ಅಣ್ಣಾವ್ರಿಗೆ 'ರಾಜ್ಕುಮಾರ್' ಎನ್ನುವ ಹೆಸರು ಇಷ್ಟವಿರಲಿಲ್ಲ; ಯಾಕೆ ಗೊತ್ತೇ?
ಅಣ್ಣಾವ್ರನ್ನ ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರುಗಳನ್ನಿಟ್ಟುಕೊಂಡು ಗೌರವದಿಂದ ಕರೆಯುತ್ತಾರೆ. ವರನಟ, ನಟಸಾರ್ವಭೌಮ, ಗಾನ ಗಂಧರ್ವ ಒಂದಾ ಎರಡ? ರಾಜ್ಕುಮಾರ್ ಕನ್ನಡಿಗರ ಪಾಲಿಗೆ ನಟ ಸಾರ್ವಭೌಮನಾಗಿದ್ದರು. ನಟಿಸಿದ ಸುಮಾರು 200 ಸಿನಿಮಾಗಳಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಬಂದಿದ್ದರು.
ರಾಜ್ಕುಮಾರ್ ಎಲ್ಲಾ ಚಿತ್ರರಂಗಕ್ಕೂ ಚಿರಪರಿಚಿತ. ಆದರೆ, ಇವರ ಮೂಲ ಹೆಸರು ಮುತ್ತುರಾಜ್ ಅನ್ನೋದು ಈಗಾಗಲೇ ಗೊತ್ತಿರುವ ಸಂಗತಿಯೇ. ಮುತ್ತರಾಜ್ ಎನ್ನುವ ಹೆಸರನ್ನು ಆಗಿನ ಕಾಲಕ್ಕೆ ರಾಜ್ಕುಮಾರ್ ಅಂತ ಬದಲಾವಣೆ ಮಾಡಿದ್ದರು. ಅಷ್ಟಕ್ಕೂ ಈ ಹೆಸರನ್ನು ಬದಲಾಯಿಸಿದ್ದು ಯಾರು? ಅದು ಅಣ್ಣಾವ್ರಿಗೆ ಇಷ್ಟ ಆಗಿರಲಿಲ್ಲ ಏಕೆ? ಈ ಇಂಟ್ರೆಸ್ಟಿಂಗ್ ಘಟನೆಯನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸ್ತಾಪಿಸಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಲೆಜೆಂಡರಿ ನಿರ್ದೇಶಕ ಎಚ್ಎಲ್ಎನ್ ಸಿಂಹ. ಇವರು ಮೂಲತ: ರಂಗಭೂಮಿಯವರು. ನಾಟಕ ಕಂಪನಿಗಳನ್ನು ಕಟ್ಟಿವರು, ನಾಟಕಗಳನ್ನು ಬರೆದವರು. ಇವರಯ ಹಾಗೂ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಇಬ್ಬರೂ ನಾಟಕದ ಬಂಧುಗಳು. ನಾಟಕದಿಂದಾಗಿಯೇ ಅವರಲ್ಲೊಂದು ಬಾಂಧವ್ಯವಿತ್ತು, ಸ್ನೇಹವಿತ್ತು. ಆದರೆ, ಭೇಟಿ ಮಾತ್ರ ಯಾವಾಗಲೋ ಆಗುತ್ತಿತ್ತು.
ಎಚ್ಎಲ್ಎನ್ ಸಿಂಹ ಅವರು ಅನೇಕ ಕಂಪನಿಗಳಲ್ಲಿ ಮುತ್ತುರಾಜ ಸಣ್ಣಪುಟ್ಟ ಪಾರ್ಟ್ ಮಾಡುತ್ತಿದ್ದಿದ್ದನ್ನು ಕೇಳಿದ್ದರು. ಆದರೆ ನೋಡಿರಲಿಲ್ಲ. ಒಂದು ಸಾರಿ ಪುಟ್ಟಸ್ವಾಮಯ್ಯನವರ ಜೊತೆಗೆ ಬಾಲಕ ಮುತ್ತುರಾಜ್ ಅವರಿಗೆ ಎದುರಾಗುತ್ತಾರೆ. ಆಗ ಸಿಂಹ ಅವರು ಯೋಗಕ್ಷೇಮ ವಿಚಾರಿಸಿ, ಆಮೇಲೆ ಮುತ್ತುರಾಜನನ್ನು ಮಾತಾಡಿಸುತ್ತಾರೆ. ಏನು ಮರಿ ಯಾವ್ಯಾವ ಪಾತ್ರ ಮಾಡುತ್ತೀಯ? ಅಂತ ಕೇಳುತ್ತಾರೆ. ಆಗ ರಾಜ್ಕುಮಾರ್ ಅವರು ಒಂದು ನಗುವನ್ನು ಸಿಂಹ ಅವರ ಕಡೆಗೆ ಬೀರುತ್ತಾರೆ. ಅವರಿಬ್ಬರ ನಡುವೆ ನಡೆದ ಒಂದೇ ಒಂದು ಸಂಭಾಷಣೆ ಒಂದು ನಗು. ಅದೇ ಮುಂದೆ ರಾಜ್ಕುಮಾರನನ್ನಾಗಿ ಮಾಡುತ್ತೆ.
"ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರೂ ಕೂಡ ಚಿತ್ರರಂಗಕ್ಕೆ ಸೇರಬೇಕು ಅಂತ ಬಹಳ ಆಸೆ ಪಟ್ಟಿದ್ದರು. ಅವರೂ ಮಹಾನ್ ಗಾಯಕರು, ನಟರು. ಅವರು ಬಹಳಷ್ಟು ಕಡೆ ಅವಕಾಶಕ್ಕಾಗಿ ಹೋಗಿದ್ದರು. ಅವರಿಗೆ ಅಂತಹ ಅವಕಾಶಗಳೇನು ಸಿಕ್ಕಿರಲಿಲ್ಲ. ಆ ಹಿರಿಯ ಜೀವ ನನಗೆ ಅವಕಾಶಗಳು ಸಿಗದೇ ಇದ್ದರೂ ಪರವಾಗಿಲ್ಲ. ಮುಂದೆ ನನ್ನ ಮಗನಿಗಾಗದರೂ ಅವಕಾಶ ಸಿಗಲಿ ಅಂತ ಹೇಳಿ ಗುಬ್ಬಿ ವೀರಣ್ಣನವರು, ಎಚ್ಎಲ್ಎನ್ ಸಿಂಹ ಯಾರೇ ಸಿಕ್ಕರೂ ಹೇಳುತ್ತಿದ್ದರು. ನೀವು ಸಿನಿಮಾ ನಿರ್ದೇಶನ ಮಾಡುವಂತಹ ಕಾಲ ಬಂದರೆ, ಖಂಡಿತವಾಗಿಯೂ ನನ್ನ ಮಗನಿಗೊಂದು ಅವಕಾಶ ಕೊಡಿ ಎನ್ನುವ ಮನವಿಯನ್ನು ಅವರ ಮುಂದೆ ಇಟ್ಟಿರುತ್ತಾರೆ." ಎನ್ನುತ್ತಾರೆ ಹರಿಹರಪುರ ಮಂಜುನಾಥ್.

ಅದು ನಾಟಕದಿಂದ ಸಿನಿಮಾ ಕಡೆಗೆ ವಾಲುತ್ತಿದ್ದಂತಹ ಕಾಲ. ಆ ಕಾಲದಲ್ಲಿ ಗುಬ್ಬಿ ಕರ್ನಾಟಕ ಥಿಯೇಟರ್ನವರು 'ಗುಣಸಾಗರಿ' ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ಪಂಡರೀಬಾಯಿ ನಾಯಕಿ, ಹೊನ್ನಪ್ಪ ಭಾಗವತರ್ ನಾಯಕ. ಆ ಸಿನಿಮಾ ಆರ್ಥಿಕವಾಗಿ ಯಶಸ್ಸನ್ನು ಗಳಿಸುತ್ತೆ. ಇದರಿಂದ ಅದೇ ಸಂಸ್ಥೆ ಮುಂದೆ ಇನ್ನೊಂದು ಸಿನಿಮಾವನ್ನು ತೆಗೆಯಬೇಕು ಎಂದು ಸಿದ್ಧತೆಗಳನ್ನು ಮಾಡಿಕೊಳ್ಳುತ್ತೆ. ಅದುವೇ 'ಬೇಡರ ಕಣ್ಣಪ್ಪ'. ಗುಬ್ಬಿ ವೀರಣ್ಣ ಜೊತೆ ಎವಿಎಂ ಸಂಸ್ಥೆ ಕೈ ಜೋಡಿಸುತ್ತಾರೆ. ಇಬ್ಬರೂ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುವುದು ಅಂತ ಮಾತುಕಥೆ ನಡೆಯುತ್ತೆ. ಕಣ್ಣಪ್ಪನ ಪಾತ್ರಕ್ಕೆ ಹೊಸ ನಾಯಕನನ್ನು ಹುಡುಕುವುದಕ್ಕೆ ತೀರ್ಮಾನ ಮಾಡುತ್ತಾರೆ. ನಿರ್ದೇಶಕ ಎಚ್ಎಲ್ಎನ್ ಸಿಂಹ ಅವರಿಗೂ ಈ ವಿಷಯ ತಿಳಿಸುತ್ತಾರೆ.
ಎಚ್ಎಲ್ಎನ್ ಸಿಂಹ ಅವರ ಹುಟ್ಟೂರು ನಂಜನ ಹೂಡಿಗೆ ಬಂದಾಗ ಮುತ್ತುರಾಜ (ರಾಜ್ಕುಮಾರ್) ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ಎದುರಿಗೆ ನಡೆದುಕೊಂಡು ಬರುತ್ತಿದ್ದರು. ಆಗ ಅಣ್ಣಾವ್ರು ಹಿರಿಯ ನಿರ್ದೇಶಕ ಎಚ್ಎಲ್ಎನ್ ಸಿಂಹ ಅವರಿಗೆ ನಮಸ್ಕಾರ ಮಾಡಿ ನಿಂತುಕೊಂಡರು. ಮುತ್ತುರಾಜನನ್ನು ಚಿಕ್ಕಂದಿನಲ್ಲಿ ನೋಡಿದ್ದರು. ಈಗ ಎತ್ತರವಾಗಿ ಬೆಳೆದು ನಿಂತಿದ್ದಾನೆ. ಜೊತೆ ಲಕ್ಷಣವಾಗಿಯೂ ಇದ್ದಾನೆ. ಆಗ ರಾಜ್ಕುಮಾರ್ ಅವರನ್ನು ಬೇಡರ ಕಣ್ಣಪ್ಪನ ಪಾತ್ರಕ್ಕೆ ಕರೆದುಕೊಂಡು ಹೋದರೆ ಹೇಗೆ ಅನಿಸುತ್ತೆ.
ಮುತ್ತುರಾಜನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮದ್ರಾಸ್ಗೆ ತೆರಳುತ್ತಾರೆ. ಅಲ್ಲಿ ನಿರ್ಮಾಪಕರೊಂದಿಗೆ ಮುತ್ತು ರಾಜನ ಬಗ್ಗೆನೂ ಮಾತಾಡುತ್ತಾರೆ. "ಎಚ್ಎಲ್ಎನ್ ಸಿಂಹ ಮದ್ರಾಸ್ಗೆ ಹೋಗುತ್ತಿದ್ದಂತೆ ನಿರ್ಮಾಪಕರನ್ನು ಕಂಡು ಕಣ್ಣಪ್ಪನ ಪಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀನಿ. ಎಂದು ಹೇಳಿ ಮುತ್ತುರಾಜನ ಪ್ರಸ್ತಾಪ ಮಾಡುತ್ತಾರೆ. ಗುಬ್ಬಿ ವೀರಣ್ಣನವರಿಗೆ ಮುತ್ತುರಾಜನೂ ಗೊತ್ತಿತ್ತು. ಪುಟ್ಟಸ್ವಾಮಯ್ಯನವರೂ ಗೊತ್ತಿತ್ತು. ಹೀಗಾಗಿ ಮುತ್ತುರಾಜ ಓಕೆನಾ ಅಂತ ಹೇಳಿದ್ದರು. ಆಗ ಈತನಿಗಿಂತ ಸೂಕ್ತವಾದ ವ್ಯಕ್ತಿ ಕಾಣಿಸುತ್ತಿಲ್ಲ" ಎಂದು ಎಚ್ಎಲ್ಎನ್ ಸಿಂಹ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಆಗ ಎಲ್ಲರೂ ಸೇರಿ ಒಪ್ಪಿಗೆ ಸೂಚಿಸುತ್ತಾರೆ. ಆಗ ಬೇಡರ ಕಣ್ಣಪ್ಪ ಸಿನಿಮಾ ವೇದಿಕೆ ಸಿದ್ಧವಾಗುತ್ತೆ. ಆಗ ಈ ಸಿನಿಮಾ ಮತ್ತೊಬ್ಬ ನಿರ್ಮಾಪಕರಾಗಿದ್ದ ಎವಿಎಂ ಸಂಸ್ಥೆಯ ಮೇಯಪ್ಪನ್ ನಾಯಕ ಹೆಸರನ್ನು ಬದಲಾಯಿಸಿ ಎನ್ನುತ್ತಾರೆ. ಸಿಂಹ ಅವರಿಗೆ ಪುಟ್ಟಸ್ವಾಮಯ್ಯ ಅವರು ಹೇಳಿದ ಮಾತು ನೆನೆಪಿಗೆ ಬರುತ್ತೆ. ನನ್ನ ಮಗ ಅವಕಾಶ ಸಿಕ್ಕರೆ ರಾಜಕುಮಾರನಾಗಿ ಮೆರೆಯುತ್ತಾನೆ ಅಂತ ಹೇಳಿದ್ದು ನೆನಪಾಗುತ್ತೆ. ಆಗ ಇಬ್ಬರೂ ಸೇರಿ, ಹಿಂದಿ ಚಿತ್ರರಂಗದ ಇಬ್ಬರ ದಿಗ್ಗರಾಜ್ ರಾಜ್ ಕಪೂರ್ ಹಾಗೂ ದಿಲೀಪ್ ಕುಮಾರ್ ಅವರ ಹೆಸರಿನ ಅರ್ಧ ಭಾಗ ತೆಗೆದುಕೊಂಡು ರಾಜ್ಕುಮಾರ್ ಅಂತ ನಾಮಕರಣ ಮಾಡುತ್ತಾರೆ.
"ಇದಾದ ಮೇಲೆ ಇಂದು ತಮಾಷೆ ನಡೆಯುತ್ತೆ. ಪತ್ರಿಕೆಗಳಲ್ಲಿ ಬೇಡರ ಕಣ್ಣಪ್ಪ ಸಿನಿಮಾದ ಚಿತ್ರೀಕರಣ ನಡೆಯುತ್ತೆ. ಅದರಲ್ಲಿ ರಾಜ್ಕುಮಾರ್ ನಾಯಕರು ಅಂತ ಬಂದಿರುತ್ತೆ. ಮುತ್ತುರಾಜರಿಗೆ ನೋಡಿ ಗಾಬರಿ ಆಗುತ್ತೆ. ಯಾಕಂದ್ರೆ, ಈ ಪಾತ್ರ ಆಯ್ಕೆ ಆಗಿದ್ದೀರ ಅಂತ ಹೇಳಿದ್ಮೇಲೂ ಪತ್ರಿಕೆಯಲ್ಲಿ ರಾಜಕುಮಾರ್ ಹೆಸರು ಬಂದಿದ್ದಕ್ಕೆ ಬೇಸರವಾಗಿರುತ್ತೆ. ಯಾಕೆ ನಾನು ಸರಿಯಾಗಿ ಪಾತ್ರ ಮಾಡಲಿಲ್ಲವೇ ಎಂದು ಸಿಂಹ ಅವರ ಬಳಿ ಕೇಳಿದ್ದರು. ಆಗ ಸಿಂಹ ಅವರು ಇಲ್ಲ ನಾಯಕರನ್ನು ಬದಲಾಯಿಸಿಲ್ಲ. ನೀನೇ ನಾಯಕ. ಹೆಸರನ್ನಷ್ಟೇ ಬದಲಾಯಿಸಿದ್ದೇನೆ" ಎಂದು ಹೇಳಿದ್ದರು ಎನ್ನುತ್ತಾರೆ ಹರಿಹರಪುರ ಮಂಜುನಾಥ್.
ಆದರೂ ರಾಜ್ಕುಮಾರ್ ಅವರಿಗೆ ಏನೋ ಒಂದು ರೀತಿ ಕಸಿವಿಸಿ. ತಾನು ಮುತ್ತತ್ತಿರಾಯನ ವರ ಪ್ರಸಾದದಿಂದ ಹುಟ್ಟಿದವನು. ಮುತ್ತುರಾಜ ಅನ್ನೋ ಹೆಸರೇ ಇಷ್ಟವಾದದ್ದು. ಬದಲಾವಣೆ ಮಾಡಲೇಬೇಕು ಅಂದರೆ ಮಾಡಿ. ಒಂದು ವೇಳೆ ಸಿನಿಮಾ ಸೋತರೆ, ಈ ಚಂದಕ್ಕೆ ರಾಜಕುಮಾರ ಅಂತ ಬೇರೆ ಹೆಸರು ಇಟ್ಟಿದ್ದಾರೆ ಅಂದುಕೊಳ್ಳುತ್ತಾರೆ. ಅದಕ್ಕೆ ಹೇಳಿದೆ ಎಂದಾಗ, ಸಿಂಹ ಈ ಸಿನಿಮಾ ಗೆಲ್ಲುತ್ತೆ ಎಂದು ಭರವಸೆಯನ್ನು ನೀಡುತ್ತಾರೆ. ಅಲ್ಲಿಂದ ರಾಜ್ಕುಮಾರ್ ಎನ್ನುವ ಹೆಸರಿನಲ್ಲಿ ಬಂದ ಸಿನಿಮಾಗಳು ಎಷ್ಟು? ಒಂದಕ್ಕಿಂದ ಒಂದು ಅದ್ಭುತ ಸಿನಿಮಾಗಳನ್ನು ನೀಡಿ ಯಶಸ್ವಿ ನಟ ಎನಿಸಿಕೊಂಡರು.
1954ರಲ್ಲಿ ತೆರೆಕಂಡ 'ಬೇಡರ ಕಣ್ಣಪ್ಪ' ಸಿನಿಮಾ ಹಣ ಗಳಿಕೆಯಲ್ಲಿ ಗೆಲ್ಲುತ್ತೆ. ಕನ್ನಡ ಚಿತ್ರರಂಗಕ್ಕೆ ಒಬ್ಬ ಮೇರು ನಟನ ಉಗಮ ಆಗುತ್ತೆ. ಮೊದಲು ಮುತ್ತುರಾಜ್ ಆಗಿದ್ದವರು ಈಗ ರಾಜ್ಕುಮಾರ್ ಆಗಿ ಪ್ರೇಕ್ಷಕರ ಮುಂದೆ ಬಂದು ಗೆದ್ದಿದ್ದರು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಈ ಹೆಸರು ಬೇಡ ಎಂದಿದ್ದ ಮುತ್ತುರಾಜನನ್ನು ಅಣ್ಣಾವ್ರನ್ನಾಗಿ ಮಾಡಿದ್ದು ಅದೇ ರಾಜಕುಮಾರ ಅನ್ನೋ ಹೆಸರು.


Click it and Unblock the Notifications











