'ಮಾನಸ ಸರೋವರ' ಸಿನಿಮಾಗೆ ಸಿ.ಅಶ್ವಥ್ ಹಾಡನ್ನು ಯಾಕೆ ಬಳಸಿಕೊಳ್ಳಲಿಲ್ಲ; ಕಂಪೋಸ್ ಆಗಿದ್ದ ಆ ಹಾಡು ಏನಾಯ್ತು?
ಕನ್ನಡ ಚಿತ್ರರಂಗ ಕಂಡ ಎರಡು ದೈತ್ಯ ಪ್ರತಿಭೆಗಳು ಸಿ. ಅಶ್ವಥ್ ಹಾಗೂ ಪುಟ್ಟಣ್ಣ ಕಣಗಾಲ್. ಒಬ್ಬರು ನಿರ್ದೇಶನ ಕ್ಷೇತ್ರದಲ್ಲಿ ದಿಗ್ಗಜರು ಎನಿಸಿಕೊಂಡರೆ, ಇನ್ನೊಬ್ಬರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಕನ್ನಡ ಚಿತ್ರರಂಗಕ್ಕೆ ಇವರಿಬ್ಬರ ಕೊಡುಗೆಗಳನ್ನು ಮರೆಯುವ ಹಾಗೆ ಇಲ್ಲ. ಆದರೆ, ಈ ಜೋಡಿ ಒಟ್ಟಿಗೆ ಕೆಲಸ ಮಾಡಿದ್ದು ತೀರಾ ವಿರಳ. ಅದರಲ್ಲೊಂದು ಸಿನಿಮಾವೇ 'ಮಾನಸ ಸರೋವರ'.
ಸಿನಿಮಾರಂಗದಲ್ಲಿ ಕೆಲವು ಅಪರೂಪದ ಕಾಂಬಿನೇಷನ್ ಎನಿಸಿಕೊಳ್ಳುತ್ತೆ. ಈಗ ಪುಟ್ಟಣ್ಣ ಕಣಗಾಲ್ ನಿರ್ದೇಶಿಸುತ್ತಿದ್ದ ಸಿನಿಮಾ ಶೈಲಿಯೇ ಬೇರೆ. ಅಂತಹ ಸಿನಿಮಾಗಳಿಗೆ ಸರಿ ಹೊಂದುವಂತಹ ಸಂಗೀತ ನಿರ್ದೇಶಕರು, ಗಾಯಕರೇ ಬೇಕಾಗಿತ್ತು. ಇತ್ತ ಸಿ. ಅಶ್ವಥ್ ಹಾಡುಗಳನ್ನು ಕಂಪೋಸ್ ಮಾಡುವ ಶೈಲಿಯೇ ಬೇರೆ ಇರುತ್ತಿತ್ತು. ಅವರ ಹಾಡುಗಳನ್ನು ರೆಗ್ಯೂಲರ್ ಸಿನಿಮಾಗಳಿಗೆ ಬಳಸಿಕೊಳ್ಳುವುದು ಕಷ್ಟ ಆಗುತ್ತಿತ್ತು.

ಹೀಗಿದ್ದರೂ, ಸಿ ಅಶ್ವಥ್ ಒಂದೆರಡ ತಮ್ಮ ಶೈಲಿಯಲ್ಲದ ಕಮರ್ಷಿಯಲ್ ಸಿನಿಮಾಗಳಿಗೆ ಹಾಡಿ ಗೆದ್ದಿದ್ದರು. ಹಾಗೇ ಪುಟ್ಟಣ್ಣ ಕಣಗಾಲ್ ಕೂಡ 'ಮಾನಸ ಸರೋವರ' ಸಿನಿಮಾ ಮಾಡುವಾಗ ಸಿ ಅಶ್ವಥ್ ಅವರಿಂದ ಒಂದು ಹಾಡು ಹಾಡಿಸಿದ್ದರು. ಆದರೆ, ಅದು ಸಿನಿಮಾದಲ್ಲಿ ಇಲ್ಲ. ಸಿ. ಅಶ್ವಥ್ ಹಾಡು 'ಮಾನಸ ಸರೋವರ' ಸಿನಿಮಾದಲ್ಲಿ ಯಾಕೆ ಇಟ್ಟುಕೊಳ್ಳಲಿಲ್ಲ ಅನ್ನೋದನ್ನು ಎನ್ ಎಸ್ ಶ್ರೀಧರಮೂರ್ತಿಗಳು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ಪುಟ್ಟಣ್ಣ ಕಣಗಾಲ್ ತೀರಾ ಕಷ್ಟದಲ್ಲಿ ಇದ್ದಾಗ ನಿರ್ದೇಶಿಸಿದ ಸಿನಿಮಾ 'ಮಾನಸ ಸರೋವರ'. ಇಂದಿಗೂ ಈ ಸಿನಿಮಾ ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ಗಳಲ್ಲಿ ಇದೂ ಒಂದಾಗಿದೆ. ಈ ಸಿನಿಮಾದ ಒಂದೊಂದು ಹಾಡುಗಳು ಇಂದಿಗೂ ಜನಪ್ರಿಯ. ಈ ಸಿನಿಮಾ ಮಾಡುವಾಗ ಪುಟ್ಟಣ್ಣ ಕಣಗಾಲ್ಗೆ ಗಾಯಕ ಸಿ ಅಶ್ವಥ್ ಅವರಿಂದ ಒಂದು ಹಾಡನ್ನು ಹಾಡಿಸಬೇಕು ಅಂತ ಅನಿಸಿತ್ತು. ಸಿ ಅಶ್ವಥ್ ಅವರನ್ನು ಕರೆದು ಒಂದು ಹಾಡನ್ನು ರೆಡಿ ಮಾಡುವಂತೆಯೂ ಹೇಳಿಬಿಡುತ್ತಾರೆ.

"ಮಾನಸ ಸರೋವರ ಸಿನಿಮಾದಲ್ಲಿ ಪುಟ್ಟಣ್ಣ ಕಣಗಾಲ್ ಕರೆಯುತ್ತಿದ್ದಾರೆ ಅಂತ ಹೋಗಿದ್ದರು. ನೋಡಿ ಒಂದು ಹಾಡಿದೆ. ಕೇಳಿರಿಲ್ಲಿ ಕೇಳಿ ನಮ್ಮ ಮಹಾದೇವ ಅನ್ನೋ ಹಾಡು. 9 ನಿಮಿಷದ ದೊಡ್ಡ ಹಾಡು. ಸಿನಿಮಾದ ಟರ್ನಿಂಗ್ ಪಾಯಿಂಟ್ ಇದು. ನೀವು ಹಾಡಬೇಕು ಅಂತ ಸಿ ಅಶ್ವಥ್ಗೆ ಹೇಳಿದರು. ಪುಟ್ಟಣ್ಣ ಇಷ್ಟ ಪಡುತ್ತಿದ್ದಾರೆ ಅಂದರೆ ಖಂಡಿತಾ ಹಾಡುತ್ತೇನೆ ಅಂತ ಹಾಡಿದ್ದರು. ಆದರೆ, ಸಿನಿಮಾದಲ್ಲಿ ಬಳಕೆ ಆಗಲಿಲ್ಲ." ಎಂದು ಎನ್ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಸಿ ಅಶ್ವಥ್ 9 ನಿಮಿಷದಷ್ಟು ಉದ್ದದ ಹಾಡನ್ನು ಅದ್ಭುತವಾಗಿ ಹಾಡಿದ್ದರು. ಆದರೆ, ಈ ಸಿನಿಮಾದಲ್ಲಿ ಹಾಡನ್ನು ಬಳಸಿಕೊಳ್ಳಲಿಲ್ಲ. "ಈ ವಿಷಯವನ್ನು ಪುಟ್ಟಣ್ಣ ಕಣಗಾಲ್ ಅವರೇ ಸಿ. ಅಶ್ವಥ್ ಅವರ ಮನೆಗೆ ಬಂದು ಹೇಳಿದ್ದರು. 9 ನಿಮಿಷ ಅದ್ಭುತವಾಗಿ ನೀವು ಹಾಡಿದ್ದೀರಿ. ಅದನ್ನು ಎಲ್ಲೂ ಕಟ್ ಮಾಡುವುಕ್ಕೆ ಮನಸ್ಸಾಗಲಿಲ್ಲ. 9 ನಿಮಿಷ ಸಿನಿಮಾದಲ್ಲಿ ತೆಗೆದುಕೊಳ್ಳುವುದಕ್ಕೂ ನನಗೆ ಆಗುತ್ತಿಲ್ಲ . ಹಾಗೇ ಇಟ್ಟುಕೊಂಡಿದ್ದೇನೆ. ನನ್ನ ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ಬಳಸಿಯೇ ಬಳಸುತ್ತೇನೆ ಎಂದು ಹೇಳುತ್ತಾರೆ." ಎಂದು ಆ ಘಟನೆಯನ್ನು ಎನ್ಎಸ್ ಶ್ರೀಧರ ಮೂರ್ತಿ ವಿವರಿಸಿದ್ದಾರೆ.
'ಮಾನಸ ಸರೋವರ' ಸಿನಿಮಾ ಬಂದ್ಮೇಲೆ ಪುಟ್ಟಣ್ಣ ಕಣಗಾಲ್ ಸಿನಿಮಾ ಮಾಡಿದ್ದು ತೀರಾ ಕಮ್ಮಿ.ಈ ಕಾರಣಕ್ಕೆ ಆ ಹಾಡು ಬಳಕೆ ಆಗಲಿಲ್ಲ. ಆದರೆ, ಸಿ ಅಶ್ವಥ್ ಅವರು ಪುಟ್ಟಣ್ಣ ಬರೆಸಿದ ಹಾಡು ಅಂತ ನೆನಪು ಮಾಡಿಕೊಳ್ಳುತ್ತಲೇ ಇದ್ದರು. ಅದೇ ಖುಷಿಯಲ್ಲಿ ಆ ಹಾಡಿನಲ್ಲಿ ಆಗಾಗ ತಮ್ಮ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದರು. ಇಬ್ಬರು ದಿಗ್ಗಜರ ಸಮಾಗಮ ಆಗಿದ್ದರೂ, ಸಿನಿಮಾದಲ್ಲಿ ಅದು ಮೂಡಿ ಬರಲೇ ಇಲ್ಲ.


Click it and Unblock the Notifications










