'ಯಾರೇ ನೀನು ಚೆಲುವೆ'ಯ ನಟಿ 'ಶಾಂತಿ ಕ್ರಾಂತಿ'ಯಲ್ಲೂ ನಟಿಸಿದ್ದು ಗೊತ್ತೇ?26 ವರ್ಷಗಳಾದ್ಮೇ ಮತ್ತೆ ಕನ್ನಡಕ್ಕೆ ರೀ-ಎಂಟ್ರಿ
'ಯಾರೇ ನೀನು ಚೆಲುವೆ'ಯ ಕಮಲಿ ಇನ್ನೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 1998ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಹ್ರ್ಯಾಟ್ರಿಕ್ ಹಿಟ್ ಕೊಡುವಲ್ಲಿ ಮೊದಲ ಅಡಿಪಾಯಾಗಿದ್ದೇ ಈ ಸಿನಿಮಾ. ಅದರಲ್ಲೂ ಸಿನಿಮಾದ ಹಾಡುಗಳು ದೊಡ್ಡ ಸಿಕ್ಕಾಪಟ್ಟೆ ಹಿಟ್ ಆಗಿದ್ದವು.
ಇದು ತಮಿಳಿನ 'ಕಾದಲ್ ಕೊಟ್ಟೈ' ಸಿನಿಮಾದ ರಿಮೇಕ್ ಆಗಿತ್ತು. ಹೀಗಿದ್ದರೂ ಕನ್ನಡ ವರ್ಷನ್ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ 'ಯಾರೇ ನೀನು ಚೆಲುವೆ' ಸಿನಿಮಾದ ನಾಯಕಿ ನೋಡಿದ ಮೇಲೆ ಸಿನಿ ಪ್ರಿಯರು ಫಿದಾ ಆಗಿದ್ದರು. ತಮ್ಮ ಲೈಫ್ನಲ್ಲೂ ಇಂತಹದ್ದೇ ಒಬ್ಬ ಹುಡುಗಿ ಬರಬಾರದೇ ಎಂದು ಚಡಪಡಿಸಿದ್ದರು. ಆಕೆ ಮತ್ಯಾರೂ ಅಲ್ಲ ದಕ್ಷಿಣ ಭಾರತದ ಬಹುಭಾಷಾ ನಟಿ ಸಂಗೀತಾ ಮಾಧವನ್ ನಾಯರ್.

'ಯಾರೇ ನೀನು ಚೆಲುವೆ' ಬಳಿಕ 'ಯಾರೇ ನೀ ಅಭಿಮಾನಿ' ಸಿನಿಮಾದಲ್ಲಿ ನಟಿಸಿದ್ದರು. ಅದೇ ಈಕೆ ನಟಿಸಿದ ಕೊನೆಯ ಕನ್ನಡ ಸಿನಿಮಾ. 2000ನೇ ಇಸವಿಯಲ್ಲಿ ತೆರಕಂಡಿತ್ತು. ಆ ಬಳಿಕ ಮತ್ತೆ ಬರೋಬ್ಬರಿ 26 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆ ಬಗ್ಗೆ ಹೇಳುವುದಕ್ಕೂ ಮುನ್ನ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ಸಂಗೀತಾ ನಟಿಸಿದ್ದು ಕೇವಲ ಎರಡೇ ಕನ್ನಡ ಸಿನಿಮಾ ಅಲ್ಲ. ಇನ್ನೊಂದು ಸಿನಿಮಾವಿದೆ. ಅದುವೇ ಕ್ರೇಜಿಸ್ಟಾರ್ ನಟಿಸಿ, ನಿರ್ದೇಶಿಸಿದ 'ಶಾಂತಿ-ಕ್ರಾಂತಿ'.
ಇಂದು ಸಂಗೀತಾ ಮಾಧವನ್ ನಾಯರ್ ದಕ್ಷಿಣ ಭಾರತದಲ್ಲಿಯೇ ಜನಪ್ರಿಯ ನಟಿ. ಆದರೆ, 'ಶಾಂತಿ ಕ್ರಾಂತಿ' ಸಿನಿಮಾ ಮಾಡುವಾಗ ಇವರು ಬಾಲನಟಿ. ಈ ಸಿನಿಮಾ ಮುನ್ನ ಕೆಲ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಈ ವೇಳೆ ರವಿಚಂದ್ರನ್ ಬಹುಭಾಷೆಯಲ್ಲಿ ನಿರ್ಮಿಸುತ್ತಿದ್ದ 'ಶಾಂತಿ ಕ್ರಾಂತಿ' ಸಿನಿಮಾಗೆ ಆಯ್ಕೆಯಾಗಿದ್ದರು.
1992ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಸಂಗೀತಾ ಮಾಧವನ್ ನಾಯರ್ ಅನಾಥ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಅಂದು (1992) ಕ್ರೇಜಿ ಸ್ಟಾರ್ ಜೊತೆ ಬಾಲ ನಟಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ಸಂಗೀತಾಗೆ ರವಿಚಂದ್ರನ್ ಜೊತೆಯೇ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಅದು 1998ರಲ್ಲಿ ತೆರೆಕಂಡಿದ್ದ 'ಯಾರೇ ನೀನು ಚೆಲುವೆ' ಸಿನಿಮಾ ಮೂಲಕ, ಅದೂ ಕೇವಲ 6 ವರ್ಷಗಳ ಅಂತರದಲ್ಲಿ.

'ಯಾರೇ ನೀನು ಚೆಲುವೆ' ಸೂಪರ್ ಹಿಟ್ ಆಗುತ್ತಿದ್ದಂತೆ ಮತ್ತೆ 'ಯಾರೇ ನೀ ಅಭಿಮಾನಿ' ತೆರೆಕಂಡಿತ್ತು. ಅದೇ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. ವಿವಾಹದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಈ ನಟಿ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮೋಹನ್ಲಾಲ್ ಜೊತೆ ನಟಿಸಿದ 'ಹೃದಯಪೂರ್ವಂ' ಸಿನಿಮಾದಲ್ಲಿ ಇವರ ದೇವಿಕಾ ಪಾತ್ರ ಸಿಕ್ಕಾಪಟ್ಟೆ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು.
ಈಗ ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಕಿಚ್ಚ ಸುದೀಪ್ ನಟಿಸಿದ 'ರನ್ನ', 'ವಿಕ್ಟರಿ' ಅಂತಹ ಸಿನಿಮಾಗಳಿಗೆ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಈ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಭಾಗ್ಯಾ ಪಾತ್ರದಲ್ಲಿ ಸಂಗೀತಾ ನಟಿಸುತ್ತಿದ್ದಾರೆ. ಗೌರಿ ಆರ್ಟ್ಸ್ ಬ್ಯಾನರ್ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.


Click it and Unblock the Notifications











