ಸಿನಿಮಾನೂ ಇಲ್ಲ.. ಇನ್ಸ್ಟಾಗ್ರಾಂನಲ್ಲೂ ಇಲ್ಲ.. ಆರ್ಯ, ಅಜಯ್ ಸಿನಿಮಾದ ನಟಿ ಕಣ್ಮರೆ ಹಿಂದಿನ ಸತ್ಯವೇನು?
ಈಕೆ ಒಂದು ಕಾಲದ ಫೇವರಿಟ್ ನಟಿ. ಮಾಡಿದ್ದು ಕೆಲವೇ ಸಿನಿಮಾಗಳಾಗಿದ್ದರೂ ಅಭಿಮಾನಿಗಳೇನು ಕಮ್ಮಿಯಿರಲಿಲ್ಲ. 2004ರಲ್ಲಿ ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದ್ದ ಅಲ್ಲು ಅರ್ಜುನ್ ಸಿನಿಮಾ 'ಆರ್ಯ' ಸಿನಿಮಾದ ನಾಯಕಿಯೀಕೆ. ಆ ನಟಿಯೇ ಅನುರಾಧ ಮೆಹ್ತಾ. 'ಆರ್ಯ' ಈ ನಟಿಯ ಚೊಚ್ಚಲ ಸಿನಿಮಾ ಆಗಿತ್ತು.
'ಆರ್ಯ' ರಿಲೀಸ್ ಆಗಿದ್ದೇ ಆಗಿದ್ದು, ಅನುರಾಧಾ ಮೆಹ್ತಾ ಕೇವಲ ತೆಲುಗು ಮಂದಿಗಷ್ಟೇ ಅಲ್ಲ ದಕ್ಷಿಣ ಭಾರತೀಯರ ಫೇವರಿಟ್ ನಟಿಯಾಗಿಬಿಟ್ಟರು. ಹುಡುಗರಂತೂ ಇಂತಹ ಹುಡುಗಿಯೇ ಲೈಫ್ ಪಾರ್ಟ್ನರ್ ಆಗಿ ಬರಬೇಕು ಅಂತ ಹಗಲು ಕನಸು ಕಾಣುವುದಕ್ಕೆ ಶುರು ಮಾಡಿದ್ದರು. ಆ ಮಟ್ಟಿಗೆ ಹುಡುಗರಿಗೆ ಹುಚ್ಚು ಹಿಡಿಸಿದ್ದ ನಟಿಯೀಕೆ. ಆದರೆ, ಹೆಚ್ಚು ವರ್ಷ ಸಿನಿಮಾರಂಗದಲ್ಲಿ ಇರಲಿಲ್ಲ. ಕೇವಲ 4 ವರ್ಷಗಳಲ್ಲಿಯೇ ಈಕೆ ವೃತ್ತಿ ಬದುಕು ಮುಗಿದು ಹೋಗಿತ್ತು.

ಈ ನಾಲ್ಕು ವರ್ಷಗಳಲ್ಲಿ ಅನುರಾಧಾ ಮೆಹ್ತಾ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ 'ಅಜಯ್' ಸಿನಿಮಾಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. 'ಅಜಯ್' ಬಳಿಕ ನೆನಪಿರಲಿ ಪ್ರೇಮ್ ನಟನೆಯ 'ಹೊಂಗನಸು' ಸಿನಿಮಾದಲ್ಲಿ ನಟಿಸಿದ್ದರು. ನಾಲ್ಕು ವರ್ಷಗಳಲ್ಲಿ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಷ್ಟೇ. ಆದರೂ ಯಶಸ್ಸಿನ ಉತ್ತುಂಗದಲ್ಲಿದ್ದರು. ಹೀಗಿದ್ದರೂ ಚಿತ್ರರಂಗದಿಂದ ದೂರವಾಗಿದ್ದೇಕೆ? 4 ವರ್ಷಗಳಲ್ಲಿ ಸಿನಿಮಾರಂಗದಿಂದ ಮರೆಯಾಗಲು ಕಾರಣವೇನು? ಅವಕಾಶಗಳ ದಿಢೀರನೇ ಕಮ್ಮಿಯಾಗಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
ಬಾಂಬೆ ಹೀರೋಯಿನ್ ಅನುರಾಧಾ ಮೆಹ್ತಾ
ಅನುರಾಧಾ ಮೆಹ್ತಾ ಅಥವಾ ಅನು ಮೆಹ್ತಾ. ಕನ್ನಡದವರು ಈಕೆಯನ್ನು ಬಾಂಬೆ ಹೀರೋಯಿನ್ ಅಂತಲೇ ಕರೆಯುತ್ತಿದ್ದರು (ಮುಂಬೈನಿಂದ ಬಂದವರನ್ನು ಹೀಗೆ ಕರೆಯುತ್ತಾರೆ). ಈ ನಟಿ ಕನ್ನಡಕ್ಕೆ ಎಂಟ್ರಿ ಕೊಟ್ಟಾಗ ಅದಾಗಲೇ ತೆಲುಗಿನಲ್ಲಿ 'ಆರ್ಯ', 'ನೂವಂಟೆ ನಾಕಿಷ್ಟಂ' ಎನ್ನುವ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಇವನ್ನು ಕನ್ನಡಕ್ಕೆ ಕರೆದುಕೊಂಡು ಬಂದಿದ್ದು ರಾಕ್ಲೈನ್ ವೆಂಕಟೇಶ್. ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದ ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್, ಪ್ರಕಾಶ್ ರಾಜ್ ನಟಿಸುತ್ತಿದ್ದರು. ಹೀರೋಯಿನ್ ಹುಡುಕಾಟದಲ್ಲಿದ್ದಾಗ, 'ಆರ್ಯ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ಇದೇ ಅನು ಮೆಹ್ತಾ ಕಣ್ಣಿಗೆ ಬಿದ್ದಿದ್ದರು. ಹೀಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ತಲೆ ನೋವಾಗಿದ್ದ ಅನು ಮೆಹ್ತಾ
'ಅಜಯ್' ಸಿನಿಮಾಗೆ ನಾಯಕಿ ಅಂತ ಅನೌನ್ಸ್ ಮಾಡಿದ್ದೇನೋ ಆಗಿತ್ತು. ಆದರೆ, ಮೊದಲ ದಿನದಿಂದಲೇ ದೊಡ್ಡ ತಲೆ ನೋವಾಗಿಬಿಟ್ಟಿದ್ದರು. ಆಯಿಲ್ ಐಟಂ ತಿನ್ನೋದಿಲ್ಲ. ಒಳ್ಳೆಯ ಹೋಟೆಲ್ ಬೇಕು. ಹೀಗೆ ಕಂಡೀಷನ್ ಇಡುವುದಕ್ಕೆ ಶುರು ಮಾಡಿದ್ದರು. ಮೊದಲು ಬೆಂಗಳೂರಿನ ಕಾನಿಷ್ಕಾದಲ್ಲಿ ಹೋಟೆಲ್ ರೂಂ ಹಾಕಿಕೊಟ್ಟರು. ಒಂದೇ ದಿನದಲ್ಲಿ ಕಿರಿಕಿರಿ ಶುರುವಾಗಿತ್ತು. ಹೋಟೆಲ್ ಸರಿಯಿಲ್ಲ, ಫುಡ್ ಸರಿಯಿಲ್ಲ ಅಂತ ಹೇಳುವುದಕ್ಕೆ ಶುರು ಮಾಡಿದ್ದರು. ಪಕ್ಕದಲ್ಲಿಯೇ 3 ಸ್ಟಾರ್ ಹೊಸ ಹೋಟೆಲ್ ಶುರುವಾಗಿತ್ತು. ಅಲ್ಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಎರಡೇ ದಿನ ಹೋಟೆಲ್ನವರು ಕಂಪ್ಲೇಂಟ್ ಮಾಡೋಕೆ ಶುರು ಮಾಡಿದರು. ಹೀಗಾಗಿ 7 ಸ್ಟಾರ್ ಹೋಟೆಲ್ಗೆ ಶಿಫ್ಟ್ ಮಾಡಿ ಸಿನಿಮಾ ಮುಗಿಸಿದ್ದಾಯ್ತು.

ಅವಕಾಶ ಕಳೆದುಕೊಂಡಿದ್ದೇಗೆ?
ರಾಕ್ಲೈನ್ ಕಂಪನಿಗೆ ಕೆಲಸ ಮಾಡಿತ್ತಿದ್ದ ಮಂಜಯ್ಯ ಕೆಲವು ವರ್ಷಗಳ ಹಿಂದೆ ಚಿತ್ರಲೋಕ.ಕಾಮ್ಗೆ ನೀಡಿದ ಸಂದರ್ಶನದಲ್ಲಿ ಈ ನಟಿಯ ಕಿರಿಕಿರಿಗಳ ಬಗ್ಗೆ ಮಾತಾಡಿದ್ದಾರೆ. "ಸಿನಿಮಾ ಮುಗಿದ ಬಳಿಕ ಕೆಲವು ಫೋನ್ ಮಾಡಿದ್ರು ಸರ್ ಅವರ ನಂಬರ್ ಕೊಡಿ ಅಂತ. ಪರ್ಫಾಮೆನ್ಸ್ನಲ್ಲೂ ಸ್ವಲ್ಪ ಕಷ್ಟನೇ. ಕಷ್ಟ ಪಟ್ಟು ಕೆಲಸ ತೆಗೆಸಿದ್ದಾಯ್ತು. ನಿಮ್ಮ ಖುಷಿ ನಾನು ನಂಬರ್ ಕೊಡುತ್ತೇನೆ. ಇದರಿಂದ ನಾನು ಕಳೆದುಕೊಳ್ಳುವುದು ಏನಿಲ್ಲ. ಆದರೆ, ಈತರ ಅವಳ ಸ್ವಭಾವವಿದೆ. ಅದ್ಭುತ ಪರ್ಫಾಮೆನ್ಸ್ ಏನೂ ಮಾಡುವುದಿಲ್ಲ. ಬೇಕು ಅಂದರೆ ಕೊಡುತ್ತೇನೆ ಎಂದೆ. ಅದಕ್ಕೆ ಅಯ್ಯೋ ಬೇಡ ಬಿಡ್ರಿ ಅಂತ ಹೀಗೆ ಪ್ರಚಾರ ಆಗಿಬಿಡ್ತು." ಎನ್ನುತ್ತಾರೆ ಮಂಜಯ್ಯ.
ಗಾಳಿ ಸುದ್ದಿಯೇನು?
ಅನು ಮೆಹ್ತಾ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿರಲಿಲ್ಲ. ಹೀಗಾಗಿ ನಿರ್ಮಾಪಕರು ಅನು ಮೆಹ್ತಾರನ್ನು ಸಿನಿಮಾಗೆ ಹಾಕಿಕೊಳ್ಳುವುದಕ್ಕೆ ಹಿಂದೇಟು ಹಾಕಿದರು. ಮತ್ತೊಂದು ಕಡೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು. ಕೌಟುಂಬಿಕ ಸಮಸ್ಯೆಗಳಿಂದ ಚಿತ್ರರಂಗದಿಂದ ದೂರ ಸರಿದರು ಅನ್ನೋ ಸುದ್ದಿ ಹರಿದಾಡಿತ್ತು. ಇನ್ನೊಂದು ಮೂಲಗಳು ಕುಟುಂಬದೊಂದಿಗೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. ಎಲ್ಲಕ್ಕಿಂತ ವಿಶೇಷ ಅಂದರೆ ಇನ್ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿಲ್ಲ.


Click it and Unblock the Notifications











