ಲವ್ ಸ್ಟೋರಿ.. ಮದುವೆಯಾದ ವ್ಯಕ್ತಿ ಜೊತೆ ಡೇಟಿಂಗ್.. ವಿಚ್ಚೇದನ; 'ಯುದ್ಧಕಾಂಡ' ನಟಿ ಲೈಫ್ ಯಾಕೆ ಹೀಗಾಯ್ತು?
"ಸೋಲೇ ಇಲ್ಲ ನಿನ್ನ ಹಾಡು ಹಾಡುವಾಗ.." ಈ ಹಾಡು ಇಂದಿಗೂ ಗುನುಗುತ್ತಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ ಸೂಪರ್ ಹಿಟ್ 'ಯುದ್ಧಕಾಂಡ' ಸಿನಿಮಾದ ಹಾಡಿದು. ರವಿಚಂದ್ರನ್ ವೃತ್ತಿ ಬದುಕಿನ ಮತ್ತೊಂದು ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ನಲ್ಲಿ ಜನಪ್ರಿಯ ನಟಿ ಎಂಟ್ರಿ ಕೊಟ್ಟಿದ್ದರು. ಆ ನಟಿಯ ಹೆಸರು ಪೂನಂ ಧಿಲ್ಲೋನ್.
80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ ಹೀರೋಯಿನ್ ಆಗಿ ಮೆರೆದ ನಟಿಯೀಕೆ. ಸಿನಿಮಾದ ಬಗ್ಗೆ ಚಿಕ್ಕದೊಂದು ಹಿನ್ನೆಲೆಯೂ ಇಲ್ಲದೆ ಬಾಲಿವುಡ್ ಎಂಬ ಸಾಗರಕ್ಕೆ ಧುಮುಕಿದ್ದ ನಟಿ ಸ್ಟಾರ್ ನಾಯಕಿಯಾಗಿ ಮೆರೆದಿದರು. ಈಕೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಕನ್ನಡ ಚಿತ್ರರಂಗಕ್ಕೂ ಬಂದಿದ್ದರು. ಅವರನ್ನು ಕರೆ ತಂದವರು ಕ್ರೇಜಿಸ್ಟಾರ್ ರವಿಚಂದ್ರನ್.

'ಯುದ್ಧಕಾಂಡ' ಸಿನಿಮಾದಲ್ಲಿ ಪೂನಂ ಧೀಲ್ಲೋನ್ ಅಭಿನಯವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಪೂನಂ ಧಿಲ್ಲೋನ್ ಬಾಲಿವುಡ್ ನಟಿಯಾಗಿದ್ದರೂ, ಕನ್ನಡ ನಟಿಯೇ ಅನ್ನುವಷ್ಟು ಸಹಜವಾಗಿ ನಟಿಸಿದ್ದರು. ಈ ನಟಿ ಇಂದು (ಏಪ್ರಿಲ್ 18) 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಒಂದು ಕಾಲದ ಈ ಟಾಪ್ ನಟಿಯ ವೈಯಕ್ತಿಕ ಬದುಕು ಮಾತ್ರ ಸುಖಕರವಾಗಿರಲಿಲ್ಲ.
ಪೂನಂ ಧಿಲ್ಲೋನ್ 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಡಾಕ್ಟರ್ ಆಗ್ಬೇಕು ಅಂತಿದ್ದ ಪೂನಂ 1978ರಲ್ಲಿ 'ಮಿಸ್ ಯಂಗ್ ಇಂಡಿಯಾ' ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದರು. ಮ್ಯಾಗಜೀನ್ನಲ್ಲಿ ನಿರ್ದೇಶಕ ಯಶ್ ಚೋಪ್ರಾ ಈಕೆಯ ಫೋಟೊವನ್ನು ನೋಡಿ 'ತ್ರಿಶೂಲ್' ಅನ್ನುವ ಸಿನಿಮಾಗೆ ಅವಕಾಶ ನೀಡಿದ್ದರು. ಒಂದು ಸಿನಿಮಾ ಮುಗಿಸಿ ಸೀದಾ ಚಂಢೀಗಢಕ್ಕೆ ಹಿಂತಿರುಗುವುದು ಅಂದುಕೊಂಡಿದ್ದವರಿಗೆ ಚಿತ್ರರಂಗ ಬಿಡಲೇ ಇಲ್ಲ.

ಬಾಲಿವುಡ್ನಲ್ಲಿಯೇ ಸಾಲು ಸಾಲು ಸಿನಿಮಾಗಳು ಸಿಕ್ಕಿದ್ದವು. ಬದುಕು ಮುಂದುವರೆಯುತ್ತಾ ಹೋಯ್ತು. ಆದರೆ, ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಲವ್ ಲೈಫ್ ಕೂಡ ಆರಂಭ ಆಗಿತ್ತು. 'ನೂರಿ' ಅನ್ನೋ ಸಿನಿಮಾ ಮಾಡುವಾಗ ನಿರ್ದೇಶಕ ರಮೇಶ್ ತಲ್ವಾರ್ ಕಥೆಯನ್ನು ಹೊತ್ತು ಬಂದಿದ್ದರು. ಯಶ್ ಚೋಪ್ರಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಈ ವೇಳೆ ರಮೇಶ್ ಹಾಗೂ ಪೂನಂ ನಡುವೆ ಸ್ನೇಹ ಬೆಳೆದಿತ್ತು. ಅದು ಪ್ರೀತಿಗೆ ತಿರುಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ.
ಪೂನಂ ಧೀಲ್ಲೋನ್ ಹಾಗೂ ರಮೇಶ್ ನಡುವೆ ಪ್ರೀತಿ ಹುಟ್ಟಿತ್ತು. ಆದರೆ ಈ ಸುದ್ದಿಯನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಪೂನಂ ಧಿಲ್ಲೋನ್ ಜೊತೆ ರಮೇಶ್ ತಲ್ವಾರ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಬಂಗಲೆಯನ್ನೂ ಕೊಡಿಸಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ಅದ್ಯಾವಾಗ ಯಶ್ ಚೋಪ್ರಾ ಜೊತೆನೇ ಪೂನಂ ಹೆಸರು ಕೇಳಿ ಬಂತೋ ಆಗ ಇಬ್ಬರ ನಡುವೆ ಬ್ರೇಕಪ್ ಆಯ್ತು. ಇದೇ ವೇಳೆ ಅದಾಗಲೇ ಮದುವೆ ಆಗಿದ್ದ ಫಿಲ್ಮ್ಮೇಕರ್ ರಾಜ್ ಸಿಪ್ಪಿ ಮೇಲೆ ಲವ್ ಆಗಿತ್ತು. ಆದರೆ, ಪೂನಂ ಧಿಲ್ಲೋನ್ಗಾಗಿ ಪತ್ನಿ ಬಿಡುವುದಕ್ಕೆ ರೆಡಿಯಿರಲಿಲ್ಲ. ಹೀಗಾಗಿ ಈ ಪ್ರೀತಿನೂ ಮುರಿದು ಬಿದ್ದಿತ್ತು.
ಬದುಕಿನಲ್ಲಿ ಸಿಕ್ಕಿದ ಪ್ರೀತಿಯೆಲ್ಲ ಮುರಿದು ಬಿದ್ದಿತ್ತು. ಅದೇ ವೇಳೆ ತಂದೆ ತೀರಿಕೊಂಡಿದ್ದರು. ಈ ನೋವಿನಲ್ಲಿದ್ದ ನಟಿಗೆ ಬಾಳಲ್ಲಿ ಪ್ರವೇಶ ಮಾಡಿದ್ದು ನಿರ್ಮಾಪಕ ಅಶೋಕ್ ಥಾಕೆರಿಯಾ. ಮನೆಯಲ್ಲೂ ಒತ್ತಡ ಹೆಚ್ಚಿದ್ದರಿಂದ ನಿರ್ಮಾಪಕನೊಂದಿಗೆ ಮದುವೆ ನಡೆದು ಹೋಯ್ತು. ಇಬ್ಬರು ಮಕ್ಕಳು ಹುಟ್ಟಿದ್ದರು. ಆದರೆ, ಹೋಗ್ತಾ ಹೋಗ್ತಾ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಪತಿ ಸಿನಿಮಾ ಮೇಕಿಂಗ್ ಅಂತ ಬ್ಯುಸಿಯಾಗಿದರೆ, ಇತ್ತ ಪೂನಂ ಒಬ್ಬಂಟಿಯಾದರು. ಇದೇ ವೇಳೆ ಪತಿಯ ಅಫೇರ್ ಇಟ್ಟುಕೊಂಡಿದ್ದು ಗೊತ್ತಾಯ್ತು.
ಗಂಡನಿಗೆ ಬುದ್ದಿ ಕಲಿಸುವುದಕ್ಕೆ ಪೂನಂ ಧಿಲ್ಲೋನ್ ಕೂಡ ಅಫೇರ್ ಇಟ್ಟುಕೊಂಡರು ಅನ್ನೋ ಸುದ್ದಿ ಹರಿದಾಡಿತ್ತು. ಹಾಂಗ್ಕಾಂಗ್ ಮೂಲಕ ಉದ್ಯಮಿ ಕಿಕು ಜೊತೆ ಅಫೇರ್ ಶುರುವಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಪೂನಂ ಧಿಲ್ಲೋನ್ ಹಾಗೂ ಪತಿ ಅಶೋಕ್ ವಿಚ್ಛೇದನಕ್ಕೆ ಮುಂದಾದರು. ಬಳಿಕ ಪೂನಂ ಧಿಲ್ಲೋನ್ ಪುತ್ರ ಅನ್ಮೋಲ್ ಹಾಗೂ ಪುತ್ರಿ ಪಲೋಮ ಜೊತೆ ಹೊಸ ಬದುಕು ಆರಂಭಿಸಿದ್ದಾರೆ. ಸಿನಿಮಾ ಟಾಪ್ ಲೆವೆಲ್ನಲ್ಲಿದ್ದ ನಟಿಗೆ ಕೊನೆಗೂ ಪ್ರೀತಿ ಸಿಗಲೇ ಇಲ್ಲ.


Click it and Unblock the Notifications











