'ಗಾಳಿಪಟ' ಸಿನಿಮಾದಲ್ಲಿ ನಟಿಸಲು ಅಪ್ಪು ಒಪ್ಪಲಿಲ್ಲ ಯಾಕೆ? ಆಫರ್ ಗಣೇಶ್ರನ್ನೇ ಹುಡುಕಿ ಬಂದಿದ್ದೇಗೆ?
ಗಣೇಶ್ ಹಾಗೂ ಯೋಗರಾಜ್ ಭಟ್ ಇಬ್ಬರಿಗೂ 'ಮುಂಗಾರು ಮಳೆ' ಸ್ಟಾರ್ಡಮ್ ಕೊಟ್ಟಿತ್ತು. ಅದಾಗಲೇ ಗಣೇಶ್ ಗೋಲ್ಡನ್ ಸ್ಟಾರ್ ಆಗಿದ್ದರು. ಇತ್ತ ಯೋಗರಾಜ್ ಭಟ್ ಬೇಡಿಕೆಯಲ್ಲಿ ಇದ್ದರು. ಸುಮಾರು ಒಂದು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಸಿನಿಮಾ 'ಮುಂಗಾರು ಮಳೆ' ಭಾರತದಾದ್ಯಂತ ಸುದ್ದಿಯಾಗಿತ್ತು. ಭಾಷೆ ಬೇಧ ಮರೆತು ಈ ಕನ್ನಡ ಸಿನಿಮಾ ನೋಡಿದ್ದರು.
ಮತ್ತೆ ಇದೇ ಕಾಂಬಿನೇಷನ್ ಸಿನಿಮಾವೊಂದು ಸೆಟ್ಟೇರುತ್ತೆ ಅಂತ ಎದುರು ನೋಡುತ್ತಿದ್ದರು. ಆದರೆ, ಅಷ್ಟೊತ್ತಿಗಾಗಲೇ ಯೋಗರಾಜ್ ಭಟ್ ಹಾಗೂ ಗಣೇಶ್ ಮಧ್ಯೆ ಯಾವುದೋ ಕಾರಣಕ್ಕೆ ಸಣ್ಣ ಪುಟ್ಟ ಮನಸ್ತಾಪ ಬಂದಿತ್ತು. 'ಮುಂಗಾರು ಮಳೆ' ಬಳಿಕ ಮತ್ತೆ ಇದೇ ಜೋಡಿ ಒಟ್ಟಿಗೆ ಕೆಲಸ ಮಾಡುವ ಆಲೋಚನೆಯಲ್ಲೇ ಇರಲಿಲ್ಲ. ಭಟ್ಟರು ಕೂಡ 'ಗಾಳಿಪಟ'ವನ್ನು ಪುನೀತ್ ರಾಜ್ಕುಮಾರ್ಗೆ ಮಾಡಲು ನಿರ್ಧರಿಸಿದ್ದರು.

ಪುನೀತ್ ರಾಜ್ಕುಮಾರ್ಗೆ 'ಗಾಳಿಪಟ' ಕಥೆಯನ್ನೂ ಹೇಳಿದ್ದರು. ಅಪ್ಪುಗೂ ಕಥೆ ತುಂಬಾನೇ ಇಷ್ಟ ಆಗಿತ್ತು. ಆದರೂ ಪುನೀತ್ ರಾಜ್ಕುಮಾರ್ ಜೊತೆ 'ಗಾಳಿಪಟ' ಸಿನಿಮಾ ಆಗಲೇ ಇಲ್ಲ. ಅದಕ್ಕೆ ಕಾರಣವೇನು? ಕಥೆ ಓಕೆ ಆದ್ಮೇಲೂ ಪುನೀತ್ ರಾಜ್ಕುಮಾರ್ ಈ ಸಿನಿಮಾವನ್ನು ಯಾಕೆ ರಿಜೆಕ್ಟ್ ಮಾಡಿದ್ದರು? ಯೋಗರಾಜ್ ಭಟ್ ಹಾಗೂ ಗಣೇಶ್ ನಡುವೆ ಮನಸ್ತಾಪವಿದ್ದರೂ ಹೇಗೆ ಒಂದಾಗಿ ಸಿನಿಮಾ ಮಾಡಿದರು? ಇದೊಂದು ಇಂಟ್ರೆಸ್ಟಿಂಗ್ ಸ್ಟೋರಿ.
ಕನ್ನಡ ಚಿತ್ರರಂಗದ ಮತ್ತೊಬ್ಬ ನಿರ್ದೇಶಕ ದಯಾಳ್ ಪದ್ಮನಾಭನ್ 'ಗಾಳಿಪಟ' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಆಗಿದ್ದರು. 'ಗಾಳಿಪಟ' ಟೀಮ್ ಅನ್ನು ಸೆಟ್ ಮಾಡಿಕೊಟ್ಟಿದ್ದೇ ಇವರು. ಇತ್ತೀಚೆಗೆ ಸುದ್ದಿಮನೆ ಅನ್ನೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪುನೀತ್ 'ಗಾಳಿಪಟ' ಸಿನಿಮಾ ಕೈಬಿಟ್ಟಿದ್ದೇಗೆ? ಯೋಗರಾಜ್ ಭಟ್ ಹಾಗೂ ಗಣೇಶ್ ನಡುವೆ ಮನಸ್ತಾಪವಿದ್ದರೂ ಒಟ್ಟಿಗೆ ಸಿನಿಮಾ ಮಾಡಿದ್ದೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಗಾಳಿಪಟ ಸಿನಿಮಾವನ್ನು ಡಿಸೈನ್ ಮಾಡಿದ್ದು ನಾನು. ಅಂದರೆ, ಮುಂಗಾರು ಮಳೆ ಆದ್ಮೇಲೆ ಗಣೇಶ್ ಹಾಗೂ ಯೋಗರಾಜ್ ಭಟ್ ಸಿನಿಮಾ ಮಾಡುವ ಐಡಿಯಾ ಇರಲಿಲ್ಲ. ಸಾಮಾನ್ಯವಾಗಿ ಒಂದು ಕಾಂಬಿನೇಷನ್ ಹಿಟ್ ಆದ್ಮೇಲೆ ಅದೇ ರಿಪೀಟ್ ಆಗುತ್ತೆ. ಆದರೆ, ಆ ಐಡಿಯಾ ಇಬ್ಬರಿಗೂ ಇರಲಿಲ್ಲ. ಸಣ್ಣ ಪುಟ್ಟ ಮನಸ್ತಾಪಗಳು ಅವರಲ್ಲಿ ಇತ್ತು. ಆದರೆ, ಪುನೀತ್ ರಾಜ್ಕುಮಾರ್ ಆ ಸಿನಿಮಾವನ್ನು ಮಾಡಬೇಕಿತ್ತು. ನಾವು ಪುನೀತ್ ರಾಜ್ಕುಮಾರ್ ಮನೆಗೆ ಹೋಗಿ ಕಥೆಯನ್ನೆಲ್ಲ ಹೇಳಿ ಅವರೇ ಗಾಳಿಪಟ ಸಿನಿಮಾ ಹೀರೋ ಆಗಬೇಕಿತ್ತು." ಎಂದು ದಯಾಳ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಅಪ್ಪು ಯಾಕೆ ಗಾಳಿಪಟ ಸಿನಿಮಾ ಒಪ್ಪಲಿಲ್ಲ ಅನ್ನೋದಕ್ಕೊಂದು ಕಾರಣವಿತ್ತು. ಆಗ ಪುನೀತ್ 'ಬಿಂದಾಸ್' ಸಿನಿಮಾಗೆ ಡೇಟ್ ಕೊಟ್ಟಿದ್ದರು. ಅದನ್ನು ಮುಗಿಸಿ ಡೇಟ್ ಕೊಡುತ್ತೇನೆ ಎಂದಿದ್ದರು. "ನಾನೇ ಗಾಳಿಪಟ ಸಿನಿಮಾ ಡಿಸೈನ್ ಮಾಡಿದ್ದರಿಂದ ನನಗೆ ಏನಿತ್ತು ಅಂದರೆ, ಭಾರತವೇ ತಿರುಗಿ ನೋಡುವಂತಹ ಮುಂಗಾರು ಮಳೆ ಮಾಡಿದ ಡೈರೆಕ್ಟರ್ ಕರೆದುಕೊಂಡು ಬಂದಿದ್ದೇನೆ. ನಮಗೆ ತಕ್ಷಣಕ್ಕೆ ಡೇಟ್ ಕೊಡಿ. ಆಮೇಲೆ ಬಿಂದಾಸ್ ಮಾಡಿ ಅನ್ನೋತರ ಮಾತುಕತೆ ಆಯ್ತು. ಪುನೀತ್ ಅವರು ನನಗೆ ಡಿ ಬಾಬು ಅವರ ಜೊತೆ ಕಮೆಟ್ಮೆಂಟ್ ಇದೆ. ಆ ಸಿನಿಮಾ ಮಾಡಿಕೊಂಡು ಬರುತ್ತೇನೆ ಅಂತ ಹೇಳಿದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇತ್ತ ಗಾಳಿಪಟ ಸಿನಿಮಾ ಮಾಡುವುದಕ್ಕೆ ಆಂಧ್ರದಿಂದ ನಿರ್ಮಾಪಕರು ಬಂದಿದ್ದರು. ಅವರು ಬಿಂದಾಸ್ ಮುಗಿಯುವವರೆಗೂ ಕಾಯಲು ಸಾಧ್ಯವಿಲ್ಲ ಎಂದಿದ್ದರು. ಈಗಲೇ ಸಿನಿಮಾ ಶುರು ಮಾಡಬೇಕು ಎಂದಿದ್ದರು. ಆಗ ನಿರ್ಮಾಪಕ ದಯಾಳ್ ಪದ್ಮನಾಭನ್ ಅವರಿಗೆ ಗಣೇಶ್ ಹಾಗೂ ಯೋಗರಾಜ್ ಭಟ್ ಇಬ್ಬರನ್ನೂ ಒಂದು ಮಾಡಿ ಸಿನಿಮಾ ಎಂದು ಸಲಹೆ ನೀಡಿದ್ದರಂತೆ. "ಅವರಿಬ್ಬರನ್ನೂ ಒಂದು ಕಡೆ ಕೂರಿಸಿ ಸಮಾಧಾನ ಮಾಡಿಸಿ, ಆ ಪ್ರಾಜೆಕ್ಟ್ ಒಂದೇ ಮೀಟಿಂಗ್ನಲ್ಲಿ ಓಕೆ ಆಯ್ತು. ಹಾಗೇ ಒಂದು ತಿಂಗಳಲ್ಲಿ ಶೂಟಿಂಗ್ ಹೋದ್ವಿ. ಗಾಳಿಪಟ ಆಗಿದ್ದು ಹಾಗೆ." ಎನ್ನುತ್ತಾರೆ ದಯಾಳ್.


Click it and Unblock the Notifications











