ ಅಂದುಕೊಳ್ಳೋರು. ಅದು ಅವರಿಗೆ ಎಫೆಕ್ಟ್ ಆಗಿರುವ ಸಾಧ್ಯತೆಯಿದೆ. ವೈದ್ಯರು ನನಗೆ ಸಾಕಷ್ಟು ಬಾರಿ ಹೇಳೋರು" ಎಂದು ಶ್ರೀಧರ್ ಹೇಳಿದ್ದಾರೆ.

ಇನ್ನು ವಿಷ್ಣುವರ್ಧನ್ ಅವರ ಆಹಾರ ಪದ್ಧತಿ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಅಕ್ಕಿ, ರೊಟ್ಟಿ, ಮುದ್ದೆ,ಚಪಾತಿ ಗಸಗಸೆ ಪಾಯಿಸೆ ಎಲ್ಲಾ ಇಷ್ಟ. ಅವರು ನಾನ್ ವೆಜ್ ಕೂಡ ತಿನ್ನೋರು. ಮನೆಯಲ್ಲೆಲ್ಲ ಏನೂ ಮಾಡುತ್ತಿರಲಿಲ್ಲ. ಆದರೆ ತುಂಬಾನೇ ಇಷ್ಟ ಪಟ್ಟು ತಿನ್ನೋರು." ಎಂದು ವಿಷ್ಣುದಾದ ಆಪ್ತ ಶ್ರೀಧರ್ ರಿವೀಲ್ ಮಾಡಿದ್ದಾರೆ.
ಇನ್ನು ವಿಷ್ಣುದಾದ ಕೊನೆಯ ದಿನಗಳಲ್ಲಿ ಅವರಿಗೆ ಒಂದು ನೋವಿತ್ತು. ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದರೂ ಅವು ಬಾಕ್ಸಾಫೀಸ್ನಲ್ಲಿ ಓಡಲಿಲ್ಲ. ಇದೊಂದು ಬೇಸರವಿತ್ತು. ಅಲ್ಲದೆ ಸಾಯಿ ಬಾಬಾ ಸಿನಿಮಾ ಮಾಡಬೇಕು ಅನ್ನೋದು ಅವರ ಕೊನೆಯ ಆಸೆ ಕೂಡ ಆಗಿತ್ತು. "ಕೊನೆಯಲ್ಲಿ ಒಳ್ಳೊಳ್ಳೆ ಸಿನಿಮಾ ಮಾಡಿದ್ದರು. ಆದರೆ, ಅದು ಓಡಲಿಲ್ಲ. ಆ ಕೊರಗು ಇದ್ದೇ ಇತ್ತು. ಅವರಿಗೆ ಸಾಯಿ ಬಾಬಾ ಸಿನಿಮಾ ಮಾಡಬೇಕು ಅಂತ ಆಸೆಯಿತ್ತು. ಇದ್ದಿದ್ದರೆ, ಅವರು ಸಾಯಿ ಬಾಬಾ ಸಿನಿಮಾ ಮಾಡಿರೋರು. ಒಳ್ಳೊಳ್ಳೆ ಸಿನಿಮಾ ಮಾಡಿದರೂ ಅದು ಓಡುತ್ತಿರಲಿಲ್ಲ" ಎಂದು ಶ್ರೀಧರ್ ಹೇಳಿದ್ದಾರೆ.


Click it and Unblock the Notifications
