ಅಣ್ಣಾವ್ರ ಕಂಪನಿ ಸಿನಿಮಾದಲ್ಲಿ ಆರತಿ ಯಾಕೆ ಊಟ ಮಾಡಲಿಲ್ಲ? ಮೈಸೂರಿನಲ್ಲಿ ಅಂದು ನಡೆದಿದ್ದೇನು?
ಡಾ.ರಾಜ್ಕುಮಾರ್ ಕಂಪನಿ ನಿರ್ಮಾಣದ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಎಲ್ಲರೂ ತುದಿಗಾಲಲ್ಲಿ ನಿಲ್ಲುತ್ತಿದ್ದರು. ಅದರಲ್ಲೂ ಅಣ್ಣಾವ್ರ ಜೊತೆ ನಟಿಸುವುದಕ್ಕೆ ನಾಯಕಿ ಕ್ಯೂ ನಿಲ್ಲುತ್ತಿದ್ದರು. ಅದರಲ್ಲೂ ರಾಜ್ಕುಮಾರ್ಗೆ ನಾಯಕಿ ನಟಿಸುವುದು ಹೀರೊಯಿನ್ಗಳ ಪಾಲಿಗೆ ಹೆಮ್ಮೆಯ ಸಂಗತಿಯಾಗಿತ್ತು. ಹೀಗೆ ಅಣ್ಣಾವ್ರೊಂದಿಗೆ ಸಿನಿಮಾ ಮಾಡಿ ಬೆಸ್ಟ್ ಪೇರ್ ಅಂತ ಅನಿಸಿಕೊಂಡಿದ್ದ ನಟಿಯರಲ್ಲಿ ಆರತಿ ಕೂಡ ಒಬ್ಬರು.
ಆರತಿ ಹಾಗೂ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಬಂದ ಸಾಕಷ್ಟು ಸಿನಿಮಾಗಳು ಗೆದ್ದಿವೆ. ಈ ಜೋಡಿಯನ್ನು ತೆರೆ ಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕೂಡ ತುದಿಗಾಲಲ್ಲಿ ನಿಲ್ಲುತ್ತಿದ್ದರು. ರಾಜ್ಕುಮಾರ್ ನಟಿಸಿದ ಹಲವು ಸಿನಿಮಾಗಳಿಗೆ ಆರತಿ ನಾಯಕಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ.

ಚಿಕ್ಕ ಪುಟ್ಟ ಪಾತ್ರವಾಗಿದ್ದರೂ ಸರಿ ಆರತಿ ಒಪ್ಪಿ ಅಣ್ಣಾವ್ರ ಸಿನಿಮಾದಲ್ಲಿ ನಟಿಸಿದ್ದು ಇದೆ. ರಾಜ್ಕುಮಾರ್ ಹಾಗೂ ಆರತಿ ನಟಿಸಿದ ಸಿನಿಮಾಗಳ ಬಗ್ಗೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಕೆಲವು ಇಂಟ್ರೆಸ್ಟಿಂಗ್ ಸುದ್ದಿಗಳನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೊಂದು ಅಣ್ಣಾವ್ರ ನಿರ್ಮಾಣ ಸಂಸ್ಥೆಯ ಸಿನಿಮಾದ ಶೂಟಿಂಗ್ ಸೆಟ್ಟಿನಲ್ಲಿ ಆರತಿ ಊಟ ಮಾಡುವುದನ್ನು ನಿಲ್ಲಿಸಿದ್ದರು.ಅದು ಅಣ್ಣಾವ್ರ ಗಮನಕ್ಕೆ ಬಂದಾಗ ಏನಾಯ್ತು? ಅನ್ನೋ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಕುಮಾರ್ ಸಿನಿಮಾದಲ್ಲಿ ಆರತಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೂ, ಆ ಸಿನಿಮಾಗಳು ಅವರ ವೃತ್ತಿ ಬದುಕಿನ ಪ್ರಮುಖ ಸಿನಿಮಾಗಳಾಗಿ ಮೂಡಿ ಬಂದವು. "ಆರಂಭದಲ್ಲಿ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಇರಬಹುದು. ನ್ಯಾಯವೇ ದೇವರು ಇರಬಹುದು. ಕಸ್ತೂರಿ ನಿವಾಸ ಇರಬಹುದು. ಇವೆಲ್ಲ ರಾಜ್ಕುಮಾರ್ ಜೊತೆ ಆರತಿಗೆ ನಟಿಸಲು ಸಿಕ್ಕ ಸಿನಿಮಾಗಳು. ಯಾವುದರಲ್ಲೂ ಬಹಳ ದೀರ್ಘವಾದ ಪಾತ್ರಗಳು ಇರಲಿಲ್ಲ. ಆದರೆ, ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ನಟಿಸುವುದೇ ಹೆಮ್ಮೆಯ ಸಂಗತಿಯಾಗಿದ್ದರಿಂದ ಆರತಿಯವರ ವೃತ್ತಿ ಜೀವನದಲ್ಲಿ ಬಹಳ ಒಳ್ಳೆಯ ಸಿನಿಮಾಗಳಾಗಿ ಮೂಡಿ ಬಂತು. ಬಂಗಾರದ ಮನುಷ್ಯ ಸಿನಿಮಾದಲ್ಲೂ ಕೂಡ ಚಿಕ್ಕ ಪಾತ್ರದಲ್ಲಿ ಆರತಿ ಕಾಣಿಸಿಕೊಂಡಿದ್ದಾರೆ" ಎಂದು ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ಗೆ ಹೇಳಿದ್ದಾರೆ.
ರಾಜ್ಕುಮಾರ್ ಹಾಗೂ ಆರತಿ ಕಾಂಬಿನೇಷನ್ ಕಿಕ್ ಕೊಡುತ್ತಿತ್ತು. ಅವರನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕೂಡ ಇಷ್ಟ ಪಡುತ್ತಿದ್ದರು. "ರಾಜ್ಕುಮಾರ್ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರದಲ್ಲಿ ಆರತಿ ಕಾಣಿಸಿಕೊಂಡಿದ್ದು ಪ್ರತಿಧ್ವನಿ ಸಿನಿಮಾದಲ್ಲಿ. ದೊರೆ-ಭಗವಾನ್ ಈ ಸಿನಿಮಾದ ನಿರ್ದೇಶಕರು. ಇದರಲ್ಲಿ ಆರತಿ ಬಹುಮುಖ್ಯ ಪಾತ್ರದ ಮಾಡಿದ್ದರು. ಇದರಲ್ಲಿ ಅಭಿನಯಕ್ಕೆ ಅವಕಾಶವಿದ್ದಂತಹ ಪಾತ್ರ. ಇದಾದ ಮೇಲೆ ನನಗೆ ನೆನಪಾಗಲೇ ಬೇಕಾದಂತಹ ಸಿನಿಮಾ ಸಿಪಾಯಿ ರಾಮು. ಅದರಲ್ಲೂ "ವ್ಹಾರೆ ಮೇರೆ ಮುರುಗ.." ಹಾಡಲ್ಲಿ ಆರತಿ ಕುಣಿದು ನರ್ತಿಸಿದ್ದ ರೀತಿ ಇದೆಯಲ್ಲ ಅದನ್ನು ಯಾರೂ ಮರೆಯೋಕೆ ಆಗಲ್ಲ." ಎಂದು ಕಾಂಬಿನೇಷನ್ ಬಗ್ಗೆ ಮಾತಾಡಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಕುಮಾರ್-ಆರತಿ ಒಟ್ಟಿಗೆ ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಸ್ವಾರಸ್ಯಕರ ಸಂಗತಿ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ರಾಜ್ಕುಮಾರ್ ಸಂಸ್ಥೆಯಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದರೆ, ಅಲ್ಲಿ ಎಲ್ಲರೂ ಒಂದೇ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ದೊಡ್ಡ ಸ್ಟಾರ್ ಆಗಿದ್ದರೂ ರಾಜ್ಕುಮಾರ್ ಕೂಡ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಆದರೆ, ಒಮ್ಮೆ ಆರತಿ ಮಾತ್ರ ಊಟ ಮಾಡಲು ನಿರಾಕರಿಸಿದ್ದರು. ಅದ್ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್ ಸಂಗತಿ.
"ಸಾಮಾನ್ಯವಾಗಿ ರಾಜ್ಕುಮಾರ್ ಅವರ ಸಿನಿಮಾ ಯೂನಿಟ್ನಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದು ಪದ್ಧತಿ. ಆರತಿ ಸಾಮಾನ್ಯವಾಗಿ ಒಟ್ಟಿಗೆ ಊಟಕ್ಕೆ ಕೂರುತ್ತಿರಲಿಲ್ಲ. ಮೈಸೂರಿನಲ್ಲಿ ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ವೇಳೆ ರಾಜ್ಕುಮಾರ್ ಎರಡು ದಿನ ಗಮನಿಸಿದರು. ನೀವು ಯಾಕೆ ಊಟಕ್ಕೆ ಬರುತ್ತಿಲ್ಲ ಅಂತ ಮೂರನೇ ದಿನ ಆರತಿಯನ್ನು ಕರೆದು ಕೇಳಿದರು. ಆಗ ಆರತಿ ಮೈಸೂರಿನಲ್ಲಿಯೇ ನಮ್ಮ ಮನೆ ಇರೋದು ಹೋಗಿ ಬರ್ತೀನಿ ಅಂದಿದ್ದರು." ಅಣ್ಣಾವ್ರ ಮುಂದೆ ಹೇಳಿದ್ದನ್ನು ಎನ್ ಎಸ್ ಶ್ರೀಧರಮೂರ್ತಿ ಅವರೊಂದಿಗೆ ಹಂಚಿಕೊಂಡಿದ್ದರು.
ಆದರೆ, ಆರತಿ ಕೊಟ್ಟ ಕಾರಣ ಸುಳ್ಳು ಅನ್ನೋದು ರಾಜ್ಕುಮಾರ್ಗೆ ಗೊತ್ತಿತ್ತು. ಹೀಗಾಗಿ ಮತ್ತೆ ಆರತಿಯನ್ನು ಯಾಕೆ ಊಟ ಮಾಡುತ್ತಿಲ್ಲ ಅಂತ ಕೇಳಿದ್ದರು. ಆಗ, "ಅದು ಕಾರಣ ಅಲ್ಲ ಅಂತ ರಾಜ್ಕುಮಾರ್ಗೆ ಗೊತ್ತಿತ್ತು. ಬೇರೆ ಸಂದರ್ಭದಲ್ಲಿ ಆರತಿ ಊಟ ಮಾಡಿದ್ದೆಲ್ಲವನ್ನೂ ಅವರು ನೋಡಿದ್ದರು. ಮತ್ತೆ ಕೇಳಿದರು. ನಮ್ಮ ಜೊತೆ ಯಾಕೆ ಊಟ ಮಾಡುತ್ತಿಲ್ಲ ಅಂತ. ಆಗ ಆರತಿ, ಅಣ್ಣಾ ನಾನು ಪ್ಯೂರ್ ವೆಜಿಟೇರಿಯನ್. ನನಗೆ ನಾನ್ ವೆಜ್ ನೋಡಿದರೂ ಊಟ ಸೇರುವುದಿಲ್ಲ. ನಿಮ್ಮಲ್ಲಿ ನಾನ್ ವೆಜ್ ಎಲ್ಲಾ ಮಿಕ್ಸ್ ಇರುತ್ತೆ. ಅದಕ್ಕಾಗಿ ನಾನು ಊಟ ಮಾಡಲ್ಲ ಅಂದರು. ಕೂಡಲೇ ರಾಜ್ಕುಮಾರ್ ಪ್ರೊಡಕ್ಷನ್ ಯೂನಿಟ್ ಅವರಿಗೆ ಹೇಳಿ, ಆರತಿ ಇರೋವರೆಗೂ ನಾನ್ ವೆಜ್ ಊಟ ಮಾಡಿಸಬೇಡಿ. ವೆಜ್ ಊಟವೇ ಮಾಡಿಸಿ. ಅವರೊಬ್ಬರು ಊಟಕ್ಕೆ ಬಾರದೆ ಹೋದರೆ ನನಗೆ ಸರಿ ಹೋಗಲ್ಲ ಅಂದಿದ್ರು." ಅಂತ ಎನ್ ಎಸ್ ಶ್ರೀಧರಮೂರ್ತಿ ಅಂದು ಆರತಿಯೇ ಹೇಳಿದ್ದ ಸಂಗತಿಯನ್ನು ಶೇರ್ ಮಾಡಿಕೊಂಡಿದ್ದಾರೆ.


Click it and Unblock the Notifications











