ಗಣೇಶ್ ಕೂಲ್ ಚಿತ್ರದಿಂದ ನಿರ್ದೇಶಕ ಔಟ್!
ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೂಲ್' ಚಿತ್ರಕ್ಕೆ ಹೊಸ ವಿಘ್ನ ಎದುರಾಗಿದೆ. ಮುಂಬೈ ಬೆಡಗಿ ಆಮ್ನಾ ಶರೀಫ್ ಚಿತ್ರದಿಂದ ಹೊರಬಿದ್ದ ಬೆನ್ನಹಿಂದೆಯೇ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಸಹ ಹೊರ ನಡೆದಿದ್ದಾರೆ. ವಿಧಿ ಇಲ್ಲದೆ 'ಕೂಲ್' ಚಿತ್ರಕ್ಕೆ ಗಣೇಶ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ.
ಈ ಮೂಲಕ ಚಿತ್ರ ನಿರ್ದೇಶನದ ಜವಾಬ್ದಾರಿಯು ಗಣೇಶ್ ಹೆಗಲಿಗೆ ಬಿದ್ದಿದೆ. 'ಏನೋ ಒಂಥರಾ' ಚಿತ್ರದಲ್ಲಿನ ಮಹೇಶ್ ಅವರ ಕೆಲಸ ಮೆಚ್ಚಿ ಗಣೇಶ್ ತಮ್ಮ ಹೊಸ ಚಿತ್ರದ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ಎರಡು ದಿನಗಳಿಂದ ಊಟಿಯಲ್ಲಿ ಚಿತ್ರೀಕರಣ 'ಕೂಲ್' ಆಗಿಯೇ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಊಟಿಯ 'ಕೂಲ್' ವಾತಾವರಣ ಸಖತ್ ಹಾಟ್ ಆಗಿ ಬದಲಾಗಿದೆ. ಗಣೇಶ್ ಮತ್ತು ಮಹೇಶ್ ಈಗ ನಾನೊಂದು ತೀರ ನೀನೊಂದು ತೀರಾ ಎನ್ನುತ್ತಿದ್ದಾರೆ.
ಪರಿಸ್ಥಿತಿ ಹೀಗಾಲು ಕಾರಣ 'ಕೂಲ್' ಚಿತ್ರದ ಛಾಯಾಗ್ರಾಹಕ ರತ್ನವೇಲು ಎನ್ನುತ್ತಾರೆ ಮಹೇಶ್. ಚಿತ್ರದಲ್ಲಿ ನನಗೆ ಸ್ವಾತಂತ್ರ್ಯ ಇಲ್ಲ. ಎಲ್ಲದರಲ್ಲೂ ರತ್ನವೇಲು ಮೂಗು ತೂರಿಸುತ್ತಿದ್ದರು. ನಾನೊಂದು ಹೇಳಿದರೆ ಅವರೊಂದು ಮಾಡುತ್ತಿದ್ದರು. ಚಿತ್ರೀಕರಣ ಆರಂಭವಾದ ಎರಡು ದಿನಗಳಿಂದ ಇದೇ ರೀತಿ ಆಗುತ್ತಿತ್ತು. ಹಾಗಾಗಿ ಚಿತ್ರದಿಂದ ಹೊರಬಂದಿದ್ದೇನೆ ಎನ್ನುತ್ತಾರೆ ಮಹೇಶ್.
ಈ ವಿಷಯವನ್ನು ನಿರ್ಮಾಪಕಿ ಶಿಲ್ಪಾ ಗಣೇಶ್ ಅವರ ಗಮನಕ್ಕೂ ತಂದೆ. ಆದರೆ ಏನು ಪ್ರಯೋಜನವಾಗಲಿಲ್ಲ. ಅವರೂ ರತ್ನವೇಲು ಪರವಾಗಿಯೇ ಮಾತನಾಡಿದರು. ನಿರ್ದೇಶಕನಿಗೆ ಛಾಯಾಗ್ರಾಹಕ ಮುಖ್ಯ. ಅವರೇ ಸಹಕರಿಸುತ್ತಿಲ್ಲ ಎಂದರೆ ಅಲ್ಲಿ ನನಗಿನ್ನೇನು ಕೆಲಸ ಎಂದಿದ್ದಾರೆ ಮಹೇಶ್. ಆದರೆ ಈ ವಿಚಾರದಲ್ಲಿ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.


Click it and Unblock the Notifications











