Kichcha Sudeep: ಏಪ್ರಿಲ್ ತಿಂಗಳಲ್ಲಿ 'ವಾರಾಣಾಸಿ' ತಂಡ ಸೇರಲಿರೋ ಕಿಚ್ಚ ಸುದೀಪ್? ಎಷ್ಟು ದಿನ ಕಾಲ್ಶೀಟ್?
RRR ಸಿನಿಮಾ ಬಳಿಕ ಎಸ್ ಎಸ್ ರಾಜಮೌಳಿ 'ವಾರಾಣಾಸಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಲೀಡ್ ರೋಲ್ನಲ್ಲಿ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋದು ಈ ಸಿನಿಮಾದ ಹೈಲೈಟ್ಗಳಲ್ಲಿ ಒಂದು.
'ವಾರಾಣಾಸಿ' ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ನ ಮೊದಲ ಸಿನಿಮಾ. ಈ ಸಿನಿಮಾ ಗ್ಲೋಬಲ್ ಲೆವೆಲ್ನಲ್ಲಿ ಈಗಾಗಲೇ ಸದ್ದು ಮಾಡುತ್ತಿರುವುದಕ್ಕೆ ಇದು ಪ್ರಮುಖ ಕಾರಣ. ಇದರೊಂದಿಗೆ ಪ್ರಿಯಾಂಕಾ ಚೋಪ್ರಾ ಎಂಟ್ರಿ ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.

ರಾಜಮೌಳಿ ನಿರ್ದೇಶಿಸಿದ RRR ಸಿನಿಮಾವನ್ನು ಹಾಲಿವುಡ್ ದಿಗ್ಗಜರೇ ಮೆಚ್ಚಿಕೊಂಡಿದ್ದರು. ಹೀಗಾಗಿ ಈ ಚಿತ್ರವನ್ನು 1300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವುದಕ್ಕೆ ರಾಜಮೌಳಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಕೂಡ 'ವಾರಾಣಾಸಿ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಏಪ್ರಿಲ್ ತಿಂಗಳಿನಿಂದ ಸುದೀಪ್ 'ವಾರಾಣಾಸಿ' ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಆ ಸುದ್ದಿ ಏನು ಅಂತ ನೋಡುವುದಾರೇ,
ಕೆಲವು ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ 'ವಾರಾಣಾಸಿ' ಸಿನಿಮಾ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಎಸ್ ಎಸ್ ರಾಜಮೌಳಿ ಕಿಚ್ಚ ಸುದೀಪ್ಗೆ ಪ್ರಮುಖ ಪಾತ್ರವನ್ನು ನೀಡಿದ್ದು, ಶೀಘ್ರದಲ್ಲಿಯೇ ಈ ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ಸುದ್ದಿ ಓಡಾಡಿತ್ತು. ಈ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಹಲ್ಚಲ್ ಎಬ್ಬಿಸಿದಾಗಲೂ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದರು. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸೋದು ಗ್ಯಾರಂಟಿ ಅನ್ನೋದು ಅವರ ಅಭಿಮಾನಿಗಳಲ್ಲಿ ನಂಬಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಈಗಾಗಲೇ ರಾಜಮೌಳಿ ನಿರ್ದೇಶಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಈಗ'ದಿಂದ ಆರಂಭ ಆದ ಇವರ ಒಡನಾಟ ಇಂದಿಗೂ ಮುಂದುವರೆದಿದೆ. 'ಬಾಹುಬಲಿ' ಸಿನಿಮಾದಲ್ಲಿಯೂ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. ಈ ಕಾರಣಕ್ಕೆ 'ವಾರಾಣಾಸಿ' ಸಿನಿಮಾದಲ್ಲಿಯೂ ಕಿಚ್ಚ ಸುದೀಪ್ಗೆ ಪ್ರಮುಖ ಪಾತ್ರವೊಂದನ್ನೇ ನೀಡಿದ್ದಾರೆಂಬ ಸುದ್ದಿಯಿದೆ.

ಸದ್ಯ ಗುಲ್ಲೆದ್ದಿರುವ ಸುದ್ದಿ ಏನಪ್ಪಾ ಅಂದರೆ, ಕಿಚ್ಚ ಸುದೀಪ್ ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ 'ವಾರಾಣಾಸಿ' ತಂಡವನ್ನು ಸೇರಿಕೊಳ್ಳಲಿದ್ದಾರಂತೆ. ಸುಮಾರು 15 ದಿನಗಳು ಕಾಲ್ಶೀಟ್ ಕೊಟ್ಟಿದ್ದು, ರಾಜಮೌಳಿ ಕಿಚ್ಚ ಸುದೀಪ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದ್ದಾರಂತೆ. ಸದ್ಯ ಈ ಸಿನಿಮಾಗೆ ಬೇಕಿರುವ ತಯಾರಿಯನ್ನು ಕಿಚ್ಚ ಸುದೀಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕಿಚ್ಚ ಸುದೀಪ್ ಆಗಲಿ, ರಾಜಮೌಳಿ ಟೀಮ್ ಆಗಲಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಒಂದು ವೇಳೆ 'ವಾರಾಣಾಸಿ'ಯಲ್ಲಿ ಕಿಚ್ಚ ಸುದೀಪ್ ನಟಿಸೋದೇ ಆದರೆ, ರಾಜಮೌಳಿ ಯಾವ ಪಾತ್ರ ಕೊಟ್ಟಿರಬಹುದೆಂಬ ಕುತೂಹಲ ಮೂಡಿದೆ. ಅವರ ಅಭಿಮಾನಿಗಳಂತೂ ಈ ಸುದ್ದಿ ನಿಜವಾಗಲಿ ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ರಾಜಮೌಳಿ ತಮ್ಮ ಸಿನಿಮಾ ಬಗ್ಗೆ ಚಿಕ್ಕದೊಂದು ಸುದ್ದಿಯನ್ನೂ ಹೊರಗೆ ಬಿಡುವುದಿಲ್ಲ. ರಹಸ್ಯವಾಗಿ ಸಿನಿಮಾವನ್ನು ಶೂಟ್ ಮಾಡುತ್ತಾರೆ. ಸಿನಿಮಾ ಪ್ರಮೋಷನ್ ಶುರು ಮಾಡುವವರೆಗೂ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಕಿಚ್ಚ ಸುದೀಪ್ ನಟಿಸೋದು ಸದ್ಯಕ್ಕೆ ಗಾಳಿ ಸುದ್ದಿಯಾಗಿ ಮತ್ತೊಮ್ಮೆ ಎಲ್ಲೆಡೆ ಹರಿದಾಡುತ್ತಿದೆ.


Click it and Unblock the Notifications















