ರವಿಚಂದ್ರನ್ಗೆ ಹಂಸಲೇಖ ಸಾಕು ಅಂತ ಅನಿಸಿದ್ದು ಯಾವಾಗ? ಏನದು ಘಟನೆ?
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದ ಬ್ರಹ್ಮ ಹಂಸಲೇಖ ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ನೋಡುವುದಕ್ಕೆ ಇಂದಿಗೂ ಇಷ್ಟಪಡುವ ಅಭಿಮಾನಿಗಳಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದ ಹಾಡುಗಳೇನು ಕಮ್ಮಿಯಿಲ್ಲ. ಈ ಜೋಡಿ ಒಟ್ಟಿಗೆ ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದಲ್ಲೂ ಎರಡರಿಂದ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದಿಗೂ ಆ ಹಾಡುಗಳನ್ನು ಮೆಲುಕು ಹಾಕುವ ಸಂಗೀತ ಪ್ರೇಮಿಗಳಿದ್ದಾರೆ.
'ನಾನು ನನ್ನ ಹೆಂಡ್ತಿ' ಸಿನಿಮಾದಿಂದ ರವಿಚಂದ್ರನ್ ಹಾಗೂ ಹಂಸಲೇಖ ಸ್ನೇಹ ಗಟ್ಟಿಯಾಗುತ್ತಾ ಹೋಯ್ತು. 'ಪ್ರೇಮಲೋಕ' ಇತಿಹಾಸವನ್ನೇ ಸೃಷ್ಟಿಸಿತ್ತು. 'ರಣಧೀರ', 'ಅಂಜದ ಗಂಡು' ಹೀಗೆ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಹೋಯ್ತು. ರವಿಚಂದ್ರನ್ ಹಾಗೂ ಹಂಸಲೇಖ ಕಾಂಬಿನೇಷನ್ ಅಂದರೆ, ಸಂಗೀತ ಪ್ರೇಮಿಗಳು ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಅಂತ ಫಿಕ್ಸ್ ಆಗಿಬಿಡುತ್ತಿದ್ದರು.

ಒಬ್ಬರನ್ನು ಬಿಟ್ಟು ಒಬ್ಬರು ಸಿನಿಮಾವನ್ನೇ ಮಾಡದ ಈ ಜೋಡಿ ಒಂದು ದಿನ ಬೇರೆಯಾಗುತ್ತಾರೆ. ಅದೂ ಯಾರೇ ನೀನು ಚೆಲುವೆಯಂತ ಸೂಪರ್ ಹಿಟ್ ಸಿನಿಮಾ ಕೊಟ್ಟ ಬಳಿಕ. ಅಷ್ಟಕ್ಕೂ ಆ ಸಿನಿಮಾ ತೆರೆಕಂಡು ಯಶಸ್ಸು ಗಳಿಸಿದ ಬಳಿಕ ಏನಾಯ್ತು? ರವಿಚಂದ್ರನ್ಗೆ ಅಂದು ಹಂಸಲೇಖ ಸಾಕು ಎಂದು ಅನಿಸಿದ್ದು ಏಕೆ? ಇದನ್ನು ಖುದ್ದು ಕ್ರೇಜಿಸ್ಟಾರ್ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅದರ ಝಲಕ್ ಇಲ್ಲಿದೆ.
20 ಟ್ಯೂನ್ ರಿಜೆಕ್ಟ್ ಮಾಡಿದ್ದೇಕೆ?
"ನನಗೆ ಹಂಸಲೇಖ ಮ್ಯೂಸಿಕ್ ಡೈರೆಕ್ಟರ್ ಆಗಿರುವವರೆಗೂ ಒಂದೇ ಒಂದು ದಿನ ತೊಂದರೆ ಆಗಿದ್ದು ಇಲ್ಲ. ಎರಡನೇ ಸಾಂಗ್ ಕಂಪೋಸ್ ಮಾಡಿದ ದಿನ ಕೂಡ ಇಲ್ಲ. ಅವರ ಪ್ರಪಂಚ ಮ್ಯೂಸಿಕ್ ಮಾತ್ರ ಆಗಿತ್ತು. ನಾನು ಹೋಗಿ ಕೂತ್ರೆ ಅವರಿಗೆ ಚೆನ್ನಾಗಿ ಗೊತ್ತು ರವಿಚಂದ್ರನ್ಗೆ ಏನು ಹಾಡು ಬೇಕು ಅಂತ. ಫಸ್ಟ್ ಟ್ಯೂನ್ ಅವರು ನನಗೆ ಕೊಡೋರು. ಇವರ ಫೀಲ್ ಹೀಗಿದೆ ಅಂತ ಅರ್ಥ ಮಾಡಿಕೊಳ್ಳುವ ತಾಕತ್ತು ಹಂಸಲೇಖ ಅವರಿಗೆ 10 ಅಲ್ಲ 15 ವರ್ಷ ಇತ್ತು. ಅದಾದ್ಮೇಲೆ ಒಂದು ಸಿನಿಮಾಗೆ 20 ಹಾಡು ಹಾಕಿದರೂ ಕೂಡ ನಾನು ಒಂದೂ ಒಕೆ ಮಾಡದೇ ಇರುವ ದಿನ ಬಂತು. ಅದಕ್ಕೆ ಹಂಸಲೇಖ ನಿರ್ಮಾಪಕರಾಗುವುದಕ್ಕೆ ನಿರ್ಧರಿಸಿದ್ದರು. ಅವರದ್ದೇ ಒಂದು ನಿರ್ಮಾಣ ಸಂಸ್ಥೆ ಮಾಡಬೇಕು. ಅವರ ಮಗನನ್ನು ಹೀರೋ ಮಾಡಬೇಕು. ಅವರದ್ದೇ ಆಡಿಯೋ ಕಂಪನಿ ಮಾಡಬೇಕು ಅನ್ನೋದು ಶುರುವಾಗಿದ್ದು ಅಲ್ಲಿ. ಅಲ್ಲಿಂದ ಅವರಿಗೆ ನನಗೆ ಸಾಂಗ್ ವಿಚಾರಕ್ಕೆ ಏನೂ ಆಗುತ್ತಿಲ್ಲ ಅಂತ ಅನಿತ್ತು." ಎಂದು ರವಿಚಂದ್ರನ್ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ರಾಕ್ಲೈನ್ ವೆಂಕಟೇಶ್ಗೆ ಹಂಸಲೇಖ ಬೇಕಿರಲಿಲ್ಲ
"ಯಾರೇ ನೀನು ಚೆಲುವೆ ಸಿನಿಮಾ ಮಾಡಬೇಕಾದರೆ, ನಾನು ತುಂಬಾನೇ ಕೆಟ್ಟ ಪರಿಸ್ಥಿತಿಯಲ್ಲಿದ್ದೆ. ಬ್ಯಾಂಕ್ಗೆ ದುಡ್ಡನ್ನು ಕಟ್ಟಬೇಕಿತ್ತು. ಬ್ಯಾಂಕ್ಗೆ ಮಾತು ಕೊಟ್ಟು ಬಂದಿದ್ದೆ. ಅಂತಹ ಸಮಯದಲ್ಲಿ ಯಾರೇ ನೀನು ಚೆಲುವೆ ಸಿನಿಮಾವನ್ನು ಸಹಿ ಮಾಡಿದ್ದೆ. ಯಾರೇ ನೀನು ಚೆಲುವೆಗೆ ಕೊಡುವ ದುಡ್ಡು ಬ್ಯಾಂಕ್ಗೆ ಸರಿ ಹೋಗುತ್ತೆ. ಆಮೇಲೆ ನನಗೆ ತೊಂದರೆ ಇರೋದಿಲ್ಲ ಎನ್ನುವ ಸಮಯದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ಹಂಸಲೇಖ ಮ್ಯೂಸಿಕ್ ಬೇಕಾಗಿರಲಿಲ್ಲ. ನಾನು ಮನೋಹರ್ ಹಾಕುತ್ತೇನೆ. ನನಗೆ ಹಂಸಲೇಖ ಮ್ಯೂಸಿಕ್ ಬೇಡ ಅಂತಾನೇ ಬಂದರು." ಎಂದು ಸಿನಿಮಾ ಆರಂಭಕ್ಕೂ ಮುನ್ನ ನಡೆದ ಘಟನೆಯನ್ನು ವಿವರಿಸಿದ್ದರು.

ಕ್ರೇಜಿಸ್ಟಾರ್ ಮೇಲೆ ಹಂಸಲೇಖಗ್ಯಾಕೆ ಕೋಪ
"ನಾನು ಅಷ್ಟು ಕಷ್ಟದಲ್ಲಿ ಇರುವ ಸಮಯದಲ್ಲೂ ಕೂಡ ದುಡ್ಡು ವಾಪಸ್ ತೆಗೆದುಕೊಂಡು ಹೋಗು. ಹಂಸಲೇಖ ಇಲ್ಲಾ ಅಂದರೆ, ಸಿನಿಮಾ ಮಾಡುವುದಿಲ್ಲ ಎಂದು ಹೇಳಿದವನು ನಾನು. 100 ಡೇಸ್ ಫಂಕ್ಷನ್ಗೆ ಅವರಿಗೆ ಇನ್ವಿಟೇಷನ್ ಕಾರ್ಡ್ ಬೇಕಿತ್ತು. ನಾನು ಡಿಸೈನಿಂಗ್ ಎಲ್ಲಾ ಚೆನ್ನಾಗಿ ಮಾಡುತ್ತೇನೆ ಅಂದು, ರಾಕ್ಲೈನ್ ವೆಂಕಟೇಶ್ ಡಿಸೈನ್ ಮಾಡಿಸಿಕೊಂಡು ಹೋದರು. ನನ್ನ ಕೆಲಸ ಬರೀ ಡಿಸೈನ್ ಮಾಡುವುದಷ್ಟೇ. ಡಿಸೈನ್ ಮಾಡಿದ ಮೇಲೆ ಅದಕ್ಕೆ ಬೇಕಿರುವ ಮಾಹಿತಿ ಇದೆಯಲ್ಲ ಅದು ಅವರು ನೋಡಿಕೊಳ್ಳಬೇಕಿರುವ ಕೆಲಸ. ಇದರಲ್ಲಿ ಹಂಸಲೇಖ ಅವರ ಹೆಸರನ್ನು ಅವರು ಮರೆತು ಬಿಟ್ಟಿದ್ದಾರೆ. ಅಲ್ಲಿ ರವಿಚಂದ್ರನ್ ಡಿಸೈನ್ ಮಾಡಿದ್ದು, ನನ್ನ ಹೆಸರು ಹಾಕುವುದಕ್ಕೆ ಹೇಳಿಲ್ಲ ಎಂದು ಹಂಸಲೇಖ ತಿಳಿದುಕೊಂಡರು." ಎಂದು ಇಬ್ಬರ ನಡುವಿನ ಭಿನ್ನಾಭಿಪ್ರಾಯವೇನಿತ್ತು ಎಂದು ರಿವೀಲ್ ಮಾಡಿದ್ದರು.
ಹಂಸಲೇಖ ಸಾಕು ಅನಿಸಿದ್ದೇಕೆ?
"ಅವರಿಗೆ ಅದು ಮಿಸ್ ಅಂಡರ್ಸ್ಟ್ಯಾಂಡಿಂಗ್. ಆದರೆ, ನನಗೆ ಸಾಕು ಅನಿಸಿದ ದಿನ ಅಲ್ಲೇ. ನನ್ನನ್ನು ಇಷ್ಟು ದಿನ ನೀನು ಅರ್ಥ ಮಾಡಿಕೊಂಡಿಲ್ಲ ಅಂದ್ಮೇಲೆ, ನಾನು ನಿನ್ನ ಹೆಸರನ್ನು ಜೊತೆಯಲ್ಲೇ ಎತ್ತಿಕೊಂಡು ಓಡಾಡಿಕೊಂಡು ಬಂದವನು. ನಾನು ಹಾಗೆ ಹೇಳುವುದಕ್ಕೆ ಸಾಧ್ಯನಾ? ನಾನು ಹೇಳಬಹುದಾ? ಇಷ್ಟು ವರ್ಷ ಜೊತೆಯಲ್ಲಿ ಇದ್ದವನು ನನ್ನನ್ನು ಅಷ್ಟೂ ಅರ್ಥ ಮಾಡಿಕೊಂಡಿಲ್ವಾ? ಅಂತ ಅನಿಸಿಬಿಡ್ತು. ಮನುಷ್ಯ ಒಬ್ಬನನ್ನು ಅರ್ಥ ಮಾಡಿಕೊಂಡಿಲ್ಲ ಅಂದ್ಮೇಲೆ, ಅಲ್ಲಿ ಎಷ್ಟೇ ದಿನ ಇದ್ದರೂ ಬಿರುಕುಗಳೇ ಕಾಣಿಸಿಕೊಳ್ಳುತ್ತೆ. ಅದು ಮನಸ್ಸಿನಲ್ಲಿ ಚುಚ್ಚುತ್ತಲೇ ಇರುತ್ತೆ." ಎಂದು ರವಿಚಂದ್ರನ್ ಹೇಳಿಕೊಂಡಿದ್ದರು.
ನಮ್ಮಲ್ಲಿ ರಹಸ್ಯಗಳೇನೂ ಉಳಿದಿಲ್ಲ
"ಈಗ ನನ್ನ ಹೆಸರು ಪೇಪರ್ನಲ್ಲಿ ಹಾಕದೇ ಇದ್ದರೂ ನಡೆಯುತ್ತೆ. ರಮೇಶ್ ಹೆಸರು ಹಾಕದೇ ಇದ್ದರೂ ನಡೆಯುತ್ತೆ. ನಾವು ಜನರಿಗೆ ಗೊತ್ತು. ಅದನ್ನೆಲ್ಲ ನೋಡಿಕೊಂಡು ಕೂತರೆ, ಬೇಡದೇ ಇರುವ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಕಾಗುತ್ತೆ. ನಮ್ಮನ್ನು ಜನರು ಎಷ್ಟು ಪ್ರೀತಿಸುತ್ತಾರೆ ಅನ್ನೋದು ನಮಗೆ ಗೊತ್ತಿರುತ್ತೆ. ಮೀಡಿಯಾ ಬಂದ್ಮೇಲೆ ನಮ್ಮಲ್ಲಿ ಏನೂ ರಹಸ್ಯಗಳು ಉಳಿದಿಲ್ಲ. ನನಗೆ ಫ್ರೆಂಡ್ಶಿಪ್ ಬೇಕು, ಬಾಂಡೇಜ್ ಬೇಕು, ಯಾರೋ ಏನೋ ಹೇಳಿದ್ದನ್ನು ಕೇಳಿಸಿಕೊಳ್ಳುವುದಲ್ಲ. ಮನಸ್ಸನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆಗ ಎಲ್ಲಾ ಸರಿ ಹೋಗುತ್ತೆ." ಎನ್ನುತ್ತಾರೆ.

ಬದುಕಿನ ಪ್ರತಿಕ್ಷಣ ಎಂಜಾಯ್ ಮಾಡಿದ್ದೇನೆ?
"ನಾನು ನನ್ನ ಬದುಕಿನ ಪ್ರತಿಯೊಂದು ದಿನವನ್ನೂ ಎಂಜಾಯ್ ಮಾಡಿದ್ದೇನೆ. ನೋವಾಗಿರಬಹುದು, ಸೋತಿರಬಹುದು, ಬಿದ್ದಿರಬಹುದು, ಎದ್ದಿರಬಹುದು, ನನ್ನ ಲೈಫ್ನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಿದ್ದೇನೆ. ನನಗೊಂದು ಜವಾಬ್ದಾರಿಯಿದೆ, ನನಗೊಂದು ಕೆಲಸ ಕೊಟ್ಟಿದ್ದಾರೆ. ಸಿನಿಮಾ ರಂಗದಲ್ಲಿ ಜನರು ನನಗೆ ಆರಂಭದಿಂದಲೇ ಸ್ವೀಕಾರ ಕೊಟ್ಟಿದ್ದಾರೆ. ಅವರನ್ನು ಪ್ರತಿ ಬಾರಿನೂ ಸ್ಕ್ರೀನ್ನಲ್ಲಿ ಮೋಸ ಮಾಡಬಾರದು. ನನ್ನನ್ನು ನೋಡುವುದಕ್ಕೆ ಅವರು ಎಷ್ಟು ಆಸೆ ಪಟ್ಕೊಂಡು ಬರುತ್ತಾರೋ ಅಷ್ಟೇ ಸಂತೋಷ ಪಡಿಸಬೇಕು ಅಂತ ಇವತ್ತಿನವರೆಗೂ ತುಡಿಯುವುದು ಅವರಿಗೋಸ್ಕರನೇ." ಎಂದು ಹೇಳಿಕೊಂಡಿದ್ದರು.
ಬದುಕಿಗಾಗಿ ಕೆಟ್ಟ ಸಿನಿಮಾ ಮಾಡಿದ್ದೇನೆ
"ಅಭಿಮಾನಿಗಳಿಗಾಗಲಿ, ಜನರಿಗಾಗಲಿ ಕ್ಷಮೆ ಕೇಳುವುದು ಎಲ್ಲಿ ಅಂದರೆ, ನನ್ನ ಬದುಕಿಗೋಸ್ಕರ, ನನ್ನ ಸೆಕ್ಯೂರಿಟಿಗೋಸ್ಕರ, ನನ್ನ ಮಕ್ಕಳಿಗೋಸ್ಕರ ಕೆಲವು ಬೇಡದೆ ಇರುವಂತಹ ಸಿನಿಮಾಗಳನ್ನು ಮಾಡಬೇಕಾದ ಪರಿಸ್ಥಿತಿ ಬರುತ್ತೆ. ನನಗೆ ಬೇರೆ ವಿಧಿಯಿಲ್ಲ. ಅದನ್ನು ಬಂದು ನಾನು ಟಿವಿಯಲ್ಲಿ ಕೂತು ಚೆನ್ನಾಗಿರಲ್ಲ ಸಿನಿಮಾ. ದುಡ್ಡಿಗೋಸ್ಕರ ಮಾಡಿದೆ ಅಂತ ಹೇಳುವುದಕ್ಕೆ ಆಗದೇ ಇರುವ ಪರಿಸ್ಥಿತಿ ಇರುತ್ತೆ. ನನಗೆ ಗೊತ್ತಿದ್ದೂ ಅಂತಹ ಎಷ್ಟೋ ಸಿನಿಮಾಗಳನ್ನು ಮಾಡಿದ್ದೀನಿ. ಪರದೆಗೆ ನ್ಯಾಯ ವದಗಿಸುವುದಿಲ್ಲ ಅನ್ನೋದು ನನಗೆ ಗೊತ್ತು. ಆದರೆ, ನನ್ನ ಬದುಕಿಗೆ ಆ ದಾರಿ ಬಿಟ್ಟರೆ ಬೇರೆ ಗೊತ್ತಿಲ್ಲ. ನನ್ನನ್ನು ಬದುಕಿಸುತ್ತಿರುವುದೂ ಅದೇ ಸಿನಿಮಾನೇ. ನನಗೆ ತೊಂದರೆ ಕೊಡುತ್ತಿರುವುದೂ ಅದೇ ಸಿನಿಮಾ. ನನ್ನ ಜೀವನ ಪ್ರತಿ ಕ್ಷಣವನ್ನೂ ನಾನು ಎಂಜಾಯ್ ಮಾಡಿದ್ದೇನೆ." ಎಂದು ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದರು.


Click it and Unblock the Notifications











