ರಾಜ್ಕುಮಾರ್ ಚಿನ್ನ ಧರಿಸುತ್ತಿರಲಿಲ್ಲ ಯಾಕೆ? ಅಣ್ಣಾವ್ರೇ ಕೊಟ್ಟಿದ್ದ ಕಾರಣವೇನು?
ಸರಳತೆ ಹೆಸರಿಯಾಗಿದ್ದವರು ಡಾ.ರಾಜ್ಕುಮಾರ್. ಕನ್ನಡ ಚಿತ್ರರಂಗದಲ್ಲಿ ಅವರು ಅದೆಷ್ಟೇ ದೊಡ್ಡ ನಟನಾಗಿದ್ದರೂ, ಅಣ್ಣಾವ್ರು ಬದುಕಿದ ರೀತಿಗೆ ಅಭಿಮಾನಿಗಳಾದವರು ಅಸಂಖ್ಯಾತ ಮಂದಿ ಇದ್ದಾರೆ. ಸಿನಿಮಾಗಳಲ್ಲಿ ರಾಜಕುಮಾರನಂತೆ ಕಂಡರೂ, ರಿಯಲ್ ಲೈಫ್ನಲ್ಲಿ ಸಿಂಪಲ್. ಒಂದು ಬಿಳಿ ಶರ್ಟ್, ಒಂದು ಪಂಚೆಯಲ್ಲಿಯೇ ಬದುಕು ಸಾಗಿದ್ದ ಮೇರು ನಟ. ಇವರ ಸರಳತೆಯನ್ನು ಅದೆಷ್ಟೋ ಮಂದಿ ಇಂದಿಗೂ ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಅಣ್ಣಾವ್ರು ಅಗಲಿ 19 ವರ್ಷಗಳಾಗಿವೆ. ಆದರೂ ಅವರ ಬದುಕಿನ ಕುರಿತು ಗಣ್ಯರು ಇಂದಿಗೂ ಮಾತಾಡುತ್ತಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಪರಸರಿಸಿದ್ದ ರಾಜ್ಕುಮಾರ್ ಬಗ್ಗೆ ಗೊತ್ತಿಲ್ಲ ಹಲವು ಸಂಗತಿಗಳನ್ನು ಬಿಚ್ಚಿಡುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಸಂಗತಿಯೆಂದರೆ, ಅಣ್ಣಾವ್ರು ಜೀವನ ಪರ್ಯಂತ ಮೈ ಮೇಲೆ ಚಿನ್ನವನ್ನೇ ಧರಿಸಲಿಲ್ಲ. ಅವರು ಮನಸ್ಸು ಮಾಡಿದ್ದರೆ, ಚಿನ್ನದಲ್ಲಿಯೇ ಮುಳುಗಿಸುವ ಅಭಿಮಾನಿಗಳು ಇದ್ದರು. ಯಾಕೆ ಚಿನ್ನವನ್ನು ಧರಿಸಿಲ್ಲ? ಇದಕ್ಕೆ ಅಣ್ಣಾವ್ರು ಕೊಟ್ಟ ಕಾರಣವೇ ಬೇರೆಯಿದೆ.

ಡಾ.ರಾಜ್ಕುಮಾರ್ ಸರಳ ಜೀವನ ನಡೆಸಿದ್ದರೂ ಅನ್ನೋದು ನಿಜ. ಆದರೆ, ಚಿನ್ನವನ್ನು ಯಾಕೆ ಧರಿಸಿಲ್ಲ ಅನ್ನೋದಕ್ಕೆ ಅವರು ಕಾರಣವನ್ನೂ ನೀಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಣ್ಣಾವ್ರು ಯಾಕೆ ಚಿನ್ನವನ್ನು ಧರಿಸುತ್ತಿರಲಿಲ್ಲ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಡಾ.ರಾಜ್ಕುಮಾರ್ ಅವರ ಸರಳತೆಯನ್ನು ಮಂಡ್ಯ ರಮೇಶ್ ತುಂಬಾನೇ ಸೊಗಸಾಗಿ ವರ್ಣಿಸಿದ್ದಾರೆ. ಅಣ್ಣಾವ್ರ ಮುಗ್ಧತೆಯನ್ನು ಹೊಗಳಿ ಕೊಂಡಾಡಿದ್ದಾರೆ. "ರಾಜ್ಕುಮಾರ್ ಬಿಳಿ ಪಂಚೆ ಉಟ್ಟುಕೊಳ್ಳುತ್ತಿದ್ದರು. ಚಿನ್ನ ಹಾಕಿಕೊಳ್ಳುತ್ತಿರಲಿಲ್ಲ. ಸಾಧಾರಣವಾಗಿ ಇರುತ್ತಿದ್ದರು. 500 ರೂಪಾಯಿ ನೋಟು ಪ್ರಿಂಟ್ ಆಗಿದೆಯೇ ಎಂದು ಕೇಳುತ್ತಿದ್ದರು. ಅವರಲ್ಲೊಂದು ಮುಗ್ಧತೆ ಇರುತ್ತಿತ್ತು. ತನ್ನಷ್ಟಕ್ಕೆ ತಾನು ಇರುತ್ತಿದ್ದರು." ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

ಅಣ್ಣಾವ್ರಿಗೆ ಒಮ್ಮೆ ಯಾಕೆ ನೀವು ಚಿನ್ನವನ್ನು ಧರಿಸುವುದಿಲ್ಲ ಎಂದು ಆಪ್ತರು ಹೇಳಿದ್ದರಂತೆ. ಅದಕ್ಕೆ ರಾಜ್ಕುಮಾರ್ ಕೊಟ್ಟ ಉತ್ತರ ಏನಿತ್ತು ಅನ್ನೋದನ್ನು ಮಂಡ್ಯ ರಮೇಶ್ ವೇದಿಕೆ ಮೇಲೆ ಬಿಚ್ಚಿಟ್ಟಿದ್ದಾರೆ. "ಯಾಕಣ್ಣ ಚಿನ್ನ ಹಾಕುವುದಿಲ್ಲ ಎಂದು ಕೇಳಿದರೆ, ಬಬ್ರುವಾಹನದಲ್ಲಿ ಕಿರೀಟ ಹಾಕಿದ್ನಲ್ಲ, ಕೃಷ್ಣದೇವರಾಯನದ್ದು ಕತ್ತಿ ಹಿಡಿದುಕೊಂಡಿದ್ನಲ್ಲ, ಬೇರೆ ಬೇರೆ ಸಮಯದಲ್ಲಿ ಹಾಕಿಕೊಂಡಿದ್ನಲ್ಲ, ಅದನ್ನೇ ಜನ ನಿಜ ಅಂತ ನಂಬಿಕೊಂಡಿದ್ದಾರೆ. ಅಷ್ಟೆಲ್ಲ ನಂಬಿಕೊಂಡ ಮೇಲೆ ಈಗ ಚಿನ್ನ ಯಾಕೆ ಹಾಕಿಕೊಳ್ಳಬೇಕು ಅಂತ ಕೇಳಿದ್ದರಂತೆ. ಪುಟ್ಗೋಸಿ ಎರಡು ಸೈಟ್ ಮಾಡಿದವರು, ನಾಲ್ಕು ಸೀರಿಯಲ್ ಮಾಡಿದವರು, ಒಂದು ಸಿನಿಮಾ ಮಾಡಿದವರು ಕೈಗೆ, ಎದೆವರಗೂ ಚಿನ್ನ ಹಾಕುತ್ತಾರೆ. ನಮ್ಮದು ಏನೇನು ಅವತಾರ ಅಂತ ನೋಡಬೇಕು. ಎಂಟು ಕಾರು, ಒಂಬತ್ತು ಮನೆ. ಸತ್ತಾಗ ಪಕ್ಕದ ಮನೆಯವರಿಗೂ ಇವರು ಯಾರು ಅಂತ ಗೊತ್ತಿರಲ್ಲ. ರಾಜ್ಕುಮಾರ್ ಕನ್ನಡ ಜನತೆಗೆ ಪಾಠ." ಎಂದು ಮಂಡ್ಯ ರಮೇಶ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಗೋಕಾಕ್ ಚಳುವಳಿಯ ವೇಳೆ ಅಣ್ಣಾವ್ರು ಮಂಡ್ಯದಲ್ಲಿ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. "ಗೋಕಾಕ್ ಚಳುವಳಿಯಲ್ಲಿ ಮಂಡ್ಯದಲ್ಲಿ ನಾವು ಸ್ಟೇಜ್ ಕಟ್ಟಿದ್ವಿ. ರಾಜ್ಕುಮಾರ್ ಬಂದು ನಮ್ಮನ್ನು ಮಾತಾಡಿಸಿಬಿಡುತ್ತಾರೆ ಅಂತ. ಎಲ್ಲರೂ ಕುಣಿದು ಕುಪ್ಪಳಿಸಬೇಕಾದರೆ, ಬಂದು ರಾಜ್ಕುಮಾರ್ ಲಕ್ಷಾಂತರ ಜನರ ಮುಂದೆ ಸ್ಟೇಜ್ ಮೇಲೆ ನಿಂತುಕೊಂಡು ಕನ್ನಡ ನಮ್ಮಿಂದ ಇವತ್ತು ದೂರ ಹೋಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದು ಯಾವತ್ತೂ ಹೋಗುವುದಿಲ್ಲ. ನೀವು ಎಲ್ಲಿವರೆಗೂ ನನ್ನನ್ನ, ಕನ್ನಡವನ್ನ ಮತ್ತು ಕುವೆಂಪು ಅವರನ್ನು ಎಲ್ಲರನ್ನೂ ಒಟ್ಟಾಗಿ ಪ್ರೀತಿ ಮಾಡುತ್ತೇನೆ ಎಂದು ಮನಸ್ಸು ಮಾಡುತ್ತೀರೋ ಅಲ್ಲಿವರೆಗೂ ಕನ್ನಡ ದೂರ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಇದು ನನ್ನ ಆತಂಕ ಅಂದರು. ಎಲ್ಲರೂ ಸಂಭ್ರಮಿಸುವ ವೇಳೆ ಅವರು ಆತಂಕ ಅಂದರು." ಎಂದು ಅಣ್ಣಾವ್ರ ಗೋಕಾಕ್ ಚಳುವಳಿಯನ್ನು ನೆನೆದಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕಾಡುಗಳ್ಳ ವೀರಪ್ಪನ್ಗೆ ಅಣ್ಣಾವ್ರು ಬಸವಣ್ಣನ ವಚನ ಹೇಳಿಕೊಟ್ಟಿದನ್ನು ಸ್ವಾರಸ್ವಕರವಾಗಿ ವಿವರಿಸಿದ್ದಾರೆ. "ವೀರಪ್ಪನ್ ಅಂತ ಪರಮನೀಚ ಅವರನ್ನು ಎತ್ತಾಕೊಂಡು ಹೋಗಿರಬೇಕಾದರೆ, ಅದ್ಯಾವ ಧೈರ್ಯದಲ್ಲಿ ಅವನಿಗೆ ವಚನವನ್ನು ಹೇಳಿಕೊಡುತ್ತಾರೆ. ಈ ಭೂಮಿ ಮೇಲೆ ಯಾರಾದರೂ ಹೇಳುವುದಕ್ಕೆ ಸಾಧ್ಯವಿದೆಯೇ? ಒಬ್ಬ ದೊಡ್ಡ ಕಳ್ಳ, ಒಬ್ಬ ದೊಡ್ಡ ಮನುಷ್ಯನನ್ನು ಕರೆದುಕೊಂಡು ಹೋಗಿದ್ದ. ಅವನನ್ನು ಅಲ್ಲಿ ಕೂರಿಸಿಕೊಂಡು ಅಣ್ಣಾವ್ರ ಬಸವಣ್ಣನವರ ವಚನ ಹೇಳುತ್ತಾರೆ. ಸಿನಿಮಾ ಫೈಟಿಂಗ್ ಎಲ್ಲ ಅಲ್ಲ. ಅವನನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಾ? ಅಂತ ಯೋಚಿಸುತ್ತಾರೆ. ನನ್ನ ಬಿಡುಗಡೆ ಸರಿ ಬಿಡಪ್ಪ, ಅವನ ಬಿಡುಗಡೆ ಯಾವಾಗ ಅಂತ ಕೇಳುತ್ತಾರೆ ಅಂದರೆ, ರಾಜ್ಕುಮಾರ್ ಅಲ್ಲದೆ ಮತ್ತೆ ಯಾರಾದರೂ ಕೇಳುವುದಕ್ಕೆ ಸಾಧ್ಯವಿದೆಯೇ?" ಎಂದು ಮಂಡ್ಯ ರಮೇಶ್ ಹೇಳಿಕೊಂಡಿದ್ದಾರೆ.
"ಕಸ್ತೂರಿ ನಿವಾಸದ ಭಾಷೆ ಬೇರೆ. ಬಹಳ ಚೆಂದವಾದ ಭಾಷೆ. ಅವರನ್ನೇ ಬಂಗಾರದ ಪಂಜರಕ್ಕೆ ಕರೆದುಕೊಂಡು ಬನ್ನಿ ನೀವು. ಆ ಮುಗ್ಧತೆ, ಆ ಖುಷಿ, ಅವರು ಹಾಡುತ್ತಿದ್ದ ಹಾಡು, ಮಾತಲ್ಲಿ ಆಗಲಿ, ಹಾಡಲ್ಲಿ ಆಗಲಿ, ಧ್ವನಿಯಲ್ಲಿ ಆಗಲಿ ಅವರು ಬಿಡಿಸಿ ಬಿಡಿಸಿ ಹೇಳಿಕೊಳ್ಳುತ್ತಿದ್ದ ರೀತಿ ಅದ್ಭುತ. ಮಂಡ್ಯ, ಚಾಮರಾಜನಗರದ ಎಲ್ಲಾ ಕಡೆಯ ಭಾಷೆಯನ್ನು ತಲುಪಿಸಲು ಅವರದ್ದೇ ಆದ ರಾಜ್ ಕನ್ನಡವನ್ನು ಹುಡುಕಿಕೊಂಡಿದ್ದರು. ಅದೇ ಅವರ ಯಶಸ್ಸು." ಎನ್ನುತ್ತಾರೆ ಮಂಡ್ಯ ರಮೇಶ್.
"ರಾಜ್ಕುಮಾರ್ ಅವರ ಧ್ವನಿಯಲ್ಲಿ ಅದು ಪೌರಾಣಿಕ ಆಗಲಿ, ಸಾಮಾಜಿಕ ಆಗಲಿ, ಐತಿಹಾಸಿಕ ಆಗಲಿ, ಕೇಳುವುದೇ ಒಂದು ಸೌಭಾಗ್ಯ. ಅವರು ಇವೆಲ್ಲವನ್ನು ತಮ್ಮದೇ ರೀತಿಯಲ್ಲಿ ತಲುಪಿಸುತ್ತಿದ್ದ ರೀತಿಯೇ ಅದ್ಭುತವಾಗಿತ್ತು. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದನ್ನು ಈ ತಲೆಮಾರಿಗೆ ತಲುಪಿಸಬೇಕಲ್ಲ. ಸಣ್ಣ ಸಣ್ಣ ವಿಚಾರಗಳು ಕೂಡ ತಲುಪಿಸಬೇಕಿದೆ." ಎನ್ನುತ್ತಾರೆ ಮಂಡ್ಯ ರಮೇಶ್.
"ನನಗೆ ರಾಜ್ಕುಮಾರ್ ಅಂದರೆ, ನಾನು ಹುಟ್ಟಿದ ದಿನದಿಂದ ಇಲ್ಲಿವರೆಗೆ ನನಗೆ ರಾಜ್ಕುಮಾರ್ ಈ ಪ್ರಪಂಚದ ಒಂದು ದೊಡ್ಡ ವಿಸ್ಮಯ. ಇದು ಸಾಧ್ಯನಾ? ನಾವು ಯಾವಾಗಲೂ ಕನ್ನಡ ಭಾಷೆಯ ಬಗ್ಗೆ ಮಾತಾಡುತ್ತಿವೆ. ಬೇರೆ ಬೇರೆ ರೀತಿಯ ಕನ್ನಡಗಳಿದೆ. ಕನ್ನಡ ಉಪಭಾಷೆಗಳಿವೆ. ಎಷ್ಟೊಂದು ಸಮೃದ್ಧವಾದ ಕನ್ನಡ. ಎಷ್ಟೊಂದು ಕನ್ನಡ ಇದ್ದರೂ ಸಾರ್ವಜನಿಕವಾಗಿ ಎಲ್ಲರಿಗೂ ತಲುಪುವ ಒಂದು ವಿಶೇಷವಾದ ಕನ್ನಡ ಅದು ನಾನು ನೋಡಿದ್ದು ರಾಜ್ ಕನ್ನಡ ಮಾತ್ರ." ಎನ್ನುತ್ತಾರೆ.
"ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಧ್ವನಿಯನ್ನ ಒಂದು ಕನ್ನಡದ ಧ್ವನಿ, ಇನ್ನೊಂದು ತನ್ನ ನಟನಾ ಧ್ವನಿಯನ್ನ ತುಂಬಾ ಚೆಂದವಾಗಿ ಸೂಕ್ಷ್ಮವಾಗಿ ಬೇರೆ ಬೇರೆ ರೀತಿ ಬಳಸಬಲ್ಲ ಒಬ್ಬ ಸಮರ್ಥ ನಟನನ್ನು ನಾನು ನೋಡಿದ್ದು ರಾಜ್ಕುಮಾರ್ ಅವರನ್ನು ಮಾತ್ರ. ರಾಜ್ಕುಮಾರ್ ಕನ್ನಡವನ್ನು ಆಡುತ್ತಿರಲಿಲ್ಲ. ಅವರು ನುಡಿಸುತ್ತಿದ್ದರು." ಎಂದು ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.
"ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಎನ್ನುವ ಹಾಡಿನ ಉಚ್ಛಾರಣೆ ಇದೆಯಲ್ಲ ಕನ್ನಡದ ಎಲ್ಲಾ ಪ್ರದೇಶಗಳಿಗೆ ತಲುಪಿಸುವಂತೆ ಉಚ್ಛರಿಸಿದ ಮಹಾ ನಟ. ಅಷ್ಟು ಚೆಂದವಾದ ಕನ್ನಡ ಅದು. ಅವರು ಮಾತಾಡಿದರೆ, ಸಂಗೀತ ಎನಿಸುತ್ತಿತ್ತು. ಅವರು ಕೋಪ ಮಾಡಿದರೂ ಮ್ಯೂಸಿಕ್ ಎನಿಸುತ್ತಿತ್ತು. ರಾಜ್ಕುಮಾರ್ ಆ ತಲೆಮಾರಿನ ಅನೇಕರಿಗೆ ಅರ್ಥ ಆಗಲಿಲ್ಲ. ಈ ತಲೆಮಾರಿನ ಮಾಸ್ಟರ್ಗಳಿಗೆ ಹೇಗೆ ಅರ್ಥ ಮಾಡಿಸುವುದು." ಎನ್ನುತ್ತಾ ಮಂಡ್ಯ ರಮೇಶ್


Click it and Unblock the Notifications











