ರಾಜ್ಕುಮಾರ್-ಲೋಕೇಶ್ ಒಟ್ಟಿಗೆ ಸಿನಿಮಾ ಮಾಡಲಿಲ್ಲ ಯಾಕೆ? ಅವರ ಮಕ್ಕಳೊಂದಿಗೆ ನಟಿಸಿದ್ದೇಗೆ?
ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬ ಹಾಗೂ ಲೋಕೇಶ್ ಫ್ಯಾಮಿಲಿ ತಮ್ಮ ಆದ ಕೊಡುಗೆ ನೀಡಿವೆ. ಎರಡೂ ಕುಟುಂಬಗಳಿಂದ ಈ ಬಣ್ಣದ ಲೋಕದಲ್ಲಿ ದಿಗ್ಗಜರುಗಳೇ ಬಂದಿದ್ದಾರೆ. ಡಾ.ರಾಜ್ಕುಮಾರ್ ಕುಟುಂಬ ಹೇಗೋ ಹಾಗೇ ಲೋಕೇಶ್ ಅವರ ಕುಟುಂಬದ ಸಿನಿಮಾ ಜರ್ನಿ ಎಂ ವಿ ಸುಬ್ಬಯ್ಯ ನಾಯ್ಡು ಅವರಿಂದ ಶುರುವಾಗುತ್ತೆ.
ಕನ್ನಡದ ಮೊದಲ ಟಾಕಿ ಸಿನಿಮಾ ಸತಿ ಸುಲೋಚನ (1934)ದಲ್ಲಿ ನಾಯಕನಾಗಿ ಎಂ ವಿ ಸುಬ್ಬಯ್ಯ ನಾಯ್ಡು ನಟಿಸಿದ್ದರು. ಇವರು ಹಿರಿಯ ನಟ ದಿವಂಗತ ಲೋಕೇಶ್ ಅವರ ತಂದೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ತಾತ. ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. ಇಂತಹವರ ಗರಡಿಯಲ್ಲೇ ಅಣ್ಣಾವ್ರು ಕೂಡ ಪಳಗಿದವರು ಅನ್ನೋದು ವಿಶೇಷ.

ಎಂ ವಿ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪಯಲ್ಲಿ ಅಣ್ಣಾವ್ರು ಸ್ಪಷ್ಟವಾಗಿ ಕನ್ನಡ ಮಾತಾಡುವುದಕ್ಕೆ ಕಲಿತಿದಿದ್ದರು. ನಟನೆ ಜೊತೆಗೆ ಚಾಮರಾಜನಗರ ಶೈಲಿಯಲ್ಲಿದ್ದ ಅವರ ಭಾಷೆ ಸಾಮಾನ್ಯ ಕನ್ನಡ ಭಾಷೆಯಾಗಿ ಬದಲಾಯ್ತು. ಪೌರಾಣಿಕ, ಐತಿಹಾಸಿ ನಾಟಕಗಳಲ್ಲಿ ಗಾಂಭೀರ್ಯದಿಂದ ಸಂಭಾಷಣೆಯನ್ನು ಒಪ್ಪಿಸುವಾಗ ಅವರನ್ನು ತಿದ್ದಿದವರು ಎಂವಿ ಸುಬ್ಬಯ್ಯ ನಾಯ್ಡು ಅವರು. ಹೀಗಾಗಿ ಎಂ ವಿ ಸುಬ್ಬಯ್ಯ ನಾಯ್ಡು ಅವರ ಕುಟುಂಬದ ಬಗ್ಗೆ ಅಣ್ಣಾವ್ರಿಗೆ ವಿಶೇಷವಾದ ಗೌರವಿತ್ತು.
ಹೀಗಿದ್ದರೂ, ಅಣ್ಣಾವ್ರೊಂದಿಗೆ ಎಂ ವಿ ಸುಬ್ಬಯ್ಯ ನಾಯ್ಡು ಅವರ ಮಗ ಲೋಕೇಶ್ ಯಾಕೆ ಒಂದೇ ಒಂದು ಸಿನಿಮಾದಲ್ಲೂ ನಟಿಸಲಿಲ್ಲ? ಇಂತಹದ್ದೊಂದು ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಅಣ್ಣಾವ್ರೊಂದಿಗೆ ಲೋಕೇಶ್ ಯಾಕೆ ನಟಿಸಲಿಲ್ಲ? ಅವರ ಮಕ್ಕಳೊಂದಿಗೆ ಯಾಕೆ ನಟಿಸಿದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಒಂದು ಕಾಲದಲ್ಲಿ ಲೋಕೇಶ್ ಅವರ ಸಿನಿಮಾಗಳು ಇಡೀ ದೇಶದ ಗಮನ ಸೆಳೆಯುತ್ತಿದ್ದವು. ಅಣ್ಣಾವ್ರ ಸಿನಿಮಾಗಳಿಗಿಂತ ಲೋಕೇಶ್ ಸಿನಿಮಾ ವಿಭಿನ್ನವಾಗಿರುತ್ತಿತ್ತು. ಹೀಗಾಗಿ ವಿಭಿನ್ನ ಇಮೇಜ್ಗಳಿರುವ ಇಬ್ಬರು ದಿಗ್ಗಜರು ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅದ್ಯಾಕೆ ಅನ್ನೋದನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ವಿವರಿಸಿದ್ದಾರೆ.
"ಇದೊಂತರ ಅಪ್ರಸ್ತುತವಾದ ಪ್ರಶ್ನೆ. ರಾಜ್ಕುಮಾರ್ ಅವರ ಕಾಲಘಟ್ಟದಲ್ಲಿ ಇದ್ದ ಎಷ್ಟೋ ಕಲಾವಿದರಿಗೆ ಅಣ್ಣಾವ್ರೊಂದಿಗೆ ನಟಿಸುವ ಅವಕಾಶ ಬರಲಿಲ್ಲ. ಅದಕ್ಕೆ ರಾಜ್ಕುಮಾರ್ ಅವರು ಕಂಡಿತವಾಗಿಯೂ ಕಾರಣರಲ್ಲ. ಅವರನ್ನು ನಾಯಕರನ್ನಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಂತಹ ಸಂಸ್ಥೆಗಳು ತಮಿಳು, ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದರು. ಅವರು ಕಲಾವಿದರನ್ನು ಆಯ್ಕೆ ಮಾಡುತ್ತಿದ್ದರು. ಇನ್ನು ಕನ್ನಡ ಚಿತ್ರರಂಗ, ಕರ್ನಾಟಕಕ್ಕೆ ಬಂದು ನೆಲೆಸಿದ ಮೇಲೂ ಇಲ್ಲಿಯವರು ಸಿನಿಮಾಗಳನ್ನು ಮಾಡುವಾಗಲೂ ಸಹ ಬೇರೆಯವರು ಪ್ರವರ್ಧಮಾನಕ್ಕೆ ಬರುವ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿದಾಗ ಅಪಸ್ವರಗಳು ಎದ್ದಿದ್ದವು. ರಾಜ್ಕುಮಾರ್ ಅವರನ್ನು ಮೆರೆಸುವ ಸಲುವಾಗಿ ಈ ಪಾತ್ರವನ್ನು ನಿಕೃಷ್ಣವಾಗಿ ತೋರಿಸಿದ್ದಾರೆ ಅನ್ನೋದು, ಅವರ ಚಿತ್ರ ಜೀವನವನ್ನು ತುಳಿಯುವುದಕ್ಕೆ ಹೀಗೆ ಮಾಡಿದ್ದಾರೆ ಅನ್ನೋದು, ಅದಕ್ಕೆ ರಾಜ್ಕುಮಾರ್ ಅವರೇ ಕಾರಣ ಅನ್ನೋದು ಹೀಗೆ ವ್ಯಾಖ್ಯಾನ ಮಾಡುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ ರಾಜ್ಕುಮಾರ್ ಅವರಿಗಿಂತ ಮತ್ತೊಬ್ಬ ನಟನ ಪಾತ್ರ ದೊಡ್ಡದಿದ್ದರೆ, ರಾಜ್ಕುಮಾರ್ ಅವರನ್ನು ತುಳಿಯುವುದಕ್ಕೆ ಮಾಡಿದ್ದಾರೆಂಬ ವ್ಯತಿರಿಕ್ತವಾದ ವ್ಯಾಖ್ಯಾನ ಮೂಡಿ ಬರುತ್ತಿತ್ತು. ಅನೇಕ ಕಲಾವಿದರ ವಿಚಾರದಲ್ಲಿ ಇದನ್ನು ನೋಡಿದ್ದೇವೆ." ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳುತ್ತಾರೆ.
ಇಬ್ಬರು ದಿಗ್ಗಜರು ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುತ್ತಾರೆ. ಅವರ ಇಮೇಜ್ಗೆ ಸರಿಯಾದ ಪಾತ್ರವನ್ನು ಸೃಷ್ಟಿಸಬೇಕಾಗುತ್ತೆ. ಒಂದು ವೇಳೆ ಇಬ್ಬರ ಪಾತ್ರದ ತೂಕದಲ್ಲಿ ಹಿಂದೆ-ಮುಂದೆ ಆದರೆ, ಅಭಿಮಾನಿಗಳು ಬೇಸರಗೊಳ್ಳುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅಪವಾದವನ್ನು ಹೊರಿಸುತ್ತಾರೆ. ಇದು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗುವ ಸಾಧ್ಯತೆನೂ ಇರುತ್ತೆ.
"ಲೋಕೇಶ್ ಅವರನ್ನು ರಾಜ್ಕುಮಾರ್ ಅವರ ಜೊತೆಯಲ್ಲಿ ಕಾಸ್ಟಿಂಗ್ ಮಾಡಿದ್ದರೆ, ಅಲ್ಲಿ ಸರಿಯಾದ ಪಾತ್ರ ಇಲ್ಲದೇ ಇದ್ದಿದ್ದರೆ, ಅದಕ್ಕೂ ಕೂಡ ಇದೇ ರೀತಿಯ ವ್ಯಾಖ್ಯಾನ ಬರುತ್ತಿತ್ತು. ಹಾಗಾಗಿ ರಾಜ್ಕುಮಾರ್ ಹಾಗೂ ಲೋಕೇಶ್ ಅವರು ಒಟ್ಟಿಗೆ ಸಿನಿಮಾ ಮಾಡುವ ಅವಕಾಶ ಬರಲಿಲ್ಲ ಅಷ್ಟೇ. ಇದಕ್ಕೆ ಯಾವುದೇ ವಿಶೇಷ ಕಾರಣಗಳು ಇಲ್ಲ. ಆ ಎರಡೂ ಕುಟುಂಬಗಳ ಮಧ್ಯೆ ಉತ್ತಮವಾದ ಸಂಬಂಧವಿತ್ತು." ಎನ್ನುತ್ತಾರೆ.
ಒಟ್ಟಿಗೆ ಸಿನಿಮಾ ಮಾಡಲಿಲ್ಲ ಎಂದರೆ, ಇಬ್ಬರ ನಡುವೆ ವೈಮನಸ್ಸು ಇತ್ತು ಎಂದು ಅರ್ಥವಲ್ಲ. ಗೋಕಾಕ್ ಚಳುವಳಿಯಲ್ಲಿ ಅಣ್ಣಾವ್ರ ಜೊತೆಯಲ್ಲಿ ಸದಾ ನಿಂತಿದ್ದರು. ಅಷ್ಟೇ ಅಲ್ಲದೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರೊಂದಿಗೆ ಲೋಕೇಶ್ ನಟಿಸಿದ್ದರು. ಗೋಕಾಕ್ ಚಳುವಳಿಯಲ್ಲಿ ರಾಜ್ಕುಮಾರ್ ಅವರ ಬೆನ್ನಿಗೆ ನಿಂತು ಅವರ ತಮ್ಮನ ಹಾಗೆ ಸದಾ ಕಾಲ ಅವರನ್ನು ಕಾದವರು ಲೋಕೇಶ್" ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.


Click it and Unblock the Notifications











