ಫಿಲಂ ಚೇಂಬರ್ ನಲ್ಲಿ ಸಖತ್ ಹಾಟ್ ಆದ 'ಕೂಲ್'
ಗೋಲ್ಡನ್ ಸ್ಟಾರ್ ಗಣೇಶನ 'ಕೂಲ್' ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. "ಚಿತ್ರದಲ್ಲಿ ನನಗೆ ಸ್ವಾತಂತ್ರ್ಯ ಇಲ್ಲ. ಎಲ್ಲದರಲ್ಲೂ ಛಾಯಾಗ್ರಾಹಕ ರತ್ನವೇಲು ಮೂಗು ತೂರಿಸುತ್ತಿದ್ದರು. ನಾನೊಂದು ಹೇಳಿದರೆ ಅವರೊಂದು ಮಾಡುತ್ತಿದ್ದರು" ಎಂದು ಹೇಳಿ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಹೊರನಡೆದಿದ್ದು ಗೊತ್ತೆ ಇದೆ.
ಈಗಾಗಲೆ ಮಹೇಶ್ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ದೂರು ನೀಡಿಯಾಗಿದೆ. ಇದಕ್ಕೆ ಪ್ರತಿಯಾಗಿ, ಚಿತ್ರೀಕರಣದ ಮಧ್ಯದಲ್ಲೆ ಮಹೇಶ್ ಹೊರಬಂದಿದ್ದಾರೆ ಎಂದು ಆರೋಪಿಸಿ 'ಕೂಲ್' ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ 'ಕೂಲ್' ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಒಂದು ಸುತ್ತಿನ ಮಾತುಕತೆ ಮುಗಿದಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಜುಲೈ 31ಕ್ಕೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು ಚಿತ್ರತಂಡದ ಎಲ್ಲರನ್ನೂ ಮಾತುಕತೆಗೆ ಆಹ್ವಾನಿಸಲಾಗಿದೆ. ಮಂಡಳಿ ಏನು ತೀರ್ಮಾನ ತೆಗೆದುಕೊಳ್ಳುತ್ತದೊ ಅದಕ್ಕೆ ತಾವು ಬದ್ಧರಾಗಿರುವುದಾಗಿ ಶಿಲ್ಪಾ ಗಣೇಶ್ ತಿಳಿಸಿದ್ದಾರೆ.
ನಿರ್ದೇಶಕರ ಮತ್ತು ನಿರ್ಮಾಪಕರ ಜಗಳದಲ್ಲಿ 'ಕೂಲ್' ಚಿತ್ರೀಕರಣ ತಣ್ಣಗಾಗಿದೆ. ಮಹೇಶ್ ಇಲ್ಲದೆಯೇ ರತ್ನವೇಲು ಚಿತ್ರೀಕರಣ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರ ಸಂಘ ಹಾಗೂ ತಮಿಳು ನಿರ್ದೇಶಕರ ಸಂಘಕ್ಕೆ ದೂರು ನೀಡಲಾಗಿತ್ತು. ಚಿತ್ರೀಕರಣ ನಿಲ್ಲಿಸುವಂತೆ ರತ್ನವೇಲು ಅವರಿಗೆ ನಿರ್ದೇಶಕರ ಸಂಘ ಹುಕುಂ ಜಾರಿ ಮಾಡಿದೆ.


Click it and Unblock the Notifications











