'ರಂಗ SSLC' ಆದ್ಮೇಲೆ ಭಟ್ರು ಕೈಗೆ ಸಿಕ್ಕಿದ ಮೋಹಕತಾರೆ: 19 ವರ್ಷಗಳ ಬಳಿಕ ರಮ್ಯಾಗೆ ಆಕ್ಷನ್ ಕಟ್
ಸ್ಯಾಂಡಲ್ವುಡ್ನ ವಿಕಟಕವಿ ಯೋಗರಾಜ್ ಭಟ್ ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದಾರೆ. 'ಮುಂಗಾರು ಮಳೆ' ಬಳಿಕ ಇದೇ ಸಿನಿಮಾದ ನಿರ್ಮಾಪಕರಿಗಾಗಿ 'ಮನದ ಕಡಲು' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮತ್ತೆ ಹೊಸಬರನ್ನು ಪರಿಚಯಿಸುತ್ತಿರುವ ಭಟ್ರು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದಾಖಲೆ ಸಿನಿಮಾ ಕೊಡಬಹುದು ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ.
'ಮನದ ಕಡಲು' ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಬಗ್ಗೆ ಊರೆಲ್ಲ ಸುದ್ದಿ ಹಬ್ಬಿದೆ. ಯೋಗರಾಜ್ ಭಟ್ರು ಹೊಸದೊಂದು ಸಿನಿಮಾಗೆ ಸ್ಕೆಚ್ ಹಾಕಿದ್ದು, 'ಮುಂಗಾರು ಮಳೆ' ಸಿನಿಮಾದ ನಿರ್ಮಾಪಕರೇ ಹಣ ಹಾಕುವುದಕ್ಕೆ ಮುಂದೆ ಬಂದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಂದ್ಹಾಗೆ, ಯಾರ ಜೊತೆ ಸಿನಿಮಾ ಅಂತ ನೋಡುವುದಕ್ಕೆ ಹೋದರೆ, ಮೋಹಕತಾರೆ ರಮ್ಯಾ ಹೆಸರು ಹರಿದಾಡುತ್ತಿದೆ.

ಹೌದು, ಮೋಹಕತಾರೆ ರಮ್ಯಾ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಎರಡು ಪ್ರಯತ್ನಗಳನ್ನು ಮಾಡಿ ಹಿಂದಕ್ಕೆ ಸರಿದಿದ್ದಾರೆ. ಈ ಗ್ಯಾಪ್ನಲ್ಲಿಯೇ ಮೋಹಕತಾರೆ ರಮ್ಯಾ ಕಮ್ಬ್ಯಾಕ್ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಯೋಗರಾಜ್ ಭಟ್ ಹಾಗೂ ರಮ್ಯಾ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಮೇಲೆ ಸರಿಯಾಗಿ ಸಿನಿಮಾಗಳನ್ನು ಮಾಡಿಲ್ಲ. ಈಗ ರಾಜಕೀಯದಿಂದಲೂ ದೂರ ಉಳಿದಿದ್ದಾರೆ. ಹೀಗಾಗಿ ಸಿನಿಮಾ ಕಡೆಗೆ ಮತ್ತೆ ಕಮ್ ಬ್ಯಾಕ್ ಮಾಡುವುದಕ್ಕೆ ಸರಿಯಾದ ಸ್ಕ್ರಿಪ್ಟ್ ಹುಡುಕಾಟದಲ್ಲಿ ಇದ್ದಾರೆ. ಈಗಾಗಲೇ ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಕೂಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುವುದು ಅಂತಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ಕೇವಲ ನಿರ್ಮಾಪಕಿಯಾಗಷ್ಟೇ ಉಳಿದುಕೊಂಡಿದ್ದರು. ಇದರ ಹಿಂದೇನೆ ಕೆಆರ್ಜಿ ಸ್ಟುಡಿಯೋ ನಿರ್ಮಿಸುತ್ತಿರುವ 'ಉತ್ತರಕಾಂಡ' ಸಿನಿಮಾ ಮೂಲಕ ಕಮ್ಬ್ಯಾಕ್ ಅಂತಾಗಿತ್ತು. ಆದರೆ, ಈಗ ಆ ಸಿನಿಮಾದಿಂದಲೂ ಹೊರ ಬಂದಿದ್ದಾರೆ ಅನ್ನೋ ಸುದ್ದಿಯಿದೆ. ಇಷ್ಟೆಲ್ಲ ನಡೆಯುತ್ತಿರುವಾಗ ಯೋಗರಾಜ್ ಭಟ್ ನಿರ್ದೇಶಿಸುವ ಸಿನಿಮಾಗೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ರಮ್ಯಾ ಕಮ್ ಬ್ಯಾಕ್ ಬಗ್ಗೆ ಫಿಲ್ಮ್ ಫೆಸ್ಟಿವಲ್ನಲ್ಲಿ ಅತಿಥಿಯಾಗಿ ಬಂದಿದ್ದ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

"ನನ್ನ ಕಮ್ಬ್ಯಾಕ್ ಬಗ್ಗೆ ನಾನು ಕುತೂಹಲದಿಂದ ಇದ್ದೇನೆ. ಆದರೆ ಇನ್ನೂ ಆರಂಭಿಕ ಹಂತದಲ್ಲಿ ಇದೆ. ಕಥೆ ಕೇಳಿದ್ದೀನಿ ಇಷ್ಟ ಆಗಿದೆ. ಇನ್ನೂ ಸ್ವಲ್ಪ ಚೇಂಜ್ ಆಗುತ್ತೆ. ಆದಾದ್ಮೇಲೆ ಒಂದೊಳ್ಳೆ ಸಮಯ ಬಂದಾಗ ನಾನು ಅನೌನ್ಸ್ ಮಾಡುತ್ತೇನೆ. ಈ ಸಿನಿಮಾ ವಿಭಿನ್ನವಾಗಿರುತ್ತೆ ಅಂತ ಹೇಳಬಹುದು. ಆದರೆ, ಕಮ್ಬ್ಯಾಕ್ ಮಾಡುವ ಸಿನಿಮಾ ಥಿಯೇಟರ್ ಎಕ್ಸ್ಪೀರಿಯನ್ಸ್ ಸಿಗಬೇಕು ಅನ್ನೋದು ಆಸೆ" ಎಂದು ರಮ್ಯಾ ಹೇಳಿದ್ದಾರೆ.
ಯೋಗರಾಜ್ ಭಟ್ ಈಗಾಗಲೇ ನಿರ್ದೇಶಿಸಿದ 'ಮನದ ಕಡಲು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಯುಗಾದಿ ಹಬ್ಬಕ್ಕೆ ಹದಿಹರೆಯದ ಲವ್ ಸ್ಟೋರಿಯೊಂದಿಗೆ ಮತ್ತೆ ಮೋಡಿ ಮಾಡುವುದಕ್ಕೆ ಭಟ್ರು ಸಜ್ಜಾಗಿದ್ದಾರೆ. ಈ ಗ್ಯಾಪ್ನಲ್ಲಿಯೇ ಯೋಗರಾಜ್ ಭಟ್ ರಮ್ಯಾ ಜೊತೆ ಸೇರಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರಂತೆ. ಅದಕ್ಕೆ 'ಮುಂಗಾರು ಮಳೆ' ನಿರ್ಮಾಪಕ ಈ. ಕೃಷ್ಣಪ್ಪ ಅವರ ಇಕೆ ಎಂಟರ್ಟೈನ್ಮೆಂಟ್ ಹಣ ಹೂಡಿಕೆ ಮಾಡಲಿದೆ. ಜೊತೆ ರಮ್ಯಾ ಅವರ ಆಪಲ್ ಬಾಕ್ಸ್ ಸಂಸ್ಥೆ ಕೂಡ ಕೈ ಜೋಡಿಸುತ್ತಿದೆ ಎನ್ನಲಾಗಿದೆ.
ಅಂದ್ಹಾಗೆ, ಈ ಪ್ರಾಜೆಕ್ಟ್ ಯಾವಾಗ ಅನೌನ್ಸ್ ಆಗುತ್ತೆ? ಅನ್ನೋದಕ್ಕೆ ಸದ್ಯ ಉತ್ತರ ಸಿಕ್ಕಿಲ್ಲ. ಆದರೆ, ಯೋಗರಾಜ್ ಭಟ್ ನಿರ್ದೇಶಿಸಿದ 'ಮನದ ಕಡಲು' ರಿಲೀಸ್ ಆಗುತ್ತಿದ್ದಂತೆ ಯುಗಾದಿ ಹಬ್ಬಕ್ಕೆ ರಮ್ಯಾ ಕಮ್ ಬ್ಯಾಕ್ ಸಿನಿಮಾ ಕೂಡ ಅನೌನ್ಸ್ ಆಗುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಪ್ರಾಜೆಕ್ಟ್ ಬಗ್ಗೆ ಮೋಹಕತಾರೆ ರಮ್ಯಾ ಆಗಲಿ, ಯೋಗರಾಜ್ ಭಟ್ ಆಗಲಿ ಇನ್ನೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, 2024ರಲ್ಲಿ ತೆರೆಕಂಡಿದ್ದ 'ರಂಗ ಎಸ್ಎಸ್ಎಲ್ಸಿ' ಬಳಿಕ ಮತ್ತೆ ಇಬ್ಬರೂ ಒಂದೇ ಸಿನಿಮಾಗೆ ಕೆಲಸ ಮಾಡಿಲ್ಲ. ಹೀಗಾಗಿ 19 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಕೆಲಸ ಮಾಡುವುದು ಗ್ಯಾರಂಟಿ ಅನ್ನುತ್ತಿವೆ ಬಲ್ಲ ಮೂಲಗಳು. ಸಿನಿಮಾ ಪ್ರೇಮಿಗಳಿಗೆ ಯುಗಾದಿ ಬಳಿಕ ಬೇವು ಸಿಗುತ್ತೋ ಬೆಲ್ಲ ಸಿಗುತ್ತೋ ಗೊತ್ತಿಲ್ಲ.


Click it and Unblock the Notifications











