ಪುತ್ರಿ ಐಶ್ವರ್ಯಾಗೆ ಮದುವೆ ಮಾಡಲು ಮುಂದಾದ ಅರ್ಜುನ್ ಸರ್ಜಾ? ತಮಿಳಿನ ಹಾಸ್ಯ ನಟನ ಪುತ್ರನೊಂದಿಗೆ 'ಪ್ರೇಮ ಬರಹ'?
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ 'ಲಿಯೋ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ನಟಿಸಿದ್ದಾರೆ. ಈ ಸಿನಿಮಾದ ರಿಲೀಸ್ಗೆ ಎದುರು ನೋಡುತ್ತಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯುತ್ತೆ ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಹೀಗಾಗಿ 'ಲಿಯೋ' ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇನ್ನೊಂದು ಕಡೆ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್'ಗೆ ಕಥೆ ಬರೆದಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಕೂಡ ರಿಲೀಸ್ ಆಗಬೇಕಿದೆ.

ಇಷ್ಟೊಂದು ಸಂಭ್ರಮಗಳ ನಡುವೆ ಅರ್ಜುನ್ ಸರ್ಜಾ ತಮ್ಮ ಮಗಳ ಮದುವೆ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇನ್ನೇ ಮಾತುಕತೆಯ ಹಂತದಲ್ಲಿದ್ದು ಶೀಘ್ರದಲ್ಲಿಯೇ ಕಲ್ಯಾಣ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಅರ್ಜುನ್ ಅರ್ಜಾ ಮೊದಲ ಪುತ್ರಿ ಐಶ್ವರ್ಯಾ ಅರ್ಜುನ್ ಕೈ ಹಿಡಿಯಲಿರೋ ಆ ವರ ಯಾರು? ಆತನ ಹಿನ್ನಲೆಯೇನು? ತಮಿಳು ಚಿತ್ರರಂಗದಲ್ಲಿ ಈ ಬಗ್ಗೆ ಏನಿದೆ ಸುದ್ದಿ? ತಿಳಿಯುವುದಕ್ಕೆ ಮುಂದೆ ಓದಿ.
ಮೊದಲ ಐಶ್ವರ್ಯಾಗೆ ಪುತ್ರಿಗೆ ಮದುವೆ?
ಅರ್ಜುನ್ ಸರ್ಜಾ ಮೊದಲಿನಿಂದಲೈ ಸಿನಿಮಾಗಳು ಎಷ್ಟು ಮುಖ್ಯವೋ.. ಕುಟುಂಬ ಕೂಡ ಅಷ್ಟೇ ಮುಖ್ಯ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಈ ರೂಲ್ಸ್ ಜಾರಿಯಲ್ಲಿದೆ. ಈಗ ಬದುಕಿನ ಪ್ರಮುಖ ಜವಾಬ್ದಾರಿಯನ್ನು ಮುಗಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಕಳೆದ ಒಂದೆರಡು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಮಗಳ ಮದುವೆ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ.
ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಜೊತೆ ಅರ್ಜುನ್ ಸರ್ಜಾ ಸಂಬಂಧ ಬೆಳೆಸುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಕೂಡ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಐಶ್ವರ್ಯಾ ಅರ್ಜುನ್ ಜೊತೆ ಉಮಾಪತಿ ರಾಮಯ್ಯ ವಿವಾಹ ನಡೆಯಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಐಶ್ವರ್ಯಾ-ಉಮಾಪತಿ 'ಪ್ರೇಮಬರಹ'
ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ಮದುವೆ ಮ್ಯಾಟರ್ ಜೋರಾಗಿಯೇ ಹರಿದಾಡುತ್ತಿದೆ. ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಮದುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಅರ್ಜುನ್ ಸರ್ಜಾ ಹಾಗೂ ಹಿರಿಯ ಹಾಸ್ಯ ನಟ ತಂಬಿ ರಾಮಯ್ಯ ಇಬ್ಬರೂ ಮಕ್ಕಳ ಮದುವೆಗೆ ಅಸ್ತು ಎಂದಿದ್ದಾರೆ. ಯಾವುದೇ ಸಂದರ್ಭದಲ್ಲಾದರೂ ಈ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಎರಡೂ ಕುಟುಂಬಗಳು ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ.
ಉಮಾಪತಿ ರಾಮಯ್ಯ ಹಿನ್ನೆಲೆಯೇನು?
ಉಮಾಪತಿ ರಾಮಯ್ಯ 2017ರಲ್ಲಿ 'ಅಧಗಪ್ಪಟ್ಟಾಥು ಮಗಜನಂಗಳೈ' ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ. ಹೀಗಾಗಿ ಎರಡನೇ ಸಿನಿಮಾವನ್ನು ಸ್ವತ: ತಂದೆ ತಂಬಿ ರಾಮಯ್ಯ ಅವರೇ ನಿರ್ದೇಶನ ಮಾಡಿದ್ದರು. ಅದುವೇ 'ಮನಿಯಾರ್ ಕುಟುಂಬಂ'. ಈ ಸಿನಿಮಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇತ್ತೀಚೆಗೆ ತಮಿಳಿಯ ರಿಯಾಲಿಟಿ ಶೋ 'ಸರ್ವವೈರ್ ತಮಿಳ್'ನಲ್ಲಿ ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡಿನ ಮನೆ ಮಾತಾಗಿದ್ದಾರೆ. ಉಮಾಪತಿ ರಾಮಯ್ಯ ನಟನಷ್ಟೇ ಅಲ್ಲ. ಒಳ್ಳೆ ಡ್ಯಾನ್ಸ್ ಹಾಗೂ ಕೊರಿಯೋಗ್ರಫರ್ ಅಂತನೂ ಪ್ರೂವ್ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್'ನಲ್ಲೂ ಪರಿಣಿತಿ ಹೊಂದಿದ್ದಾರೆ. ಸದ್ಯ ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಅರ್ಜುನ್ ಮದುವೆ ಮಾತುಕತೆ ಬಗ್ಗೆ ಸುದ್ದಿಯಾಗುತ್ತಿದೆ.


Click it and Unblock the Notifications











