'ಶಾಂತಿ ಕ್ರಾಂತಿ' ವೇಳೆ ರವಿಚಂದ್ರನ್ ಮನೆಗೆ ಕಲ್ಲು ತೂರಿದ್ದೇಕೆ? ಪ್ರಿಂಟ್ ಸುಟ್ಟಾಕಿದ್ದು ಏಕೆ?
ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ವುಡ್ನ ಕ್ರಿಯೇಟಿವ್ ಸ್ಟಾರ್ ಕಮ್ ಡೈರೆಕ್ಟರ್. ತಮ್ಮ ವೃತ್ತಿ ಬದುಕಿನಲ್ಲಿ ರಿಮೇಕ್ ಸಿನಿಮಾಗಳನ್ನೇ ಹೆಚ್ಚು ಮಾಡಿದ್ದರೂ, ಮೂಲ ಸಿನಿಮಾ ಮಂದಿನೇ ಮೂಗಿನ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ್ದರು. ಸಿನಿಮಾ ಮೇಲಿದ್ದ ಅಪಾರ ಪ್ರೀತಿಗೆ ಅಭಿಮಾನಿಗಳು ಕ್ರೇಜಿಸ್ಟಾರ್ ಅಂತ ಬಿರುದು ಕೊಟ್ಟಿದ್ದರು.
ರವಿಚಂದ್ರನ್ ಅವರ ಮೂಲಕ ತಮಿಳುನಾಡು ಆಗಿದ್ದರೂ, ಕರ್ನಾಟಕದಲ್ಲಿಯೇ ಹುಟ್ಟಿದ್ದು, ಬೆಳೆದಿದ್ದು, ಹೆಸರು ಸಂಪಾದಿಸಿದ್ದು, ಜನರ ಪ್ರೀತಿ ಗಳಿಸಿದ್ದು ಎಲ್ಲವೂ ಇಲ್ಲೇ. ಹೀಗಾಗಿ ಕನ್ನಡಿಗರಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮೇಲೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ರವಿಚಂದ್ರನ್ ಸಿನಿಮಾದ ಹಾಡುಗಳಿಗೆ ಕರಗಿ ಹೋಗಿದ್ದು.

ಹೀಗಿದ್ದರೂ, ರವಿಚಂದ್ರನ್ ತಮ್ಮ ವೃತ್ತಿ ಬದುಕಿನಲ್ಲಿ ಪೀಕ್ನಲ್ಲಿದ್ದ ಕಾಲ. ಆ ವೇಳೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಶಾಂತಿ ಕ್ರಾಂತಿ' ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದರು. ಈ ವೇಳೆ ಬರಿ ಕೈ ಅಷ್ಟೇ ಸುಟ್ಟುಕೊಂಡಿರಲಿಲ್ಲ. ಒಂದು ವಿವಾದಕ್ಕೂ ಸಿಕ್ಕಿಕೊಂಡಿದ್ದರು. ಈ ಸಿನಿಮಾ ವೇಳೆ ರವಿಚಂದ್ರನ್ ಏನೋ ಮಾತಾಡಿದರು ಅನ್ನೋದ ಕಾರಣಕ್ಕೆ ವಿವಾದ ಹುಟ್ಟಿಕೊಂಡಿತ್ತು. ಆ ಘಟನೆಯನ್ನು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
"ನಾನು ಈಗ ಏನೇ ಇದ್ದರೂ ಅದು ಕನ್ನಡದಿಂದಲೇ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಇಲ್ಲೇ. ನಮ್ಮ ಮನೆಯಲ್ಲಿ ತಮಿಳು ಮಾತಾಡೋದು ಬಿಟ್ಟರೆ, ಎಲ್ಲಾ ಕಡೆ ಕನ್ನಡವನ್ನೇ ಮಾತಾಡಿರೋದು. ನಮ್ಮ ಅಪ್ಪ ಮಾಡಿದ್ದು ಕನ್ನಡ ಸಿನಿಮಾಗಳೇ ಜಾಸ್ತಿ. ಆದರೆ, ಶಾಂತಿ ಕ್ರಾಂತಿ ಟೈಮ್ನಲ್ಲಿ ನಾನು ಏನೋ ಮಾತಾಡಿದೆ ಅನ್ನೋ ಸನ್ನಿವೇಶ ಸೃಷ್ಟಿ ಮಾಡಿಕೊಳ್ಳುತ್ತಾರೆ. ಒಂದು ಕೆಟ್ಟ ಸಮಯ ಅಂತೂ ಬಂದಿತ್ತು." ಎಂದು ಆ ವೇಳೆ ನಡೆದ ಘಟನೆಯನ್ನು ವಿವರಿಸಿದ್ದರು.
ಗಲಾಟೆ ನೋಡ ನೋಡುತ್ತಲೇ ದೊಡ್ಡದಾಗಿತ್ತು. ರವಿಚಂದ್ರನ್ ಮನೆಗೆ ಕಲ್ಲು ತೂರುವವರೆಗೂ ಬಂದಿತ್ತು. ಸಿನಿಮಾ ಪ್ರಿಂಟ್ಗಳನ್ನು ಸುಟ್ಟಾಕಿದ್ದರು. "ಆಗ ನನ್ನ ಮನೆಗೆ ಕಲ್ಲು ಹೊಡೆಯುತ್ತಾರೆ. ಪ್ರಿಂಟ್ ಎಲ್ಲಾ ಸುಟ್ಟಾಕುತ್ತಾರೆ. ತುಂಬಾ ಪಾಪುಲರ್ ಆಗಿದ್ದ ಸಮಯ ನನ್ನದು. ಆ ವೇಳೆ ನನ್ನ ತಂದೆಗೆ ಭಯ ಶುರುವಾಗುತ್ತೆ. ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ನನಗಿಂತ ಅವರನ್ನು ನೋಡುವುದಕ್ಕೆ ಆಗುತ್ತಿರಲಿಲ್ಲ ನನಗೆ. ನನ್ನ ಮಗನಿಗೆ ಏನೋ ಮಾಡಿ ಬಿಡುತ್ತಾರೆ. ಏನೋ ತೊಂದರೆ ಕೊಡುತ್ತಾರೆ ಅನ್ನೋದು ಅವರ ತಲೆಗೆ ಬಂದು ಬಿಟ್ಟಿತು." ಎಂದು ಹೇಳಿಕೊಂಡಿದ್ದರು.

ಆ ಸಂದರ್ಭದಲ್ಲಿ ಅಣ್ಣಾವ್ರು ಕೂಡ ರವಿಚಂದ್ರನ್ ಪರ ನಿಂತಿದ್ದರು. ರವಿಚಂದ್ರನ್ ಆಗಲ್ಲ ಅಂತ ಪತ್ರ ಬರೆದಿದ್ದರು. ಅದನ್ನು ಕ್ರೇಜಿಸ್ಟಾರ್ ನೆನಪಿಸಿಕೊಂಡಿದ್ದಾರೆ. "ಈ ವೇಳೆ ಡಾ. ರಾಜ್ಕುಮಾರ್ ಅವರು ಕೂಡ ಏನೂ ತಿಳಿದು ಕೊಳ್ಳದೆ ಅವನು ಅಂತಹವನಲ್ಲ ಅಂತ ಪತ್ರ ಬರೆದರು. ಆದರೆ, ಇದನ್ನು ಜನಕ್ಕೆ ಹೇಳುವುದು ಹೇಗೆ? ಅರ್ಥ ಆಗುವುದು ಹೇಗೆ? ಇವತ್ತಿಗೂ ಯಾರಿಗೆ ಏನು ಅನ್ನೋದು ಗೊತ್ತಿಲ್ಲ. ನನಗೆ ಮೊದಲು ಗೊತ್ತಿಲ್ಲ." ಎಂದು ರವಿಚಂದ್ರನ್ ಹೇಳಿದ್ದಾರೆ.
ಆಗ ರವಿಚಂದ್ರನ್ ಅವರಿಗೆ ರಾಜ್ಕುಮಾರ್ ಅವರಿಗೆ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟ ಬೇಕು" ಅನ್ನೋ ಕನ್ನಡದ ಹಾಡಿದೆ. ನನಗೆ ಕರುನಾಡ ತಾಯಿ ಅನ್ನೋ ಹಾಡು ಮೊದಲ ಸಿನಿಮಾದಲ್ಲಿದೆ. ಅದರ ಮಧ್ಯೆ ಸಿಪಾಯಿ ಸಿನಿಮಾದಲ್ಲಿ ಹಂಸಲೇಖ ಅವರದ್ದು "ಹೇ ರುಕ್ಕಮ್ಮ.." ಅಂತ ಸಾಂಗ್ ಬಂದಿತ್ತು. ಹೀಗಾಗಿ ನಾನು ಮಾಡುವ ಮ್ಯೂಸಿಕ್ನಲ್ಲಿ ಕನ್ನಡದ ಬಗ್ಗೆ ನನ್ನದೇ ಒಂದು ಹಾಡು ಬೇಕು ಅಂತ ರವಿಚಂದ್ರನ್ ಬಯಸಿದ್ದರು. ಆಗ ಹುಟ್ಟಿದ್ದೇ ಮಲ್ಲ ಸಿನಿಮಾದ "ಕರುನಾಡೇ..." ಅನ್ನೋ ಹಾಡು.
ಇದೇ ಸಂದರ್ಶನದಲ್ಲಿ ಕನ್ನಡದ ಬಗ್ಗೆ ತಾನಿಟ್ಟರುವ ಗೌರವದ ಎಂತಹದ್ದು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾವು ಯಾರಿಗಿಂತ ಕಮ್ಮಿಯಿಲ್ಲ ಅಂತ ಇವತ್ತಲ್ಲ ಯಾವತ್ತಿದ್ದರೂ ಪ್ರೂವ್ ಮಾಡುವುದಕ್ಕೆ ಕರ್ನಾಟಕದಲ್ಲಿಯೇ ಉಳಿದುಕೊಂಡಿದ್ದೇನೆ. ಕನ್ನಡದಲ್ಲಿಯೇ ಇರುತ್ತೇನೆ. ಶ್ರೀದೇವಿ ಜೊತೆ ನಿರ್ದೇಶನ ಮಾಡುವುದಕ್ಕೆ ಹಿಂದಿ ಸಿನಿಮಾಗೆ ಕರೆದಾಗಲೂ ನಾನು ಹೋಗಿಲ್ಲ. ಪ್ರೇಮಲೋಕ ಮಾಡಿದಾಗಲೂ ನನ್ನನ್ನು ಕರೆದಿದ್ದರು ಆಗಲೂ ನಾನು ಹೋಗಿಲ್ಲ. " ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.


Click it and Unblock the Notifications











