ದರ್ಶನ್ರಂತೆ ಅಮಿತಾಭ್ ಬಚ್ಚನ್ ಕುಟುಂಬವನ್ನೇ ಮೀಡಿಯಾ ಬ್ಯಾನ್ಸ್ ಮಾಡಿದ್ದೇಕೆ? ಮುಂದೇನಾಯ್ತು?
ಸಿನಿಮಾ ಸ್ಟಾರ್ಗಳು ಹಾಗೂ ಮಾಧ್ಯಮದ ನಡುವೆ ಅವಿನಾಭಾವ ಸಂಬಂಧವಿದೆ. ಮಾಧ್ಯಮ ತಾರೆಯರ ಕೆಲಸವನ್ನು ಮೆಚ್ಚಿಗೆ ಹೇಗೆ ಬೆಂಬಲಕ್ಕೆ ನಿಲ್ಲುತ್ತೋ, ಹಾಗೇ ಅವರ ತಪ್ಪುಗಳನ್ನು ಅಷ್ಟೇ ನೇರವಾಗಿ ಹೇಳುತ್ತಲೇ ಬಂದಿದೆ. ಸೆಲೆಬ್ರಿಟಿಯಾಗಿರುವುದರಿಂದ ಅವರ ಪ್ರತಿಯೊಂದು ಆಗು ಹೋಗುಗಳನ್ನು ಗಮನಿಸುತ್ತಲೇ ಇರುತ್ತೆ. ಕೆಲವೊಮ್ಮೆ ಚಿಕ್ಕ ಚಿಕ್ಕ ವಿವಾದಗಳು ಕೂಡ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿದ್ದು ಇದೆ.
ಇಂತಹ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಮಾಧ್ಯಮಗಳ ಮೇಲೆ ಮುನಿಸಿಕೊಂಡ ಸಾಕಷ್ಟು ಉದಾಹರಣೆಗಳು ಇವೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಅವಹೇನಕಾರಿ ಶಬ್ಧಗಳನ್ನು ಪ್ರಯೋಗ ಮಾಡಿದ್ದರು. ಈ ಕಾರಣಕ್ಕೆ ಕನ್ನಡದ ಮಾಧ್ಯಮಗಳು ಬ್ಯಾನ್ ಮಾಡಿದ್ದು ಗೊತ್ತೇ ಇದೆ. ಬಳಿಕ ನಿರ್ಮಾಪಕರ ಮುಂದಾಳತ್ವದಲ್ಲಿ ಸಂಧಾನ ನಡೆಸಿದ ಬಳಿಕ ಬ್ಯಾನ್ ಅನ್ನು ಕೈ ಬಿಡಲಾಗಿತ್ತು.

ಹಾಗಂತ ದರ್ಶನ್ ಅಷ್ಟೇ ಅಲ್ಲ. ಈ ಹಿಂದೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ಗೂ ಈ ಬಿಸಿ ತಟ್ಟಿತ್ತು. ಮಾಧ್ಯಮಗಳು ಅಮಿತಾಭ್ ಬಚ್ಚನ್ ಇರುವ ಯಾವುದೇ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೋಗಳನ್ನು ತೆಗೆಯುವುದನ್ನೇ ನಿಲ್ಲಿಸಿದ್ದರು. ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಪ್ರಸಾರ ಮಾಡದೇ ಇರಲು ನಿರ್ಧರಿಸಿದ್ದರು. ಅಷ್ಟಕ್ಕೂ ಅಮಿತಾಭ್ ಬಚ್ಚನ್ ಹಾಗೂ ಮಾಧ್ಯಮದವರ ನಡುವೆ ನಡೆದಿದ್ದೇನು? ತಿಳಿಯಲು ಮುಂದೆ ಓದಿ.
ಅದು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಮದುವೆ ಸಮಾರಂಭದ ಸಂದರ್ಭ. ಅಮಿತಾಭ್ ಬಚ್ಚನ್ ತಮ್ಮ ಮಗನ ಮದುವೆಗೆ ಮಾಧ್ಯಮಗಳಿಗೆ ಆಹ್ವಾನ ನೀಡಿರಲಿಲ್ಲ. ಆದರೆ, ಮನೆಯಲ್ಲಿ ದೊಡ್ಡ ಮಟ್ಟಕ್ಕೆ ಸಂಭ್ರಮವನ್ನು ಹಮ್ಮಿಕೊಂಡಿದ್ದರು. ಹೀಗಾಗಿ ಆ ಮದುವೆಯನ್ನು ವರದಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
ಅಮಿತಾಭ್ ಬಚ್ಚನ್ ಮನೆಯ ಮುಂದೆ ಕ್ಯಾಮರಾಮ್ಯಾನ್ ಹಾಗೂ ಫೋಟೊಗ್ರಾಫರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಸ್ನೇಹಿತ ದಿವಂಗತ ಅಮರ್ ಸಿಂಗ್ ಮನೆ ಮುಂದೆ ಸೆಕ್ಯೂರಿಟಿ ವ್ಯವಸ್ಥೆಯನ್ನು ಮಾಡಿದ್ದರು. ಬಿಗ್ ಬಿ ಮನೆಯ ಗೇಟಿನ ಮುಂದೆ ಫೋಟೊ ಹಾಗೂ ವಿಡಿಯೋಗಳು ಸಿಗಬಹುದೆಂದು ಗೊತ್ತಿದ್ದರಿಂದ ಕ್ಯಾಮರಾಮ್ಯಾನ್ ಹಾಗೂ ಫೋಟೊಗ್ರಾಫರ್ಗಳು ಅಲ್ಲಿಯೇ ಜಮಾಗೊಂಡಿದ್ದರು.

ಸಂದರ್ಭವೊಂದರಲ್ಲಿ ಇವರೆಲ್ಲ ಗೇಟಿನೊಳಗೆ ನುಗ್ಗಲು ಮುಂದಾದಾಗ, ಸೆಕ್ಯೂರಿಟಿ ಗಾರ್ಡ್ಗಳು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದವು. ಬಳಿಕ ಎಲ್ಲರೂ ಸೇರಿ ಅಮಿತಾಭ್ ಬಚ್ಚನ್ ಹಾಗೂ ಅವರ ಕುಟುಂಬವನ್ನು ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇಲ್ಲಿಂದ ಅಮಿತಾಭ್ ಬಚ್ಚನ್ ಯಾವುದೇ ಸಮಾರಂಭಕ್ಕೆ ಬಂದರೂ, ಮಾಧ್ಯಮದವರು ಕ್ಯಾಮರಾದಲ್ಲಿ ಅವರನ್ನು ಸೆರೆಯುತ್ತಿಲೇ ಇರಲಿಲ್ಲ.
ಹಾಗಂತ ಕೇವಲ ಅಮಿತಾಭ್ ಬಚ್ಚನ್ ಅಷ್ಟೇ ಅಲ್ಲ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಅವರನ್ನು ಕೂಡ ಬ್ಯಾನ್ ಮಾಡಲಾಗಿತ್ತು. ಇಂತಹ ಬ್ಯಾನ್ ಅನ್ನು ಬಾಲಿವುಡ್ ಹಿಂದೆಂದೂ ನೋಡಿರಲಿಲ್ಲ. ಇದು ಒಂದಿಷ್ಟು ದಿನ ನಡೆಯುತ್ತಲೇ ಇತ್ತು. ಇದನ್ನು ಗಮನಿಸಿದ ಅಮಿತಾಭ್ ಬಚ್ಚನ್ ಈ ವಿವಾದಕ್ಕೆ ಅಂತ್ಯ ಹಾಡುವುದಕ್ಕೆ ನಿರ್ಧರಿಸಿದ್ದರು.
ಅಮಿತಾಭ್ ಬಚ್ಚನ್ ಇಡೀ ಮಾಧ್ಯಮದವರನ್ನು ಕರೆದು ಈ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ನಿರ್ಧರಿಸಿದ್ದರು. ಹೀಗಾಗಿ ಜೆ ಡ್ಲ್ಯೂ ಮ್ಯಾರಿಯೇಟ್ನಲ್ಲಿ ಮೀಟಿಂಗ್ ಮಾಡಿ ಚರ್ಚೆ ಮಾಡಿದ್ದರು. ಆ ಬಳಿಕಷ್ಟೇ ಮಾಧ್ಯಮಗಳು ಅಮಿತಾಭ್ ಬಚ್ಚನ್ ಮೇಲಿದ್ದ ಬ್ಯಾನ್ ಅನ್ನು ತೆಗೆದು ಹಾಕಿದ್ದರು.


Click it and Unblock the Notifications











