'ಲೈಗರ್' ಹೀನಾಯ ಸೋಲು ಮುಂಬೈ ಫ್ಲ್ಯಾಟ್ ಖಾಲಿ: ಪುರಿ ಜಗನ್ನಾಥ್ ಗೋವಾ ಶಿಫ್ಟ್!
ಪುರಿ ಜಗನ್ನಾಥ್ ಟಾಲಿವುಡ್ನ ಡ್ಯಾಶಿಂಗ್ ಡೈರೆಕ್ಟರ್. ಅದೆಷ್ಟೋ ಸೂಪರ್ಸ್ಟಾರ್ಗಳಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ. ಒಂದು ಕಾಲದಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿದ ಮಾಸ್ ಸಿನಿಮಾಗಳು ಬಾಕ್ಸಾಫೀಸ್ ಅನ್ನೇ ಚಿಂದಿ ಉಡಾಯಿಸುತ್ತಿತ್ತು. ಆ ಸಿನಿಮಾದ ಹೀರೊನನ್ನು ಸ್ಟಾರ್ ಪಟ್ಟಕ್ಕೆ ಕರೆದುಕೊಂಡು ಹೋಗಿದ್ದು ಇದೆ.
ಪುರಿ ಜಗನ್ನಾಥ್ ಸಿನಿಮಾಗೆ ಇಡೀ ತೆಲುಗು ಇಂಡಸ್ಟ್ರಿ ಫಿದಾ ಆಗಿತ್ತು. ಸಿನಿಮಾದಲ್ಲಿ ಹೀರೋಯಿಸಂ ಅಂದರೆ ಹೀಗಿರಬೇಕು ಅನ್ನೋ ಟ್ರೆಂಡ್ ಹುಟ್ಟು ಹಾಕಿದ್ದೇ ಪುರಿ ಜಗನ್ನಾಥ್. ಆದರೆ, ಇತ್ತೀಚೆಗೆ ಯಾಕೋ ತೆರೆಮೇಲೆ ಪುರಿ ಜಗನ್ನಾಥ್ ಜಾದು ನಡೆಯುತ್ತಿಲ್ಲ.
ಪುರಿ ಜಗನ್ನಾಥ್ ನಿರ್ದೇಶಿಸಿದ 'ಲೈಗರ್' ಸಿನಿಮಾ ಹೀನಾಯವಾಗಿ ಸೋಲುಂಡಿದ್ದು ಗೊತ್ತೇ ಇದೆ. ಆ ಸೋಲಿನ ಬಳಿಕ ಪುರಿ ಜಗನ್ನಾಥ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೂ, ಒಂದೊಂದೇ ಸುದ್ದಿಗಳು ಇವರನ್ನುಹಿಂಬಾಲಿಸಿಕೊಂಡು ಬರುತ್ತಲೇ ಇವೆ. ಸದ್ಯ ಸೋಲಿನ ಕಹಿ ಮರೆಯಲು ಪುರಿ ಜಗನ್ನಾಥ್ ಗೋವಾಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ.

ಹೀರೊಗಳಿಗೆ ಮಾಸ್ ಇಮೇಜ್ ಕೊಟ್ಟ ನಿರ್ದೇಶಕ
ಒಂದು ಕಾಲದಲ್ಲಿ ಪುರಿ ಜಗನ್ನಾಥ್ ಟಾಲಿವುಡ್ನ ಮಾಸ್ ಡೈರೆಕ್ಟರ್. ತೆಲುಗು ಹಲವು ಹೀರೊಗಳಿಗೆ ಮಾಸ್ ಇಮೇಜ್ ಕೊಟ್ಟಿದ್ದೇ ಪುರಿ ಜಗನ್ನಾಥ್. ಮಾಸ್ ಡೈಲಾಗ್, ಮಾಸ್ ಫೈಟ್ಗಳನ್ನಿಟ್ಟು ಮಾಸ್ ಸಿನಿಮಾ ಪ್ರಿಯರನ್ನು ರಂಜಿಸುತ್ತಿದ್ದ ನಿರ್ದೇಶಕ. ಆದ್ರೀಗ ಯಾಕೋ ಪುರಿ ಜಗನ್ನಾಥ್ಗೆ ಬ್ಯಾಡ್ ಟೈಮ್ ಶುರುವಾಗಿದೆ. ಸಿನಿಮಾಗಳು ಪುರಿಗೆ ಕಹಿ ಅನುಭವವನ್ನು ನೀಡುತ್ತಿದೆ.

ಗೆಲ್ಲಲಿಲ್ಲ 'ಲೈಗರ್'
ಪುರಿ ಜಗನ್ನಾಥ್ ಕೆಲವು ದಿನಗಳಿಂದ ಯಶಸ್ಸಿನ ರುಚಿಯನ್ನೇ ನೋಡಿಲ್ಲ. ಈ ಹಿಂದೆ ನಿರ್ದೇಶಿಸಿದ ಕೆಲವು ಸಿನಿಮಾಗಳು ಹೀನಾಯಾವಾಗಿ ಸೋತಿವೆ. ಪ್ರೇಕ್ಷಕರಿಗೆ ಪುರಿ ಜಗನ್ನಾಥ್ ಸಿನಿಮಾಗಳು ಇಷ್ಟಾನೇ ಆಗಿಲ್ಲ. 'ಇಸ್ಮಾರ್ಟ್ ಶಂಕರ್' ನಿರ್ದೇಶಕನಿಗೆ ಗೆಲುವು ತಂದುಕೊಟ್ಟಿತ್ತು. ಆದರೆ, 'ಲೈಗರ್' ಆ ಎಲ್ಲಾ ಖುಷಿಯನ್ನು ಕಿತ್ತುಕೊಂಡಿದೆ. ಈ ಸೋಲಿನ ಬೇಸರದಲ್ಲೇ ಪುರಿ ಜಗನ್ನಾಥ್ ಇದ್ದಾರೆ.

ಏನಾಯ್ತು 'ಜನಗನಮನ'?
ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಜೊತೆಯಾಗಿ ನಟಿಸಿದ್ದ 'ಲೈಗರ್' ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತ್ತು. ಈ ಸಿನಿಮಾ ನೋಡಿ ಜನರು ಟೀಕೆಗಳ ಮೇಲೆ ಟೀಕೆಯ ಸುರಿಮಳೆಯನ್ನೇ ಸುರಿಸಿದ್ದರು. ಆದರೆ, 'ಲೈಗರ್' ಬಿಡುಗಡೆಗೂ ಮುನ್ನವೇ ವಿಜಯ್ ದೇವರಕೊಂಡ ಜೊತೆನೇ ಪುರಿ ಜಗನ್ನಾಥ್ 'ಜನಗನಮನ' ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಆದರೆ, ಆ ಸಿನಿಮಾ ಏನಾಯ್ತು ಅನ್ನೋ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಮುಂಬೈ ಫ್ಲ್ಯಾಟ್ ಖಾಲಿ ಮಾಡಿದ ಪುರಿ ಜಗನ್ನಾಥ್
'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಹಿಂದಿ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ನಿರ್ಮಾಣ ಮಾಡಿದ್ದರು. ಹೀಗಾಗಿ ಪುರಿ ಜಗನ್ನಾಥ್ ಹೈದರಾಬಾದ್ನಿಂದ ಮುಂಬೈಗೆ ಶಿಫ್ಟ್ ಆಗಿದ್ದರು. ಅಲ್ಲೇ ಫ್ಲ್ಯಾಟ್ ಬಾಡಿಗೆ ಪಡೆದು, ಕಥೆ-ಚಿತ್ರಕಥೆಯನ್ನುರೆಡಿ ಮಾಡಿದ್ದರು. ಆದರೆ, 'ಲೈಗರ್' ಬಾಕ್ಸಾಫೀಸ್ನಲ್ಲಿ ಸಿನಿಮಾ ಸೋತ ಪರಿಣಾಮ ಮುಂಬೈನ ತಮ್ಮ ಬಾಡಿಗೆ ಪ್ಲ್ಯಾಟ್ ಅನ್ನು ಖಾಲಿ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಗೋವಾಗೆ ಹಾರಿದ ಪುರಿ ಜಗನ್ನಾಥ್
ಪುರಿ ಜಗನ್ನಾಥ್ ಮುಂಬೈನ ಫ್ಲ್ಯಾಟ್ಗೆ ಸುಮಾರು 15 ಲಕ್ಷ ಬಾಡಿಗೆ ಕಟ್ಟುತ್ತಿದ್ದರು. ಅದು ಹೆಚ್ಚು ಅನಿಸಿದ್ದರಿಂದ ಚಾರ್ಮಿ ಹಾಗೂ ಅವರ ತಂಡ ಫ್ಲ್ಯಾಟ್ ಅನ್ನು ಖಾಲಿ ಮಾಡುವುದೇ ಸೂಕ್ತ ಎಂದು ಭಾವಿಸಿದ್ದಾರೆ. ಹೀಗಾಗಿ ಮುಂಬೈನಿಂದ ಗೋವಾಗೆ ತಮ್ಮ ನೆಲೆಯನ್ನು ಬದಲಾಯಿಸಿದ್ದಾರೆ ಅನ್ನೋದು ಟಾಲಿವುಡ್ ಟಾಕ್. ಹೀಗಾಗಿ ಮುಂದಿನ ಸಿನಿಮಾಗೆ ಗೋವಾದಿಂದಲೇ ಪುರಿ ಜಗನ್ನಾಥ್ ಕಥೆಯನ್ನು ಹೆಣೆಯುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











