'ಮೆಜೆಸ್ಟಿಕ್' ಚಿತ್ರಕ್ಕಾಗಿ ದರ್ಶನ್ಗೆ ಅವಕಾಶ ಕೊಟ್ಟಿದ್ಯಾರು? 7 ವರ್ಷಗಳಿಂದ ಈ ಚರ್ಚೆ ಯಾಕೆ?
ದರ್ಶನ್ 25 ವರ್ಷಗಳ ಸಿನಿಮಾ ಜರ್ನಿಯನ್ನು ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಸಂಭ್ರಮಿಸಲಾಗಿದೆ. ಚಿತ್ರರಂಗದ ತಾರೆಯರು, ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮ್ಮ ನೆಚ್ಚಿನ ನಟ ದರ್ಶನ್ ಬಗ್ಗೆ ಮನಸಾರೆ ಹೊಗಳಿದ್ದರು. ಇದೇ ವೇಳೆ ದರ್ಶನ್ ತಮ್ಮ ಕಷ್ಟದ ದಿನಗಳು, ಚಿತ್ರರಂಗಕ್ಕೆ ಬಂದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ದರ್ಶನ್ಗೆ ವಿವಾದಗಳು ಹೊಸದೇನೂ ಅಲ್ಲ. ಅವರು ಏನೇ ಮಾತಾಡಿದರೂ ಅಲ್ಲಿ ಯಾವುದಾದರೂ ಒಂದು ವಿವಾದ ಸೃಷ್ಟಿಯಾಗುತ್ತೆ. 25 ವರ್ಷದ ಸಿನಿ ಜರ್ನಿಯಲ್ಲೂ ದರ್ಶನ್ ವೇದಿಕೆ ಮೇಲೆ ಆಡಿದ ಮಾತು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೊಂದು "ಇವತ್ತು ಇವಳು.. ನಾಳೆ ಅವಳು.." ಹೇಳಿದ್ದು ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಅದೇ ಇನ್ನೊಂದು ಕಡೆ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ವೈರತ್ವದ ಬಗ್ಗೆನೂ ಚರ್ಚೆಯಾಗುತ್ತಿದೆ.

ಒಂದು ಕಾಲದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕುಚಿಕು ಗೆಳೆಯರಂತೆ ಇದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರ ಸ್ನೇಹದ ಬಳಿಕ ಸಿನಿಪ್ರಿಯರಿಗೆ ನೆನಪಾಗುತ್ತಿದ್ದದ್ದೇ ಈ ಇಬ್ಬರು. ಆದರೆ, ಒಂದು ದಿನ ದರ್ಶನ್ "ನಾವಿಬ್ಬರು ಇನ್ಮುಂದೆ ಸ್ನೇಹಿತರಲ್ಲ" ಅಂತ ಕಡ್ಡಿ ಮುರಿದಂತೆ ಟ್ವೀಟ್ ಮಾಡಿ ಇಬ್ಬರ ಫ್ರೆಂಡ್ಶಿಫ್ಗೆ ತಿಲಾಂಜಲಿ ಇಟ್ಟಿದ್ದರು.
ಇಲ್ಲಿಂದ ಒಂದು ಕಡೆ ದರ್ಶನ್ ಅಭಿಮಾನಿಗಳು, ಇನ್ನೊಂದು ಕಿಚ್ಚ ಸುದೀಪ್ ಅಭಿಮಾನಿಗಳು ಪರಸ್ಪರ ಕಾದಟಕ್ಕೆ ಇಳಿದುಬಿಟ್ಟಿದ್ದಾರೆ. ಮತ್ತೆ ಕೆಲವ ಅಭಿಮಾನಿಗಳು ಇಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ. ದರ್ಶನ್ 25 ವರ್ಷದ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ 'ಮೆಜೆಸ್ಟಿಕ್' ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿದ್ಯಾರು? ಅನ್ನೋದನ್ನು ಹೇಳಿದ್ದರು. ಅದೇ ಕಿಚ್ಚನ ಅಭಿಮಾನಿಗಳ ಮುನಿಸಿಗೆ ಕಾರಣವಾಗಿದೆ.
'D25 ಬೆಳ್ಳಿ ಪರ್ವ' ಕಾರ್ಯಕ್ರಮದಲ್ಲಿ ತನಗೆ ಅವಕಾಶ ಕೊಟ್ಟವರ ಬಗ್ಗೆ ಮಾತಾಡಿದ್ದರು. "ನನ್ನನ್ನು ಬೈಯ್ಯುವ, ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ ಹಾಗೂ ಯೋಗ್ಯತೆ ಇರುವುದು ಕೇವಲ ರಾಮಮೂರ್ತಿ ಅವರಿಗೆ ಮಾತ್ರ.. ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿಎನ್ ಸತ್ಯ ಅವರನ್ನು ಕೂಡಿಸಿದರು." ಎಂದು ಹೇಳಿದ್ದರು. ಇದು ಕಿಚ್ಚನ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಹೀಗಾಗಿ ಮೆಜೆಸ್ಟಿಕ್ ಬಗ್ಗೆ ಮಾತಾಡಿದ ನಿರ್ಮಾಪಕರ ಹಳೆಯ ತುಣುಕುಗಳನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ 'ಮೆಜೆಸ್ಟಿಕ್'ಗೆ ನನಗೆ ಮೊದಲು ಆಫರ್ ಬಂದಿತ್ತು. ಆದರೆ, ಆ ವೇಳೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ನಾನೇ ದರ್ಶನ್ ಹೆಸರನ್ನು ನಿರ್ಮಾಪಕರಿಗೆ ಹೇಳಿದ್ದೆ ಎಂದು ಹೇಳಿದ್ದರು. ಇದು ದರ್ಶನ್ಗೆ ನೋವುಂಟು ಮಾಡಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಟ್ವೀಟ್ ಮಾಡಿ ಇಬ್ಬರ ಫ್ರೆಂಡ್ಶಿಪ್ ಅನ್ನು ಮುರಿದು ಕೊಂಡಿದ್ದರು. 2017ರಿಂದ ಇಲ್ಲಿವರೆಗೂ ಇಬ್ಬರೂ ಒಂದಾಗಲು ಮುಂದೆ ಬಂದೇ ಇಲ್ಲ. ಆದರೆ, ಕಳೆದ 7 ವರ್ಷಗಳಿಂದ ದರ್ಶನ್ಗೆ ಅವಕಾಶ ಕೊಟ್ಟಿದ್ದು ಯಾರು? ಅನ್ನುವ ಪ್ರಶ್ನೆ ಮೇಲೆನೇ ಚರ್ಚೆ ನಡೆಯುತ್ತಿದೆ.
ಸದ್ಯ ದರ್ಶನ್ ಹೇಳಿಕೆಗೆ ಕಿಚ್ಚ ಸುದೀಪ್ ಫ್ಯಾನ್ಸ್ ಟಕ್ಕರ್ ಕೊಡುವುದಕ್ಕೆ ಶುರು ಮಾಡಿದ್ದಾರೆ. 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸಂದರ್ಶನದಲ್ಲಿ ಸುದೀಪ್ ಅವರೇ ದರ್ಶನ್ ಹೆಸರು ಸೂಚಿಸಿದ್ದು ಎಂದು ಸಂದರ್ಶನ ನೀಡಿದ್ದರು. ಜೊತೆಗೆ ಅಣಜಿ ನಾಗರಾಜ್ ಕೂಡ ಸುದೀಪ್ಗೆ 'ಮೆಜೆಸ್ಟಿಕ್' ಸಿನಿಮಾ ಮಾಡಿದ್ದು ಎಂದಿದ್ದರು. ಹಾಗೇ ನಿರ್ಮಾಪಕರಾಗಿದ್ದ ಎಂ ಜಿ ರಾಮಮೂರ್ತಿ, ದಿವಂಗತ ನಿರ್ದೇಶಕ ಪಿ ಎನ್ ಸತ್ಯ ಮಾತ್ರ ಇದನ್ನು ಒಪ್ಪಿರಲಿಲ್ಲ. ಈ ಎಲ್ಲಾ ತುಣುಕುಗಳನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.
ಇದೆಲ್ಲವನ್ನೂ ಗಮನಿಸಿದರೆ, 'ಮೆಜೆಸ್ಟಿಕ್' ಸಿನಿಮಾಗೆ ದರ್ಶನ್ ಅವಕಾಶ ಕೊಟ್ಟಿದ್ದು ಯಾರು? ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಹಾಗೆ ಕಾಣಿಸುತ್ತಿಲ್ಲ. ಆದರೆ, 'ಮೆಜೆಸ್ಟಿಕ್' ವಿಷಯ ಬಂದಾಗಲೆಲ್ಲಾ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಕಿತ್ತಾಟ ತಾರಕ್ಕೇರುತ್ತೆ.


Click it and Unblock the Notifications











