ಶ್ರೀದೇವಿ ಜೊತೆ ಮದುವೆ ಆಗದಂತೆ ರಜನಿಕಾಂತ್ ತಡೆದ ಅಪಶಕುನ; ಆ ದಿನ ನಡೆದ ಘಟನೆ ಏನು?
ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ಅತಿಲೋಕ ಸುಂದರಿ ಶ್ರೀದೇವಿ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಿದ್ದರು. ಇವರು ಒಟ್ಟಿಗೆ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಹೀಗಾಗಿ ಈ ಜೋಡಿ ಕೂಡ ಗಾಳಿ ಸುದ್ದಿಗಳ ದಾಳಿಗೆ ಒಳಗಾಗಿತ್ತು. ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ರೂಮರ್ಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯ.
ಚಿತ್ರರಂಗದಲ್ಲಿ ಹೀರೋ-ಹೀರೋಯಿನ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗಳು ಬರುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಸುದ್ದಿಗಳು ಗಾಳಿ ಸುದ್ದಿಗಳಾಗಿಯೇ ಉಳಿದುಕೊಂಡಿವೆ. ಮತ್ತೆ ಕೆಲವು ನಿಜವಾಗಿವೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಮುಂದೆನೇ ಇರುತ್ತವೆ. ರಜನಿಕಾಂತ್ ಹಾಗೂ ಶ್ರೀದೇವಿ ಜೋಡಿ ಬಗ್ಗೆನೂ ಸಾಕಷ್ಟು ರಸವತ್ತಾದ ಸುದ್ದಿಗಳು ವರದಿಯಾಗಿವೆ.

ಅತಿಲೋಕ ಸುಂದರಿ ಶ್ರೀದೇವಿ ಹಾಗೂ ಸೂಪರ್ಸ್ಟಾರ್ ರಜನಿಕಾಂತ್ ನಡುವಿನ ಪ್ರೀತಿ ಹುಟ್ಟಿತ್ತು. ಅದು ಮದುವೆ ಮಾತುಕತೆಯ ಹಂತಕ್ಕೂ ಹೋಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹಿಂದೆ ಸರಿಯಲು ಒಂದು ಅಪಶಕುನವೇ ಕಾರಣ ಎಂದು ವರದಿಯಾಗಿತ್ತು. ಶ್ರೀದೇವಿ ಮನೆಗೆ ಹೋಗಿದ್ದ ರಜನಿಕಾಂತ್ ಏನೂ ಮಾತಾಡದೇ ವಾಪಾಸ್ ಬಂದಿದ್ದರು. ಅಸಲಿಗೆ ಆ ದಿನ ಶ್ರೀದೇವಿ ಮನೆಯಲ್ಲಿ ಏನಾಯ್ತು? ತಿಳಿಯುವುದಕ್ಕೆ ಮುಂದೆ ಓದಿ.
ಶ್ರೀದೇವಿ ಹಾಗೂ ರಜನಿಕಾಂತ್ ಇಬ್ಬರೂ ಯಶಸ್ಸಿನ ಉತ್ತುಂಗದಲ್ಲಿ ಇದ್ದರು. ಶ್ರೀದೇವಿ ಆ ವೇಳೆ ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ಎನ್ಟಿಆರ್, ಎಎನ್ಆರ್, ಶೋಭನ್ ಬಾಬು, ಕೃಷ್ಣ ಸೇರಿದಂತೆ ದಿಗ್ಗಜರೊಂದಿಗೆ ನಟಿಸಿದ್ದರು. ಇವರೊಂದಿಗೆ ನಟಿಸಿದ ಸಿನಿಮಾಗಳು ಯಶಸ್ಸು ಕಂಡಿದ್ದವು. ಹೀಗಿದ್ದರೂ, ಶ್ರೀದೇವಿ ಡೇಟಿಂಗ್ ವದಂತಿಗಳು ಕಮಲ್ ಹಾಸನ್ ಮತ್ತು ರಜನಿಕಾಂತ್ ಜೊತೆಗೆ ತಳುಕು ಹಾಕಿಕೊಂಡಿದ್ದವು.
ರಜನಿಕಾಂತ್ ಹಾಗೂ ಶ್ರೀದೇವಿ ಲವ್ ಸ್ಟೋರಿ ಬಗ್ಗೆ 80ರ ದಶಕದ ಆರಂಭದಲ್ಲಿ ಸದ್ದು ಮಾಡುತ್ತಿತ್ತು. ಇಬ್ಬರೂ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇದ್ದಾಗ ಅವರಿಬ್ಬರ ಬಾಂಧವ್ಯವು ಬಹಳ ಆಳವಾಗಿ ಬೆಳೆದಿತ್ತು. ಆ ಸಮಯದಲ್ಲಿ ಈ ಜೋಡಿಯ ಡೇಟಿಂಗ್ ವಿಷಯ ಬಹಳ ಸಂಚಲನ ಮೂಡಿಸಿತ್ತು. ಈ ಗಾಸಿಪ್ ಅಂದಿನ ಮ್ಯಾಗಜೀನ್ಗಳಿಗೆ ಆಹಾರವಾಗಿದ್ದವು.

ಈ ಸ್ಟಾರ್ ಜೋಡಿಗಳು ಮದುವೆ ಆಗುವುದು ಗ್ಯಾರಂಟಿ ಎಂದೇ ಎಲ್ಲರೂ ಭಾವಿಸಿದ್ದರು. ಇನ್ನೊಂದು ಕಡೆ ಶ್ರೀದೇವಿಗೆ ಕೂಡ ರಜನಿಕಾಂತ್ ಬಗ್ಗೆ ಸಿಕ್ಕಾಪಟ್ಟೆ ಒಲವಿತ್ತು. ರಜನಿಕಾಂತ್ ಅನ್ನು ಮದುವೆ ಆಗುವುದಕ್ಕೆ ಶ್ರೀದೇವಿ ಕೂಡ ನಿರ್ಧಾರ ಮಾಡಿದ್ದರು ಅನ್ನೋದು ಕೂಡ ಚರ್ಚೆಯಾಗಿತ್ತು. ಈ ಮಧ್ಯೆ ರಜನಿಕಾಂತ್ ನೇರವಾಗಿ ಶ್ರೀದೇವಿ ಬಳಿ ಮದುವೆಯ ಬಗ್ಗೆ ಚರ್ಚಿಸುವುದಕ್ಕೆ ಮುಂದಾಗಿದ್ದರು. ಅದಕ್ಕಾಗಿ, ಶುಭ ಮುಹೂರ್ತದಂದು ಶ್ರೀದೇವಿ ಮನೆಗೆ ಹೋಗಿ ಮದುವೆ ಪ್ರಸ್ತಾಪ ಮಾಡುವುದಕ್ಕೆ ಮುಂದಾಗಿದ್ದರು.
ಒಂದು ದಿನ ರಜನಿಕಾಂತ್ ನಟಿ ಶ್ರೀದೇವಿ ಮನೆಗೆ ಮದುವೆ ಮಾತುಕತೆ ಮಾತಾಡುವುದಕ್ಕೆ ತೆರಳದ್ದರು. ರಜನಿಕಾಂತ್ ಅವರನ್ನು ನೋಡಿದ ಕೂಡಲೇ ಶ್ರೀದೇವಿ ಹಾಗೂ ಅವರ ಕುಟುಂಬ ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ಕುಶಲೋಪರಿಯ ಬಳಿಕ ರಜನಿಕಾಂತ್ ಅಸಲಿ ವಿಷಯವನ್ನು ಹೇಳುವುದಕ್ಕೆ ಮುಂದಾದರು. ಇನ್ನೇನು ಮದುವೆ ಮಾತುಕಥೆ ನಡೆಯಬೇಕು ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತವಾಗಿತ್ತು. ಆಗ ಇಡೀ ಮನೆಯಲ್ಲಿ ಕತ್ತಲು ಆವರಿಸಿಕೊಂಡಿತ್ತು.
ಈ ಘಟನೆ ರಜನಿಕಾಂತ್ಗೆ ಅಪಶಕುನದಂತೆ ಕಂಡಿತ್ತು. ಹೀಗಾಗಿ ಮನೆಗೆ ಹೋದವರು ಮದುವೆ ಬಗ್ಗೆ ಮಾತಾಡದೇ ಹಿಂತಿರುಗಿದ್ದರು. ರಜನಿಕಾಂತ್ ಮುಹೂರ್ತ, ಜಾತಕ ಮತ್ತು ಆಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ಕಾರಣಕ್ಕೆ ವಿದ್ಯುತ್ ಕಡಿತದ ಘಟನೆಯ ಬಳಿಕ ಆ ವಿಷಯವನ್ನು ಮತ್ತೆ ಶ್ರೀದೇವಿ ಬಳಿ ಪ್ರಸ್ತಾಪ ಮಾಡಲೇ ಇಲ್ಲ. ಈ ಅನಿರೀಕ್ಷಿತ ಅಪಶಕುನದ ಘಟನೆಯಿಂದ ರಜನಿಕಾಂತ್ ಹಾಗೂ ಶ್ರೀದೇವಿ ಮದುವೆ ನಡೆಯಲಿಲ್ಲ ಎಂದು ಹಲವು ವರದಿಗಳಾಗಿವೆ.


Click it and Unblock the Notifications













