ವಿಜಯ್ ದೇವರಕೊಂಡಗೆ ಬಾಲಿವುಡ್ನಲ್ಲಿ 100 ಕೋಟಿ ರೂ. ಆಫರ್?
'ಅರ್ಜುನ್ ರೆಡ್ಡಿ' ಮೂಲಕ ಮಿಂಚಿದ ತೆಲುಗಿನ ವಿಜಯ್ ದೇವರಕೊಂಡ, ಅದರ ಬೆನ್ನಲ್ಲೇ 'ಗೀತಾ ಗೋವಿಂದಂ'ನಲ್ಲಿಯೂ ಯಶಸ್ಸಿನಲ್ಲಿ ತೇಲಾಡಿದರು. ಆದರೆ ನೋಟಾ, ಡಿಯರ್ ಕಾಮ್ರೇಡ್ ಚಿತ್ರಗಳು ನಿರೀಕ್ಷಿತ ಮಟ್ಟವನ್ನು ತಲುಪುವಲ್ಲಿ ವಿಫಲವಾದವು. ಈಗ 'ವರ್ಲ್ಡ್ ಫೇಮಸ್ ಲವ್ವರ್' ಚಿತ್ರ ಬಾಕ್ಸಾಫೀಸ್ನಲ್ಲಿ ಶೋಚನೀಯ ಸೋಲು ಕಂಡಿದೆ. ಹೀಗೆ ಕೆಲವೇ ವರ್ಷಗಳಲ್ಲಿ ಗೆಲುವಿನ ಉತ್ತುಂಗಕ್ಕೇರಿದಂತೆಯೇ ವಿಜಯ್ ದೇವರಕೊಂಡ, ಸೋಲಿನ ಪಾತಾಳವನ್ನೂ ಕಂಡಿದ್ದಾರೆ.
ವಿಜಯ್ ನಟಿಸಿದ್ದ 'ಅರ್ಜುನ್ ರೆಡ್ಡಿ' ಚಿತ್ರ 'ಕಬೀರ್ ಸಿಂಗ್' ಹೆಸರಿನಲ್ಲಿ ಬಾಲಿವುಡ್ಗೂ ರೀಮೇಕ್ ಆಗಿತ್ತು. ಶಾಹಿದ್ ಕಪೂರ್ ನಟಿಸಿದ್ದ ಈ ಚಿತ್ರ ಹಿಂದಿಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ, ಸೋಲುಗಳಿಂದ ಕಂಗಾಲಾಗಿದ್ದ ಶಾಹಿದ್ಗೆ ಮರುಜೀವ ನೀಡಿತ್ತು.
'ಅರ್ಜುನ್ ರೆಡ್ಡಿ' ಚಿತ್ರದ ಸಂದರ್ಭದಿಂದಲೇ ವಿಜಯ್ ದೇವರಕೊಂಡ ಬಾಲಿವುಡ್ಗೆ ಜಿಗಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ಮತ್ತೆ ಅದು ಚಾಲ್ತಿಗೆ ಬಂದಿದೆ. ಬಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಭರ್ಜರಿ ಆಫರ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

ವಿಜಯ್ಗೆ ಕರಣ್ ವಿಶೇಷ ಆಫರ್
ವಿಜಯ್ ದೇವರಕೊಂಡ ಅಭಿನಯವನ್ನು ಮೆಚ್ಚಿಕೊಂಡಿದ್ದ ನಿರ್ಮಾಪಕ ಕರಣ್ ಜೋಹರ್, ಅವರಿಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದಾರಂತೆ. 'ಕಬೀರ್ ಸಿಂಗ್' ರೀಮೇಕ್ ಹಕ್ಕನ್ನು ಖರೀದಿಸಲು ತೆರಳಿದ್ದಾಗ ವಿಜಯ್ ಜತೆಗೆ ಕರಣ್ ಮಾತುಕತೆ ನಡೆಸಿದ್ದರು.

ಡಿಯರ್ ಕಾಮ್ರೇಡ್ ರೀಮೇಕ್ ಒಲ್ಲೆ ಎಂದ ವಿಜಯ್
ವಿಜಯ್ 'ಡಿಯರ್ ಕಾಮ್ರೇಡ್' ರೀಮೇಕ್ ಹಕ್ಕನ್ನೂ ಕರಣ್ ಜೋಹರ್ ಅವರೇ ಖರೀದಿಸಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ಅವರೇ ಮಾಡಬೇಕು ಎನ್ನುವುದು ಕರಣ್ ಜೋಹರ್ ಒತ್ತಾಸೆಯಾಗಿತ್ತು. ಆದರೆ 'ರೌಡಿ' ಗೆಟಪ್ಗೆ ತಮ್ಮನ್ನು ಬದಲಿಸಿಕೊಂಡಿರುವ ವಿಜಯ್, ಅದಕ್ಕೆ ಒಲ್ಲೆ ಎಂದು ತಿರಸ್ಕರಿಸಿದ್ದರಂತೆ. ಈ ಚಿತ್ರದಲ್ಲಿ ನಟಿಸಲು 40 ಕೋಟಿ ರೂ. ಸಂಭಾವನೆ ನೀಡುವುದಾಗಿ ಕರಣ್ ಜೋಹರ್ ಆಫರ್ ನೀಡಿದ್ದರು ಎನ್ನಲಾಗಿದೆ.

100 ಕೋಟಿ ರೂ ಆಫರ್ ನೀಡಿದ ಕರಣ್
ತಮ್ಮ ಮುಂದಿನ ಸಿನಿಮಾಗಳಲ್ಲಿ ನಟಿಸಲು ವಿಜಯ್ ದೇವರಕೊಂಡಗೆ ಕರಣ್ ಜೋಹರ್ 100 ಕೋಟಿ ರೂ.ಗಳ ಆಫರ್ಅನ್ನು ಇತ್ತೀಚೆಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಷ್ಟಾದರೂ ವಿಜಯ್ ಅದಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಗಾಳಿಸುದ್ದಿಯೂ ಇದೆ.

ಒಪ್ಪುತ್ತಿಲ್ಲವೇಕೆ ವಿಜಯ್?
ಬಾಲಿವುಡ್ನ ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್ ಜೋಹರ್ ಅವರೇ ಬಾಲಿವುಡ್ನ ಬಾಗಿಲು ತೆರೆದು ಒಳಗೆ ಆಹ್ವಾನಿಸುತ್ತಿದ್ದರೂ ವಿಜಯ್ ದೇವರಕೊಂಡ ಅಲ್ಲಿಗೆ ಕಾಲಿಡಲು ಮೀನಮೇಷ ಎಣಿಸುತ್ತಿದ್ದಾರೆ. ಅಲ್ಲಿಗೆ ಹೋಗಲು ವಿಜಯ್ ಮುಂದಾಗದೆ ಇರುವುದು ಅವರಲ್ಲಿನ ಹಿಂಜರಿಕೆಯೇ ಕಾರಣ. ಈಗ ಅವರು ಹೊಸ ಆಫರ್ಗೆ ಒಪ್ಪುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











