ಮುಂಬೈನ ಬೀದಿಯಲ್ಲಿ 'ಕೋಟಿಗೊಬ್ಬ' ಶೂಟಿಂಗ್; ದಿಢೀರನೇ ವಿಷ್ಣುದಾದ ಭೇಟಿ ಮಾಡಲು ಬಂದ ಶಿವಣ್ಣ..ಆಮೇಲೆ ಏನಾಯ್ತು?
ವಿಷ್ಣುದಾದ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಲಿಸ್ಟ್ ಸೇರಿದ ಸಾಕಷ್ಟು ಸಿನಿಮಾಗಳಿವೆ. ಅದರಲ್ಲಿ 'ಕೋಟಿಗೊಬ್ಬ' ಸಿನಿಮಾ ಕೂಡ ಒಂದು. ಇದು ಸೂಪರ್ಸ್ಟಾರ್ ರಜನಿಕಾಂತ್ ನಟಿಸಿದ 'ಭಾಷಾ' ಸಿನಿಮಾದ ರಿಮೇಕ್. ಆದರೂ, ವಿಷ್ಣುದಾದ ಅವರ ಸ್ಟೈಲ್ನಲ್ಲಿಯೇ ಮಾಡಿದ ಸಿನಿಮಾವಿದು. ಹೀಗಾಗಿ ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದರೂ ಅದೇ ಕ್ರೇಜ್ ಅನ್ನು ಉಳಿಸಿದಿಕೊಂಡಿದೆ.
ಸೂರಪ್ಪ ಬಾಬು ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದರು. ಆರಂಭದಲ್ಲಿ ಭಯದಿಂದಲೇ ಶುರು ಮಾಡಿದ್ದ 'ಕೋಟಿಗೊಬ್ಬ' ನಿರೀಕ್ಷೆ ಮಾಡಿದಂತೆ ಯಶಸ್ಸು ಕೊಟ್ಟಿತ್ತು. ಸೂರಪ್ಪ ಬಾಬು 'ಕೋಟಿಗೊಬ್ಬ' ಟೈಟಲ್ ರಿಜಿಸ್ಟರ್ ಮಾಡುವಾಗ ಅವರ ಕೈಯಲ್ಲಿ ಕಥೆ ಇರಲಿಲ್ಲ. ಹಾಗೇ ವಿಷ್ಣುವರ್ಧನ್ ಅವರಿಗೂ ಹೇಳಿರಲಿಲ್ಲ. ಹಾಗೇ ಶುರುವಾಗಿದ್ದ ಸಿನಿಮಾ ಈಗ 25 ದಿನಗಳನ್ನು ಪೂರೈಸಿದೆ.

'ಕೋಟಿಗೊಬ್ಬ' ಸಿನಿಮಾ ಕನ್ನಡ ಚಿತ್ರರಂಗ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ಶೂಟಿಂಗ್ ಅನ್ನು ಅಷ್ಟೇ ಅದ್ಧೂರಿಯಾಗಿ ಮಾಡಿದ್ದರು. ಮುಂಬೈನ ಸ್ಟಾರ್ ಹೋಟೆಲ್ ಹಾಗೂ ಅಲ್ಲಿ ಬೀದಿಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಆಗಿನ ಕಾಲಕ್ಕೆ ಬಿಗ್ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಹೀಗೊಮ್ಮೆ ಮುಂಬೈನ ಹೋಟೆಲ್ನಲ್ಲಿ 'ಕೋಟಿಗೊಬ್ಬ' ದೃಶ್ಯದ ಶೂಟಿಂಗ್ ಮಾಡುವಾಗ ವಿಷ್ಣುದಾದಗೆ ಶಿವಣ್ಣ ಹಾಗೂ ಗೀತಕ್ಕ ಎದುರಾಗಿದ್ದರು. ಮುಂದೇನಾಯ್ತು ಅನ್ನೋದನ್ನು ಸೂರಪ್ಪ ಬಾಬು, ರಘುರಾಮ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ವಿಷ್ಣುವರ್ಧನ್ ನಟಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಆಗಿದ್ದವು. 'ಯಜಮಾನ'ದಂತಹ ಮೆಗಾ ಬ್ಲಾಕ್ಬಸ್ಟರ್ ಸಿನಿಮಾ ಸ್ಯಾಂಡಲ್ವುಡ್ ಬಾಕ್ಸಾಪೀಸ್ನಲ್ಲಿ ಹೊಸ ಇತಿಹಾಸವನ್ನೇ ಬರೆದಿತ್ತು. ಅಲ್ಲದೆ ವಿಷ್ಣುದಾದ ಒಂದರ ಹಿಂದೊಂದು ಹಳ್ಳಿ ಬ್ಯಾಕ್ ಡ್ರಾಪ್ನ ಕಥೆಯಲ್ಲಿಯೇ ನಟಿಸುತ್ತಿದ್ದರು. ಹೀಗಾಗಿ ಮಾಸ್ ಸಿನಿಮಾ ಬೇಕಾಗಿತ್ತು. ಆ ಸಮಯಕ್ಕೆ ಸಿಕ್ಕಿದ್ದೇ 'ಕೋಟಿಗೊಬ್ಬ'.
ಮುಂಬೈ ಸ್ಟಾರ್ ಹೊಟೇಲ್ನಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ವಿಷ್ಣುದಾದ ರಾತ್ರಿ 2.30ರವರೆಗೂ ಶೂಟಿಂಗ್ ಮಾಡಿದ್ದರು. ಆದರೆ, ಮಾರನೇ ದಿನ ಬೆಳಗ್ಗೆನೇ ಮತ್ತೆ ಶೂಟಿಂಗ್ ಶೆಡ್ಯೂಲ್ ಆಗಿತ್ತು. ಹೀಗಾಗಿ ಸೂರಪ್ಪ ಬಾಬು ಅವರನ್ನು ಎಬ್ಬಿಸಿ, ಶೂಟಿಂಗ್ ಕರೆದುಕೊಂಡು ಬರುತ್ತಿದ್ದರು. ಲಿಫ್ಟ್ನಲ್ಲಿ ಇಳಿಯುವಾಗ ಡೋರ್ ಓಪನ್ ಆಗುತ್ತಿದ್ದಂತೆ ವಿಷ್ಣುದಾದ ಎದುರಲ್ಲಿ ಶಿವಣ್ಣ ಹಾಗೂ ಗೀತಕ್ಕ ನಿಂತಿದ್ದರು.

ವಿಷ್ಣುದಾದ ಹಾಗೂ ಶಿವಣ್ಣ, ಗೀತಕ್ಕ ಇಬ್ಬರಿಗೂ ಶಾಕ್ ಆಗಿತ್ತು. ಹಾಗೆ ಮಾತಾಡಿಕೊಂಡು ಇಬ್ಬರು ಮುಂದೆ ಸಾಗಿದರು. ಹೋಟೆಲ್ನಲ್ಲಿ ಶೂಟಿಂಗ್ ಮುಗಿದ ಬಳಿಕ 'ಕೋಟಿಗೊಬ್ಬ' ಚಿತ್ರದ ಶೂಟಿಂಗ್ ಅನ್ನು ಮುಂಬೈನ ಬೀದಿಯೊಂದಕ್ಕೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಈಗಿನಂತೆ ಕ್ಯಾರಾವ್ಯಾನ್ ಏನೂ ಇರಲಿಲ್ಲ. ಒಂದೇ ಒಂದು ಕ್ಯಾರಾವ್ಯಾನ್ ಇತ್ತು. ಅದನ್ನು ಇಟ್ಟುಕೊಂಡು ಶೂಟಿಂಗ್ ಮಾಡುತ್ತಿದ್ದರು.
ದಿಢೀರನೇ ಅಲ್ಲಿಗೆ ಶಿವಣ್ಣ ವಿಸಿಟ್ ಹಾಕಿದ್ದರು. ಮುಂಬೈನ ರಸ್ತೆಯಲ್ಲಿ ವಿಷ್ಣುದಾದ ಹಾಗೂ ಶಿವಣ್ಣ ಇಬ್ಬರೂ ಕೆಲ ಹೊತ್ತು ಮಾತಾಡುತ್ತಾ ನಿಂತು ಬಿಟ್ಟಿದ್ದರು. ಲಿಫ್ಟ್ನಲ್ಲಿ ಮಾತಾಡುವುದಕ್ಕೆ ಆಗಲಿಲ್ಲ ಎಂದು ಅಲ್ಲಿಗೆ ಬಂದಿದ್ದರು. ಬಳಿಕ ಕ್ಯಾರಾವ್ಯಾನ್ಗೆ ತೆರಳಿ ಬಹಳ ಹೊತ್ತು ವಿಷ್ಣುದಾದ ಹಾಗೂ ಶಿವಣ್ಣ ಇಬ್ಬರೂ ಮಾತುಕತೆ ನಡೆಸಿದರು. ಶಿವಣ್ಣ ಕೂಡ 'ಜೋಡಿ' ಸಿನಿಮಾದ ಶೂಟಿಂಗ್ಗೆ ಮುಂಬೈಗೆ ಬಂದಿದ್ದರು. ರಾಕ್ಲೈನ್ ವೆಂಕಟೇಶ್ ಆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಹೀಗಾಗಿ ವಿಷ್ಣುದಾದ ಹಾಗೂ ಶಿವಣ್ಣ ಇಬ್ಬರೂ ಭೇಟಿಯಾಗುವ ಸಂದರ್ಭ ಬಂದಿತ್ತು.


Click it and Unblock the Notifications











