ಗಾಜನೂರಿಗೆ ಹೊರಡ ಬೇಕಾಗಿದ್ದ ಪುನೀತ್, ಹೋಗಿದ್ದು ಬಾರದ ಲೋಕಕ್ಕೆ
ವರನಟ ಡಾ.ರಾಜಕುಮಾರ್ ಅವರಿಗೆ ಗಾಜನೂರಿನ ತಮ್ಮ ಮನೆಯೆಂದರೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಪ್ರೀತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ಆ ಮನೆಯ ಮೇಲೆ ಹೊಂದಿದ್ದರು. ಆವಾಗಾವಾಗ ಅಲ್ಲಿಗೆ ಹೋಗಿ ತಮ್ಮ ಬಾಲ್ಯದ ಜೀವನವನ್ನು ಅಪ್ಪು ನೆನೆಪಿಸಿಕೊಂಡಿದ್ದು ಉಂಟು.
ಅಕ್ಟೋಬರ್ 29, ಶುಕ್ರವಾರ ಈ ರೀತಿಯ ಆಘಾತಕಾರಿ ಸುದ್ದಿ ಸಿಡಿಲಿನಂತೆ ಅಪ್ಪಳಿಸಲಿದೆ ಎಂದು ಯಾರೂ ಕನಸು ಮನಸಿನಲ್ಲೂ ನೆನೆಸಿರಲಿಕ್ಕಿಲ್ಲ. ಫಿಟ್ ಅಂಡ್ ಫೈನ್ ಆಗಿದ್ದ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿದ್ದಾರೆ ಎನ್ನುವ ಸತ್ಯವನ್ನು ಅರಗಿಕೊಳ್ಳಲೇ ಬೇಕಿದೆ. ಬದುಕಿನ ಖುಣ ಮುಗಿದ ತಕ್ಷಣ, ಹೊರಡಲೇ ಬೇಕು, ಅಪಘಾತ, ಹೃದಯಾಘಾತ ಎಲ್ಲವೂ ಒಂದು ನೆಪ ಮಾತ್ರ ಎಂದು ವಿಧಿ ಸಾರಿಸಾರಿ ಹೇಳುತ್ತಿದೆ.
ಹೌದು, ನಿನ್ನೆ ಮೊನ್ನೆ, ಭಜರಂಗಿ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಪುನೀತ್ ಈಗ ಬಾರದ ಲೋಕಕ್ಕೆ ಹೋದರು ಎಂದರೆ 'ವಿಧಿಯಾಟವೇನು ಬಲ್ಲವರು ಯಾರು' ಎನ್ನುವ ಅಣ್ಣಾವ್ರ ಸಿನಿಮಾದ ಹಾಡು ನೆನಪಿಗೆ ಬರುತ್ತದೆ. ಎರಡು ದಿನದ ಹಿಂದೆ ಸಹೋದರನನ್ನು ಅಪ್ಪಿಕೊಂಡು ಕುಣಿದಿದ್ದ ಶಿವಣ್ಣ, ಈಗ ಅಪ್ಪು ಪಾರ್ಥಿವ ಶರೀರಕ್ಕೆ ಹೆಗಲು ಕೊಡಬೇಕಾಗಿ ಬಂದಿರುವುದು ವಿಪರ್ಯಾಸ.
"ನನ್ನನ್ನು ಎರಡು ಬಾರಿ ಆಸ್ಪತ್ರೆಗೆ ದಾಖಲಿಸಿ, ವಾಪಸ್ ಕರೆದುಕೊಂಡು ಬಂದಿದ್ದ. ಆದರೆ, ಅವನನ್ನು ನನಗೆ ಉಳಿಸಿಕೊಳ್ಳಲು ಆಗಿಲ್ಲ. ಅವನನ್ನು ನಾವು ಚೆನ್ನಾಗಿ ಕಳುಹಿಸಿ ಕೊಡಬೇಕು"ಎಂದು ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಅವರ ನೋವಿನ ಮಾತು. ಗಾಜನೂರಿಗೆ ಹೊರಟಿದ್ದ ಪುನೀತ್..

ಗಾಜನೂರಿಗೆ ಹೊರಡಬೇಕು ಎನ್ನುವ ಪ್ಲ್ಯಾನ್ ಅನ್ನು ಹಾಕಿಕೊಂಡಿದ್ದರು
ಪುನೀತ್ ರಾಜಕುಮಾರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಹಲವು ವಿಚಾರಗಳು ಹೊರ ಬರುತ್ತಿದೆ. ಇವತ್ತು ಗಾಜನೂರಿಗೆ ಹೊರಡಬೇಕು ಎನ್ನುವ ಪ್ಲ್ಯಾನ್ ಅನ್ನು ಪುನೀತ್ ಹಾಕಿಕೊಂಡಿದ್ದರು. ಸಮಯಾವಕಾಶ ಸಿಕ್ಕಾಗಲೆಲ್ಲಾ ಅಲ್ಲಿನ ತೋಟದ ಮನೆಗೆ ಹೋಗುವ ಪರಿಪಾಠ ಇಟ್ಟುಕೊಂಡಿರುವ ಪುನೀತ್, ಶುಕ್ರವಾರ ಅಲ್ಲಿಗೆ ಹೋಗಲು ನಿರ್ಧರಿಸಿದ್ದರು. ಆದರೆ, ವಿಧಿ ಅವರನ್ನು ತನ್ನಡೆಗೆ ಕರೆದುಕೊಂಡು ಹೋಯಿತು.

ಪ್ರೇಮದ ಕಾಣಿಕೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಪುನೀತ್
ಪ್ರೇಮದ ಕಾಣಿಕೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಪುನೀತ್, ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಗಾಜನೂರಿನಲ್ಲಿರುವ ಮನೆಯ ಮೇಲೆ ವಿಶೇಷ ನಂಟನ್ನು ಇಟ್ಟುಕೊಂಡಿದ್ದ ಅಪ್ಪು, ಎರಡು ತಿಂಗಳ ಹಿಂದೆ ಸಹೋದರ ಶಿವರಾಜ್ ಕುಮಾರ್ ಜೊತೆಗೆ ಹೋಗಿದ್ದರು. ಗಾಜನೂರಿನ ತನ್ನ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತಾ, ಅವರ ಜೊತೆ ಸಮಯ ಕಳೆಯುತ್ತಿದ್ದ ಪುನೀತ್, ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಭಜರಂಗಿ2 ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗುವ ಕಾರ್ಯಕ್ರಮ
ಗಾಜನೂರಿಗೆ ಹೋಗುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗುವ ಕಾರ್ಯಕ್ರಮವೂ ಇಂದು ನಿಗದಿಯಾಗಿತ್ತು. ಈ ವಿಚಾರವನ್ನು ಖುದ್ದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. "ನವೆಂಬರ್ ಒಂದರ ಕಾರ್ಯಕ್ರಮದಲ್ಲಿ ನನ್ನನ್ನು ಭಾಗವಹಿಸಲು ಆಹ್ವಾನ ನಡೆದಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಪೂರ್ವಭಾವಿಯಾಗಿ ಮಾತುಕತೆ ನಡೆಸಲು ನನ್ನನ್ನು ಅವರು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿತ್ತು. ಈಗ ಬಾರದ ಲೋಕಕ್ಕೆ ಅಪ್ಪು ಹೋದರು"ಎಂದು ಮುಖ್ಯಮಂತ್ರಿಗಳು ಗದ್ಗಿತರಾದರು.

ಅಣ್ಣನ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಖುಷಿಖುಷಿಯಲ್ಲಿದ್ದ ಅಪ್ಪು
ಅಣ್ಣನ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಖುಷಿಖುಷಿಯಲ್ಲಿದ್ದ ಅಪ್ಪು, ಆ ಸಿನಿಮಾದ ಬಿಡುಗಡೆಯೆಂದೇ ನಿಧನರಾಗಿದ್ದದ್ದು ವಿಧಿಯ ಅಟ್ಟಹಾಸ ಅಲ್ಲದೇ ಮತ್ತಿನ್ನೇನು. ಎಲ್ಲಾ ವರ್ಗದ ಜನರನ್ನು, ಅದರಲ್ಲೂ ಪ್ರಮುಖವಾಗಿ ಮಹಿಳೆಯರನ್ನು ಸೆಳೆಯುವ ಪುನೀತ್ ರಾಜಕುಮಾರ್ ಸಿನಿಮಾಗಳು ಇನ್ನು ಮುಂದೆ ಬರುವುದಿಲ್ಲ ಎನ್ನುವುದು ಮಾತ್ರ ಘೋರ ಸತ್ಯ. ಆಡಿಸಿದಾತ ಬೇಸರ ಮೂಡಿ, ಆಟ ಮುಗಿಸಿದ..


Click it and Unblock the Notifications











