90ರ ದಶಕದಲ್ಲಿ ಕರ್ನಾಟಕದ ಗಂಡಸರನ್ನೇ ನಡುಗಿಸಿದ 'ನಾಳೆ ಬಾ' ಕಥೆ ನೆನಪಿದೆಯೇ? ಏನಿದು ಘಟನೆ?
ಇತ್ತೀಚೆಗೆ ಬಾಲಿವುಡ್ ಬಾಲಿವುಡ್ನಲ್ಲಿ ಒಂದು ಹಾರರ್ ಸಿನಿಮಾ ಧೂಳೆಬ್ಬಿಸಿತ್ತು. ಸೂಪರ್ಸ್ಟಾರ್ಗಳೇ ಇಲ್ಲದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ಸ್ಟಾರ್ ಸಿನಿಮಾಗಳನ್ನೇ ಹಿಂದಿಕ್ಕಿತ್ತು. ಅದುವೇ ಶ್ರದ್ಧಾ ಕಪೂರ್ ಹಾಗೂ ರಾಜ್ಕುಮಾರ್ ರಾವ್ ನಟಿಸಿದ 'ಸ್ತ್ರೀ 2'. 2018ರಲ್ಲಿ 'ಸ್ತ್ರೀ' ಮೊದಲ ಅವತರಣೆ ರಿಲೀಸ್ ಆದಾಗ ಈ ಸಿನಿಮಾ ಕರ್ನಾಟಕದ ಘಟನೆಗಳಿಂದ ಪ್ರೇರಣೆ ಹೊಂದಿದ ಕಥೆ ಅಂತ ಸುದ್ದಿ ಹಬ್ಬಿತ್ತು.
ಈಗ 'ಸ್ತ್ರೀ 2' ರಿಲೀಸ್ ಆಗಿ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಮತ್ತೆ ಅದೇ ಮಾತು ಹರಿದಾಡುತ್ತಿದೆ. 1990ರಲ್ಲಿ 'ನಾಳೆ ಬಾ' ಅನ್ನುವ ಪದ ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು. ಕರ್ನಾಟಕದಾದ್ಯಂತ ಹಲವರ ಮನೆಗಳ ಬಾಗಿಲ ಮೇಲೆ 'ನಾಳೆ ಬಾ' ಅನ್ನೋ ಪದ ಕಾಣಿಸುತ್ತಿತ್ತು. ಬೆಂಗಳೂರಿನಿಂದ ಶುರುವಾಗಿದ್ದ ಈ ಘಟನೆ ಕರ್ನಾಟಕದಾದ್ಯಂತ ಹಬ್ಬುವುದಕ್ಕೆ ಹೆಚ್ಚು ಸಮಯವೇನು ಹಿಡಿಯಲಿಲ್ಲ.

ಈಗಿನ ಜನರೇಷನ್ಗೆ 'ನಾಳೆ ಬಾ' ಅನ್ನೋ ಪದ 90ರ ದಶಕದಲ್ಲಿ ಅದ್ಯಾವ ಮಟ್ಟಕ್ಕೆ ಸಂಚಲನ ಸೃಷ್ಟಿಸಿತ್ತು ಅನ್ನೋದು ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಸುಮಾರು 34 ವರ್ಷಗಳ ಹಿಂದೆ ಕರ್ನಾಟಕದ ಗಂಡಸರನ್ನು ನಡುಗಿಸಿದ ಘಟನೆಯಿದು. ಅದೇ ಘಟನೆಯಿಂದ ಸ್ಪೂರ್ತಿಗೊಂಡ ಸಿನಿಮಾವೇ 'ಸ್ತ್ರೀ' ಹಾಗೂ 'ಸ್ತ್ರೀ 2'. ವಿಚಿತ್ರ ಅಂದರೆ, ನಮ್ಮದೇ ನಾಡಿನ ಈ ಕಥೆ ಕನ್ನಡದ ಸಿನಿಮಾ ಮಂದಿಗೆ ವಿಶೇಷ ಎನಿಸಲಿಲ್ಲ. ಅಷ್ಟಕ್ಕೂ 'ನಾಳೆ ಬಾ' ಏನಿದು ಘಟನೆ? ಕರ್ನಾಟಕದ ಗಂಡಸರನ್ನು ಭಯ ಬೀಳಿಸಿದ್ದು ಯಾರು? ಇವೆಲ್ಲವನ್ನು ತಿಳಿಯಲು ಮುಂದೆ ಓದಿ.
ನಿಮಗೆ ಈ ಘಟನೆ ಆಶ್ಚರ್ಯ ಎನಿಸಬಹುದು. ಇಂದಿನ ಜನರೇಷನ್ಗೆ ಈ ಘಟನೆಗಳು ನಗು ತರಿಸಬಹುದು. ಆದರೆ, 90ರ ದಶಕದಲ್ಲಿ ನಿಜಕ್ಕೂ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಮನೆಯ ಬಾಗಿಲ ಮೇಲೆ 'ನಾಳೆ ಬಾ' ಅನ್ನೋ ಪದ ಬರೆಯಲಾಗಿತ್ತು. ಅಷ್ಟಕ್ಕೂ ಯಾಕೆ ಹೀಗೆ ಬರೆಯುತ್ತಿದ್ದರು? ಅನ್ನೋದಕ್ಕೆ ಒಂದಿಷ್ಟು ಕಥೆಗಳು ಇವೆ. ಇದು ಮೊದಲ ಆರಂಭ ಆಗಿದ್ದು ಬೆಂಗಳೂರಿನಿಂದ.
ರಾತ್ರಿ ಹೊತ್ತು ಮನೆಯ ಮುಂದೆ ಬಂದು ಬಾಗಿಲು ಬಡಿಯುವ ಶಬ್ಧ ಆಗುತ್ತಿತ್ತು. ಬಳಿಕ ಆ ಮನೆಯಲ್ಲಿರುವ ಗಂಡಸನ್ನು ಆತನಿಗೆ ಚಿರಪರಿಚಿತರಿರುವ ಧ್ವನಿಯಲ್ಲಿ ಮಹಿಳೆಯ ಧ್ವನಿಯೊಂದು ಕರೆಯುತ್ತಿತ್ತು. ಈ ಧ್ವನಿಗೆ ಮೋಸ ಹೋಗಿ ಬಾಗಿಲು ತೆಗೆದ ಗಂಡಸರು ಅದೇ ಹೊಸ್ತಿಲಲ್ಲಿ 24 ಗಂಟೆಗಳ ಒಳಗೆ ಸಾವನ್ನಪ್ಪುತ್ತಾರೆ ಅನ್ನೋ ಭಯ ಆವರಿಸಿತ್ತು. ಇದು ಯಾವುದೋ ಅತೃಪ್ತ ಸ್ತ್ರೀ ದೆವ್ವ ರಾತ್ರಿಯಿಡಿ ಓಡಾಡುತ್ತಾ, ತನ್ನ ಕಣ್ಣಿಗೆ ಕಾಣಿಸಿದ ಮನೆಗೆ ಬಂದು ಹಾವಳಿ ಇಡುತ್ತೆ ಅನ್ನೋ ಭಯ ಜನರಲ್ಲಿತ್ತು. ಈ ವದಂತಿ ಇಂದಿನ ಸೋಶಿಯಲ್ ಮೀಡಿಯಾ ಜಮಾನಕ್ಕಿಂತಲೂ ಜೋರಾಗಿ ಹಬ್ಬಿಬಿಟ್ಟಿತ್ತು. ಅದರ ಪರಿಣಾಮವೇ ಎಲ್ಲರ ಮನೆಗೆ ಬಾಗಿಲ ಮೇಲೆ 'ನಾಳೆ ಬಾ' ಅಂತ ಬರೆಯಲಾಗಿತ್ತು.

ಕ್ರಮೇಣ ಈ 'ನಾಳೆ ಬಾ' ಅನ್ನೋದು ಬೇರೆ ಬೇರೆ ವರ್ಷನ್ ಅನ್ನು ಪಡೆದುಕೊಂಡಿತ್ತು. ಕೆಲವರು ಈ 'ನಾಳೆ ಬಾ' ಅನ್ನೋದನ್ನು ಪುರಾಣಕ್ಕೂ ಎಳೆದು ತರಲಾಗಿತ್ತು. ಶನೇಶ್ವರ ಹಾಗೂ ಗಣೇಶನನ್ನು ಸೇರಿ ಕಥೆ ಕಟ್ಟಲಾಯಿತು. ಒಮ್ಮೆ ಗಣೇಶನನ್ನು ಕಾಡುವುದಕ್ಕೆ ಶನಿ ಮುಂದಾಗಿದ್ದ. ಆದರೆ, ಗಣೇಶ್ ಬುದ್ದಿವಂತ. ಶನಿಯನ್ನು ಭೇಟಿ ಮಾಡಿ ಸಂಕಷ್ಟಕ್ಕೆ ಸಿಲುಕುವುದಕ್ಕೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ತನ್ನ ಬಾಗಿಲ ಮೇಲೆ 'ನಾಳೆ ಬಾ' ಎಂದು ಬರೆದಿದ್ದ ಎಂದು ಮಕ್ಕಳಿಗೆ ಕಥೆ ಹೇಳುವುದಕ್ಕೆ ಶುರು ಮಾಡಿದ್ದರು.
ಮೊಮ್ಮಕ್ಕಳಿಗೆ ಅಜ್ಜಿಯಂದಿರು ಹೇಳುವ ಫೇವರಿಟ್ ಕಥೆ ಆಯ್ತು. ಅದೇನಂದರೆ, ಇಬ್ಬರು ಸ್ನೇಹಿತರು ಕಾಡಿನೊಳಗೆ ನಡೆದುಕೊಂಡು ಹೋಗುವಾಗ ದೆವ್ವ ಅವರ ಮೇಲೆ ಅಟ್ಯಾಕ್ ಮಾಡಿತ್ತು. ಈ ವೇಳೆ ಇಬ್ಬರು ಸ್ನೇಹಿತರು ದೆವ್ವದ ಮುಂದೆ ಪ್ರಾಣ ಭಿಕ್ಷೆಯನ್ನು ಬೇಡುತ್ತಾರೆ. ಆಗ ಆ ದೆವ್ವ ಒಂದು ಷರತ್ತನ್ನು ಹಾಕುತ್ತೆ. ತಾನು ಕೇಳುವ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಇಲ್ಲವಾದಲ್ಲಿ, ಅವರನ್ನು ತಿಂದು ಹಾಕುವುದಾಗಿ ಹೇಳುತ್ತೆ. ಆಗ ಆ ಇಬ್ಬರು ಸ್ನೇಹಿತರು ಸಮಯ ಕೇಳಿ ನಾಳೆ ಅವರ ಮನೆಯ ಬಳಿ ಬಂದರೆ ಉತ್ತರ ಕೊಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಮನೆಗೆ ಬಂದು 'ನಾಳೆ ಬಾ' ಎಂದು ಬರೆಯುತ್ತಾರೆ. ಆ ದ್ವೆವ ಮನೆ ಮುಂದೆ ಬಂದು 'ನಾಳೆ ಬಾ' ಅನ್ನೋದನ್ನು ನೋಡಿ ಹಿಂತಿರುತ್ತೆ.
ಇಂತಹ ಹಲವು ಕಥೆಗಳು 'ನಾಳೆ ಬಾ' ಸುತ್ತಮುತ್ತ 90ರ ದಶಕದಿಂದ ಕೇಳಿ ಬರುತ್ತಲೇ ಇವೆ. ಇಂತಹ ಕಥೆಗಳನ್ನು ಸ್ಪೂರ್ತಿಯಾಗಿ ಪಡೆದು ಕನ್ನಡದಲ್ಲೂ ಹಾರರ್ ಸಿನಿಮಾಗಳನ್ನು ಮಾಡಬಹುದಿತ್ತು. 2015ರಲ್ಲಿ 'ನಾಳೆ ಬಾ' ಅನ್ನುವ ಟೈಟಲ್ನಲ್ಲೇ ಸಿನಿಮಾ ಬಂದಿತ್ತು. ಆದರೆ, ಅದು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಉಪೇಂದ್ರ ನಿರ್ದೇಶಿಸಿದ 'ಶ್' ಅಂತಹ ಹಾರರ್ ಸಿನಿಮಾವನ್ನು ಇಂದಿಗೂ ಸಿನಿಪ್ರಿಯರು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಇಂತಹದ್ದೇ ಸಿನಿಮಾ ಬಂದರೆ ಕನ್ನಡಿಗರು ನಿಜಕ್ಕೂ ಇಷ್ಟ ಪಡುತ್ತಾರೆ.


Click it and Unblock the Notifications











