'ಪುಷ್ಪ 2' ಅಷ್ಟೇ ಅಲ್ಲ.. ಅಣ್ಣಾವ್ರ ಸಿನಿಮಾ ರಿಲೀಸ್ ವೇಳೆ ಕಾಲ್ತುಳಿತಕ್ಕೆ ಇಬ್ಬರು ಸಾವನ್ನಪ್ಪಿದ್ದರು.. ಎಲ್ಲಿ? ಯಾವಾಗ?
ಇತ್ತೀಚೆಗೆ 'ಪುಷ್ಪ 2' ಸಿನಿಮಾ ಪ್ರೀಮಿಯರ್ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ದುರ್ಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದವು. ಅಲ್ಲು ಅರ್ಜುನ್ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಆ ಘಟನೆ ವೇಳೆ ಅಲ್ಲು ಅರ್ಜುನ್ ಅಲ್ಲಿಯೇ ಇದ್ದಿದ್ದರಿಂದ ಅವರನ್ನು ಈ ದುರ್ಘಟನೆಗೆ ಕಾರಣವಾದವರ ಪಟ್ಟಿಯಲ್ಲಿ ಸೇರಿಸಿ ದೂರ ದಾಖಲು ಮಾಡಿ ಬಂದಿಸಲಾಗಿತ್ತು.
ಇಂತಹ ಒಂದು ಘಟನೆ ಅಣ್ಣಾವ್ರು ನಟಿಸಿದ 'ತಾಯಿಗೆ ತಕ್ಕ ಮಗ' ಸಿನಿಮಾ ರಿಲೀಸ್ ವೇಳೆನೂ ನಡೆದಿತ್ತು. ಸಿನಿಮಾ ಟಿಕೆಟ್ ಖರೀದಿ ಮಾಡುವುದಕ್ಕೆ ಒಮ್ಮೆಗೆ ನುಗ್ಗಿದ್ದರಿಂದ ಕಾಲ್ತಿಳಿತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯನ್ನು ಮಾಡಿತ್ತು. ಅಣ್ಣಾವ್ರ ಸಿನಿಮಾ ನೋಡುವುದಕ್ಕೆ ಆ ಮಟ್ಟಿಗೆ ಕ್ರೇಜ್ ಇತ್ತು. ಈ ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ.

1978ರಲ್ಲಿ ರಾಜ್ಕುಮಾರ್ ನಟನೆಯ ಮೂರು ಸಿನಿಮಾಗಳು ತೆರೆಗೆ ಬಂದಿದ್ದವು. ಫೆಬ್ರವರಿ ತಿಂಗಳಲ್ಲಿ 'ಶಂಕರ್ ಗುರು' ಸಿನಿಮಾ ರಿಲೀಸ್ ಆಗುತ್ತೆ. ಈ ಸಿನಿಮಾ ಒಂದು ವರ್ಷ ಪ್ರದರ್ಶನ ಕಂಡ ದಾಖಲೆ ಮಾಡಿದ ಸಿನಿಮಾ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ರಿಲೀಸ್ ಆಗುತ್ತೆ. ಇದು ರಾಜ್ಕುಮಾರ್ ನಟಿಸಿದ ನಾಲ್ಕನೇ ಬಾಂಡ್ ಸಿನಿಮಾ. ಹಾಗೇ ಡಿಸೆಂಬರ್ನಲ್ಲಿ ರಿಲೀಸ್ ಆಗಿದ್ದ ಸಿನಿಮಾ 'ತಾಯಿಗೆ ತಕ್ಕ ಮಗ'.
"ವರ್ಷಾಂತ್ಯದಲ್ಲಿ ಬಿಡುಗಡೆಯಾದ ತಾಯಿಗೆ ತಕ್ಕ ಮಗ ಸಿನಿಮಾದ ಬಗ್ಗೆ ಬಹಳಷ್ಟು ನಿರೀಕ್ಷೆಯಿತ್ತು. ಈ ಸಿನಿಮಾವನ್ನು ಕೂಡ ಶಂಕರ್ ಗುರು ಚಿತ್ರದ ನಿರ್ದೇಶಕ ವಿ.ಸೋಮಶೇಖರ್ ಅವರೇ ನಿರ್ದೇಶನ ಮಾಡಿರುತ್ತಾರೆ. ಈ ಸಿನಿಮಾದ ನಾಯಕಿ ಕೂಡ ಪದ್ಮಪ್ರಿಯಾ ಅವರೇ. ಹಾಗೇ ಈ ಚಿತ್ರದಲ್ಲಿ ದಕ್ಷಿಣ ಭಾರತದ ಮಹಾ ನಟಿ ಸಾವಿತ್ರಿಯವರು ರಾಜ್ಕುಮಾರ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ನಿರೀಕ್ಷೆಯಿದ್ದಿದ್ದರಿಂದ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು." ಎನ್ನುತ್ತಾರೆ ಹರಿಹರಪುರ ಮಂಜುನಾಥ್.

ಚಾಮರಾಜನಗರದ ಸಂಜಯ್ ಚಿತ್ರಮಂದಿರದಲ್ಲೂ 'ತಾಯಿ ತಕ್ಕ ಮಗ' ಸಿನಿಮಾ ರಿಲೀಸ್ ಆಗಿತ್ತು. ಇಂದು ಆ ಚಿತ್ರಮಂದಿರ ಕುವೆಂಪು ಕಲಾಕ್ಷೇತ್ರವಾಗಿ ಬದಲಾಗಿದೆ. ರಾಜ್ಕುಮಾರ್ ಸಿನಿಮಾ ರಿಲೀಸ್ ಆಗಿದೆ ಅಂದರೆ, ಹಿಂದಿನ ರಾತ್ರಿಯ ದಿನವೇ ಕ್ಯೂ ನಿಲ್ಲುತ್ತಿದ್ದರು. ಈಗಿನ ಹಾಗೇ ಅಂದು ಅಡ್ವಾನ್ಸ್ ಬುಕಿಂಗ್ ವ್ಯವಸ್ಥೆ ಇರದ ಕಾರಣ ಚಿತ್ರಮಂದಿರಕ್ಕೆ ತೆರಳಿ ಟಿಕೆಟ್ಗಳನ್ನು ಪಡೆಯಬೇಕಾಗಿತ್ತು. ಹೀಗಾಗಿ ಬೆಳಗ್ಗೆಯಿಂದಲೇ ಕ್ಯೂ ನಿಲ್ಲುತ್ತಿದ್ದರು. 'ತಾಯಿಗೆ ತಕ್ಕ ಮಗ' ಸಿನಿಮಾ ಬಿಡುಗಡೆ ವೇಳೆನೂ ಅದೇ ನಡೆದಿತ್ತು.
"ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಯ ದಿನ ಬೆಳಗ್ಗೆ ಅಲ್ಲಿ ಅಪಾರ ಜನಸಂದಣಿ ಸೇರಿರುತ್ತೆ. ಟಿಕೆಟ್ ಕೊಡುವುದಕ್ಕೆ ಕೌಂಟರ್ ಅನ್ನು ಓಪನ್ ಮಾಡಿ ಜನರನ್ನು ಬಿಡುತ್ತಿದ್ದಂತೆ ತಾವು ಮೊದಲು ಟಿಕೆಟ್ ತೆಗೆದುಕೊಳ್ಳಬೇಕು ಅನ್ನುವ ಧಾವಂತದಲ್ಲಿ ನುಗ್ಗುತ್ತಾರೆ. ಈ ವೇಳೆ ಕಾಲ್ತುಳಿತದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪುತ್ತಾರೆ. ಅದರಲ್ಲಿ ಒಬ್ಬರು ಹೆಸರು ಜಯರಾಂ. ಇವರು ಆ ಸಿನಿಮಾ ಒಂದು ಸಣ್ಣ ಪಾತ್ರದಲ್ಲಿ ನಟಿಸಿರುತ್ತಾರೆ. ಇನ್ನೊಬ್ಬರು ಸಹಚರನೊಂದಿಗೆ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪುತ್ತಾರೆ." ಎಂದು ಆ ದುರ್ಘಟನೆಯ ಬಗ್ಗೆ ವಿವರಿಸಿದ್ದಾರೆ.
ಈ ಘಟನೆಯ ಬಳಿಕ ಪತ್ರಿಕೆಗಳಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. 'ತಾಯಿಗೆ ತಕ್ಕ ಮಗ' ಸಿನಿಮಾ ನೋಡಲು ಹೋಗಿ ತಾಯಿಗೆ ಧಕ್ಕದ ಮಕ್ಕಳು ಅಂತ ಟೈಟಲ್ ಕೊಟ್ಟಿದ್ದರು. ಈ ದುರ್ಘಟನೆ ಬಳಿಕ ಅಣ್ಣಾವ್ರು ತುಂಬಾನೇ ನೊಂದುಕೊಳ್ಳುತ್ತಾರೆ. ತನ್ನ ಸಿನಿಮಾದಿಂದ ಹೀಗಾಯಿತಲ್ಲ ಅಂತ ರೋಧಿಸಿದ್ದರು ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











