'ಓಂ', 'ಜೋಗಿ', 'ಮಫ್ತಿ' ಸಾಲಿಗೆ ಸೇರಬಹುದೇ 'ಮಾಲೀಕ'; ಡಾ ಡಾ ಡಾ ಶಿವಣ್ಣನ 'ಉತ್ತರಕಾಂಡ'
ಅಭಿಮಾನಿಗಳ ಪಾಲಿಗೆ ಶಿವರಾಜ್ಕುಮಾರ್ ಕರುನಾಡ ಚಕ್ರವರ್ತಿ. ವಿಭಿನ್ನ ಪಾತ್ರಗಳನ್ನು ಮಾಡುತ್ತಲೇ ಸೆಂಚುರಿ ಸ್ಟಾರ್ ಅನ್ನೋ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಸುಮಾರು 150 ಸಿನಿಮಾಗಳ ಆಸು ಪಾಸಿನಲ್ಲಿರುವ ಶಿವಣ್ಣನ ಅದ್ಭುತ ಸಿನಿಮಾಗಳನ್ನು ಪಟ್ಟಿ ಮಾಡುವುದು ಕಷ್ಟ. ಅವರ ವಿಭಿನ್ನ ಪಾತ್ರಗಳನ್ನು ಹೆಸರಿಸುವುದೂ ಅಷ್ಟೇ ಕಷ್ಟ.
ಅದರೂ, ಅಭಿಮಾನಿಗಳ ಮಾನಸದಲ್ಲಿ ಶಿವಣ್ಣ ನಟಿಸಿದ ಕೆಲವು ಸಿನಿಮಾಗಳ ಪಾತ್ರ ಅಚ್ಚಳಿಯದೇ ಉಳಿದು ಬಿಟ್ಟಿವೆ. ಅವುಗಳಲ್ಲಿ 'ಓಂ' ಸಿನಿಮಾ ಸತ್ಯ, 'ಜೋಗಿ' ಸಿನಿಮಾದಲ್ಲಿ ಮಾದೇಶ ಹಾಗೂ 'ಮಫ್ತಿ'ಯ ಭೈರತಿ ರಣಗಲ್ ಪಾತ್ರಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಪಾತ್ರಗಳಲ್ಲಿ ಶಿವಣ್ಣ ಖದರ್, ಲುಕ್ ಸಿನಿಪ್ರಿಯರ ಹೃದಯದಲ್ಲಿ ಅಚ್ಚು ಒತ್ತಿತ್ತು.

ಈಗ ಮತ್ತೊಂದು ಕ್ಯಾರೆಕ್ಟರ್ ಇಂತಹ ಶಿವಣ್ಣ ಎವರ್ಗ್ರೀನ್ ಪಾತ್ರಗಳ ಸಾಲಿಗೆ ಸೇರಬಹುದಾ? ಅಂತ ಸೆಂಚುರಿ ಸ್ಟಾರ್ ಫ್ಯಾನ್ಸ್ ಕಾತುರದಿಂದ ನೋಡುತ್ತಿದ್ದಾರೆ. ಅಂದ್ಹಾಗೆ ಆ ಸಿನಿಮಾ ಮತ್ಯಾವುದೂ ಅಲ್ಲ 'ಉತ್ತರಕಾಂಡ'. ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿನ ಶಿವಣ್ಣ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ 'ಉತ್ತರಕಾಂಡ'. ಶಿವಣ್ಣನ 62ನೇ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡದ ಬಹುಬೇಡಿಕೆಯ ಮೇರೆಗೆ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈ ಸಿನಿಮಾದಲ್ಲಿ ಶಿವಣ್ಣ 'ಮಾಲೀಕ'ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಈ ಲುಕ್ ಎಲ್ಲೆಡೆ ಸದ್ದು ಮಾಡಿದೆ.

ಶಿವಣ್ಣ ವೃತ್ತಿ ಬದುಕಿನಲ್ಲಿ 'ಮಾಲೀಕ'ನ ಲುಕ್ ಅಷ್ಟೇ ಗಮನ ಸೆಳೆಯುತ್ತಿದೆ. ರಗಡ್ ಲುಕ್ನಲ್ಲಿ ರಕ್ತಸಿಕ್ತ ಅವತಾರ ಎತ್ತಿರೋ ಶಿವರಾಜ್ಕುಮಾರ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೇಳುವುದಕ್ಕೆ ಹೊರಟಿರುವ ನಿರ್ದೇಶಕ ರೋಹಿತ್ ಪದಕಿ, ಶಿವಣ್ಣನನ್ನು ವಿಭಿನ್ನವಾಗಿ ತೋರಿಸುವುದಕ್ಕೆ ಮುಂದಾಗಿದ್ದಾರೆ.
'ಮಾಲೀಕ' ಅನ್ನುವ ಈ ಪಾತ್ರ ಕೂಡ ಈಗಾಗಲೇ ಶಿವಣ್ಣ ನಟಿಸಿರುವ 'ಓಂ','ಜೋಗಿ', 'ಮಫ್ತಿ'ಯಂತಹ ಎವರ್ಗ್ರೀನ್ ಸಿನಿಮಾಗಳ ಪಾತ್ರಗಳ ಸಾಲಿಗೆ ಸೇರಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. ಯಾಕಂದ್ರೆ, ಶಿವಣ್ಣನ ಮಾಸ್ ಲುಕ್ ಹಾಗಿದೆ. ಈ ಸಿನಿಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳುತ್ತಿದ್ದರೆ, ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಟ್ಯೂನ್ ಹಾಕುತ್ತಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಕೆಆರ್ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಶಿವಣ್ಣನ ಜೊತೆ ನಟರಾಕ್ಷಸ ಡಾಲಿ ಧನಂಜಯ್, ಭಾವನಾ ಮೆನನ್, ಐಶ್ವರ್ಯ ರಾಜೇಶ್, ದಿಗಂತ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಜೊತೆಗೆ ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಸಿನಿಮಾಗೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ.


Click it and Unblock the Notifications











