25ನೇ ವಯಸ್ಸಿಗೆ ಹೃದಯಾಘಾತ.. ಹುಷಾರಾಗಿ ಬಂದು 100 ಡೇಸ್ ಸಿನಿಮಾ ಕೊಟ್ಟಿದ್ದ ರಾಘಣ್ಣ; ಆ ಸಿನಿಮಾ ಯಾವುದು?
ಇತ್ತೀಚೆಗೆ ಸೆಲೆಬ್ರೆಟಿಗಳಿಗೆ ಹೃದಯಾಘಾತವಾಗುವ ಸುದ್ದಿಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ. ಇಂತಹ ಸುದ್ದಿಗಳು ಬಂದಾಗ, ಜನರು, ಅಭಿಮಾನಿಗಳು ಆತಂಕಗೊಳ್ಳುತ್ತಾರೆ. ಅದಕ್ಕೆ ಇತ್ತೀಚೆಗಿನ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿಯವರ ಘಟನೆ ಕೂಡ ಕಣ್ಮುಂದೆಯೇ ಇದೆ. ಹೀಗಾಗಿ ಹಾರ್ಟ್ ಅಟ್ಯಾಕ್ ಅನ್ನೋದು ಯುವ ಸಮುದಾಯದಲ್ಲಿ ಭಯವನ್ನು ಸೃಷ್ಟಿಸಿದೆ ಅಂದರೆ ತಪ್ಪಾಗಲಿಕ್ಕಿಲ್ಲ.
ಅಣ್ಣಾವ್ರ ಎರಡನೇ ಪುತ್ರ ರಾಘವೇಂದ್ರ ರಾಜ್ಕುಮಾರ್ ಅವರಿಗೂ ಮೊದಲ ಬಾರಿ ಹೃದಯಾಘಾತವಾದಾಗ ಅವರಿಗೆ ಕೇವಲ 25 ವರ್ಷ. ಅದಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ನಂಜುಂಡಿ ಕಲ್ಯಾಣ' ಹಾಗೂ 'ಗಜಪತಿ ಗರ್ವಭಂಗ' ಅಂತಹ ಸಿನಿಮಾಗಳು ಸೂಪರ್ ಹಿಟ್ ಆಗಿರುತ್ತೆ. ಇನ್ನೇನು ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ಹೀರೋ ಚಿತ್ರರಂಗಕ್ಕೆ ಸಿಕ್ಕೇಬಿಟ್ಟ ಅಂತ ಸಿನಿಮಾ ಮಂದಿನೂ ಮಾತಾಡಿಕೊಂಡಿತ್ತು.

ಎರಡು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಆಗತಾನೆ ಮನೆಯಲ್ಲಿ ಮಗು ಹುಟ್ಟಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಎಲ್ಲವೂ ಅದ್ಭುತವಾಗಿದೆ ಎನ್ನುವ ಸಮಯದಲ್ಲಿ ಡಿಸೆಂಬರ್ 26, 1990 ರಾಘಣ್ಣನ ಕುಟುಂಬಕ್ಕೆ ಒಂದು ದೊಡ್ಡ ಆಘಾತ ಆಗುತ್ತೆ. ರಾಘವೇಂದ್ರ ರಾಜ್ಕುಮಾರ್ ಕೇವಲ 25ನೇ ವಯಸ್ಸಿಗೆ ಮೊದಲ ಬಾರಿಗೆ ಹೃದಯಾಘಾತವಾಗುತ್ತೆ. ಆ ಘಟನೆಯಿಂದ ಇಡೀ ಕುಟುಂಬಕ್ಕೆ ಶಾಕ್ ಆಗುತ್ತೆ. ಆಮೇಲೆ ಏನಾಯ್ತು? ಹುಷಾರಾಗಿ ಬಂದು ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು. ಅದು ಹೇಗೆ ಸಾಧ್ಯವಾಯ್ತು? ಅನ್ನೋದನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ರಾಘಣ್ಣನಿಗೆ ಮೊದಲ ಬಾರಿಗೆ ಹೃದಯಾಘಾತವಾದಾಗ ಅವರ ಅಚ್ಚು ಮೆಚ್ಚಿನ ಅಜ್ಜಿ ಅಗಲಿದ್ದರು. ಆದರೆ, ಅವರ ಮುಖವನ್ನು ಕೊನೆಯ ಬಾರಿ ನೋಡುವುದಕ್ಕೂ ರಾಘಣ್ಣನಿಗೆ ಸಾಧ್ಯವಾಗಿರಲಿಲ್ಲ. ಅದೊಂದು ನೋವು ಇತ್ತು ಎಂದು ರಾಘಣ್ಣ ಸಹೋದರಿ ಪೂರ್ಣಿಮಾ ಇದೇ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು.

"ಅದೊಂದು ನೋವು ಅವನ (ರಾಘವೇಂದ್ರ ರಾಜ್ಕುಮಾರ್) ಮನಸ್ಸಿನಲ್ಲಿ ಇತ್ತು. ನಮ್ಮ ಅಜ್ಜಿಗೆ ರಾಘು ಅಂದರೆ ತುಂಬಾನೇ ಫೇವರಿಟ್. ನಾನು ಅವರ ಮುಖವನ್ನು ನೋಡಬೇಕಿತ್ತು. ಮುಖ ನೋಡದ ಹಾಗೆ ಮಾಡಿಬಿಟ್ಟರಲ್ಲ ಎನ್ನುವ ಒಂದು ನೋವು ಇತ್ತು. ನನಗೆ ಹೇಳಿದ್ದರೆ, ಏನೂ ಆಗುತ್ತಿರಲಿಲ್ಲ. ನಾನು ತಡೆದುಕೊಳ್ಳುತ್ತಿದ್ದೆ ಎಂದಿದ್ದರಯ." ಎಂದು ಪೂರ್ಣಿಮಾ ಹೇಳಿದ್ದರು.
ಆ ವೇಳೆ ಅಣ್ಣಾವ್ರ ಕುಟುಂಬದಲ್ಲಿ ಒಂದು ನಂಬಿಕೆ ಹುಟ್ಟಿಕೊಂಡಿತ್ತು. ಅಜ್ಜಿ ಅವರ ಆಯಸ್ಸನ್ನು ರಾಘಣ್ಣನಿಗೆ ಕೊಟ್ಟು ಹೋದರು ಅನ್ನೋ ಮಾತುಗಳೆಲ್ಲ ಓಡಾಡಿತ್ತು. ರಾಘಣ್ಣನನ್ನು ಆಸ್ಪತ್ರೆಯಿಂದ ಡಿಸ್ಪಾರ್ಜ್ ಆಗಿದ್ದರು. ಆ ವೇಳೆ ರಾಘವೇಂದ್ರ ರಾಜ್ಕುಮಾರ್ ಅವರನ್ನು ಅಣ್ಣಾವ್ರು ಎಸ್ಟೆಟ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅಣ್ಣಾವ್ರು ರಾಘಣ್ಣನಿಗೆ ಅಜ್ಜಿನೇ ನಿನಗೆ ಆಯಸ್ಸನ್ನು ಕೊಟ್ಟು ಹೋಗಿದ್ದಾರೆ ಎಂದು ಹೇಳಿ ಸಮಾಧಾನ ಮಾಡಿದ್ದರು. ಆ ಘಟನೆಯನ್ನು ರಾಘವೇಂದ್ರ ರಾಜ್ಕುಮಾರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.
"ಆ ಸಮಯದಲ್ಲಿ ಏನಪ್ಪ ಇದು. ಸಿನಿಮಾದವರದ್ದೇ ಒಂದು ಸಿನಿಮಾ ಆಯ್ತಲ್ಲ ಅಂತ ಅನಿಸಿತ್ತು. ನನಗೆ ಏನು ಅನಿಸುತ್ತಿತ್ತು ಅಂದರೆ, ಮತ್ತೆ ಹಾಡುವುದಕ್ಕೆ ಆಗಲ್ವಾ? ಮತ್ತೆ ಫೈಟ್ ಮಾಡೋಕೆ ಆಗೋದಿಲ್ವಾ? ನನ್ನದು ಎರಡೇ ಸಿನಿಮಾಗೆ ಕೆಲಸ ಮುಗೀತಾ ಅಂತ ಅಂದುಕೊಂಡಿದ್ದೆ. ಆಮೇಲೆ ಅಪ್ಪಾಜಿ ಚೆನ್ನೈಗೆ ಕರೆದುಕೊಂಡು ಹೋದರು. ಅಲ್ಲಿ ಅಪ್ಪಾಜಿ ಟ್ರೀಟ್ಮೆಂಟ್ ಕೊಡಿಸಿದ್ದರು. ಅಲ್ಲಿ ವೈದ್ಯರು ಹೇಳುತ್ತಾರೆ. ಅವರು ಏನೇನು ಮಾಡುತ್ತಿದ್ದರೋ ಅದೆಲ್ಲವನ್ನೂ ಮತ್ತೆ ಮಾಡಬಹುದು ಎನ್ನುತ್ತಾರೆ. ಅವರದ್ದು ಈಗ ನಾರ್ಮಲ್ ಹಾರ್ಟ್. ನಿಮ್ಮ ಹಾರ್ಟ್ಗಿಂತ ಚೆನ್ನಾಗಿದೆ ಅಂತ ಹೇಳಿದ್ದರು. ನಮ್ಮ ಅಮ್ಮ ಮತ್ತೆ ಕೇಳುತ್ತಾರೆ. ಸಿನಿಮಾದಲ್ಲಿ ಫೈಟ್ ಎಲ್ಲ ಇರುತ್ತೆ ಮಾಡಬಹುದಾ ಅಂತ? ಆಗ ವೈದ್ಯರು ಓಲಂಪಿಕ್ಸ್ಗೆ ಕೂಡ ಹೋಗಬಹುದು ಎಂದು ಹೇಳುತ್ತಾರೆ. ಆಗ ನನಗೆ ಧೈರ್ಯ ಬಂತು. ಅಲ್ಲಿಂದ ಅಪ್ಪಾಜಿ 15 ದಿನ ನನಗೆ ಬೀಚ್ಗೆ ಕರೆದುಕೊಂಡು ಹೋಗುತ್ತಾರೆ. ನಾನು, ಅಪ್ಪಾಜಿ, ಮಂಗಳ ಮೂವರು ವಾಕಿಂಗ್ಗೆ ಹೋಗುತ್ತೇವೆ. ನಾನು ಅಪ್ಪಾಜಿಗಿಂತ ವೇಗವಾಗಿ ವಾಕ್ ಮಾಡುತ್ತಿದ್ದೆ. ಚೆನ್ನಾಗಿ ಆಗಿದ್ದೇನೆ ಎಂದು ತಿಳಿದು ಬೇಗ ಸಿನಿಮಾ ಮಾಡುವುದಕ್ಕೆ ಬಿಡಲಿ ಅಂತ. ಆದರೆ, ನಮ್ಮ ಅಮ್ಮನಿಗೆ ಭಯ. ಮತ್ತೆ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಆಗ ಡಾಕ್ಟರ್ ಅವನು ಓಡಲಿ ಬಿಡಿ ಎನ್ನುತ್ತಾರೆ. ಆಗ ಇನ್ನೊಂದು ಸಿನಿಮಾ ಶುರು ಮಾಡುತ್ತಾರೆ." ಎಂದು ಮೊದಲ ಬಾರಿ ಹೃದಯಾಘಾತದಿಂದ ರಿಕವರಿಯಾಗಿ ಬಂದ ಬಳಿಕ ಏನಾಯ್ತು ಎನ್ನುವುದನ್ನು ರಾಘಣ್ಣ ಹೇಳಿಕೊಂಡಿದ್ದರು.
ಹೃದಯಾಘಾತದ ಬಳಿಕ ಆರಂಭ ಆದ ರಾಘಣ್ಣನ ಸಿನಿಮಾವೇ 'ಕಲ್ಯಾಣ ಮಂಟಪ'. ಆ ಸಿನಿಮಾ ಕೂಡ 100 ದಿನಗಳು ಓಡುತ್ತೆ. ಆಗ ರಾಘಣ್ಣನಿಗೆ ಧೈರ್ಯ ಬರುತ್ತೆ. ಮತ್ತೆ ಹಾಡಬಹುದು, ಫೈಟ್ ಮಾಡಬಹುದು ಅಂದುಕೊಳ್ಳುತ್ತಾರೆ. ಇಲ್ಲಿಂದ ಇನ್ನೊಂದು ಇನ್ನಿಂಗ್ಸ್ ಶುರು ಮಾಡಬಹುದು ಎಂದುಕೊಳ್ಳುತ್ತಾರೆ.
ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ನಲ್ಲಿ ರಾಘಣ್ಣ ತಮ್ಮ ಬದುಕಿನ ಹಲವು ಸಂಗತಿಗಳನ್ನು ತೆರೆದಿಟ್ಟಿದ್ದರು. ಅದರಲ್ಲಿ ಅವರಿಗೆ ಮೊದಲ ಬಾರಿಗೆ ಹೃದಯಾಘಾತವಾದ ಸನ್ನಿವೇಶವನ್ನು ಕಣ್ಣು ಕಟ್ಟುವಂತೆ ಹೇಳಿಕೊಂಡಿದ್ದರು. ಅಣ್ಣಾವ್ರೊಂದಿಗೆ ಪಾರ್ವತಮ್ಮ ಕೂತು ಮಾತಾಡುತ್ತಿದ್ದರು. ಆಗ ರಾಘಣ್ಣನಿಗೆ ಎದೆ ನೋವು ಕಾಣಿಸಿಕೊಳ್ಳುತ್ತೆ. ಆಗ ಪಾರ್ವತಮ್ಮ ಅವರನ್ನು ಕರೆದು, ತುಂಬಾ ಎದೆ ನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗೋಣ ಬಾ ಅಮ್ಮ ಎಂದು ಹೇಳಿದ್ದರಂತೆ. ಆ ಘಟನೆ ರಾಘಣ್ಣ ಹೇಳುತ್ತಿದ್ದರೆ, ಅಣ್ಣಾವ್ರ ಕುಟುಂಬ ಭಾವುಕರಾಗಿದ್ದರು.
ರಾಘವೇಂದ್ರ ರಾಜ್ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಶಿವರಾಜ್ಕುಮಾರ್ ಕಣ್ಣೀರು ಹಾಕಿದ್ದರಂತೆ. ರಾಘಣ್ಣನನ್ನು ನೋಡಿ ಮಗುವಿನಂತೆ ಅಳುತ್ತಾರಂತೆ. ಇನ್ನೊಂದು ಕಡೆ ರಾಘಣ್ಣ ಅವರ ಪತ್ನಿಗೂ ಈ ವಿಷಯ ಗೊತ್ತಿರಲಿಲ್ವಂತೆ. ಆಮೇಲೆ ಪಾರ್ವತಮ್ಮ ರಾಜ್ಕುಮಾರ್ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪತ್ನಿ ಮಂಗಳಾ ಅವರಿಗೆ ವಿಷಯವನ್ನು ತಿಳಿಸಿದ್ದರೆಂದು ರಾಘವೇಂದ್ರ ರಾಜ್ಕುಮಾರ್ ಇದೇ ವಿಶೇಷ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.
ಹಾಗೇ 48ನೇ ವಯಸ್ಸಿನಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಸ್ಟ್ರೋಕ್ ಆಗಿತ್ತು. ಆ ವೇಳೆ ಶಿವರಾಜ್ಕುಮಾರ್ ಸಹಾಯವನ್ನು ನೆನಪಿಸಿಕೊಂಡಿದ್ದರು. ಆ ಆತಂಕದ ಸಮಯದಲ್ಲಿ ಶಿವಣ್ಣ ಬೆಂಬಲವಾಗಿ ನಿಂತಿದ್ದರು. ರಾಘಣ್ಣನನ್ನು ಆಸ್ಪತ್ರೆಯಲ್ಲಿ ಇದ್ದು ಖುದ್ದು ವಿಚಾರಿಸಿಕೊಂಡಿದ್ದರು. ಅಲ್ಲದೆ ಸಿಂಗಾಪುರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಯೋಗಕ್ಷೇಮ ನೋಡಿಕೊಂಡಿದ್ದನ್ನು ಸ್ಮರಿಸಿಕೊಂಡಿದ್ದರು.
"ಎಲ್ಲರೂ ಶಿವಣ್ಣ ಅವರದ್ದು ಒಂದು ಸೈಡ್ ನೋಡಿದ್ದಾರೆ. ಶಿವಣ್ಣ ತುಂಬಾನೇ ಎಮೋಷನಲ್. 1990ರಲ್ಲಿ ನನಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅವತ್ತು ಶೂಟಿಂಗ್ನಿಂದ ಬರುತ್ತಾರೆ. ನಮ್ಮ ಕಾಮನ್ ಫ್ರೆಂಡ್ ಗುರುದತ್ ಇದ್ದಾರಲ್ಲ. ಅವರ ಬಳಿ ಹೇಳುತ್ತಾರೆ. ಯಾಕೆ ಎಲ್ಲಾ ಅವನಿಗೆ ಬರುತ್ತೆ. ನಮಗೆ ಯಾಕೆ ಬರಲ್ಲ ಅಂತ ಅಳುತ್ತಾನೆ." ಎಂದು ರಾಘಣ್ಣ ಹೇಳಿದ್ದಾರೆ.
"ಮತ್ತೆ ಅಲ್ಲಿಂದ 25 ವರ್ಷ ಆಗುತ್ತೆ. ಮತ್ತೆ ನನಗೆ ಸ್ಟ್ರೋಕ್ ಆಗುತ್ತೆ. ಅವತ್ತೂ ಆಸ್ಪತ್ರೆಗೆ ಬರುತ್ತಾನೆ. ಅವತ್ತೂ ಹೇಳುತ್ತಾನೆ. ಯಾಕಪ್ಪ ಎಲ್ಲಾ ಅವನಿಗೆ ಕೊಡುತ್ತಾನೆ. ನಾವು ಇಲ್ವಾ? ಅವನೊಬ್ಬನೇ ಮಗನಾ? ನಾವಿಲ್ವಾ ಮಕ್ಕಳು ಅಂತ ಕೇಳುತ್ತಾನೆ. ನನಗೆ ಸ್ಟ್ರೋಕ್ ಆದ್ಮೇಲೆ ಸಿಂಗಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ. ಶಿವಣ್ಣ ಅವರಿಗೆ ಎನರ್ಜಿ ಎಲ್ಲಾ ಇದೆ. ತುಂಬಾನೇ ಅಳುತ್ತಾನೆ. ನನ್ನನ್ನು ಹೆಣಗ ಅಂತಾನೆ. ಒಳಗೆ ಹೆಣ್ಣಿನ ಕರುಳು ಇರೋದು ಅವನಿಗೆ. ಸಿಂಗಾಪುರಕ್ಕೆ ಕರೆದುಕೊಂಡು ಹೋಗಿ, ಇವನು ಮಾರ್ಕೆಟ್ಗೆ ತರಕಾರಿ ತರುವುದಕ್ಕೆ ಹೋಗುತ್ತಾರೆ. ವ್ಹೀಲ್ ಚೇರ್ ತೆಗೆದುಕೊಂಡು ಸುತ್ತಾಡುತ್ತಾರೆ. ದಿನಾ ಬಂದು ನೋಡುತ್ತಾನೆ. ಅವನ ಹೆಂಡ್ತಿಯನ್ನು ಕರೆದುಕೊಂಡು ಬಂದು ಅಡುಗೆ ಮಾಡಿಸುತ್ತಾನೆ. ನನ್ನನ್ನು ಮಗುತರ ಒಂದು ತಿಂಗಳು ನೋಡಿಕೊಳ್ಳುತ್ತಾನೆ. ಇವತ್ತು ಸುಮ್ಮನೆ ಬಂದು ರಾಘಣ್ಣ ಇಲ್ಲಿ ಕೂತಿಲ್ಲ. ಇವರುಗಳು ಹಾಕಿರುವ ಭಿಕ್ಷೆ ಅದು. ನನ್ನ ಪ್ರಾಣ ತಗೋ ಅಂತಾನೆ. ಹೇಗೆ ತಗೆದುಕೊಳ್ಳೋಕೆ ಆಗುತ್ತೆ." ಎಂದು ರಾಘಣ್ಣ ಭಾವುಕರಾಗಿದ್ದರು.


Click it and Unblock the Notifications











