ಶ್ರೀದೇವಿ ಜೊತೆ ಇತ್ತು ಅಶೋಕ್ ಮೊದಲ ಸಿನಿಮಾದ ಮೊದಲ ಸೀನ್; ಆ ದೃಶ್ಯ-ಆ ಸಿನಿಮಾ ಯಾವುದು?
ಕನ್ನಡ ಚಿತ್ರರಂಗ ಅದೆಷ್ಟೋ ಸೂಪರ್ ಸ್ಟಾರ್ಗಳನ್ನು ಕಂಡಿದೆ. ಅದೆಷ್ಟೋ ಸ್ಟಾರ್ ನಟರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ಇನ್ನು ಎಷ್ಟೋ ಮಂದಿ ಕನ್ನಡ ಸಿನಿಮಾಗಳಲ್ಲಿ ನಟಿಸಿ ಬೇರೆ ಭಾಷೆಯ ಸಿನಿಮಾಗಳಿಗೆ ಕಾಲಿಟ್ಟ ಬಳಿಕ ಸೂಪರ್ಸ್ಟಾರ್ ಪಟ್ಟಕ್ಕೆ ಏರಿದ್ದೂ ಇದೆ. ಆ ಎಲ್ಲಾ ಕಲಾವಿದರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದೇ ಒಂದೊಂದು ಇಂಟ್ರೆಸ್ಟಿಂಗ್ ಕಥೆ.
70ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟರಲ್ಲಿ ಅಶೋಕ್ ಕೂಡ ನಿಲ್ಲುತ್ತಾರೆ. ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಮಟ್ಟಕ್ಕೆ ಏರಬಹುದಾಗಿದ್ದ ಎಲ್ಲಾ ಅರ್ಹತೆಗಳೂ ಇವರಲ್ಲಿ ಇತ್ತು. ಆದರೆ, ಅದೆಲ್ಲಿ ಮಿಸ್ ಆಯ್ತು? ಈ ನಟ ಎಡವಿಬಿಟ್ರಾ? ಅನ್ನೋ ಪ್ರಶ್ನೆ ಅನೇಕರನ್ನು ಕಾಡಿದ್ದು ಇದೆ. ಇಂದಿಗೂ ಕನ್ನಡ ಸಿನಿಮಾಗಳಲ್ಲಿ ಈ ಹಿರಿಯ ನಟ ಅಶೋಕ್ ಸಕ್ರಿಯರಾಗಿದ್ದಾರೆ.

ಆಶೋಕ್ ತಮ್ಮ ವೃತ್ತಿ ಬದುಕಿನಲ್ಲಿ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ, ಖಳನಾಯಕನಾಗಿ ಪೋಷಕ ನಟನಾಗಿ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸುವಲ್ಲಿ ಗೆದ್ದಿದ್ದಾರೆ. 'ರಂಗನಾಯಕಿ', 'ಸನಾದಿ ಅಪ್ಪಣ್ಣ', 'ಬಯಲು ದಾರಿ','ತಾಯಿಯ ಮಡಿಲು','ಕ್ರಾಂತಿಯೋಗಿ ಬಸವಣ್ಣ' ಅಂತ ಸಿನಿಮಾಗಳೇ ಇವರ ಕಲಾಸೇವೆಗೆ ಸಾಕ್ಷಿ.
ಕನ್ನಡದ ಹಿರಿಯ ನಟ ಅಶೋಕ್ ನಟಿಸಿದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಒಂದು ಇಂಟ್ರೆಸ್ಟಿಂಗ್ ಸಂಗತಿ. ತಮ್ಮ ಸಿನಿಮಾ ಜರ್ನಿಯನ್ನು ಖುದ್ದಾಗಿ ಅಶೋಕ್ ಅವರೇ ರಾಘುರಾಮ್ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದರಲ್ಲೂ ತಮ್ಮ ವೃತ್ತಿ ಬದುಕಿನ ಮೊದಲ ದೃಶ್ಯವನ್ನೇ ಶ್ರೀದೇವಿ ಜೊತೆ ನಟಿಸಿದ್ದರ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಶನದ ಒಂದು ಝಲಕ್ ಇಲ್ಲಿದೆ.
ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಕೋರ್ಸ್ ಮುಗಿಸಿ ಹೊರಬರುತ್ತಿದ್ದಂತೆ ಅಶೋಕ್ ಅವರಿಗೆ ಸಿನಿಮಾದಲ್ಲಿ ಕೆಲಸ ಸಿಕ್ಕಿತ್ತು. ಎ. ವಿ. ಶೇಷಗಿರಿರಾವ್ ನಿರ್ದೇಶಿಸುತ್ತಿದ್ದ 'ಹೆಣ್ಣು ಸಂಸಾರದ ಕಣ್ಣು' ಸಿನಿಮಾಗೆ ಆಯ್ಕೆ ಆಗಿದ್ದರು. ಈ ಸಿನಿಮಾದಲ್ಲಿ ಪ್ರಣಯರಾಜ ಶ್ರೀನಾಥ್, ಬಾಲಣ್ಣ ನಟಿಸುತ್ತಿದ್ದರು. ಬಾಲಣ್ಣನ ಮಗನಾಗಿ ಅಶೋಕ್ ನಟಿಸಿದ್ದರು. ಶ್ರೀನಾಥ್ ತಂಗಿಯಾಗಿ ಶ್ರೀದೇವಿ ಕಾಣಿಸಿಕೊಂಡಿದ್ದರು. ಶ್ರೀದೇವಿಯೊಂದಿಗೆ ಇವರ ಮೊದಲ ದೃಶ್ಯವಿತ್ತು.

"ನಾನು, ಮನೆ ಓನರ್ ನಮ್ಮ ಅಪ್ಪ ಬಾಲಣ್ಣ. ನಮ್ಮ ಮನೆಯಲ್ಲಿ ಶ್ರೀನಾಥ್ ಹಾಗೂ ಅವರ ತಂಗಿ ಶ್ರೀದೇವಿ ಇರುತ್ತಾರೆ. ನಾನು ಬಾಡಿಗೆ ವಸೂಲು ಮಾಡುವುದಕ್ಕೆ ಬರುತ್ತೇನೆ. ಅದು ಸೀನ್. ನನ್ನದು ಹಾಗೂ ಶ್ರೀದೇವಿಯದ್ದು ಫಸ್ಟ್ ಡೇ ಫಸ್ಟ್ ಸೀನ್. ಆಗ ಅವರು ಶ್ರೀದೇವಿ ಆಗುತ್ತಾರೆ ಅಂತ ಅವರಿಗೇನು ಗೊತ್ತಿತ್ತು? ಅಶೋಕ್ ಆಗುತ್ತೇನೆ ಅಂತ ನನಗೇನು ಗೊತ್ತಿತ್ತು?" ಎಂದು ರಘುರಾಮ್ ಅವರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಾಗೇ ವೇಣುಗೋಪಾಲ್ ಅಂತಿದ್ದ ತಮ್ಮ ಹೆಸರನ್ನು ಅಶೋಕ್ ಅಂತ ಬದಲಾಯಿಸಿಕೊಂಡಿದ್ದೇಕೆ? ಅನ್ನೋದನ್ನು ಹೇಳಿಕೊಂಡಿದ್ದಾರೆ. "ಇಂಡಸ್ಟ್ರಿಗೆ ಬರುವಾಗ ವೇಣುಗೋಪಾಲ್ ಅಂತ ಪ್ರಡ್ಯೂಸರ್ ಇದ್ದರು. ರಾಮ್ ಗೋಪಾಲ್ ಆರ್ಟಿಸ್ಟ್ ಇದ್ದರು. ಧೀರೇಂದ್ರ ಗೋಪಾಲ್ ಇದ್ದರು. ರಾಜ್ ಗೋಪಾಲ್ ಅಂತ ಪ್ರಡ್ಯೂಸ್ ಇದ್ದರು. ತುಂಬಾ ಗೋಪಾಲ್ಗಳು ಇದ್ದರಲ್ಲ. ಇವರ ಮಧ್ಯೆ ಕಳೆದು ಹೋಗಬಾರದು ಅಂತ ಅಶೋಕ್ ಅಂತ ನಾನೇ ಇಟ್ಟುಕೊಂಡೆ. ಶೋಕ ಇರಬಾರದು. ಜೀವನದಲ್ಲಿ ಸುಖ ಇರಬೇಕು ಅಂತ ಇಟ್ಟುಕೊಂಡೆ." ಎಂದು ತಮ್ಮ ಹೆಸರಿನ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











