ಕಥೆ ಹೇಳಿದ್ದು ಶಿವಣ್ಣನಿಗೆ, ಹೀರೋ ಆಗಿದ್ದು ಪುನೀತ್; 'ಅಪ್ಪು' ಹಿಂದಿನ ಇಂಟ್ರೆಸ್ಟಿಂಗ್ ಕಥೆ!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇದ್ದಿದ್ದರೆ ಈ ಬಾರಿ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಇಂತಹ ವಿಶೇಷ ಸಂದರ್ಭವನ್ನು ಅಭಿಮಾನಿಗಳು ಅದೆಷ್ಟು ಸಂಭ್ರಮದಿಂದ ಆಚರಿಸುತ್ತಿದ್ದರೋ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್ ರಾಜ್ಕುಮಾರ್ ಪವರ್ಸ್ಟಾರ್ ಆಗಿ ಇಂದು ಕರ್ನಾಟಕದ ರತ್ನ ಆಗಿದ್ದಾರೆ.
ಬಾಲ್ಯದಲ್ಲಿ ನಟನಾಗಿ ಬಣ್ಣ ಹಚ್ಚಿದ್ದರೂ, ಅಪ್ಪುಗೆ ಹೀರೋ ಆಗಬೇಕು ಅನ್ನೋ ಆಸೆಯಿರಲಿಲ್ಲ. ಬ್ಯುಸಿನೆಸ್ ಮ್ಯಾನ್ ಆಗಬೇಕು ಅನ್ನೋ ಅವರ ಕನಸು ಈಡೇರಿರಲಿಲ್ಲ. ಆ ವೇಳೆ ಅಣ್ಣಾವ್ರು, ವರದಣ್ಣ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಇವರೆಲ್ಲರಿಗೂ ಪುನೀತ್ ರಾಜ್ಕುಮಾರ್ ಅನ್ನು ಹೀರೋ ಆಗಿ ಪರಿಚಯಿಸಬೇಕು ಅನ್ನೋ ಆಸೆಯಿತ್ತು. ಕತೆಯ ಹುಡುಕಾಟದಲ್ಲಿ ಇದ್ದರು.

ಅದೇ ಸಮಯಕ್ಕೆ ಟಾಲಿವುಡ್ನ ಮಾಸ್ ಡೈರೆಕ್ಟರ್ ಪುರಿ ಜಗನ್ನಾಥ್ ಕನ್ನಡದಲ್ಲಿ ಸಿನಿಮಾ ಮಾಡುವುದಕ್ಕೆ ಹೊರಟಿದ್ದರು. ಶಿವಣ್ಣನಿಗೆ ಅಂತ ಒಂದು ಕಥೆಯನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಆ ಕತೆಯನ್ನು ಶಿವಣ್ಣನಿಗೆ ಹೇಳಿದ್ದರು. ಇನ್ನೊಂದು ಕಡೆ ಪುನೀತ್ ರಾಜ್ಕುಮಾರ್ ಅನ್ನು ಹೀರೋ ಆಗಿ ಹೇಗೆ ಪರಿಚಯಿಸಬೇಕು ಅಂತ ಡೊಡ್ಮನೆ ಕುಟುಂಬ ತಲೆಕೆಡಿಸಿಕೊಂಡಿತ್ತು. ಆಗ ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಹಾಗೂ ವರದಣ್ಣನ ನೆರವಿಗೆ ಬಂದಿದ್ದೇ ಶಿವಣ್ಣ.
ಪುರಿ ಜಗನ್ನಾಥ್ ಅವರನ್ನು ಶಿವಣ್ಣ ದೊಡ್ಮನೆ ಪರಿಚಯಿಸಿದರು. ಆ ಕಾಲಕ್ಕೆ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ಸಿಕ್ಕಾಪಟ್ಟೆ ಬೇಡಿಕೆ. ಈ ವೇಳೆ ಪುರಿ ಜಗನ್ನಾಥ್ ಶಿವಣ್ಣನಿಗೆ ಸಿನಿಮಾ ಮಾಡುತ್ತೇನೆ ಅಂತ ಬಂದಿದ್ದಕ್ಕೂ, ಅದೇ ಸಮಯದಲ್ಲಿ ಪುನೀತ್ ನಾಯಕನಾಗಿ ಎಂಟ್ರಿ ಕೊಡುವುದಕ್ಕೆ ಪ್ಲಾನ್ ನಡೀತಿದ್ದಕ್ಕೂ ಸರಿ ಹೋಗಿತ್ತು. ಆಕ್ಷಣವನ್ನು ಸ್ವತ: ಪುರಿ ಜಗನ್ನಾಥ್ 'ಅಪ್ಪು' ರೀ ರಿಲೀಸ್ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ.

"ನಾನು ಶಿವಣ್ಣಗೆ ಥ್ಯಾಂಕ್ಸ್ ಹೇಳುತ್ತೇನೆ. ಶಿವಣ್ಣ ಅವರಿಂದಲೇ ಅಪ್ಪು ಸಿನಿಮಾ ಆಯ್ತು. ಶಿವಣ್ಣ ಅವರೇ ನನ್ನನ್ನು ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರನ್ನು ಭೇಟಿ ಮಾಡಿಸಿದ್ದರು. ಹೀಗಾಗಿ ನಾನು ವಿಶೇಷ ವ್ಯಕ್ತಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದೆ." ಎಂದು ಪುರಿ ಜಗನ್ನಾಥ್ ಪಿಆರ್ಕೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಹೌದು, 'ಅಪ್ಪು' ಸಿನಿಮಾದ ಕಥೆಯನ್ನು ಪುರಿ ಜಗನ್ನಾಥ್ ಮೊದಲು ಹೇಳಿದ್ದೇ ಶಿವಣ್ಣನಿಗೆ. ಆದರೆ, ಶಿವಣ್ಣನಿಗೆ ಈ ಕಥೆ ಯಾಕೋ ತನಗೆ ಸೂಟ್ ಆಗುವುದಿಲ್ಲ ಎಂದು ಎನಿಸಿತ್ತು. ಈ ಕಾರಣಕ್ಕೆ ಪುರಿ ಜಗನ್ನಾಥ್ ಜೊತೆ ಶಿವಣ್ಣ ಚರ್ಚೆ ಮಾಡುತ್ತಾರೆ. ತನ್ನ ತಮ್ಮ ಪುನೀತ್ ರಾಜ್ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಬೇಕು ಎಂದಿದ್ದೇವೆ. ನೀವು ಹೇಳಿದ ಕಥೆ ನನ್ನ ತಮ್ಮನಿಗೆ ಚೆನ್ನಾಗಿ ಸೂಟ್ ಆಗುತ್ತೆ ಎಂದು ಹೇಳಿ ರಾಜ್ಕುಮಾರ್, ವರದಣ್ಣ, ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಪರಿಚಯಿಸಿದ್ದರು.
ಶಿವಣ್ಣನ 'ಯುವರಾಜ' ಸಿನಿಮಾ ಹಿಟ್ ಆಗಿತ್ತು. ಇದೇ ಜೋಷ್ನಲ್ಲಿ ಶಿವಣ್ಣನಿಗೆ ಇನ್ನೊಂದು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆಗ ಮೂರು ಕಥೆಯನ್ನು ಹೇಳಿದ್ದರಂತೆ. ಅದರಲ್ಲಿ ಒಂದು 'ಅಪ್ಪು'. ಕಾಲೇಜ್ ಸ್ಟೋರಿ ತನಗೆ ಸೂಟ್ ಆಗುವುದಿಲ್ಲ. ಪುನೀತ್ ರಾಜ್ಕುಮಾರ್ಗೆ ಸೂಟ್ ಆಗುತ್ತೆ ಎಂದು ಹೇಳಿದ್ದೇ ಶಿವರಾಜ್ಕುಮಾರ್. ಹೀಗೆ ಅಪ್ಪು ಕತೆ ಎಲ್ಲರಿಗೂ ಇಷ್ಟ ಆಗಿ ಸಿನಿಮಾ ಸೆಟ್ಟೇರಿತು. ಅದು ಹಿಟ್ ಕೂಡ ಆಯ್ತು.
ಈಗ ಅಪ್ಪು ಸಿನಿಮಾ ಪುನೀತ್ 50ನೇ ಹುಟ್ಟುಹಬ್ಬಕ್ಕೆ ರೀ ರಿಲೀಸ್ ಆಗುತ್ತಿದೆ. ಈ ವೇಳೆ ಪುರಿ ಜಗನ್ನಾಥ್ ಅಪ್ಪು ಗುಣಗಾನ ಮಾಡಿದ್ದಾರೆ. "ಪುನೀತ್ ರಾಜ್ಕುಮಾರ್ ಅವರು ಒಬ್ಬ ಬಹುಮುಖ ಪ್ರತಿಭೆ. ಅವರು ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ. ಅವರು ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಎಲ್ಲಾ ಅಭಿಮಾನಿಗಳಿಗೂ ಬಿಗ್ ನ್ಯೂಸ್ ಸಿಕ್ಕಿದೆ. ಅಪ್ಪು ಸಿನಿಮಾ ಕರ್ನಾಟಕದಾದ್ಯಂತ ಮಾರ್ಚ್ 14ರಂದು ರೀ ರಿಲೀಸ್ ಆಗುತ್ತಿದೆ. ಮತ್ತೆ ಅಪ್ಪು ಸಿನಿಮಾ ನೋಡೋಣ. ಸಂಭ್ರಮಿಸೋಣ." ಎಂದು ಫ್ಯಾನ್ಸ್ಗೆ ಕರೆ ನೀಡಿದ್ದಾರೆ.


Click it and Unblock the Notifications











