ವಿಷ್ಣುವರ್ಧನ್-ಸುಹಾಸಿನಿ ಜೋಡಿಯ 'ಹಗಲುಗನಸು' ಸೆಟ್ಟೇರಲಿಲ್ಲ ಯಾಕೆ? ಅಂತಹದ್ದು ಏನಾಯ್ತು?
ಡಾ.ವಿಷ್ಣುವರ್ಧನ್ ಹಾಗೂ ಸುಹಾಸಿನಿ ಕನ್ನಡ ಚಿತ್ರರಂಗದ ಹಿಟ್ ಜೋಡಿ ಎನಿಸಿಕೊಂಡಿತ್ತು. 'ಬಂಧನ' ಸಿನಿಮಾ ಬಾಕ್ಸಾಫೀಸ್ನಲ್ಲಿ ಮೆಗಾ ಹಿಟ್ ಆಗಿತ್ತು. ಕ್ಲೈಮ್ಯಾಕ್ಸ್ ಸೀನ್ ನೋಡಿ ಸಿನಿಪ್ರಿಯರು ಅಕ್ಷರಶ: ಭಾವುಕರಾಗಿದ್ದರು. ಇದೇ ಜೋಡಿಯನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಿ. ಈ ಬಾರಿ ಹ್ಯಾಪಿ ಎಂಡಿಂಗ್ ಮಾಡಿ ಅಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಒತ್ತಡ ಹಾಕುತ್ತಿದ್ದರು.
ರಾಜೇಂದ್ರ ಸಿಂಗ್ ಬಾಬು ಕೂಡ ವಿಷ್ಣುವರ್ಧನ್ಗೆ ಇಂತಹ ಲೈಟ್ ಹಾರ್ಟೆಡ್ ಸಿನಿಮಾ ಮಾಡಬೇಕು ಅಂತ ಕಥೆಯ ಹುಡುಕಾಟದಲ್ಲಿ ಇದ್ದರು. ಇದು ವಿಷ್ಣುವರ್ಧನ್ ಅವರ ನೂರನೇ ಸಿನಿಮಾ ಆಗಬೇಕಿತ್ತು. ರಾಜೇಂದ್ರ ಸಿಂಗ್ ಬಾಬು, ವಿಷ್ಣುವರ್ಧನ್ ಹಾಗೂ ಸುಹಾಸಿನಿ ಕಾಂಬಿನೇಷನ್ ಬಾಕ್ಸಾಫೀಸ್ನಲ್ಲಿ ಜಾದು ಮಾಡುತ್ತೆ ಅನ್ನೋದು ಗ್ಯಾರಂಟಿ ಸಿನಿಮಾ ಮಂದಿಗೂ ಇತ್ತು.

ಹೀಗೆ ಕಥೆಯ ಹುಡುಕಾಟದಲ್ಲಿರುವಾಗ ದಿನೇಶ್ ಬಾಬು ಇದೇ ಜೋಡಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಅದುವೇ 'ಸುಪ್ರಭಾತ'. ಈ ಸಿನಿಮಾದಲ್ಲಿ ವಿಷ್ಣುದಾದ ಹಾಗೂ ಸುಹಾಸಿನಿ ಜೋಡಿ ಪ್ರೇಮಿಗಳಾಗಿ ನಟಿಸಿದ್ದರು. ಹೀಗಾಗಿ ರಾಜೇಂದ್ರ ಸಿಂಗ್ ಬಾಬು ನಿರಾಸೆ ಆಗಿದ್ದರೂ, ಇದೇ ಜೋಡಿಯನ್ನು ಇಟ್ಟುಕೊಂಡು ಹೊಸ ಕತೆ ಹೇಳಬೇಕು ಅಂತ ಹೊರಟಿದ್ದರು. ಆದರೂ 'ಹಗಲು ಕನಸು' ಯಾಕೆ ಟೇಕಾಫ್ ಆಗಲಿಲ್ಲ ಅಂತ ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಲಾಗಿದೆ.
ರಾಜೇಂದ್ರ ಬಾಬು ಸಿಂಗ್ ಕನ್ನಡದ ಕಾದಂಬರಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ ಎಕ್ಸ್ಪರ್ಟ್. ಹೀಗಾಗಿ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಜೋಡಿಗಾಗಿ ಕಥೆ ಹುಡುಕುತ್ತಿದ್ದಾಗ ಉಷಾ ನವರತ್ನರಾಂ ಬರೆದ 'ಹಗಲುಗನಸು' ಕಥೆ ಸಿಕ್ಕಿತ್ತು. ಈ ಕಥೆ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಹೇಳಿದ್ದರು. ಅವರಿಗೂ ಕೂಡ ಈ ಸಿನಿಮಾ ಇಷ್ಟ ಆಗಿತ್ತು. ಸುಹಾಸಿನಿಯವರಿಗೂ ಈ ಕಥೆಯನ್ನು ಒಪ್ಪಿಸಲಾಯಿತು.

ಇನ್ನೇನು ವಿಷ್ಣುದಾದ, ಸುಹಾಸಿನಿ ಹಾಗೂ ರಾಜೇಂದ್ರ ಸಿಂಗ್ ಬಾಬು ಮೂವರ ಕಾಂಬಿನೇಷನ್ ಸಿನಿಮಾ ಕುತೂಹಲ ಹೆಚ್ಚಿಸಿತ್ತು. 'ಬಂಧನ' ಸಿನಿಮಾದಂತೆಯೇ ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸು ಗೆಲ್ಲುತ್ತೆ ಅಂತ ಇತ್ತ ಅಭಿಮಾನಿಗಳು ಕಾದು ಕೂತಿದ್ದರು. ಸಿನಿಮಾ ಆರಂಭ ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಾಗಲೇ ನಟಿ ಸುಹಾಸಿನಿ ಹಿಂದೇಟು ಹಾಕಿದ್ದರು. ಈ ಸಿನಿಮಾದಲ್ಲಿ ನಟಿಸುವುದಿಲ್ಲ ಅಂತ ಪಟ್ಟು ಹಿಡಿದು ಕೂತಿದ್ದರು.
ಸುಹಾಸಿನಿ ದಿಢೀರನೇ ಹೀಗೆ ಹಿಂದೆ ಸರಿದಿದ್ದು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಸುಹಾಸಿನಿ ಒಪ್ಪಲೇ ಇಲ್ಲ. ಅದಕ್ಕೆ ಕಾರಣ ಸುಹಾಸಿನಿ ಅಮ್ಮ ಕೋಮಲಂ. ರಾಜೇಂದ್ರ ಸಿಂಗ್ ಬಾಬು ಎಷ್ಟು ಫೋರ್ಸ್ ಮಾಡಿದರೂ, ಸುಹಾಸಿನಿ ಅಮ್ಮ ಒಪ್ಪಿಲಿಲ್ಲ. ಯಾಕಂದ್ರೆ, ಈ ಸಿನಿಮಾದಲ್ಲಿ ಸುಹಾಸಿನಿ ವೇಶ್ಯೆಯ ಪಾತ್ರ ಮಾಡಬೇಕಿತ್ತು. ಈ ಸಿನಿಮಾ ಸೆಟ್ಟೇರುವ ವೇಳೆನೇ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಸುಹಾಸಿನಿ ನಿಶ್ಚಿತಾರ್ಥ ಆಗಿತ್ತು. ಈ ಸಂದರ್ಭದಲ್ಲಿ ಇಂತಹ ಪಾತ್ರ ಬೇಡ ಅಂದುಕೊಂಡಿದ್ದರು. ಈ ಕಾರಣಕ್ಕೆ ಒಪ್ಪಲಿಲ್ಲ.
ಆದರೆ, ಸುಹಾಸಿನಿ ಸಿನಿಮಾದಿಂದ ಹೊರ ನಡೆಯುವಾಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ ತನ್ನ ಗೆಳತಿಯ ಹೆಸರನ್ನು ಸೂಚಿಸಿದ್ದರು. ಅವರು ಮತ್ಯಾರೂ ಅಲ್ಲ ರೇವತಿ. ರಾಜೇಂದ್ರ ಸಿಂಗ್ ಬಾಬು ಸ್ಟಾರ್ ನಟಿಯಾಗಿದ್ದ ರೇವತಿಯವರನ್ನು ಅಪ್ರೋಚ್ ಮಾಡಿದ್ದರು. ಆಕೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಕಾಕತಾಳೀಯವೋ ಏನೋ ರೇವತಿ ಮದುವೆ ಕೂಡ ಅದೇ ವೇಳೆ ಫಿಕ್ಸ್ ಆಗಿತ್ತು. ಹೀಗಾಗಿ ಅವರೂ ಕೂಡ ಸಿನಿಮಾದಿಂದ ಹೊರ ಉಳಿಯುವುದಕ್ಕೆ ನಿರ್ಧರಿಸಿದ್ದರು. ಇದ್ಯಾಕೋ ಸರಿ ಹೋಗುತ್ತಿಲ್ಲ ಅಂತ 'ಹಗಲುಗನಸು' ಸಿನಿಮಾವನ್ನೇ ರಾಜೇಂದ್ರ ಸಿಂಗ್ ಬಾಬು ನಿಲ್ಲಿಸಿದ್ದರು.


Click it and Unblock the Notifications










