ರಾಘಣ್ಣನ ಮೊದಲ ಸಿನಿಮಾದ ನಾಯಕಿಗೆ ಏನಾಯ್ತು? ದುರಂತ ಅಂತ್ಯ ಕಂಡಿದ್ದೇಗೆ?
ಅಣ್ಣಾವ್ರ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೂ ಮುನ್ನ ಪೂರ್ವ ತಯಾರಿ ನಡೆದಿತ್ತು. ಶಿವಣ್ಣ ಅದಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ರಾಘಣ್ಣನನ್ನು ಚಿತ್ರರಂಗಕ್ಕೆ ಪರಿಚಯಿಸಲು ಪಾರ್ವತಮ್ಮ ರಾಜ್ಕುಮಾರ್ ಮುಂದಾಗಿದ್ದರು. ಹೀಗೆ ರಾಘಣ್ಣನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಮೊದಲ ಸಿನಿಮಾ 'ಚಿರಂಜೀವಿ ಸುಧಾಕರ'.
ಅಣ್ಣಾವ್ರ ದ್ವಿತೀಯ ಪುತ್ರ ರಾಘವೇಂದ್ರ ರಾಜ್ಕುಮಾರ್ ಅನ್ನು ಸಿಂಗೀತಂ ಶ್ರೀನಿವಾಸ ರಾವ್ ಇಂಟ್ರುಡ್ಯೂಸ್ ಮಾಡಿದ್ದರು. ಉತ್ತಮ ನಿರ್ದೇಶಕರು, ಕಾಂಚನಾ, ವನಿತಾ ವಾಸು, ವೈಶಾಲಿ, ಗಿರಿಜಾ ಲೋಕೇಶ್, ಲೋಕೇಶ್, ತೂಗುದೀಪ ಶ್ರೀನಿವಾಸ್, ಶಶಿಕುಮಾರ್, ಬಾಲರಾಜ್ ಹಾಗೂ ಶಿವರಾಂ ಇಂತಹ ದಿಗ್ಗಜರೆಲ್ಲರೂ ಈ ಸಿನಿಮಾದಲ್ಲಿ ಇದ್ದರು. ಈ ಸಿನಿಮಾ ಮೂಲವೇ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟಿ ಮೊನಿಷಾ ಉನ್ನಿ.

ರಾಘವೇಂದ್ರ ರಾಜ್ಕುಮಾರ್ ನಟಿಸಿದ ಮೊದಲ ಸಿನಿಮಾ 'ಚಿರಂಜೀವಿ ಸುಧಾಕರ' ನಾಯಕಿಯಾಗಿದ್ದವರು ಕೇರಳ ಮೂಲದ ನಟಿ ಮೊನಿಷಾ ಉನ್ನಿ. ಮೂಲ ಕೇರಳ ಆಗಿದ್ದರೂ, ವಿದ್ಯಾಭ್ಯಾಸ ಮಾಡಿದ್ದೆಲ್ಲ ಬೆಂಗಳೂರಿನಲ್ಲಿಯೇ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿಯ ಬದುಕು ಬಹುಬೇಗನೇ ದುರಂತ ಅಂತ್ಯ ಕಂಡಿತ್ತು. ಕೇವಲ 21 ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದರು.
ಮೊನಿಷಾ ಉನ್ನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್, ಬಿಷಪ್ ಕಾಟನ್, ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕನ್ನಡ ಚಿತ್ರರಂಗವೇನು ಹೊಸದಾಗಿರಲಿಲ್ಲ. ಅಲ್ಲದೇ ಕನ್ನಡಕ್ಕೆ ಎಂಟ್ರಿ ಕೊಡುವ ಮುನ್ನವೇ ತಮಿಳು, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾಗಿತ್ತು.
ಮೊನಿಷಾ ಉನ್ನಿ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮುನ್ನ ಕಿರುಚಿತ್ರಗಳಲ್ಲಿ ಆಕ್ಟ್ ಮಾಡಿದ್ದರು. ನೃತ್ಯದಲ್ಲೂ ಪ್ರವೀಣೆಯಾಗಿದ್ದ ಈ ನಟಿ ಸಿನಿಮಾ ಬರೋದು ಹೆಚ್ಚು ಕಷ್ಟವೇನು ಆಗಿರಲಿಲ್ಲ. ಇವರ ಎಂಟ್ರಿ ಹಾಗೂ ಅಂತ್ಯದ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಯೂಟ್ಯೂಬ್ ಚಾನೆಲ್ನಲ್ಲಿ ಬೆಳಕು ಚೆಲ್ಲಿದ್ದಾರೆ.

"ತಮಿಳಿನ ಬ್ಲಾಕ್ ಅಂಡ್ ವೈಟ್ ಶಾರ್ಟ್ ಸಿನಿಮಾ. ಇದರಲ್ಲಿ ನಟಿಸುವ ಅವಕಾಶ ಸಿಗುತ್ತೆ. ಆಗೆಲ್ಲ ಶಾರ್ಟ್ ಫಿಲ್ಮ್ ತುಂಬಾನೇ ಕಡಿಮೆ ಇದ್ದವು. ಅಲ್ಲಿ ಮೊನಿಷಾ ಉನ್ನಿ ಕಾಣಿಸಿಕೊಳ್ಳುತ್ತಾರೆ. ಅದಾದ ಎರಡೇ ವರ್ಷಗಳಲ್ಲಿ ಅವರಿಗೆ 'ನಕಕ್ಷತಂಗಳ್' ಅನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಗುತ್ತೆ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಕನ್ನಡ ಸಿನಿಮಾ 'ಚಿರಂಜೀವಿ ಸುಧಾಕರ' ಸಿನಿಮಾ ಬಾಕ್ಸಾಫೀಸ್ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಹೀಗಾಗಿ ಕನ್ನಡದಲ್ಲಿ ಇವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಲು ಆರಂಭಿಸಿದ್ದರು. ತಾನು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ 'ನಖಕ್ಷತಂಗಲ್'ದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಇನ್ನೇನು ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಮೊನಿಷಾ ಉನ್ನಿ ಕೃಷ್ಣಗೆ ಬಾಳಲ್ಲಿ ದುರಂತ ಸಂಭವಿಸಿತ್ತು. ಇನ್ನೂ ಬದುಕಿ ಬಾಳ ಬೇಕಿದ್ದ, ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೆ ಏರಬೇಕಿದ್ದ ಈ ಪ್ರತಿಭೆ ಬೆಳೆಯುವ ಮುನ್ನವೇ ಕೊನೆಯುಸಿರೆಳೆದರು. ಕಾರು ದುರಂತದಲ್ಲಿ ತೀವ್ರ ರಕ್ತಸಾವ್ರವಾಗಿ ಸಾವನ್ನಪ್ಪಿದರು.
"1992ರಲ್ಲಿ ಮೊನಿಷಾ ಉನ್ನಿ ಕೇರಳದ ಗುರುವಾಯೂರಿನಲ್ಲಿ ನೃತ್ಯ ಪ್ರದರ್ಶನವನ್ನು ನೀಡಬೇಕಾಗಿರುತ್ತೆ. ಆದರೆ, ಮೊನಿಷಾ ಉನ್ನಿಗೆ ಅದು ಸಾಧ್ಯವಾಗಿರಲಿಲ್ಲ. ಅದಕ್ಕೂ ಮುನ್ನ ಅವರು ದೇವರ ಸನ್ನಿಧಿಯನ್ನು ಸೇರಿಬಿಟ್ಟರು. ಈ ನೃತ್ಯ ಪ್ರದರ್ಶನಕ್ಕೆ ಇನ್ನೂ ಎರಡು ವಾರ ಇತ್ತು ಅಷ್ಟೇ. ಚಪ್ಪಡಿ ವಿದ್ಯಾ ಎನ್ನುವ ಶೂಟಿಂಗ್ನಲ್ಲಿ ಭಾಗವಹಿಸುತ್ತಿರುತ್ತಾರೆ. ಅವರು ಕೊಚ್ಚಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಆ ವೇಳೆ ಎದುರಿಗೆ ವೇಗವಾಗಿ ಬಂದ ಬಸ್ಸು ಕಾರಿಗೆ ಗುದ್ದುತ್ತೆ. ತೀವ್ರ ರಕ್ತಸಾವ್ರವಾಗಿ ಕೊನೆಯುಸಿರೆಳೆದಿದ್ದರು." ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











