"ನಾನು ಮಾತ್ರ 'ಶಾಪಗ್ರಸ್ತ ಗಂಧರ್ವ' ಅಂದುಕೊಂಡಿದ್ದ, ನಮ್ಮ ಅಪ್ಪನೂ ಶಾಪಗ್ರಸ್ತರೇ" ಎಂದಿದ್ದ ವಿಷ್ಣುದಾದ ಯಾಕೆ?
ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, ಡಾ. ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕಿತ್ತು. ಆದರೆ, ವಿವಾದ ಆಗಿದ್ದು, ಮೈಸೂರಿನಲ್ಲಿ ಸ್ಮಾರಕ ಆಗಿದ್ದು ಈಗ ಹಳೆಯ ವಿಷಯ. ಆದರೆ, ವಿವಾದ ಇಲ್ಲಿಗೆ ನಿಂತಿದೆಯಾ? ಈ ಪ್ರಶ್ನೆಗೆ ಉತ್ತರ ಕಣ್ಮುಂದೆನೇ ಇದೆ. ವಿಷ್ಣುದಾದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಎಲ್ಲಿ ಅಂತ್ಯ ಸಂಸ್ಕಾರ ಆಗಿದೆಯೋ ಅಲ್ಲಿಯೇ ಸ್ಮಾರಕ ಆಗಬೇಕು ಅನ್ನೋದು ಅವರ ಹಠ.
ವಿಷ್ಣುವರ್ಧನ್ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಅಂಬರೀಶ್. ಬಾಲಕೃಷ್ಣ ಅವರ ಮಗ ಗಣೇಶ್ ಅವರೊಂದಿಗೆ ಚರ್ಚೆ ಮಾಡಿ, ಈ ನಿರ್ಧಾರಕ್ಕೆ ತೆಗೆದುಕೊಳ್ಳಲಾಗಿತ್ತು. ಈಗ ಕೆಲವರು ಅಂಬರೀಶ್ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಹೇಳುವುದು ಉಂಟು. ಅದಕ್ಕೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಆ ಸಂದರ್ಭದಲ್ಲಿ ಅಂಬರೀಶ್ ಬಳಿ ಬಾಲಕೃಷ್ಣ ಅವರ ಮಗ ಗಣೇಶ್ ಒಂದು ವಿಷಯವನ್ನು ಮುಚ್ಚಿಟ್ಟಿದ್ದರು. ಅದನ್ನು ಒಂದು ವೇಳೆ ಹೇಳಿದ್ದರೆ, ಇಂದು ಈ ವಿವಾದ ಬುಗಿಲೇಳುತ್ತಿರಲಿಲ್ಲ ಅನ್ನೋದು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿಯವರ ಅಭಿಪ್ರಾಯ. ಅದೇನು ಅನ್ನೋದನ್ನು ವಿವರಿಸಿದ್ದಾರೆ. ಅದರೆ, ಅದಕ್ಕೂ ಮುನ್ನ ವಿಷ್ಣುವರ್ಧನ್ ತನ್ನ ತಂದೆಯನ್ನೂ 'ಶಾಪಗ್ರಸ್ತ ಗಂಧರ್ವ' ಕರೆದಿದ್ದರು. ಅದ್ಯಾಕೆ? ಅನ್ನೋದನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
"ನಮ್ಮ ಅಪ್ಪನೂ ಶಾಪಗ್ರಸ್ತರೇ ಆಗಿದ್ದರು"
"ಮಂತ್ರಾಲಯ ಮಹಾತ್ಮೆ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ವಿಷ್ಣುವರ್ಧನ್ ತಂದೆ ಎಚ್ ಎಲ್ ನಾರಾಯಣ ರಾವ್ ಬರೆದಿದ್ದರು. ಮಂತ್ರಾಲಯದಲ್ಲಿ ಮಡಿ ಬಟ್ಟೆಯನ್ನು ಉಟ್ಟುಕೊಂಡು ಸಂಭಾಷಣೆಯನ್ನು ಬರೆದಿದ್ದರು. ಆದರೆ, ಟೈಟಲ್ನಲ್ಲಿ ಅವರ ಹೆಸರು ಬರಲಿಲ್ಲ. ಅದಕ್ಕೊಂದು ದೊಡ್ಡ ಕಥೆಯಿದೆ. ಆದರೆ, ಅದಕ್ಕೆ ರಾಜ್ಕುಮಾರ್ ಕಾರಣರಲ್ಲ. ಅದಕ್ಕೆ ಕಾರಣ ಬೇರೆ ಬೇರೆಯಿದೆ. ಅದನ್ನು ವಿಷ್ಣುವರ್ಧನ್ ಅವರು ಓದಿದ್ದಾರೆ. ಅವತ್ತು ರಾತ್ರಿ ಫೋನ್ ಮಾಡಿ ಹೇಳಿದರು. ನಾನು ಮಾತ್ರ ಶಾಪಗ್ರಸ್ತ ಗಂಧರ್ವ ಅಂದುಕೊಂಡಿದ್ದೆ. ನಮ್ಮ ಅಪ್ಪನೂ ಶಾಪಗ್ರಸ್ತರೇ ಆಗಿದ್ದರು ಅಂತ ಹೇಳಿದ್ದರು. ಅದು ನನಗೆ ಬಹಳ ಕಾಡೋದು. ಈ ಶಾಪಗ್ರಸ್ತ ಗಂಧರ್ವ ಅನ್ನೋ ಪದ ಇದೆಯಲ್ಲ. ಅದು ಯಾಕೋ ವಿಷ್ಣುವರ್ಧನ್ ಅವರಿಗೆ ಬಹಳ ಸೂಟ್ ಆಗುತ್ತೆ ಅಂತ ಅನಿಸುತ್ತೆ" ಎಂದು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ಹೇಳಿದ್ದಾರೆ.
ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಸುರಸುಂದರ ನಟ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂತಹ ನಟ ಎಂತಹ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿದ್ದಾರೆ. ಆದರೂ ಕೂಡ ಅವರು ಅಭದ್ರತೆಯಲ್ಲಿಯೇ ಇಡೀ ವೃತ್ತಿಜೀವನವನ್ನು ಕಳೆಯಬೇಕಾಯ್ತು. ಈಗ ಅವರ ಸ್ಮಾರಕದ ವಿಷಯದಲ್ಲಿ ಇಂತಹದ್ದೊಂದು ವಿವಾದ ಆಗುವುದು ಬೇಡವಾಗಿತ್ತು ಎಂದು ಶ್ರೀಧರ ಮೂರ್ತಿ ಬೇಸರವನ್ನು ಹೊರ ಹಾಕಿದ್ದಾರೆ.
ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೋ ಒಪ್ಪಲಿಲ್ಲ
2009ರಲ್ಲಿ ವಿಷ್ಣುವರ್ಧನ್ ತೀರಿಕೊಂಡುವಾಗ ಇಡೀ ಘಟನೆ ಬಹಳ ಅನಿರೀಕ್ಷಿತವಾಗಿ ನಡೀತು. ಯಾರೂ ಕೂಡ ಇಂತಹದ್ದೊಂದು ಸಂದರ್ಭ ಬರಬಹುದು ಎಂದು ಹೇಳಿ ಊಹೆಯನ್ನೂ ಮಾಡಿರಲಿಲ್ಲ. ವಿಷ್ಣುವರ್ಧನ್ ಆತ್ಮೀಯ ಗೆಳೆಯರಾಗಿದ್ದ ಅಂಬರೀಶ್ ಅವರು ಸದುದ್ದೇಶದಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. 2006ರಲ್ಲಿ ರಾಜ್ಕುಮಾರ್ ತೀರಿಕೊಂಡಾಗ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ಅಂತ್ಯ ಸಂಸ್ಕಾರ ಮಾಡಿತ್ತು. ಹೀಗಾಗಿ ವಿಷ್ಣುವರ್ಧನ್ ತೀರಿಕೊಂಡಾಗ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ, ಅದನ್ನು ವಿಷ್ಣುವರ್ಧನ್ ಕುಟುಂಬ ಒಪ್ಪಿರಲಿಲ್ಲ. ಅದಕ್ಕೆ ಅವರದ್ದೇ ಆದ ಕಾರಣವಿದೆ. ಆಗ ಬೇರೊಂದು ಜಾಗ ಹುಡುಕುತ್ತಿದ್ದಾಗ ಸಿಕ್ಕಿದ್ದೇ ಅಭಿಮಾನ್ ಸ್ಟುಡಿಯೋ.

"ಕಂಠೀರವ ಸ್ಟುಡಿಯೋ ಬಿಟ್ಟು ಎಲ್ಲಿ ಮಾಡಬೇಕು ಅಂದಾಗ ಕನ್ನಡ ಚಿತ್ರರಂಗವನ್ನು ಎತ್ತಿ ಹಿಡಿದವರು ಬಾಲಕೃಷ್ಣ. ಅಭಿಮಾನ್ ಸ್ಟುಡಿಯೋವನ್ನು ವಿಷ್ಣುವರ್ಧನ್ ಅವರೇ ದೇಗುಲ ಎಂದು ಕರೆದಿದ್ದಾರೆ. ಅಲ್ಲಿ ಅಂತ್ಯಕ್ರಿಯೆ ಮಾಡಬಹುದು ಎಂದು ಅಂಬರೀಶ್ ಅವರಿಗೆ ಅನಿಸಿತ್ತು. ಆಗ ಬಾಲಕೃಷ್ಣ ಅವರನ್ನು ಕರೆಸಿ ಮಾತನಾಡಿಸಿದರು. ಮುಂದೆ ಇಲ್ಲೊಂದು ಸ್ಮಾರಕವನ್ನು ನಿರ್ಮಾಣ ಮಾಡುತ್ತೇವೆ. ಇಲ್ಲಿ ಸಾಕಷ್ಟು ಚಿತ್ರರಂಗದ ಆಕ್ಟಿವಿಟೀಸ್ ನಡೆಯುತ್ತೆ. ಕಂಠೀರವ ಸ್ಟುಡಿಯೋದಂತೆ ಪ್ರಮುಖ ಸ್ಥಳ ಆಗುತ್ತೆ ಅನ್ನೋ ಕಾರಣಕ್ಕೆ ಒಪ್ಪಿಕೊಂಡರು." ಎನ್ನುತ್ತಾರೆ ಎನ್.ಎಸ್. ಶ್ರೀಧರ ಮೂರ್ತಿ
ಇದೊಂದು ವಿಷಯ ಅಂಬರೀಶ್ಗೆ ತಿಳಿದಿರಲಿಲ್ಲ
ಇಲ್ಲೊಂದು ಸಮಸ್ಯೆಯಿತ್ತು. 2004ರಲ್ಲಿ 20 ಎಕರೆ ಇದ್ದ ಸ್ಟುಡಿಯೋದಲ್ಲಿ 10 ಎಕರೆಯನ್ನು ಬಾಲಕೃಷ್ಣ ಮಕ್ಕಳು ಮಾರುವುದಕ್ಕೆ ಮುಂದಾಗಿದ್ದರು. ಅಭಿಮಾನ್ ಸ್ಟುಡಿಯೋ ಕಟ್ಟುವುದಕ್ಕೆ ದುಡ್ಡಿಲ್ಲ. ಹೀಗಾಗಿ 10 ಎಕರೆಯನ್ನು ಮಾರಿ ಬಂದ ಹಣದಿಂದ ಸ್ಟುಡಿಯೋವನ್ನು ಕಟ್ಟುತ್ತೇವೆಂದು ಸರ್ಕಾರಕ್ಕೆ ಮನವಿಯನ್ನು ಕೊಟ್ಟಿದ್ದರು. ಅದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿತ್ತು. ಈ ಸಂದರ್ಭದಲ್ಲಿ ಬಾಲಕೃಷ್ಣ ಅವರ ಮಗಳು ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಬಂದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಷಯವನ್ನು ಅಂದು ಅಂಬರೀಶ್ ಅವರಿಗೆ ಬಾಲಕೃಷ್ಣ ಅವರ ಮಗ ಗಣೇಶ್ ಹೇಳಲಿಲ್ಲ. ಒಂದು ವೇಳೆ ಹೇಳಿದ್ದರೆ, ಈ ವಿವಾದ ನಡೆಯುತ್ತಲೇ ಇರಲಿಲ್ಲ.
"ಈ ವಿಷಯ ಗೊತ್ತಾದ್ಮೇಲೆ ಭಾರತಿ ವಿಷ್ಣುವರ್ಧನ್ ಅವರು ಬಾಲಕೃಷ್ಣ ಅವರ ಇಬ್ಬರೂ ಮಕ್ಕಳನ್ನು ಕರೆಸಿ ಮಾತಾಡಿದ್ದಾರೆ. ಇದು ಕಾನೂನಿನಲ್ಲಿ ಬಿಡಿಸಲಾದ ತೊಡಕು ಆಗಿದ್ದರಿಂದ ಕೊನೆಗೆ ವಿಷ್ಣುವರ್ಧನ್ ಅವರ ಕುಟುಂಬದವರು ಇಲ್ಲಿ ಸ್ಮಾರಕ ಮಾಡುವುದಕ್ಕೆ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಮೈಸೂರಿನಲ್ಲಿ ನಮಗೆ ಬೇರೆ ಜಾಗ ಕೊಡಿ. ಅಲ್ಲಿ ಸ್ಮಾರಕ ಮಾಡುತ್ತೇವೆ ಎಂದು ಹೇಳಿದ್ದರಿಂದ ಸರ್ಕಾರ ಅಲ್ಲಿಗೆ ಜಾಗ ಕೊಟ್ಟಿತ್ತು. ಹಾಗಾಗಿ ಅಲ್ಲಿ ಸ್ಮಾರಕ ಆಗಿದೆ." ಎನ್ನುತ್ತಾರೆ ಎನ್.ಎಸ್.ಶ್ರೀಧರಮೂರ್ತಿ.
ಆದರೆ, ವಿಷ್ಣುವರ್ಧನ್ ಅವರ ಕುಟುಂಬದ ನಿರ್ಧಾರವನ್ನು ಅಭಿಮಾನಿಗಳು ಒಪ್ಪಲಿಲ್ಲ. ಎಲ್ಲಿ ಅಂತ್ಯ ಸಂಸ್ಕಾರ ಆಗಿದೆಯೋ ಅಲ್ಲಿಯೇ ಸ್ಮಾರಕ ಆಗಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಆದರೆ, ಕೋರ್ಟ್ ಭಾವನಾತ್ಮಕ ವಿಷಯಗಳಿಂದ ಫ್ಯಾಕ್ಟ್ಸ್ ಹಾಗೂ ಫಿಗರ್ಸ್ ಮೇಲೆ ತೀರ್ಪು ಕೊಡುತ್ತದೆ. ಕೋರ್ಟ್ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕೇಳಿತ್ತು. ನೀವು ಕುಟುಂಬದವರಲ್ಲ ಹಾಗೇ ಸರ್ಕಾರನೂ ಅಲ್ಲ. ನೀವು ಹೇಗೆ ಕೇಳುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿತ್ತು. ಇಲ್ಲಿಂದ ಈ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಾ ಹೋಯ್ತು.


Click it and Unblock the Notifications











