ಗಣೇಶ್ ಮೇಲೆ ಸಿಕ್ಕಾಪಟ್ಟೆ ರೇಗಾಡಿದ ಚಂದ್ರಶೇಖರ್
ಇದು ಸ್ಯಾಂಡಲ್ ವುಡ್ ಗೋಲ್ಡ್ ಸ್ಟಾರ್ ಗಣೇಶ್ ಕಥೆ. ಈಗ ವ್ಯಥೆ ಪಡುತ್ತಾ ಗಣೇಶ್ ಬಗ್ಗೆ ಕೋಪದಿಂದ ಮಾತುನಾಡುತ್ತಿರುವ ನಿರ್ಮಾಪಕರ ಹೆಸರು ಎಂ. ಚಂದ್ರಶೇಖರ್. ಇವರು ಗಣೇಶ್ ನಟನೆಯ 'ಏನೋ ಒಂಥರಾ' ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡವರು. ಅದಕ್ಕೂ ಮುನ್ನ ಪುನೀತ್ ಚಿತ್ರ ಬಿಂದಾಸ್ ನಿರ್ಮಿಸಿ ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದರು.
"ಏನೋ ಒಂಥರಾ ಚಿತ್ರದಲ್ಲಿ ಗಣೇಶ್ಗೆ 95 ಲಕ್ಷ ರೂಪಾಯಿ ಸಂಭಾವನೆ ಮಾತುಕತೆಯಾಗಿತ್ತು. ನಾನು 90 ಲಕ್ಷ ರೂಪಾಯಿ ನೀಡಿ ಉಳಿದ ಐದು ಲಕ್ಷ ರೂಪಾಯಿಗಳನ್ನು ಬಾಕಿ ಇಟ್ಟಿದ್ದೆ. ಇದನ್ನೇ ದೊಡ್ಡದಾಗಿ ಮಾಡಿದ್ದ ಗಣೇಶ್, ಮಾಧ್ಯಮಗಳ ಮುಂದೆ ಬಂದು ನನ್ನನ್ನು ಅವಮಾನಿಸಿದರು. ಬರೀ ಐದು ಲಕ್ಷ ರೂಪಾಯಿಗಳಿಗಾಗಿ ರಂಪ ಮಾಡಿ, ಅವರ ಪತ್ನಿ ಶಿಲ್ಪಾ ನೀಡಿದ್ದ ಚೆಕ್ಕನ್ನು ಕೂಡ ನಿರಾಕರಿಸಿದ್ದರು. ಇಂದು ಯಾಕೆ ಸುಮ್ಮನಿದ್ದಾರೆ?
'ಮದುವೆ ಮನೆ'ಯ ರೆಹಮಾನ್ ಸಂಭಾವನೆ ಕೊಟ್ಟಿಲ್ಲವೆಂದು ಯಾಕೆ ಗಲಾಟೆ ಮಾಡುತ್ತಿಲ್ಲ? ನನ್ನ ಮೇಲೆ ಮಾತ್ರ ಗಣೇಶ್ ಗೆ ದ್ವೇಷ ಯಾಕೆ? ಈಗ 'ಮದುವೆ ಮನೆ' ನಿರ್ಮಾಪಕ ರೆಹಮಾನ್, ಗಣೇಶ್ ಗೆ ಕೊಟ್ಟಿದ್ದು ಕೇವಲ 11 ಲಕ್ಷ ರು. ಉಳಿದ ಸುಮಾರು 80 ಲಕ್ಷ ರು. ಇನ್ನೂ ಪಾವತಿಯಾಗಿಲ್ಲ. ಅದೇ ಗಣೇಶ್ ಈಗ ಗಣೇಶ್ ಯಾಕೆ ಮಾಧ್ಯಮಗಳ ಮುಂದೆ ಬರದೇ ಸುಮ್ಮನೆ ಕುಳಿತಿರುವುದು ಯಾಕೆ?"
ಹೀಗೆ ಹಳೆ ವಿಚಾರವನ್ನು ಕೆದಕಿ ಖಾರವಾಗಿದ್ದಾರೆ ಚಂದ್ರಶೇಖರ್. 'ಏನೋ ಒಂಥರಾ' ಚಿತ್ರ ವಿವಾದಗಳಿಂದಲೇ ದೊಡ್ಡ ಸುದ್ದಿಯಾಗಿ, ಮುಸ್ಸಂಜೆ ಮಹೇಶ್ ಕೂಡ ಹೊರಬಿದ್ದಿದ್ದು ಎಲ್ಲರಿಗೂ ನೆನಪಿರಬಹುದು. ಸದ್ಯ, ಸುದೀಪ್ ನಾಯಕತ್ವದ ಚಿತ್ರ ಮಾಡುವ ತಯಾರಿಯಲ್ಲಿದ್ದಾರೆ ಚಂದ್ರಶೇಖರ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











