"ಮಹಾನಟಿ ಸಾವಿತ್ರಿ ಕೋಮದಲ್ಲಿದ್ದಾಗ ಕೈ ಬಿಟ್ಟಿರಲಿಲ್ಲ ಜೆಮಿನಿ ಗಣೇಶನ್"- ಹಿರಿಯ ನಟಿ ರೂಪಾ ದೇವಿ
ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ಮಹಾನಟಿ' ಎಂದೇ ಜನಪ್ರಿಯವಾಗಿದ್ದವರು ಸಾವಿತ್ರಿ. ಈ ಮೇರು ನಟಿಯ ಅಭಿನಯ, ಯಶಸ್ಸು, ಭಗ್ನ ಪ್ರೇಮ, ದುರಂತ ಅಂತ್ಯದ ಬಗ್ಗೆ ಇಂದಿಗೂ ಚರ್ಚೆಯಾಗುತ್ತೆ. ಅದರಲ್ಲೂ 'ಮಹಾನಟಿ' ಸಾವಿತ್ರಿ ಮತ್ತು 'ಕಾದಲ್ ಮನ್ನನ್'ಜೆಮಿನಿ ಗಣೇಶನ್ ಅವರ ಪ್ರೇಮ ಪ್ರಕರಣ ಕೂಡ ಅಷ್ಟೇ ಭಾವುಕ ಮತ್ತು ದುರಂತ.
'ಮಹಾನಟಿ' ಸಾವಿತ್ರಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಆರಂಭದ ದಿನಗಳಲ್ಲಿ ಜೆಮಿನಿ ಗಣೇಶನ್ ಅವರ ಪರಿಚಯವಾಯಿತು. ಜೆಮಿನಿ ಗಣೇಶನ್ ಅದಾಗಲೇ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಅಲ್ಲದೆ ಮೊದಲೇ ಮದುವೆ ಕೂಡ ಆಗಿದ್ದರು. ಹೀಗಿದ್ದರೂ ಸಾವಿತ್ರಿ ಹಾಗೂ ಜೆಮಿನಿ ಗಣೇಶನ್ ಮಧ್ಯೆ ಗಾಢವಾದ ಪ್ರೀತಿ ಮೂಡಿತು. ಜೆಮಿನಿ ಗಣೇಶನ್ ಅವರ ಮೃದು ವ್ಯಕ್ತಿತ್ವ ಹಾಗೂ ಪ್ರೀತಿಗೆ ಮಾರುಹೋಗಿದ್ದರು. 1952ರಲ್ಲಿ ಇವರಿಬ್ಬರೂ ಗುಟ್ಟಾಗಿ ವಿವಾಹವಾದರು.

ರಹಸ್ಯ ಮದುವೆ ಬಳಿಕ ಯಶಸ್ಸು
ಸಾವಿತ್ರಿ ಹಾಗೂ ಜೆಮಿನಿ ಗಣೇಶನ್ ಗುಟ್ಟಾಗಿ ಮದುವೆ ಆದ ಬಳಿಕ ಇವರ ವೃತ್ತಿ ಬದುಕು ಕೂಡ ಯಶಸ್ಸಿನ ಹಾದಿ ಹಿಡಿದಿತ್ತು. ತೆರೆಮೇಲೆ ಇವರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬರುತ್ತಿತ್ತು. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಇವರಿಬ್ಬರೂ ನಟಿಸಿದ ಸಾಲು ಸಾಲು ಸಿನಿಮಾಗಳು ಗೆದ್ದಿದ್ದವು. ಒಂದು ಕಾಲದಲ್ಲಿ ಜೆಮಿನಿ ಗಣೇಶನ್ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು.
ನಾನೊಂದು ತೀರ.. ನೀನೊಂದು ತೀರ..
ಇಬ್ಬರು ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಸಾವಿತ್ರಿ ಹಾಗೂ ಜೆಮಿನಿ ಗಣೇಶನ್ ಸಂಬಂಧದಲ್ಲಿ ಬಿರುಕು ಮೂಡಿತ್ತು. ಜೆಮಿನಿ ಗಣೇಶನ್ 'ಪ್ಲೇಬಾಯ್' ಇಮೇಜ್, ಇತರ ಮಹಿಳೆಯರೊಂದಿಗಿನ ಸಂಬಂಧಗಳು ಸಾವಿತ್ರಿ ಅವರನ್ನು ಹತಾಷೆಗೆ ತಳ್ಳಿತ್ತು. ಈ ಸಮಯದಲ್ಲಿ ಸಾವಿತ್ರಿ ನಿರ್ಮಾಣಕ್ಕೆ ಕೈ ಹಾಕಿ ಭಾರೀ ನಷ್ಟ ಅನುಭವಿಸಿದರು. ಒಂದ್ಕಡೆ ಹಣ ಕಳೆದುಕೊಂಡರು. ಇನ್ನೊಂದು ಕಡೆ ಜೆಮಿನಿ ಗಣೇಶನ್ ದೂರವಾಗಿದ್ದರು. ಹೀಗಾಗಿ ಮನನೊಂದು ಸಾವಿತ್ರಿ ಮದ್ಯಪಾನಕ್ಕೆ ದಾಸರಾದರು. ಸಾವಿತ್ರಿ ಅವರ ಕೊನೆಯ ದಿನಗಳಲ್ಲಿ ಕಡು ಬಡತನ, ಒಂಟಿತನ ಹಾಗೂ ಆರೋಗ್ಯ ಸಮಸ್ಯೆ ಎದುರಿಸಬೇಕಾಯ್ತು. ಜೆಮಿನಿ ಗಣೇಶನ್ ಅವರು ಸಾವಿತ್ರಿಯನ್ನು ಸಂಪೂರ್ಣವಾಗಿ ಕೈಬಿಟ್ಟರು. ಸಾವಿತ್ರಿ ಸಾವಿಗೆ ಜೆಮಿನಿ ಗಣೇಶನ್ ಕಾರಣ ಅನ್ನೋ ಆರೋಪ ಕೇಳಿ ಬಂದವು. ಆದರೆ, ಆರೋಪವನ್ನು ತಳ್ಳಿ ಹಾಕಿದ್ದು ಹಿರಿಯ ನಟಿ ರೂಪಾ ದೇವಿ.

ಸಾವಿತ್ರಿ ಕೈಬಿಡಲಿಲ್ಲ ಜೆಮಿನಿ ಗಣೇಶನ್
ಕೆಲವು ತಿಂಗಳ ಹಿಂದೆ ಹಿರಿಯ ನಟಿ ರೂಪಾ ದೇವಿ ಸಂದರ್ಶನವೊಂದನ್ನು ನೀಡಿದ್ದರು. ಇದರಲ್ಲಿ ಸಾವಿತ್ರಿ ಹಾಗೂ ಜೆಮಿನಿ ಗಣೇಶನ್ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಸಾವಿತ್ರಿ ಕೊನೆಯ ದಿನಗಳಲ್ಲಿ ಜೆಮಿನಿ ಗಣೇಶ್ ನೀಡಿದ ನೆರವಿನ ಬಗ್ಗೆ ಮಾತಾಡಿದ್ದಾರೆ. ಇದು ಅಲ್ಲಿಗೂ ಇದ್ದ ಆರೋಪಗಳಿಗೆ ತದ್ವಿರುದ್ಧವಾದ ಹೇಳಿಕೆಯಾಗಿತ್ತು. ಸಾವಿತ್ರಿ ಅವರ ಕೊನೆಯ ದಿನಗಳು ಹೇಗಿತ್ತು? ಜೆಮಿನಿ ಗಣೇಶನ್ ಅವರೊಂದಿಗಿನ ಬಾಂಧವ್ಯ ಹೇಗಿತ್ತು ಅನ್ನೋ ಆಘಾತಕಾರಿ ಮತ್ತು ಭಾವುಕ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಇದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು.
ಲೋಕಕ್ಕೆ ತಿಳಿಯದ ಜೆಮಿನಿ ಗಣೇಶನ್ ಪ್ರೀತಿ?
ಸಾಮಾನ್ಯವಾಗಿ ಸಾವಿತ್ರಿ ಅವರ ದುರಂತ ಅಂತ್ಯಕ್ಕೆ ಜೆಮಿನಿ ಗಣೇಶನ್ ಅವರೇ ಕಾರಣ ಅನ್ನೋ ರೀತಿ ಬಿಂಬಿತವಾಗಿದೆ. ಆದರೆ, ರೂಪಾ ದೇವಿ ವಾದವೇ ಬೇರೆಯಾಗಿತ್ತು. ಸಾವಿತ್ರಿ ಅನಾರೋಗ್ಯಕ್ಕೆ ಒಳಗಾಗಿ ಕೋಮಾ ಸ್ಥಿತಿಗೆ ತಲುಪಿದಾಗ ಜೆಮಿನಿ ಗಣೇಶನ್ ಸಂಪೂರ್ಣವಾಗಿ ಕೈಬಿಡಲಿಲ್ಲ. ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಸಾವಿತ್ರಿ ಅವರ ಚಿಕಿತ್ಸೆಗೆ ನೆರವಾಗಿದ್ದರು. ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಸಾವಿತ್ರಿ ಅವರ ಕೊನೆಯ ಕ್ಷಣಗಳಲ್ಲಿ ತೆರೆಮರೆಯಲ್ಲಿ ವೈದ್ಯಕೀಯ ನೆರವು ನೀಡಿದ್ದರು ಎಂದು ರೂಪಾ ದೇವಿ ಹೇಳಿದ್ದಾರೆ. 'ಮಹಾನಟಿ' ಬಯೋಪಿಕ್ ಬಳಿಕ ಜೆಮಿನಿ ಗಣೇಶನ್ ಅವರ ಮೇಲಿದ್ದ ನೆಗೆಟಿವ್ ಇಮೇಜ್ ಇನ್ನು ದುಪ್ಪಟ್ಟಾಗಿತ್ತು. ಆದರೆ, ರೂಪಾ ದೇವಿ ಕೊಟ್ಟ ಹೇಳಿಕೆ ತದ್ವಿರುದ್ಧವಾಗಿದ್ದರಿಂದ ಸಾಕಷ್ಟು ಚರ್ಚೆಯಾಗಿತ್ತು.


Click it and Unblock the Notifications