ಅಕ್ಷಯ್ ಕುಮಾರ್ to ಪ್ರಣಿತಾ ಸುಭಾಷ್; ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದವರು ಇವರೇ!
ಅಯೋಧ್ಯೆ ಶ್ರೀರಾಮ ಮಂದಿರ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ (ಜನವರಿ 22) ವೈಭವದಿಂದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್, ರಜನಿಕಾಂತ್, ಅಕ್ಷಯ್ ಕುಮಾರ್, ಜಾಕಿ ಶ್ರಾಫ್, ಟೈಗರ ಶ್ರಾಫ್, ರಣ್ಬೀರ್ ಕಪೂರ್, ಆಲಿಯಾ ಭಟ್, ರಣ್ದೀಪ್ ಹೂಡ, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.
ಕನ್ನಡ ಚಿತ್ರರಂಗದಿಂದಲೂ ರಿಷಬ್ ಶೆಟ್ಟಿ, ಯಶ್, ನಿಖಿಲ್ ಕುಮಾರ್ ಸೇರಿದಂತೆ ಹಲವರಿಗೆ ಆಹ್ವಾನ ಬಂದಿದೆ. ಈಗಾಗಲೇ ನಿಖಿಲ್ ಕುಮಾರ್ ಅಯೋಧ್ಯೆಗೆ ತೆರಳಿದ್ದಾರೆ. ನಾಳೆ ವೇಳೆಗೆ ಯಾರೆಲ್ಲ ಅಯೋಧ್ಯೆಯಲ್ಲಿ ಕಾಣಿಸಿಕೊಳ್ಳಬಹುದು ಅನ್ನೋದು ಗೊತ್ತಾಗಲಿದೆ. ಆದರೆ, ಸುಮಾರು 1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕೆ ಸಿನಿಮಾ ತಾರೆಯರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಾರೆ. ಅಂತಹ ದೇಣಿಗೆ ಕೊಟ್ಟ ತಾರೆಯರ ಪಟ್ಟಿ ಇಲ್ಲಿದೆ.

ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ 2021, ಜನವರಿಯಲ್ಲಿ ವಿಡಿಯೋ ಮೂಲಕ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದರು. " ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕೆಲಸ ಆರಂಭ ಆಗಿದ್ದು ಖುಷಿಕೊಟ್ಟಿದೆ. ಈಗ ನಮ್ಮ ನಮ್ಮ ಸರದಿ, ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡೋಣ. ನಾನು ದೇಣಿಗೆ ನೀಡಲು ಆರಂಭಿಸಿದ್ದೇನೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರೆಂಬ ನಂಬಿಕೆಯಿದೆ. ಜೈ ಶ್ರೀರಾಮ್" ಎಂದು ಟ್ವೀಟ್ ಮಾಡಿದ್ದರು.
ಅನುಪಮ್ ಖೇರ್
ಬಾಲಿವುಡ್ನ ಹಿರಿಯ ಪೋಷಕ ನಟ ಅನುಪಮ್ ಖೇರ್ ಕೂಡ ದೇಣಿಗೆ ನೀಡಿದ್ದಾರೆ. 2023, ಅಕ್ಟೋಬರ್ 2 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಆ ವೇಳೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಇದರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಆಗುತ್ತಿರುವ ದೃಶ್ಯವನ್ನು ತೋರಿಸಿ, ತಮ್ಮ ಕೈಯಲ್ಲಾದಷ್ಟು ದೇಣಿಗೆ ನೀಡಿದ್ದಾಗಿ ಹೇಳಿಕೊಂಡಿದ್ದರು.
ಮುಖೇಶ್ ಖನ್ನ (ಶಕ್ತಿಮಾನ್)
'ಶಕ್ತಿಮಾನ್' ಅಂತಹ ಜನಪ್ರಿಯ ಸೂಪರ್ ಹೀರೊ ಸೀರಿಸ್ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ಮಖೇಶ್ ಖನ್ನಾ ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಶ್ರೀರಾಮ ಮಂದಿರದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವವರಿಗೆ ಅಲ್ಲಿನ ಎಂಎಲ್ಎ ಅಟುಲ್ ಭಟ್ನಾಗರ್ ಅವರ ಸಮ್ಮುಖದಲ್ಲಿ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು.
ಹೇಮಾ ಮಾಲಿನಿ
ಹಿಂದಿ ಚಿತ್ರರಂಗದ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಕೂಡ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾಗಿ ಇಂಡಿಯಾ ಟೈಮ್ಸ್ ವರದಿ ಮಾಡಿದೆ. ಆದರೆ, ದೇಣಿಗೆ ನೀಡಿದ ಮೊತ್ತವೆಷ್ಟು ಅನ್ನೋದನ್ನು ರಿವೀಲ್ ಮಾಡಿಲ್ಲ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಹೇಮಾ ಮಾಲಿನಿ ಪರ್ಫಾಮೆನ್ಸ್ ಕೂಡ ನೀಡಿದ್ದರು.

ಪವನ್ ಕಲ್ಯಾಣ್
ದಕ್ಷಿಣ ಭಾರತದಿಂದ ತೆಲುಗಿನ ಪವರ್ಸ್ಟಾರ್ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ದೇಣಿಗೆ ನೀಡಿದ್ದಾರೆ. 30 ಲಕ್ಷ ರೂಪಾಯಿಯನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆಂದು ದೇಣಿಗೆ ನೀಡಿದ್ದಾರೆ. ಚೆಕ್ ವಿತರಣೆ ಮಾಡುತ್ತಿರುವ ಫೋಟೊಗಳು ಕೂಡ ವೈರಲ್ ಆಗಿತ್ತು.
ಪ್ರಣಿತಾ ಸುಭಾಷ್
ಕನ್ನಡದ ನಟಿ ಪ್ರಣಿತಾ ಸುಭಾಷ್ 2021, ಜನವರಿ 12ರಂದು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು. ಸುಮಾರು 1 ಲಕ್ಷ ರೂಪಾಯಿಯನ್ನು ನೀಡಿದ್ದರು. "ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಒಂದು ಲಕ್ಷ ರೂಪಾಯಿಯನ್ನು ನೀಡಿದ್ದೇನೆ. ಇಂತಹ ಐತಿಹಾಸಿಕ ಕ್ಷಣಕ್ಕೆ ನೀವೆಲ್ಲರೂ ಕೈ ಜೋಡಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ" ಎಂದು ಪ್ರಣಿತಾ ಸುಭಾಷ್ ಟ್ವೀಟ್ ಮಾಡಿದ್ದರು.
ಗುರ್ಮೀತ್ ಚೌಧರಿ
ನಟ ಗುರ್ಮೀತ್ ಚೌಧರಿ 2021 ತಮ್ಮ ಎಕ್ಸ್ ಖಾತೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿ ನೀಡಿದ ಬಗ್ಗೆ ಬರೆದುಕೊಂಡಿದ್ದರು. " ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣವನ್ನು ಸಂಗ್ರಹ ಮಾಡಲಾಗುತ್ತಿದೆ. ಇಡೀ ದೇಶ ಉತ್ಸಾಹದಿಂದ ಭಾಗವಹಿಸುತ್ತಿದೆ. ಇಂತಹ ಒಳ್ಳೆಯ ಕೆಲಸಕ್ಕೆ ನಾನು ಬೆಂಬಲ ನೀಡಲು ಬಯಸಿದ್ದೇನೆ. ಜೈ ಶ್ರೀರಾಮ್" ಎಂದು ಬರೆದುಕೊಂಡಿದ್ದರು.
ಮನೋಜ್ ಜೋಶಿ
ಬಾಲಿವುಡ್ನ ಮತ್ತೊಂದು ಪೋಷಕ ನಟ ಮನೋಜ್ ಜೋಷಿ ಕೂಡ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಿರುವ ಬಗ್ಗೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಮನೀಶ್ ಮುಂಡ್ರಾ
ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಮನೀಶ್ ಮುಂಡ್ರಾ ದೊಡ್ಡ ಮೊತ್ತವನ್ನು ಶ್ರೀರಾಮ ಮಂದಿರ ನಿರ್ಮಾಣ ನೀಡಿದ್ದಾರೆ. 'ಮಸಾನ್', 'ಕಡ್ವಿ ಹವಾ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಇವರು 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ.


Click it and Unblock the Notifications











