"ತೆಳ್ಳಗಿನ ಬಟ್ಟೆ ಹಾಕಿಸಿ, ತೊಡೆ ಶೇಪ್ ಕಾಣಿಸುವಂತೆ ಚಿತ್ರೀಸುತ್ತೇವೆ."; ಅಪರ್ಣ ತಂದೆಗೆ ಪುಟ್ಟಣ್ಣ ಕಣಗಾಲ್ ಹೀಗಂದಿದ್ದೇಕೆ?
ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ನಿರೂಪಣೆ ಮಾಡುತ್ತಿದ್ದ ಅಪರ್ಣ ವಸ್ತಾರೆ ಇಹಲೋಕ ತ್ಯಜಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣ ಎರಡು ವರ್ಷ ಈ ಮಾರಕ ಕಾಯಿಲೆ ವಿರುದ್ಧ ಹೋರಾಡಿ, ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಆದರೆ, ಅಪರ್ಣ ವಸ್ತಾರೆ ಸಾವಿನ ಸುದ್ದಿ ಇಂದಿಗೂ ಅವರನ್ನು ಇಷ್ಟಪಡುವವರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.
ಎರಡು ವರ್ಷಗಳ ಕಾಲ ಮಾರಕ ಕಾಯಿಲೆಯಿಂದ ನೋವುಂಡಿದ್ದ ಈ ನಿರೂಪಕಿಯ ಧ್ವನಿಯಷ್ಟೇ ಜೀವಂತ. ಆರಂಭದಲ್ಲಿ ಸಿನಿಮಾ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪರ್ಣ ವಸ್ತಾರೆ, ಬಳಿಕ ಸಿನಿಮಾಗೆ ಗುಡ್ಬೈ ಹೇಳಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದರು. ಅಪರ್ಣ ಅಗಲಿದ ಬಳಿಕ ಅವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಲ್ಲವರು ಹೊರಹಾಕುತ್ತಿದ್ದಾರೆ.

ಅಪರ್ಣ ಅವರ ತಂದೆ ಸಿನಿಮಾ ಪತ್ರಕರ್ತರಾಗಿದ್ದರು. ಹೀಗಾಗಿ ಸಹಜವಾಗಿಯೇ ಅವರಿಗೆ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಿತ್ತು. ಒಮ್ಮೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸುತ್ತಿದ್ದ 'ಮಸಣದ ಹೂವು' ಸಿನಿಮಾದಲ್ಲಿ ಅವಕಾಶ ನೀಡುವಂತೆ ಅಪರ್ಣ ಅವರನ್ನು ಕರೆದುಕೊಂಡು ಅವರ ತಂದೆ ಹೋಗಿದ್ದರು. ಆಗ ಅಪರ್ಣ ತಂದೆಗೆ ಪುಟ್ಟಣ್ಣ ಕಣಗಾಲ್ ನಾವು ಸಿನಿಮಾದವರು ಕೆಟ್ಟವರು ಎಂದು ಹೇಳಿದ್ದರು.
ಪುಟ್ಟಣ್ಣ ಕಣಗಾಲ್ ಯಾಕೆ ಹೀಗೆ ಹೇಳಿದ್ದರು ಅನ್ನೋದನ್ನು ಅಂದು ಬಾಲ ನಟನಾಗಿ ಗುರುತಿಸಿಕೊಂಡಿದ್ದ ರಾಜೇಶ್ ರಿವೀಲ್ ಮಾಡಿದ್ದರು. ಕೆಲವು ತಿಂಗಳ ಹಿಂದೆ ಅವರು ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಆ ಸಂಗತಿಯನ್ನು ಹಂಚಿಕೊಂಡಿಕೊಂಡಿದ್ದಾರೆ. ಅಪರ್ಣ ಅಗಲಿದ ಈ ಸಂದರ್ಭದಲ್ಲಿ ಆ ಮಾತುಗಳನ್ನು ಮತ್ತೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ರಘುರಾಮ್ ಶೇರ್ ಮಾಡಿದ್ದಾರೆ.
'ಮಸಣದ ಹೂವು' ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕೊನೆಯ ಸಿನಿಮಾ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವಾಗಲೇ ಪುಟ್ಟಣ್ಣ ನಿಧನರಾಗಿದ್ದರು. ವಿಶೇಷ ಅಂದರೆ, ಇದೇ ಸಿನಿಮಾದಲ್ಲಿ ಅಪರ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆದರೆ, ಇದೇ ಸಿನಿಮಾಗೆ ಅವಕಾಶ ಕೇಳಲು ಹೋದಾಗ, ಅಪರ್ಣ ತಂದೆಗೆ ಪುಟ್ಟಣ್ಣ ಏನು ಹೇಳಿದ್ದರು ಗೊತ್ತೇ? ಅಲ್ಲದೇ ಇದ್ದ ನಟ ರಾಜೇಶ್ ಅವರು ಆ ಘಟನೆಯನ್ನು ರಘುರಾಮ್ ಯೂಟ್ಯೂಬ್ ಚಾನೆಲ್ನಲ್ಲಿ ನೆನಪಿಸಿಕೊಂಡಿದ್ದಾರೆ.

"ನಾನು ಇದ್ದಾಗಲೇ ಒಮ್ಮೆ ಅಪರ್ಣ ಬಂದರು. ಅಪರ್ಣ ಹಾಗೂ ಅವರ ತಂದೆ. ನನಗೆ ನೆನಪಿರುವ ಹಾಗೇ ನೀಲಿ ಬಣ್ಣದ ಫಿಯೆಟ್ ಕಾರು ಇತ್ತು. ಅವರ ತಂದೆ ಪುಟ್ಟಣ್ಣ ಕಣಗಾಲ್ ಅವರ ಬಳಿ ಅಪರ್ಣ ಅವರನ್ನು ಮಸಣದ ಹೂವು ಸಿನಿಮಾಗೆ ಸೇರಿಸಬೇಕು ಅಂತ ಕರೆದುಕೊಂಡು ಬಂದಿದ್ದರು. ನಾನು ಸಿನಿಮಾ ಮಾಡದೇ ಇದ್ದರೂ ಅವರ ಮನೆಗೆ ಹೋಗಿ ಬರುತ್ತಿದೆ. ಆ ಸಂದರ್ಭದಲ್ಲಿ ಅಪರ್ಣ ಬಂದಿದ್ದರು." ಎಂದು ರಾಜೇಶ್ ನೆನಪಿಸಿಕೊಂಡಿದ್ದಾರೆ.
ಆಗ ಅಪರ್ಣ ಅವರ ತಂದೆಗೆ ಪುಟ್ಟಣ್ಣ ಕಣಗಾಲ್ ಕೆಲವು ಸಲಹೆಗಳನ್ನು ನೀಡಿದ್ದರು. ಹೆಣ್ಣು ಮಕ್ಕಳಿಗೆ ಸಿನಿಮಾ ಬೇಡ ಅಂತ ಸಲಹೆ ನೀಡಿದ್ದರಂತೆ. ಅದ್ಯಾಕೆ ಅನ್ನೋದನ್ನು ಹೇಳಿಕೊಂಡಿದ್ದರು. "ತಂದೆ ಜೊತೆ ಅಪರ್ಣ ಬಂದಾಗ ಪುಟ್ಟಣ್ಣ ಹೇಳಿದರು ಬೇಡಿ, ಹೆಣ್ಣು ಮಕ್ಕಳಿಗೆ ಸಿನಿಮಾ ಬೇಡ ಅಂದಿದ್ರು. ಸಿನಿಮಾದವರು ನಾವು ಎಷ್ಟು ಕೆಟ್ಟವರು ಅಂದರೆ, ತೆಳ್ಳಗಿರುವ ಬಟ್ಟೆ ಹಾಕಿಸಿಬಿಟ್ಟು, ಹಿಂದೆಯಿಂದ ಲೈಟ್ ಹಾಕಿ, ಆ ತೊಡೆ ಶೇಪ್ ಹಾಗೆ ಕಾಣಿಸಬೇಕು. ಹಾಗೆ ಶೂಟ್ ಮಾಡುತ್ತೇವೆ. ಅಂತಹ ಕೆಟ್ಟವರು ನಾವು. ಹೆಣ್ಣು ಮಕ್ಕಳಿಗೆ ಸಿನಿಮಾ ಬೇಡಿ ಅಂತ ಪುಟ್ಟಣ್ಣ ಕಣಗಾಲ್ ಹೇಳಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.


Click it and Unblock the Notifications











