ಅಣ್ಣಾವ್ರ ಎದೆ ಮೇಲೆ ಕಾಣಿಸಿಕೊಂಡಿದ್ದ ಟೊಮೊಟೋ ಗಾತ್ರದ ಹುಣ್ಣು ಮರೆ ಮಾಡಿದ ಪವಾಡ ಪುರುಷ ಯಾರು?
ಗಾಜನೂರಿನ ಬಡ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಮುತ್ತರಾಜ್ ಮುಂದೊಂದು ದಿನ ಕನ್ನಡಿಗರ ಕಣ್ಮಣಿ ಆಗಬಹುದೆಂದು ಯಾರೂ ಊಹಿಸಿರಲಿಲ್ಲ. ಯಾಕಂದ್ರೆ ಬಾಲ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯ ಇವರನ್ನು ಕಾಡುತ್ತಲೇ ಇರುತ್ತಿತ್ತು. ಆರೋಗ್ಯ ಹಾಗೂ ಆರ್ಥಿಕ ಸವಾಲುಗಳನ್ನು ಮೆಟ್ಟಿ ನಿಂತು ವರನಟನಾಗುವವರೆಗೆ ಬೆಳೆದಿದ್ದು ಡಾ.ರಾಜ್ಕುಮಾರ್ ಅವರ ಸಾಧನೆ.
ಅಣ್ಣಾವ್ರು 7 ತಿಂಗಳ ಮಗುವಾಗಿದ್ದಾಗ ಅವರ ಎದೆಯ ಮೇಲೆ ಪುಟ್ಟ ಟೊಮೊಟೊ ಗಾತ್ರ ಗುಳ್ಳೆ ಎದ್ದಿತ್ತು. ಏನು ಮಾಡಿದರೂ ಅದು ವಾಸಿಯಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಚಿಕ್ಕಮ್ಮ ಕನಸಿನಲ್ಲಿ ಬಂದ ಮಹಾಪುರುಷ ಆ ಗುಳ್ಳೆಯನ್ನು ವಾಸಿ ಮಾಡುವುದಾಗಿ ಹೇಳಿದ್ದರು. ಆ ಮೇಲೆ ಏನಾಯ್ತು? ಆ ಮಹಾಪುರುಷ ಹೇಳಿದಂತೆ ನಡೀತಾ? ಅನ್ನುವ ಇಂಟ್ರೆಸ್ಟಿಂಗ್ ಕಥೆಯನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

ರಾಜ್ಕುಮಾರ್ ಅವರು ಬಾಲ್ಯದಿಂದಲೇ ಆರೋಗ್ಯವಂತರಾಗಿದ್ದವರಲ್ಲ. ಅವರಿಗೂ ಅನೇಕ ಆರೋಗ್ಯ ಸಮಸ್ಯೆಗಳು ಇತ್ತು. ಬೇರೆ ಬೇರೆ ರೀತಿಯ ಸಾಮಾಜಿಕ ಸಮಸ್ಯೆಗಳೂ ಇದ್ದವು. ಎಲ್ಲಾ ಸಮಸ್ಯೆಗಳನ್ನೂ ಎದುರಿಸಿ ನಟಸಾರ್ವಭೌಮರಾಗಿದ್ದು ದೊಡ್ಡ ಕಥೆ. ಡಾ.ರಾಜ್ಕುಮಾರ್ ಅವರ ತಾಯಿ ಲಕ್ಷ್ಮಮ್ಮನವರು ಕೆಲವರು ಕಡೆಗಳಲ್ಲಿ ದಾಖಲಿಸಿರುವಂತಹ ಅವರ ಬಾಲ್ಯದ ಅನಾರೋಗ್ಯದ ವಿಷಯಗಳನ್ನು ಹರಿಹರಪುರ ಮಂಜುನಾಥ್ ಇಂಟ್ರೆಸ್ಟಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ.
ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗಳಿಗೆ ಮುತ್ತತ್ತಿರಾಯನ ಕೃಪಾಶಿರ್ವಾದದಿಂದ ಜನಿಸಿದ ಗಂಡು ಮಗುವಿಗೆ ಮುತ್ತುರಾಜ್ ಅಂತ ಹೆಸರು ಇಡುತ್ತಾರೆ. ಮುತ್ತುರಾಜ 15 ದಿನದ ಹಸುಗೂಸು ಆಗಿದ್ದಾಗ ಆತನ ತಲೆಯಲ್ಲಿ ಕೆಂಪು ಗಾಯಗಳು ಕಾಣಿಸಿಕೊಂಡವಂತೆ. ಆ ನೋವನ್ನು ತಾಳಲಾರದೆ ಅಳುತ್ತಿರುತ್ತೆ. ತಂದೆ ತಾಯಿಗೆ ದಿಕ್ಕೇ ತೋಚುತ್ತಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಆಗಿನ ಕಾಲಕ್ಕೆ ಅಷ್ಟು ಸುಲಭ ಆಗಿರಲಿಲ್ಲ. ಹಾಗಾಗಿ ಜನರು ದೇವರಿಗೆ ಹರಕೆ ಹೊತ್ತುಕೊಂಡಿದ್ದರು ಎನ್ನುತ್ತಾರೆ ಪತ್ರಕರ್ತ ಮಂಜುನಾಥ್.

"ತಲೆಯ ಮೇಲಿನ ಹುಣ್ಣು ಮಾಯವಾದರೆ ನಂಜನಗೂಡಿನ ನಂಜುಂಡೇಶ್ವರನಿಗೆ ಮುಡಿಯನ್ನು ಕೊಡುತ್ತೇವೆ ಅಂತ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ. ನವಾಬರ ಕಾಲದಿಂದ ಹಕೀಂ ನಂಜುಂಡ ಎನ್ನುವ ಒಂದು ನಂಬಿಕೆಯಿದೆ. ಅಲ್ಲಿ ಹರಕೆ ಹೊತ್ತುಕೊಂಡರೆ ಆರೋಗ್ಯ ಸಮಸ್ಯೆ ಪರಿಹಾರ ಆಗುತ್ತೆ ಅನ್ನೋ ನಂಬಿಕೆಯಿದೆ. ಹರಕೆ ಹೊತ್ತುಕೊಂಡ ಮೇಲೆ ಆ ಮಗು ಮತ್ತೆ ಚಟುವಟಿಕೆಯಿಂದ ನಗು ನಗುತ್ತಾ ಆಡುವುದಕ್ಕೆ ಶುರು ಮಾಡುತ್ತೆ. ಹರಕೆ ಹೊತ್ತುಕೊಂಡಂತೆ ನಂಜಗೂಡಿಗೆ ಹೋಗಿ ಮುಡಿಯನ್ನು ಕೊಟ್ಟು ಬರುತ್ತಾರೆ." ಎನ್ನುತ್ತಾರೆ.
ಇಲ್ಲಿಂದ 7 ತಿಂಗಳ ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. 7 ತಿಂಗಳು ವಯಸ್ಸು ಆಗಿದ್ದಾಗ ಎಡಭಾಗದ ಎದೆಯ ಮೇಲೆ ಒಂದು ಸಣ್ಣ ಗುಳ್ಳೆ ಕಾಣಿಸಿಕೊಳ್ಳುತ್ತೆ. ಬಾಲ್ಯದಲ್ಲಿ ಇದೆಲ್ಲ ಬರೋದು ಸಹಜ ಅಂದುಕೊಳ್ಳುತ್ತಾರೆ. ಅದು ನಿಧಾನವಾಗಿ ಕೆಂಪಾಗುತ್ತಾ ಬರುತ್ತೆ. ಒಂದು ಪುಟ್ಟ ಟೊಮೊಟೋ ಗಾತ್ರದಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ. ಒಂದೇ ಒಂದು ಕ್ಷಣವೂ ಮಗು ಬಿಡದೆ ಅಳುತ್ತಿರುತ್ತೆ. ಅದೇ ಮನೆಯಲ್ಲಿದ್ದ ಅವರ ಚಿಕ್ಕಮ್ಮ ಹೊರಗೆ ಜಗುಲಿಯಲ್ಲಿ ಮಲಗಿದ್ದಾಗ ಅವರಿಗೆ ಒಂದು ಕನಸು ಬೀಳುತ್ತೆ.
"ಒಬ್ಬ ಶುಭ್ರ ಶ್ವೇತ ವಸನಧಾರಿಯಾದಂತಹ ಹಣ್ಣು ಹಣ್ಣು ಮುದುಕ ಬಂದು ಏನಮ್ಮ ಮಗುವಿನ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೀಯಾ? ಅಂತ ಕೇಳಿದ ಹಾಗೆ ಆಗುತ್ತೆ. ಆಗ ಮುತ್ತತ್ತಿರಾಯನೇ ಬಂದಿದ್ದಾನೆ ಎಂದು ಕೊಂಡು ಅವರ ಪಾದಗಳನ್ನು ಹಿಡಿದುಕೊಂಡು ನನ್ನ ಮಗುವನ್ನು ರಕ್ಷಣೆ ಮಾಡು ಎಂದು ಕೇಳಿಕೊಳ್ಳುತ್ತಾರೆ. ಆಗ ಈ ವಿಭೂತಿಯನ್ನು ತೆಗೆದುಕೋ. ಇದನ್ನು ಆ ಮಗುವಿನ ಹುಣ್ಣಿಗೆ ಹಚ್ಚು. ಅದು ವಾಸಿಯಾಗುತ್ತೆ ಎಂದು ಆಶ್ವಾಸನೆ ಕೊಡುತ್ತಾರೆ. ಅದನ್ನು ಸೆರಗಿನಲ್ಲಿ ಕಟ್ಟಿಕೊಳ್ಳುತ್ತಾರೆ. ಇದು ಕನಸಿನಲ್ಲಿ ನಡೆದಿದ್ದು. ಆದರೆ, ಎಚ್ಚರವಾದಾಗ ಅವರ ಸೆರಗಿನಲ್ಲಿ ಗಂಟು ಇರುತ್ತೆ. ಆದರೆ ವಿಭೂತಿ ಮಾತ್ರ ಇಲ್ಲ." ಎನ್ನುತ್ತಾರೆ ಮಂಜುನಾಥ್.
ಇದನ್ನು ಹೇಳಬೇಕು ಅಂತ ಹೋದಾಗ, ಆ ಕೆಟ್ಟ ಹುಣ್ಣು ಒಡೆದು ಹೋಗಿರುತ್ತೆ. ಮಗು ಆರಾಮಾಗಿ ನಿದ್ದೆ ಮಾಡುತ್ತಿರುತ್ತೆ. ಅಂದರೆ, ಮುತ್ತತ್ತಿರಾಯನ ಕೃಪೆಯಿಂದ ಜನಿಸಿದ ಮಗುವಿಗೆ ಬಂದ ತೊಂದರೆ, ಆತನಿಂದಲೇ ನಿವಾರಣೆ ಆಯ್ತು ಎಂದು ಲಕ್ಷ್ಮಮ್ಮನವರು ಭಕ್ತಿ ಭಾವದಿಂದ ಹೇಳಿಕೊಂಡಿದ್ದಾರೆಂದು ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











