'ದೂರದ ಬೆಟ್ಟ' ಸಿನಿಮಾ ಬಳಿಕ ರಾಜ್ಕುಮಾರ್-ಭಾರತಿ ದೂರವಾದರೇ? ಅಸಲಿ ಕಾರಣವೇನು?
ಅಣ್ಣಾವ್ರ ಜೊತೆ ನಾಯಕಿಯಾಗಿ ನಟಿಸಿದವರ ದೊಡ್ಡ ಪಟ್ಟಿನೇ ಇದೆ. ಡಾ. ರಾಜ್ ಕುಮಾರ್ ನಟಿಸಿದ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಹಲವು ನಟಿಯರು ನಾಯಕಿಯಾಗಿ ನಟಿಸಿದ್ದಾರೆ. ಅವರಲ್ಲಿ ಪಂಡರೀಬಾಯಿ ಅವರಿಂದ ಶುರುವಾಗುತ್ತೆ. ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ಗೀತಾ, ಮಾಧವಿ, ಜಯಪ್ರದಾವರೆಗೂ ಬಂದು ನಿಲ್ಲುತ್ತೆ. ಇವರಲ್ಲಿ ಜನಪ್ರಿಯ ಜೋಡಿ ರಾಜ್ಕುಮಾರ್ ಹಾಗೂ ಭಾರತಿಯವರ ಜೋಡಿ.
ಕನ್ನಡ ಚಿತ್ರರಂಗದಲ್ಲಿ ಇದೊಂದು ಅಪರೂಪದ ದಾಖಲೆ. ಒಬ್ಬ ನಾಯಕನ ಜೊತೆ ಅಭಿನಯಿಸಿರುವ ಎಲ್ಲಾ ಚಿತ್ರಗಳಲ್ಲೂ ಒಬ್ಬ ನಟಿ. ಆತನಿಗೆ ನಾಯಕಿಯಾಗಿಯೇ ನಟಿಸಿರುವ ದಾಖಲೆಯನ್ನು ಭಾರತಿಯವರು ಮಾಡಿದ್ದಾರೆ. ಆದರೆ, 'ದೂರದ ಬೆಟ್ಟ' ಸಿನಿಮಾದ ನಂತರ, 1973ರ ನಂತರ ಈ ಜೋಡಿ ಯಾಕೆ ದೂರ ಆಯ್ತು? ಈ ಪ್ರಶ್ನೆ ಇಬ್ಬರ ಅಭಿಮಾನಿಗಳಲ್ಲೂ ಇದ್ದೇ ಇದೆ.

ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಬಂದಿದ್ದು 1954ರಲ್ಲಿ. ಆರಂಭದ ಸಿನಿಮಾದಲ್ಲಿ ಅವರಿಗೆ ಪಂಡರೀಬಾಯಿ ನಾಯಕಿಯಾಗಿದ್ದರು. ಸುಮಾರು ಐದಾರು ವರ್ಷಗಳ ಕಾಲ ಪಂಡರೀಬಾಯಿ, ಎಂವಿ ರಾಜಮ್ಮನವರು, ಇಂತಹ ಹಿರಿಯ ಕಲಾವಿದರೇ ಅವರಿಗೆ ನಾಯಕಿಯರಾಗಿ ಅಭಿನಯಿಸಿದ್ದರು. ಮುಂದೆ ಹೊಸ ಹೊಸ ನಾಯಕಿಯರ ಆಗಮನ ಆಗುತ್ತೆ. 1960ರಲ್ಲಿ ಲೀಲಾವತಿ ಅಣ್ಣಾವ್ರಿಗೆ ನಾಯಕಿಯಾಗುತ್ತಾರೆ. ಅಲ್ಲಿಂದ ಇವರಿಬ್ಬರದ್ದು ಒಂದು ಯಶಸ್ವಿ ಜೋಡಿಯಾಗಿ ಹೊರ ಹೊಮ್ಮುತ್ತೆ.
ಅಣ್ಣಾವ್ರಿಗೆ ಲೀಲಾವತಿ, ಜಯಂತಿ ನಾಯಕಿಯರಾಗಿದ್ದಾರೆ. ಆದರೆ, ಹೆಚ್ಚು ವರ್ಷಗಳ ಕಾಲ ಅವರು ಹೀರೋ-ಹೀರೋಯಿನ್ ಆಗಿ ನಟಿಸಲಿಲ್ಲ. ಲೀಲಾವತಿ 7 ವರ್ಷಗಳ ಕಾಲ ಡಾ.ರಾಜ್ಕುಮಾರ್ ಅವರಿಗೆ ನಾಯಕಿಯಾದರೆ, ಜಯಂತಿ 12 ವರ್ಷಗಳ ಕಾಲ ಹೀರೋಯಿನ್ ಆಗಿ ನಟಿಸಿದ್ದರು. ಇನ್ನು ಕಲ್ಪನಾ ಅವರು 11 ವರ್ಷಗಳ ಕಾಲ ನಾಯಕಿಯಾಗಿದ್ದರು. ಆದರೆ, ಭಾರತಿ ವಿಷ್ಣುವರ್ಧನ್ 1966ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಣ್ಣಾವ್ರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ, 'ದೂರದ ಬೆಟ್ಟ' ರಾಜ್ಕುಮಾರ್ ಹಾಗೂ ಭಾರತಿ ಇಬ್ಬರೂ ನಟಿಸಿದ ಕೊನೆಯ ಸಿನಿಮಾ ಆಯ್ತು. ಅದ್ಯಾಕೆ ಅನ್ನೋದನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.

ಅಣ್ಣಾವ್ರೊಂದಿಗೆ ಭಾರತಿ ವಿಷ್ಣುವರ್ಧನ್ ನಟಿಸುವಾಗ ಸುಮಾರು ಕೇವಲ 16 ವರ್ಷ ವಯಸ್ಸು. ಇವರಿಬ್ಬರ ನಡುವಿನ ವಯಸ್ಸಿನ ಅಂತ 21 ವರ್ಷ ಇತ್ತು. ಹೀಗಿದ್ದರೂ ಸುಮಾರು ಏಳು ವರ್ಷಗಳ, ಅಂದರೆ, 1973ರವರೆಗೆ 26 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರಿಬ್ಬರ ಆ ಮಟ್ಟಿಗೆ ಜನಪ್ರಿಯರವಾಗಿತ್ತು ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
"ರಾಜ್ಕುಮಾರ್ ಹಾಗೂ ಭಾರತಿಯವರ ಜೋಡಿ ಜನಪ್ರಿಯವಾಗಿತ್ತು ನಿಜ. ಪ್ರೇಕ್ಷಕರಿಗೆ ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಹಾಗಿದ್ದರೂ ಅವರು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಬಯಕೆ ಇತ್ತು. ಅದು ತಪ್ಪಲ್ಲ. ಆದರೆ, ಇದಕ್ಕೆ ಕಾರಣಗಳನ್ನು ಹುಡುಕುವಾಗ ನಕಾರಾತ್ಮಕ ವಿಷಯಗಳನ್ನೇ ಮುನ್ನೆಲೆಗೆ ತರುವುದು ಸರಿಯಲ್ಲ." ಎಂದು ರಾಜ್ಕುಮಾರ್ ಹಾಗೂ ಭಾರತಿಯವರ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಹಬ್ಬಿಸಿರುವುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.

ನಾಯಕಿಯರಿಗೆ ತೆರೆಮೇಲೆ ಅಲ್ಪ ಆಯಸ್ಸು ಇರುತ್ತೆ. ಈ ಕಾರಣಕ್ಕೆ ಡಾ.ರಾಜ್ಕುಮಾರ್ ಅವರೊಂದಿಗೆ ಭಾರತಿಯವರು ದೂರದ ಬೆಟ್ಟದ ಬಳಿಕ ನಟಿಸಲಿಲ್ಲ. ಇಷ್ಟೇ ಅಲ್ಲದೇ ಇನ್ನೂ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
"ದೂರದ ಬೆಟ್ಟದ ಬಳಿಕ ಗಂಧದ ಗುಡಿ ಸಿನಿಮಾ ಬರುತ್ತೆ. ಅದು ರಾಜ್ಕುಮಾರ್ ಅವರ 150ನೇ ಸಿನಿಮಾ. ಆ ಸಿನಿಮಾದಲ್ಲಿ ಭಾರತಿ ವಿಷ್ಣುವರ್ಧನ್ ಅವರು ನಾಯಕಿಯಾಗಬೇಕಿತ್ತು ಎನ್ನುವ ಒಂದು ಮಾಹಿತಿ ಇತ್ತು. ಆದರೆ, ಆ ನಾಯಕಿಯ ಪಾತ್ರಕ್ಕೆ ಮಹತ್ವವಿಲ್ಲ. ಅದೊಂದು ಚಿಕ್ಕ ಪಾತ್ರ ಅಂತ ಹೇಳಿ ಭಾರತಿಯವರು ಆ ಪಾತ್ರವನ್ನು ನಿರಾಕರಿಸಿದ್ದರು ಎನ್ನುವ ಮಾಹಿತಿನೂ ಇದೆ. ಅದೂ ತಪ್ಪಲ್ಲ. ಯಾಕಂದ್ರೆ ಅದು ಭಾರತಿಯವರ ವೈಯಕ್ತಿಕ ವಿಚಾರ" ಎನ್ನುತ್ತಾರೆ ಹರಿಹರಪುರ ಮಂಜುನಾಥ್.
"ದೂರದ ಬೆಟ್ಟದ ನಂತರ ಅವರಿಗೆ ಅವಕಾಶವಿರಲಿಲ್ಲ ಅಂತಲ್ಲ. ಅವಕಾಶವಿತ್ತು ಆದರೆ, ಅವರು ಅಭಿನಯಿಸಲಿಲ್ಲ. ಇದೇ ಗಂಧದಗುಡಿ ಸಿನಿಮಾದಲ್ಲಿ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ಅಭಿನಯಿಸಿ, ನಡೆದ ಒಂದು ದುರ್ಘಟನೆಯಿಂದಾಗಿ ಇಬ್ಬರ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದ್ದು ಇಂದಿಗೂ ಇತಿಹಾಸ. ಆ ಕಂದಕವನ್ನು ಮುಚ್ಚುವುದಕ್ಕಿಂತ ಆ ಕಂದಕವನ್ನು ಹೆಚ್ಚು ಮಾಡುವುದಕ್ಕೆ ಪ್ರಯತ್ನ ಪಟ್ಟರು. ಕೆಲವು ಕಾಲ ಯಶಸ್ವಿನೂ ಆದರು. ಆದರೆ, ರಾಜ್ಕುಮಾರ್ ಆಗಲಿ, ವಿಷ್ಣುವರ್ಧನ್ ಅವರಾಗಲಿ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರವರ ಪಾಡಿಗೆ ಅವರು ಕೆಲಸವನ್ನು ಮಾಡುತ್ತಾ ಹೋದರು. ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳುತ್ತಾ ಹೋದರು. "
ತೆರೆಮೇಲೆ ದೂರದ ಬೆಟ್ಟ ಸಿನಿಮಾದ ಬಳಿಕ ರಾಜ್ಕುಮಾರ್ ಹಾಗೂ ಭಾರತಿ ದೂರ ದೂರ ಆಗಿರಬಹುದು. ಆದರೆ, ವೈಯಕ್ತಿಕ ಜೀವನದಲ್ಲಿ 1975ರಲ್ಲಿ ವಿಷ್ಣುವರ್ಧನ್ ಭಾರತಿ ಮದುವೆ ಆದಾಗ, ಆ ವಿವಾಹ ಸಮಾರಂಭಕ್ಕೆ ಡಾ.ರಾಜ್ಕುಮಾರ್ ಅವರು ಹೋಗಿ ಆಶೀರ್ವಾದವನ್ನು ಮಾಡುತ್ತಾರೆ. ತಮ್ಮ ಸದಾಶಿವನಗರದ ಮನೆಯ ಗೃಹಪ್ರವೇಶಕ್ಕೆ ಇದೇ ದಂಪತಿಗಳನ್ನು ಕೂರಿಸಿ, ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ. ವಿಷ್ಣುವರ್ಧನ್ ಅವರ ಎಷ್ಟೋ ಸಿನಿಮಾಗಳಿಗೆ ರಾಜ್ಕುಮಾರ್ ದಂಪತಿ ಹೋಗಿ ಹಾರೈಸಿ ಬಂದಿದ್ದೂ ಇದೆ. ರಾಜ್ಕುಮಾರ್ ಅವರ ಎಷ್ಟೋ ಸಿನಿಮಾಗಳಿಗೆ ವಿಷ್ಣುವರ್ಧನ್ ದಂಪತಿ ಬಂದಿದ್ದು ಇದೆ." ಎನ್ನುತ್ತಾರೆ.
"ನಿರಂತರವಾಗಿ ನದಿ ನೀರಿನಂತೆ ಹರಿಯುವ ಚಿತ್ರರಂಗದಲ್ಲಿ ಕೆಲಸಗಳು ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತವೆ. ಯಾರ ಪಾಲಿಗೆ ಎಷ್ಟೆಷ್ಟು ಬರುತ್ತೋ ಅಷ್ಟನ್ನು ಅನುಭವಿಸುತ್ತಾ ಇರುತ್ತಾರೆ. ರಾಜ್ಕುಮಾರ್ ಹಾಗೂ ಪುಟ್ಟಣ್ಣ ಅವರ ಕಾಂಬಿನೇಷನ್ನಲ್ಲಿ ಕೆಲವು ಸಿನಿಮಾಗಳು ಬಂದವು. ಅದಾದ ಮೇಲೆ ಬರಲಿಲ್ಲ. ಇನ್ನು ಪುಟ್ಟಣ್ಣ ಕಣಗಾಲ್ ಅವರು ಆಸ್ಪತ್ರೆಗೆ ದಾಖಲಾದಾಗ ನೀವು ಹುಷಾರಾಗಿ ಬನ್ನಿ ಮತ್ತೆ ಸಿನಿಮಾ ಮಾಡೋಣ ಅಂತ ಹೇಳಿದ್ದರು" ಎಂದು ಕಾರಣಗಳನ್ನು ನೀಡುತ್ತಾರೆ.
ಪುಟ್ಟಣ್ಣ ಅವರ ಗುರುಗಳು ಪಂತುಲು ಅವರು ರಾಜ್ಕುಮಾರ್ 'ಅಳಿಯ ಗೆಳೆಯ' ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ ಅಂತ ಮುನಿಸಿಕೊಂಡು ದೂರವಾಗಿದ್ದರು. ಅದೇ ಸಿನಿಮಾದಲ್ಲಿ ಅಣ್ಣಾವ್ರ ಮೇಲೆ ಕೋಪಗಗೊಂಡು ನರಸಿಂಹರಾಜು ಕೂಡ ದೂರ ಆಗಿದ್ದರು. ಮುಂದೆ ರಾಜ್ಕುಮಾರ್ ಜೊತೆ ಪಂತುಲು ಹಾಗೂ ನರಸಿಂಹರಾಜು ಅವರು ಕೆಲಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಕುಮಾರ್ ಅವರಿಗೆ ನರಸಿಂಹರಾಜು ಮೇಲೆ ಅಪಾರವಾದ ಅಭಿಮಾನವಿತ್ತು. ಅದನ್ನು ಹಲವು ಬಾರಿ ಓಪನ್ ಆಗಿ ಹೇಳಿಕೊಂಡಿದ್ದರು. ರಾಜ್ಕುಮಾರ್ ಅಷ್ಟು ದೊಡ್ಡ ನಟರಾಗಿದ್ದರೂ, ಅಷ್ಟೇ ದೊಡ್ಡ ಹಾಸ್ಯ ನಟನ ಮೇಲೆ ಗೌರವ ಇಟ್ಟುಕೊಂಡಿದ್ದರು. ನರಸಿಂಹರಾಜು ಅವರ ಅಭಿಮಾನಿ ಅಂತ ಎಷ್ಟೋ ಬಾರಿ ಹೇಳಿಕೊಂಡಿದ್ದರು. ಇಷ್ಟೇ ಅಲ್ಲದೆ ಮೊದಲು ನರಸಿಂಹರಾಜು ಅವರ ಕಾಲ್ಶೀಟ್ ತೆಗೆದುಕೊಳ್ಳಿ ಅವರು ನನಗಿಂತ ಬ್ಯುಸಿ ಇದ್ದಾರೆ ಎಂದು ಅಣ್ಣಾವ್ರು ಹೇಳಿದ್ದನ್ನು ಸಾಕಷ್ಟು ಮಂದಿ ಹೇಳಿಕೊಂಡಿದ್ದಾರೆ.
ಹೀಗೆ ಸಿನಿಮಾರಂಗದಲ್ಲಿ ಹಲವು ಜೋಡಿಗಳು ನಾನಾ ಕಾರಣಕ್ಕೆ ಬೇರೆಯಾಗಿದ್ದು ಇದೆ. ಹಾಗೇ ವಯಸ್ಸಿನ ಕಾರಣದಿಂದ, ಜನಪ್ರಿಯತೆ ಕಾರಣದಿಂದ, ಇಲ್ಲವೇ ಇಗೋ ಕ್ಲ್ಯಾಶ್ ಆಗಿಯೋ ಜನಪ್ರಿಯ ಜೋಡಿ ಬೇರೆಯಾಗಿವೆ. ಅದರಲ್ಲಿ ರಾಜ್ಕುಮಾರ್ ಹಾಗೂ ಭಾರತಿ ಅವರ ಜೋಡಿ ಕೂಡ ಒಂದು. ಆದರೆ, ಇವರಿಬ್ಬರು ಒಟ್ಟಿಗೆ ನಟಿಸದೇ ಇದ್ದಕ್ಕೆ ಹಲವು ಗಾಳಿ ಸುದ್ದಿಗಳು ಓಡಾಡಿದ್ದವು. ಅದೆಲ್ಲವನ್ನೂ ಕೇವಲ ಗಾಳಿಸುದ್ದಿಯಷ್ಟೇ ಎಂದು ಹರಿಹರಪುರ ಮಂಜುನಾಥ್ ಹೇಳುತ್ತಾರೆ.


Click it and Unblock the Notifications











