ಅಗಲುವ ದಿನ ಬೇಸರದಲ್ಲಿ ಇದ್ದರು ಅಣ್ಣಾವ್ರು; ಅದು ಪುತ್ರಿ ಪೂರ್ಣಿಮಾ, ಅಪ್ಪು ಇಬ್ಬರಿಗೂ ಗೊತ್ತಿತ್ತು!
ವರನಟ ಡಾ.ರಾಜ್ಕುಮಾರ್ ಅಗಲಿ 19 ವರ್ಷಗಳಾಗಿವೆ. ಹೀಗಿದ್ದರೂ, ಅವರ ಬಗ್ಗೆ ಒಂದಲ್ಲ ಒಂದು ಇಂಟ್ರೆಸ್ಟಿಂಗ್ ವಿಷಯಗಳು ಸಿಗುತ್ತಲೇ ಇರುತ್ತವೆ. ಅವರ ಸಿನಿಮಾ ಬಗ್ಗೆ, ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಣ್ಣಾವ್ರ ಜೊತೆ ಒಬ್ಬೊಬ್ಬರದ್ದೂ ಒಂದೊಂದು ಅನುಭವ. ಅದನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆ ವೇಳೆ ಅಭಿಮಾನಿಗಳಿಗೆ ಅಣ್ಣಾವ್ರು ನೆನಪಾಗುತ್ತಲೇ ಇರುತ್ತಾರೆ.
ಡಾ.ರಾಜ್ಕುಮಾರ್ ಎನ್ನುವ ದಂತಕಥೆಯ ಹಿಂದೆ ಸಾಕಷ್ಟು ಕಹಾನಿಗಳು ಇವೆ. ಅವರು ಹುಟ್ಟಿದ ಕ್ಷಣದಿಂದ ಹಿಡಿದು ಅಗಲುವ ಕೊನೆ ಕ್ಷಣದವರೆಗೂ ಇಂಟ್ರೆಸ್ಟಿಂಗ್ ಕಥೆಗಳು ಇವೆ. ಅವರನ್ನು ಹತ್ತಿರದಿಂದ ಬಲ್ಲವರು ಆ ಘಟನೆಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದೂ ಇದೆ. ಅಣ್ಣಾವ್ರು ಅಗಲುವ ಕ್ಷಣದಲ್ಲಿ ಅವರ ಪುತ್ರಿ ಪೂರ್ಣಿಮಾ ಕೂಡ ಜೊತೆಯಲ್ಲಿಯೇ ಇದ್ದರು. ಆ ದಿನ ಏನಾಯ್ತು ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

2006, ಏಪ್ರಿಲ್ 12 ಎಂದಿನಂತೆ ಅಣ್ಣಾವ್ರು ಆಕ್ಟಿವ್ ಆಗಿಯೇ ಇದ್ದರು. ಪ್ರತಿ ನಿತ್ಯ ಏನು ನಡೆಯುತ್ತಿತ್ತೋ? ಅದೆಲ್ಲವೂ ಅಂದೂ ನಡೆದಿತ್ತು. ಅಣ್ಣಾವ್ರು ವಾಕಿಂಗ್ ಮಾಡಿ, ತಿಂಡಿ ತಿಂದು ಮನೆಯಲ್ಲಿಯೇ ಇದ್ದರು. ಆದರೆ, ಅವತ್ತು ಸ್ವಲ್ಪ ಬೇಸರದಲ್ಲಿ ಇದ್ದರು. ಅಂದು ಪೂರ್ತಿ ಪೂರ್ಣಿಮಾ ಹಾಗೂ ಪುನೀತ್ ರಾಜ್ಕುಮಾರ್ ಇಬ್ಬರೂ ಗಮನಿಸಿದ್ದರು. ಅಷ್ಟಕ್ಕೂ ಅಂದು ಏನಾಯ್ತು? ತಿಳಿಯಲು ಮುಂದೆ ಓದಿ.
ಶಿವಣ್ಣ, ಪುನೀತ್ ಇರಲಿಲ್ಲ
ಅಣ್ಣಾವ್ರು ಅಗಲುವ ದಿನ ಪೂರ್ಣಿಮಾ ತಮ್ಮ ಮಕ್ಕಳು ಓದುತ್ತಿದ್ದ ಸ್ಕೂಲ್ಗೆ ಹೋಗಿದ್ದರು. ಅವರ ರಿಸಲ್ಟ್ ಬಂದಿದ್ದರಿಂದ ಅಪ್ಪನ ಮನೆಗೆ ಹೋಗಿ. ಅಲ್ಲಿ ಸ್ವಲ್ಪ ಹೊತ್ತು ಇದ್ದು, ಮನೆಗೆ ಹೋಗುವುದಾಗಿ ಅಂದುಕೊಂಡಿದ್ದರು. "ನನ್ನ ಮಕ್ಕಳದ್ದು ರಿಸಲ್ಟ್ ಬಂದಿತ್ತು. ಅವತ್ತು ನಾನು ಸ್ಕೂಲ್ನಿಂದ ಬಂದಿದ್ದೆ. ನಾನು ಮನೆಗೆ ಬರಬೇಕಿತ್ತು. ಆದರೆ, ಯಾಕೋ ಅಪ್ಪಾಜಿ ಹತ್ತಿರ ಹೋಗಬೇಕು ಅಂತ ಅನಿಸಿತ್ತು. ನನ್ನ ಮಗ ಸಂಸ್ಕೃತ ಪರೀಕ್ಷೆ ಬರೆದಿದ್ದ. ತುಂಬಾನೇ ಚೆನ್ನಾಗಿ ಮಾರ್ಕ್ಸ್ ತೆಗೆದುಕೊಂಡಿದ್ದ. ಅದನ್ನು ನಿಮ್ಮ ತಂದೆಯವರಿಗೆ ಹೇಳಿ ಅಂತ ಟೀಚರ್ ಹೇಳಿದ್ದರು. ಅದನ್ನು ಹೇಳಿಬಿಡೋಣ ಅಂತ ಅಲ್ಲಿಗೆ ಹೋಗಿದ್ದೆ." ಎನ್ನುತ್ತಾರೆ ಪೂರ್ಣಿಮಾ.

ಅಣ್ಣಾವ್ರು ಅಗಲುವ ದಿನ ತುಂಬಿ ತುಳುಕುತ್ತಿದ್ದ ಮನೆ ಖಾಲಿಯಾಗಿತ್ತು. ಯಾಕಂದ್ರೆ ಶಿವಣ್ಣನ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರಿಂದ ಮನೆಯಲ್ಲಿ ಪಾರ್ವತಮ್ಮ, ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ ಹಾಗೂ ಅವರ ಅತ್ತೆಯಷ್ಟೇ ಮನೆಯಲ್ಲಿದ್ದರು. "ನಾನು ಮನೆಗೆ ಹೋದಾಗ ಅಪ್ಪು ಅಶ್ವಿನಿ ಎದುರುಗಡೆ ಸಿಕ್ಕಿದ್ದರು. ಅವರು ಆಸ್ಪತ್ರೆಗೆ ಚೆಕಪ್ಗೆ ಹೊರಟಿದ್ದರು. ಅವನು ಅಲ್ಲೇ ಹೇಳಿ ಹೋಗುತ್ತಿದ್ದ. ಆಗ ಆಸ್ಪತ್ರೆಗೆ ಹೋಗಿ ಬರ್ತೀನಿ. ಬಂದ್ಮೇಲೆ ಅಪ್ಪಾಜಿಯನ್ನು ಕರೆದುಕೊಂಡು ಊಟಕ್ಕೆ ಹೋಟೆಲ್ಗೆ ಹೋಗೋಣ ಅಂತ ಹೇಳಿದ. ಯಾಕಂದ್ರೆ, ಅವತ್ತು ಯಾರೂ ಇರಲಿಲ್ಲ. ಶಿವಣ್ಣನ ಶೂಟಿಂಗ್ ನಡೆಯುತ್ತಿತ್ತು. ಅವತ್ತು ಎಲ್ಲರೂ ಹೊರಟು ಹೋಗಿದ್ದರು. ಅಪ್ಪಾಜಿ ಮನೆಯಿಂದಲೂ ಮಕ್ಕಳೆಲ್ಲರೂ ಹೊರಟು ಹೋಗಿದ್ದರು." ಎಂದು ಆ ದಿನವನನ್ನು ನೆನಪಿಸಿಕೊಂಡಿದ್ದಾರೆ.
ಅಣ್ಣಾವ್ರು ಬೇಸರದಲ್ಲಿ ಇದ್ದರು
ಅಗಲುವ ದಿನ ಅಣ್ಣಾವ್ರು ಬೇಸರದಲ್ಲಿ ಇದ್ದರಂತೆ. ಮನೆಯಲ್ಲಿ ಯಾರೂ ಇರಲಿಲ್ಲ ಎನ್ನುವ ಕಾರಣವೋ? ಇಲ್ಲ ಅವರ ಮನಸ್ಸಿನಲ್ಲಿ ಬೇರೆ ಏನಾದರೂ ಇತ್ತಾ? ಗೊತ್ತಿಲ್ಲ. "ಅವತ್ತು ಅಪ್ಪಾಜಿ ಸ್ವಲ್ಪ ಅಪ್ಸೆಟ್ ಆಗಿದ್ದರು. ಎಲ್ಲರೂ ಹೋಗಿದ್ದಕ್ಕೆ ಸ್ವಲ್ಪ ಅಪ್ಸೆಟ್ ಆಗಿದ್ದರು. ಅದು ಅಪ್ಪುಗೆ ಗೊತ್ತಿತ್ತು. ಅವನು ನನ್ನನ್ನು ನೋಡಿ, ಅಪ್ಪಾಜಿ ಒಂಥರಾ ಇದೆ. ನಾನು ಬಂದ್ಬಿಡ್ತೀನಿ. ಆಮೇಲೆ ಅಮ್ಮ ಅಪ್ಪಾಜಿಯನ್ನು ಕರ್ಕೊಂಡು ಊಟಕ್ಕೆ ಹೋಗೋಣ ಅಂತ ಹೇಳಿದ. ಒಳಗಡೆ ಹೋಗಿ ಅಮ್ಮನ ಜೊತೆ ಕೂತು ಹಾಲ್ನಲ್ಲಿ ನಾನು ಮಾತಾಡುತ್ತಿದ್ದೆ. ನಾನು ಲಕ್ಷ್ಮಿ ಅಮ್ಮ ಮೂವರು ಮಾತಾಡುತ್ತಾ ಕೂತಿದ್ವಿ." ಎಂದು ಪುತ್ರಿ ಪೂರ್ಣಿಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಣ್ಣಾವ್ರು ಅಗಲುವ ದಿನ ನಡೆದ ಘಟನೆಯನ್ನು ಇಂಚು ಇಂಚಾಗಿ ಟೋಟಲ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅರ್ಥ ಗಂಟೆ ಆದ್ಮೇಲೆ ನಮ್ಮ ಅತ್ತೆ ಟಿವಿ ನೋಡುತ್ತಿದ್ದರು. ನಾನು ಒಳಗಡೆ ಹೋಗಿದ್ದೆ ಏನೋ ಇಟ್ಟು ಬರುವುದಕ್ಕೆ. ಆಗ ಅಪ್ಪಾಜಿ ನಡೆದುಕೊಂಡು ಹೋಗುತ್ತಿದ್ದರು. ಅಪ್ಪು ಮಗಳು ಆಚೆ ಹೋಗುವುದಕ್ಕೆ ಓಡಿ ಬಂದಳು. ಅವಳನ್ನು ಬಿಡುವುದಕ್ಕೆ ಮತ್ತೆ ಅವರು ಡೋರ್ವರೆಗೂ ಬಂದರು. ಅಲ್ಲಿಂದ ಅಪ್ಪಾಜಿಯನ್ನು ಕರೆದುಕೊಂಡು ಬಂದು ನಾನು ಹಾಲ್ನಲ್ಲಿ ಕೂರಿಸಿದೆ. ಟಿವಿ ಹಾಕು ಅಂತ ಹೇಳಿದರು ಹಾಕಿ ಕೊಟ್ಟಿದ್ದೆ. ಅಮ್ಮ ಏನೋ ಕೊಟ್ಟಿದ್ದರು. ಅದನ್ನು ಕಬೋರ್ಡ್ನಲ್ಲಿ ಇಟ್ಟು ಬರುವಾಗ ನೋಡಿದ್ದಷ್ಟೇ. ಒಂಥರಾ ಅವರು ಮಲಗಿಕೊಂಡು ಉಸಿರು ಎಳೆದುಕೊಳ್ಳುತ್ತಿದ್ದರು. ಆಗ ಅವರ ಹತ್ತಿರ ಹೋಗುವುದಕ್ಕೆ ಭಯ ಆಗಿತ್ತು. ಜೋರಾಗಿ ಕಿರುಚಿದೆ. ಎಲ್ಲರೂ ಓಡಿ ಬಂದರು." ಎನ್ನುತ್ತಾರೆ.
ಅತ್ತೆ ಕಿವಿಯಲ್ಲಿ ಏನೋ ಹೇಳಿದರು?
"ನಮ್ಮ ಅತ್ತೆಗೆ ಏನು ಅನಿಸಿತೋ ಏನೋ. ಕಿವಿಯಲ್ಲಿ ಹೋಗಿ ಏನೋ ಹೇಳಿದರು. ನನಗೆ ಏನು ಮಾಡಬೇಕೋ ಗೊತ್ತಾಗಲೇ ಇಲ್ಲ. ನನಗೆ ತಲೆಯೇ ಓಡಲಿಲ್ಲ. ಅಪ್ಪಾಜಿ ಇಲ್ಲ ಹೋಗಿದಾರೆ ಅಂತ ಅನಿಸಿತ್ತು. ಅಪ್ಪಾಜಿಗೆ ರೆಗ್ಯೂಲರ್ ಆದ ರೀತಿ ಇಲ್ಲ ಅದು ಅಂತ ಅನಿಸಿತ್ತು. ಏನೋ ಬೇರೆ ಆಗಿದೆ ಅಂತ ಅನಿಸಿಬಿಟ್ಟಿತ್ತು. ಆಮೇಲೆ ಡಾಕ್ಟರ್ ಬಂದರು. ಕರೆದುಕೊಂಡು ಹೋದರು." ಎನ್ನುತ್ತಾರೆ.
ಇಚ್ಛಾಮರಣಿ ಆಗಿದ್ದರೇ ಅಣ್ಣಾವ್ರು?
"ಚಿಕ್ಕಪ್ಪ ಹೋದ ಮೇಲೆ ಅವರ ಮನಸ್ಸಿನಲ್ಲಿ ಏನೋ ಇತ್ತು. ಯಾವಾಗಲೂ ಅವರ ಫೋಟೋ ನೋಡೋರು. ಚಿಕ್ಕಪ್ಪನ ಫೋಟೋ ಇದ್ದರೆ ನೋಡುತ್ತಾ ಇರೋರು. ಆ ಫೋಟೊವನ್ನು ತೆಗಿಸಿಬಿಡೋಣ ಅಂತ ಓಡಾಡುತ್ತಿದ್ವಿ. ಆಗ ಅವರು ನನ್ನನ್ನು ಕರೆದು ಹೇಳಿದರು. ಅದನ್ನು ನೋಡಿದರೆ, ನನಗೆ ಏನಾದರೂ ಅನಿಸುತ್ತೆ ಅಂತಾನಾ? ಅಂದರು. ಇಲ್ಲ ಕಂದ ನನಗೆ ಏನೂ ದು:ಖವಿಲ್ಲ. ನಾನು ಧೈರ್ಯವಾಗಿ ಇದ್ದೀನಿ. ಯಾಕಂದ್ರೆ, ನಾವು ಒಂದು ದಿನ ಹಾಗೇ ಹೋಗಬೇಕು. ನಾವೇನು ಶಾಶ್ವತ ಅಲ್ವಲ್ಲ. ಅವನು ಹೋಗಿದ್ದಾನೆ. ನಂದೊಂದು ಟೈಮ್ ಬರುತ್ತೆ ಅಂತ ಹೇಳಿದ್ದರು ಅಷ್ಟೇ. ಅಪ್ಪಾಜಿ ಹಾಗೆ ಮಾತಾಡಿದಾಗ ನನಗೆ ಸಿಕ್ಕಾಪಟ್ಟೆ ಬೇಸರ ಆಗಿತ್ತು" ಎಂದಿದ್ದಾರೆ ಪುತ್ರಿ ಪೂರ್ಣಿಮಾ.
ಅಂದು ಅಣ್ಣಾವ್ರು ಪ್ರತಿ ದಿನದಂತೆ ವಾಕಿಂಗ್ ಮಾಡಿದ್ದರು. ತಿಂಡಿಯನ್ನು ಸೇವಿಸಿದ್ದರು. ಅವತ್ತು ಪಾರ್ವತಮ್ಮ ಅವರಿಗೆ ಏನೋ ಹೇಳಿದ್ದರಂತೆ ಅದನ್ನು ನೆನಪಿಸಿಕೊಂಡಿದ್ದಾರೆ. "ಅವತ್ತು ಅಮ್ಮನಿಗೆ ಹೇಳಿದ್ದಾರೆ ನೋಡಿ. ಆಸ್ಪತ್ರೆಗೆ ಹೋಗಿ ಬಂದ್ಮೇಲೆ ಏನೋ ಕೇಳಿದ್ದಕ್ಕೆ ಎನಿ ಟೈಂ ಅಂತನೋ ಏನೋ ಹೇಳಿದ್ದರಂತೆ. ಅದ್ಯಾಕೆ ಹೇಳಿದ್ದರೋ ಏನೋ ಗೊತ್ತಾಗಿಲ್ಲ. ಅಮ್ಮನ ಹತ್ತಿರ ಇನ್ನೂ ಏನೇನೋ ಹೇಳಿದ್ದಾರೆ. ಅವರ ಮನಸ್ಸಿನಲ್ಲಿ ಏನಿತ್ತೋ ಏನೋ. ಯಾವುದನ್ನು ನೋಡಬಾರದು ಅಂತಿದ್ದಿನೋ ಅದನ್ನು ನೋಡಬಾರದು. ಅದನ್ನು ಒಬ್ಬರಿಗೆ ಹೇಳಿ ಮನಸ್ಸನ್ನು ಕೆಡಿಸುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ನಮ್ಮ ಅಮ್ಮನಿಗೆ ಹೇಳುತ್ತಿದ್ದರು. ಅಪ್ಪುದು ನೀನು ನೋಡು. ಇನ್ನೂ ನೋಡು. ನಾನು ನೋಡಿದ್ದೀನಿ, ತೃಪ್ತಿಯಾಗಿದೆ ಎಂದಿದ್ದರಂತೆ. ಅವತ್ತು ಅಮ್ಮ ಹೇಳಿಕೊಂಡು ಅಳುತ್ತಿದ್ದರು." ಎಂದು ಸಂದರ್ಶನದಲ್ಲಿ ಪೂರ್ಣಿಮಾ ಹೇಳಿದ್ದಾರೆ.
ಕೆಲವರು ಅಣ್ಣಾವ್ರ ಇಚ್ಛಾಮರಣಿಯಾಗಿದ್ದರು ಎಂದು ಹೇಳುವುದೂ ಇದೆ. ಯೋಗವನ್ನು ಸಿದ್ಧಿಸಿಕೊಂಡಿದ್ದ ಅಣ್ಣಾವ್ರಿಗೆ ಆ ಶಕ್ತಿಯಿತ್ತು ಎಂದೂ ಹೇಳುತ್ತಾರೆ. "ಮಾಸ್ಟ್ರು ಮೊದಲು ಕೆಲವು ಆಸಗಳನ್ನು ಮಾಡಿಸುತ್ತಿದ್ದರು. ಅದಾದ್ಮೇಲೆ ಅಪ್ಪಾಜಿಗೆ ಮಂಡಿ ನೋವು ಶುರುವಾಗಿದ್ದರಿಂದ ರೆಗ್ಯೂಲರ್ ಆಗಿ ಮಾಡುವುದಕ್ಕೆ ಆಗಲಿಲ್ಲ. ಆದರೂ ಮಧ್ಯೆ ಮಧ್ಯೆ ನಮ್ಮ ತಂದೆ ಅವರನ್ನು ನೋಡ್ಮೇಕು ಅಂತ ಕರೆಸುತ್ತಿದ್ದರು. ಅದೇ ನೋಡಿ ಗೊತ್ತಿಲ್ಲ. ಯಾಕೆ ಏನು ಅಂತ. ಮನಸ್ಸಿನಲ್ಲಿ ಏನಿತ್ತೋ" ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











