Rakshit-Rashmika: ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದೇಕೆ? ನೇರಾನೇರ ಪ್ರಶ್ನೆಗೆ ಸಿಂಪಲ್ ಸ್ಟಾರ್ ಏನಂದ್ರು?
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ನಲ್ಲಿ ಬೀಡುಬಿಟ್ಟಿರುವ ರಕ್ಷಿತ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿದೆ. ಅದಕ್ಕೂ ಉತ್ತರ ನೀಡುತ್ತಿದ್ದಾರೆ.
ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಕನ್ನಡದಲ್ಲಿ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರ ಬೆನ್ನಲ್ಲೇ ಚಿತ್ರವನ್ನು ತೆಲುಗು ಪ್ರೇಕ್ಷಕರ ಮುಂದೆ ಕೊಂಡೊಯ್ದಿದ್ದಾರೆ ರಕ್ಷಿತ್ ಶೆಟ್ಟಿ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ಹೇಮಂತ್ ಬರವಣಿಗೆ ಹಾಗೂ ರಕ್ಷಿತ್- ರುಕ್ಮಿಣಿ ಕೆಮೆಸ್ಟ್ರಿ ವರ್ಕೌಟ್ ಆಗಿದೆ. 'ಸಪ್ತ ಸಾಗರಾಲು ದಾಟಿ' ಟೈಟಲ್ನಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

'777 ಚಾರ್ಲಿ' ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಆ ಚಿತ್ರಕ್ಕೆ ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ತೆಲುಗು ಸಂದರ್ಶನಗಳಲ್ಲಿ ರಕ್ಷಿತ್ ಮದುವೆ? ರಶ್ಮಿಕಾ ಜೊತೆಗಿನ ಬ್ರೇಕಪ್, ಈಗಿನ ಒಟನಾಟ ಎಲ್ಲದರ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿದೆ. ಎಲ್ಲದಕ್ಕೂ ಅಳೆದು ತೂಗಿ ಸಿಂಪಲ್ ಸ್ಟಾರ್ ಉತ್ತರ ಕೊಡುತ್ತಿದ್ದಾರೆ. ತೆಲುಗಿ ಹಿಟ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದು ಯಾಕೆ? ಎನ್ನುವ ಪ್ರಶ್ನೆ ಎದುರಾಗಿದೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಬಹಳ ಬೇಗ ಅದು ಎಂಗೇಜ್ಮೆಂಟ್ವರೆಗೂ ಹೋಗಿತ್ತು. 2017 ಜುಲೈ 3ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ರಕ್ಷಿತ್- ರಶ್ಮಿಕಾ ಎಂಗೇಜ್ಮೆಂಟ್ ನಡೆದಿತ್ತು. ಶೀಘ್ರದಲ್ಲೇ ಮದುವೆ ಆಗುವುದಾಗಿಯೂ ಜೋಡಿ ಹೇಳಿತ್ತು. ಆದರೆ ಮರು ವರ್ಷವೇ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು.
ಎಂಗೇಜ್ಮೆಂಟ್ ಮುರಿದು ಬಿದ್ದ ಬಗ್ಗೆ ಇಬ್ಬರೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಆ ಬಳಿಕ ರಶ್ಮಿಕಾ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಇತ್ತ ರಕ್ಷಿತ್ ಶೆಟ್ಟಿ ತಮ್ಮದೇ ಸಿನಿಮಾ ನಿರ್ಮಾಣ, ಬರವಣಿಗೆ, ನಟನೆಯಲ್ಲಿ ತೊಡಗಿಸಿಕೊಂಡರು. ಇದೇ ಮೊದಲ ಬಾರಿಗೆ ಎಂಗೇಜ್ಮೆಂಟ್ ಯಾಕೆ ಮುರಿದು ಬಿತ್ತು ಎನ್ನುವ ನೇರಾನೇರ ಪ್ರಶ್ನೆಗೆ ರಕ್ಷಿತ್ ಶೆಟ್ಟಿಗೆ ಎದುರಾಗಿತ್ತು.

ನೀವು ಹೇಳಿದ್ರೆ ಹೇಳಿ ಬಿಟ್ಟರೆ ಬಿಡಿ. ನಿಮ್ಮ- ರಶ್ಮಿಕಾ ಎಂಗೇಜ್ಮೆಂಟ್ ಯಾಕೆ ಕ್ಯಾನ್ಸಲ್ ಆಯ್ತು? ಎಂದು ನಿರೂಪಕ ಪ್ರಶ್ನೆ ಕೇಳುತ್ತಿದ್ದಂತೆ ರಕ್ಷಿತ್ ನಕ್ಕಿದ್ದಾರೆ. ಇನ್ನು ನೀವು, ರಶ್ಮಿಕಾ ಒಂದೇ ಇಂಡಸ್ಟ್ರಿಯಲ್ಲಿ ಇದ್ದೀರಾ, ಮತ್ತೆ ಎಂದಾದರೂ ಭೇಟಿ ಆಗುವ ಸಾಧ್ಯತೆ ಇದ್ಯಾ? ಎಂದು ಪ್ರಶ್ನೆ ಮುಂದುವರೆಸಿದ್ದಾರೆ.
ರಕ್ಷಿತ್ ಶೆಟ್ಟಿ ಮಾತನಾಡಿ "ಕಲಾವಿದನಾಗಿ ಯಾಕಾಗಬಾರದು? ಕಲಾವಿದರಿಗೆ ಯಾವುದೇ ಗಡಿ ಇಲ್ಲ ಅಲ್ವಾ? ಗಡಿ ಕೂಡ ಇರಬಾರದು. ಕೊನೆಯದಾಗಿ ನಾವೆಲ್ಲ ಮನುಷ್ಯರು. ಏನೇ ಆಗಿದ್ದರೂ ಅಷ್ಟೆ. ಇವತ್ತು ಜಗಳ ಮಾಡ್ತೀವಿ. ಮನುಷ್ಯರಾಗಿ ನಾವು ನಾಳೆ ಮತ್ತೆ ಮಾತನಾಡುತ್ತೇವೆ. ಅದೇ ರೀತಿ ನೋಡೋಣ ಮಾತಾಡೋಣ. ಕಲಾವಿದನಾಗಿ ಮಾತನಾಡಬಾರದು ಅಂತೇನು ಇಲ್ಲ" ಎಂದಿದ್ದಾರೆ.
ರಶ್ಮಿಕಾ ಬಾಲಿವುಡ್ನಲ್ಲಿ ಮಿಂಚುತ್ತಿರುವ ಬಗ್ಗೆ ಎದುರಾದ ಪ್ರಶ್ನೆಗೆ ರಕ್ಷಿತ್, "ನನಗೆ ಆ ಬಗ್ಗೆ ಬಹಳ ಖುಷಿಯಿದೆ. ಆಕೆಗೆ ಯಾವಾಗಲೂ ದೊಡ್ಡ ಕನಸಿತ್ತು. ಅದನ್ನು ನಾನು ನೋಡಿದ್ದೇನೆ. ಆ ಸಾಧನೆಗೆ ಆಕೆ ಅರ್ಹಳು" ಎಂದಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











