ಶಿವಣ್ಣನ ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಯಾಕೆ ಕಳುಹಿಸುತ್ತೀರಾ?
ಬೆಂಗಳೂರಿನ ವಿರೇಶ್ ಸಿನಿಮಾಸ್ ಎದುರುಗಡೆ ಚಿತ್ರಮಂದಿರ ತುಂಬಿದೆ ಎನ್ನುವ ಬೋರ್ಡ್ ಇದ್ದರೂ ಕೂಡಾ, ಚಿತ್ರಮಂದಿರದ ಆವರಣದಲ್ಲಿ ಜನವೋಜನ. ಅಲ್ಲಿ ಹಾಕಲಾಗಿದ್ದ ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್, ಕಟೌಟ್, ಬ್ಯಾನರ್ ಮುಂದೆ ಅವರ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ದಿವಂಗತ ಪುನೀತ್ ರಾಜಕುಮಾರ್ ಅವರ 47ನೇ ಜನ್ಮದಿನಾಚರಣೆಯನ್ನು ರಾಜ್ಯ ಆಚರಿಸಿದೆ. ಇಡೀ ಕರುನಾಡು ಯಾವ ರೀತಿ ಅಪ್ಪು ಜನ್ಮದಿನವನ್ನು ಯಾವ ರೀತಿ ಆಚರಿಸಿಕೊಂಡಿತು ಎನ್ನುವುದನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಬೇಕಾಗಿಲ್ಲ.
ಭೌತಿಕವಾಗಿ ಅಪ್ಪು ನಮ್ಮನ್ನು ಅಗಲಿ ಸುಮಾರು ಐದು ತಿಂಗಳಾಗುತ್ತಾ ಬಂತು. ರಾಜ್ಯದ ಜನತೆಗೆ ಈ ಶಾಕ್ ಅನ್ನು ಇನ್ನೂ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇನ್ನು, ಅವರ ಕುಟುಂಬದವರ ಪರಿಸ್ಥಿತಿ ಹೇಗಿರಬೇಕು?

ಅಪ್ಪು ಅಗಲಿಕೆಯ ನಂತರ ಸೂಕ್ಷ್ಮವಾಗಿ ಗಮನಿಸುವುದಾದರೆ ಅವರ ಸಹೋದರ ಶಿವರಾಜ್ ಕುಮಾರ್ ಪ್ರತೀ ವಿಚಾರದಲ್ಲೂ ಭಾವುಕರಾಗುತ್ತಿರುವುದು. ರಾಘವೇಂದ್ರ ರಾಜಕುಮಾರ್ ಅವರೇನೋ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೊರಗಡೆ ತೋರಿಸಿಕೊಳ್ಳುತ್ತಿಲ್ಲ. ಆದರೆ, ಶಿವಣ್ಣನ ವಿಚಾರದಲ್ಲಿ ಆ ರೀತಿಯಲ್ಲ...
ಪುನೀತ್ ನಿಧನದ ನಂತರ ಲೆಕ್ಕವಿಲ್ಲದಷ್ಟು ಸಂದರ್ಶನವನ್ನು ಶಿವಣ್ಣ ಕೊಟ್ಟಿದ್ದಾರೆ, ಎಷ್ಟೋ ಕಾರ್ಯಕ್ರಮದಲ್ಲಿ, ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಪ್ರತೀ ಕಾರ್ಯಕ್ರಮದಲ್ಲೂ ಶಿವರಾಜ್ ಕುಮಾರ್ ಕಣ್ಣೀರು ಹಾಕುತ್ತಿದ್ದಾರೆ. ಕೆಲವು ಕಾರ್ಯಕ್ರಮಗಳು ಅಪ್ಪು ಹೆಸರಿನಲ್ಲಿ ನಡೆಯುವುದರಿಂದ ಭಾಗವಹಿಸದೇ ಬೇರೆ ವಿಧಿಯೂ ಇರುವುದಿಲ್ಲ. ಈಗಾಗಲೇ, ಸಹೋದರನ ಅಗಲಿಕೆಯಿಂದ ಶಿವಣ್ಣ ಬಹಳಷ್ಟು ಕುಗ್ಗಿದಂತೆ ಕಾಣುತ್ತಿದ್ದಾರೆ. ಎಷ್ಟು ಕುಗ್ಗಿದರೂ ಶೂಟಿಂಗ್ ಶೆಡ್ಯೂಲ್ ಇಲ್ಲದಿದ್ದರೆ, ಯಾರು ಕರೆದರೂ ಶಿವಣ್ಣ ಬರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
'ಜೇಮ್ಸ್' ಚಿತ್ರದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ರಾಘಣ್ಣ ಆಡಿದ ಮಾತಿಗೆ ಶಿವರಾಜ್ ಕುಮಾರ್ ಬಿಕ್ಕಿಬಿಕ್ಕಿ ಅತ್ತಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಅದಕ್ಕೆ ಸಾಕ್ಷಿಯಾಗಿದ್ದರು. ಇದಾದ ನಂತರದ ರಿಯಾಲಿಟಿ ಶೋನಲ್ಲೂ ಶಿವಣ್ಣ ಭಾವೋದ್ವೇಗಕ್ಕೆ ಒಳಗಾಗಿದ್ದು ಮುಂದುವರಿದಿತ್ತು. ಇದೆಲ್ಲಾ ಕೆಲವೊಂದು ಉದಾಹರಣೆಗಳಷ್ಟೇ. ಕೆಲವು ಕಾರ್ಯಕ್ರಮಗಳಲ್ಲಿಯಂತೂ ಶಿವಣ್ಣ ಭಾವುಕಗೊಳ್ಳಲಿ ಎಂದೇ ನಿರೂಪಕರು ಅಪ್ಪು ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದೂ ಕಂಡು ಬರುತ್ತಿದೆ.
ಪ್ರತೀ ಕಾರ್ಯಕ್ರಮದಲ್ಲೂ ಪುನೀತ್ ಸುತ್ತಲೇ ಪ್ರಶ್ನೆಗಳು ಅವರನ್ನು ಸುತ್ತುತ್ತಿರುತ್ತದೆ. ಅಪ್ಪುಗೊತೆಗಿನ ನಿಮ್ಮ ಅನುಭವವನ್ನು ಹಂಚಿಕೊಳ್ಳಿ, ಜೇಮ್ಸ್ ಚಿತ್ರದಲ್ಲಿ ಪುನೀತ್ ಎಂಟ್ರಿಯಾದಾಗ ಏನನಿಸಿತು? ಪುನೀತ್ ಸಾಮಾಜಿಕ ಕೆಲಸದ ಬಗ್ಗೆ ನಿಮಗೆ ತಿಳಿದಿತ್ತೇ? ಅಪ್ಪು ಇಲ್ಲದೆ ಏನೆನಿಸುತ್ತದೆ? ಈ ಮುಂತಾದ ಪ್ರಶ್ನೆಗಳನ್ನೇ ಶಿವಣ್ಣನವರಲ್ಲಿ ಕೇಳಲಾಗುತ್ತಿದೆ. ನೂರಾರು ಬಾರಿ ಈ ಪ್ರಶ್ನೆಗಳಿಗೆ ಶಿವಣ್ಣ ಉತ್ತರಿಸಿದ್ದಾರೆ, ಅತ್ತಿರುತ್ತಾರೆ. ಆದರೂ, ಮತ್ತದೇ ಪ್ರಶ್ನೆಗಳು? ಶಿವಣ್ಣನನ್ನು ಅಳಿಸಿ ಅದನ್ನು ರೆಕಾರ್ಡ್ ಮಾಡಿ ಭಾವುಕ ಹಿನ್ನೆಲೆ ಸಂಗೀತದೊಂದಿಗೆ ಪ್ರದರ್ಶಿಸಿ ವೀವ್ಸ್ ಹೆಚ್ಚಿಸಿಕೊಳ್ಳುವ, ಟಿಆರ್ಪಿ ಹೆಚ್ಚಿಸಿಕೊಳ್ಳುವ ಹುನ್ನಾರದಂತೆ ಇದು ಕಾಣುತ್ತಿದೆ.
ಪುನೀತ್, ಶಿವಣ್ಣ, ರಾಘಣ್ಣ ಅಪೂರ್ವ ಸಹೋದರರಂತೆ ಇದ್ದವರು. ವಯಸ್ಸಲ್ಲದ ವಯಸ್ಸಿನಲ್ಲಿ ಕಿರಿಯ ಸಹೋದರ ಇಹಲೋಕ ತ್ಯಜಿಸಿದಾಗ ಶಿವಣ್ಣನ ನೋವು ಎಷ್ಟಾಗಿರಬೇಡ. ಜನರ ಮುಂದೆ, ಕಾರ್ಯಕ್ರಮದಲ್ಲೇ ಇಷ್ಟೊಂದು ಅವರು ಭಾವುಕರಾಗುವಾಗ, ಒಬ್ಬರೇ ಇದ್ದಾಗ ಇನ್ನೆಷ್ಟು ಸಂಕಟ ಪಡುತ್ತಿದ್ದಾರೋ? ಅವರೇ ಬಲ್ಲರು. ಶಿವಣ್ಣನ ಬಗ್ಗೆ ನಿಜವಾಗಿಯೂ ಕಾಳಜಿವುಳ್ಳವರು ಶಿವಣ್ಣ ನೋವಿನಿಂದ ಹೊರಗೆ ತರಲು ಪ್ರಯತ್ನಿಸಬೇಕೆ ವಿನಃ ಅವರನ್ನು ಇನ್ನಷ್ಟು ಭಾವುಕಗೊಳಿಸಲು, ಕಣ್ಣೀರು ಹಾಕುವಂತೆ ಮಾಡುವುದಲ್ಲ.


Click it and Unblock the Notifications











