ಉಪ್ಪಿ 10 ವರ್ಷ ಡೈರೆಕ್ಷನ್ ಕ್ಯಾಪ್ ತೊಟ್ಟಿರಲಿಲ್ಲ ಯಾಕೆ? 'ಬ್ಯಾನ್' ಅಲ್ಲ ಬೇರೆ ಏನು ಕಾರಣ?
ಸ್ಯಾಂಡಲ್ವುಡ್ ಚಿತ್ರರಂಗ ಕಂಡ ಕ್ರಿಯೇಟಿವ್ ಡೈರೆಕ್ಟರ್ಗಳಲ್ಲಿ ಉಪೇಂದ್ರ ಕೂಡ ಒಬ್ಬರು. ಬೇರೆಯವರೆಲ್ಲ ಒಂದು ಹಾದಿ ಹಿಡಿದಿದ್ದರೆ, ಉಪ್ಪಿ ಇನ್ನೊಂದು ಹಾದಿ ಹಿಡಿದಿದ್ದರು. ಇವರ ನಿರ್ದೇಶನದ ಸಿನಿಮಾ ಅಂದರೆ, ಇಂದಿಗೂ ಅಭಿಮಾನಿಗಳು ಕಾದು ಕೂರುತ್ತಾರೆ. ತಲೆ ಹುಳ ಬಿಟ್ಟು ಸಿನಿಮಾವನ್ನು ಮತ್ತೆ ನೋಡುವಂತೆ ಮಾಡುವ ಟ್ಯಾಲೆಂಟ್ ಉಪ್ಪಿಯದ್ದು.
ಅದರಲ್ಲೂ ತಾವೇ ನಟಿಸಿ, ನಿರ್ದೇಶಿಸಿದ 'ಎ' ಹಾಗೂ 'ಉಪೇಂದ್ರ' ಎರಡು ಸಿನಿಮಾಗಳಿಗೆ ಈಗಲೂ ಫ್ಯಾನ್ಸ್ ಇದ್ದಾರೆ. ಆ ಕಾರಣಕ್ಕೆ ಉಪೇಂದ್ರ ಸಿನಿಮಾದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮತ್ತೆ ರೀ- ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಸಿನಿಮಾಗೆ 4K ಟಚ್ ಕೊಟ್ಟು ಉಪೇಂದ್ರ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಸೆಪ್ಟೆಂಬರ್ 20ಕ್ಕೆ ಈ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ.

'ಉಪೇಂದ್ರ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕೆಲವರು ಈ ಸಿನಿಮಾದ ವಿರುದ್ಧ ನಿಂತಿದ್ದರು ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ದವು. ಅದರಲ್ಲೂ ಉಪೇಂದ್ರ ಸಿನಿಮಾ ನಿರ್ದೇಶನ ಮಾಡುವುದನ್ನು ಬ್ಯಾನ್ ಮಾಡಿದ್ದರು. ಅದಕ್ಕೆ 10 ವರ್ಷ ಸಿನಿಮಾಗೆ ಆಕ್ಷನ್ ಕಟ್ ಹೇಳಲಿಲ್ಲ ಅನ್ನೋ ವದಂತಿಗಳು ಹಬ್ಬಿದ್ದವು. ಆ ಎಲ್ಲಾ ಗಾಳಿ ಸುದ್ದಿಗೆ ಉಪ್ಪಿ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
'ಉಪೇಂದ್ರ' ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ತೋರಿಸಲಾಗಿತ್ತು. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಕೆಲವು ವಿರೋಧ ವ್ಯಕ್ತಪಡಿಸಿದ್ದರು ಅಂತ ಸುದ್ದಿ ಹಬ್ಬಿತ್ತು. ಅದಕ್ಕೆ ಉಪ್ಪಿ ಸಿನಿಮಾ ನಿರ್ದೇಶನ ಮಾಡದಂತೆ ಬ್ಯಾನ್ ಮಾಡಲಾಗಿದೆ ಅನ್ನೋ ವದಂತಿ ಹಲವು ದಿನಗಳಿಂದ ಇತ್ತು. ಆದರೆ, ಇದ್ಯಾವುದಕ್ಕೂ ಉಪ್ಪಿ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಿಲ್ಲ. ಈಗ ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಅದೆಲ್ಲ ಸುಳ್ಳು. ನಾನು 10 ವರ್ಷ ಸಿನಿಮಾ ಮಾಡಿಲ್ಲ ಅಷ್ಟೇ. ಏನೋ ಹೇಳುತ್ತಿದ್ದರು. ಆತರ ಬ್ಯಾನ್ ಏನೂ ಆಗಿಲ್ಲ." ಎಂದು ಉಪ್ಪಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಅಷ್ಟಕ್ಕೂ ಯಾಕೆ ನಿರ್ದೇಶನ ಮಾಡಿಲ್ಲ ಅಂತಾನೂ ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ನಿಜವಾದ ಕಾರಣ ನಾನು ಎಲ್ಲೂ ಹೇಳಿಲ್ಲ. ಮತ್ತೆ ನಾನು ಯಾರಿಗೂ ನೋವು ಮಾಡುವುದಕ್ಕೆ ಇಷ್ಟವಿಲ್ಲ. ಇಲ್ಲಿ ಟೆಕ್ನಿಷಿಯಲ್ ಪರಿಸ್ಥಿತಿ ಹೇಗಿರುತ್ತೆ ಅಂದರೆ, ಇಲ್ಲಿ ಆರ್ಟಿಸ್ಟ್ಗಳು ಕಷ್ಟ ಪಡಲ್ಲ. ಕಷ್ಟ ಪಡಲ್ಲ ಅಂದರೆ, ಸೇಫರ್ ಜೋನ್ನಲ್ಲಿ ಇರುತ್ತಾರೆ. ಯಾಕಂದ್ರೆ, ನನಗೆ ಒಮ್ಮೆ ಅಂಬರೀಷ್ ಅವರೇ ಹೇಳಿದ್ದರು. ಡೈರೆಕ್ಟ್ರೆ ಎರಡು ಸಿನಿಮಾ ಪ್ಲಾಪ್ ಆದರೆ, ನೀವು ಇರೋದಿಲ್ಲ ಎಂದಿದ್ದರು. ಹೀರೋಗಳು 10 ಸಿನಿಮಾ ಪ್ಲಾಪ್ ಆದರೂ 11ನೇ ಸಿನಿಮಾ ಮಾಡುತ್ತಿರುತ್ತಾರೆ. ಬ್ರಹ್ಮನಿಗೆ ಪೂಜೆ ಇಲ್ಲ ಅಂತಾರಲ್ಲ ಆತರ. ನೀವು ಕಥೆ ಬರೆದು, ಡೈರೆಕ್ಷನ್ ಮಾಡಿ ಅದರೊಳಗೆ ಇಳಿದಾಗ ಸಿಕ್ಕಾಪಟ್ಟೆ ಕೆಲಸ ಇರುತ್ತೆ. 24 ಗಂಟೆ ಸಾಲುವುದಿಲ್ಲ. ಅದರೊಳಗೆ ಇರುತ್ತೇವೆ. ಈತರ ಇದ್ದಾಗ ಬ್ಯುಸಿನೆಸ್ ಏನೂ ತಲೆ ಓಡುವುದಿಲ್ಲ." ಎಂದು ಉಪ್ಪಿ ಸುದೀರ್ಘ ಉತ್ತರ ಕೊಟ್ಟಿದ್ದಾರೆ.
ಸಿನಿಮಾ ನಿರ್ದೇಶನ ಅಂತ ಇಳಿದರೆ, ಸಮಯ ಹೆಚ್ಚು ಬೇಕು. ಬೇರೆ ಏನನ್ನೂ ಮಾಡುವುಕ್ಕೆ ಆಗುವುದಿಲ್ಲ ಎಂದಿದ್ದಾರೆ. ತನ್ನ 10 ವರ್ಷಗಳನ್ನು ಡೈರೆಕ್ಷನ್, ಕಥೆ ಅಂತಾನೇ ಕಳಿದಿದ್ದು, 'ತರ್ಲೆನನ್ಮಗ' ದಿಂದ ಹಾಲಿವುಡ್ವರೆಗೂ ನಿರ್ದೇಶನ, ಕಥೆ ಅಂತ ಮಾಡಿ ನಿತ್ರಾಣನಾಗಿದ್ದೆ ಎಂದೂ ಹೇಳಿಕೊಂಡಿದ್ದಾರೆ. "ತರ್ಲೆನನ್ಮಗ ದಿಂದ ಹಾಲಿವುಡ್ವರೆಗೂ ಹಾಗೇ ಆಯ್ತು. ಅದರಲ್ಲೂ 'H2O', ರಕ್ತ ಕಣ್ಣೀರು, ಹಾಲಿವುಡ್ ಎಲ್ಲವೂ ನನ್ನದೆ ಸಬ್ಜೆಟ್, ನನ್ನದೆ ಕಥೆ. ಬೇರೆ ನಿರ್ದೇಶಕರು ಮಾಡಿದ್ರು ಅಷ್ಟೇ. ಬೇಡ ಬೇರೆಯವರಿಗೆ ಕೋಡೋಣ. ನಾನು ಆರ್ಟಿಸ್ಟ್ ಆಗಿ ಇರೋಣ ಅಂತಾನೇ ಕಥೆಗಳನ್ನು ಬೇರೆಯವರಿಗೆ ಕೊಟ್ಟಿದ್ದು." ಎಂದು ಉಪೇಂದ್ರ ಹೇಳಿದ್ದಾರೆ.
ಹಾಗೇ "ಉಪೇಂದ್ರ ಆದ್ಮೇಲೆ ಎಲ್ಲರೂ ಅದೇ ಎಕ್ಸ್ಪೆಕ್ಟ್ ಮಾಡುವುದಕ್ಕೆ ಶುರು ಮಾಡಿದ್ದರು. ಉಪೇಂದ್ರ ಅಂತಹದ್ದೇ ಎಷ್ಟು ಸಿನಿಮಾ ಮಾಡುವುದಕ್ಕೆ ಸಾಧ್ಯ? ಒಂದೇ 'ಎ' ಸಿನಿಮಾ ಮಾಡಬಹುದು. ಒಂದು 'ಓಂ' ಮಾಡಬಹುದು. ಒಂದು 'ಉಪೇಂದ್ರ' ಮಾಡಬಹುದು. ಅವೆಲ್ಲ ಎಕ್ಸ್ಕ್ಲೂಸಿವ್ ಸಬ್ಜೆಕ್ಟ್ಗಳು. ಅದೇ ಮಾಡು ಅನ್ನೋದು ಇದೆಯಲ್ಲ ಕಷ್ಟ ಆಗಿತ್ತು. ಏನು ಮಾಡುವುದಕ್ಕೆ ಬರುವುದಿಲ್ಲ ಆ ಇಮೇಜ್ ಹಾಗೆ ಬಂದಿತ್ತು." ಎಂದು ಉಪೇಂದ್ರ ಹೇಳಿದ್ದಾರೆ.


Click it and Unblock the Notifications











