Karavali Controversy: ದಿಢೀರನೇ ಬುಗಿಲೆದ್ದ 'ಕರಾವಳಿ' ವಿವಾದ.. ಒಳಗೆ ನಡೆದಿದ್ದೇನು? ಪ್ರಜ್ವಲ್-ರಾಜ್ ಮಧ್ಯೆ ಏನಿದು?
ಈ ತಿಂಗಳು ಬಿಡುಗಡೆಗೆ ಸಜ್ಜಾಗಿರುವ ಮತ್ತೊಂದು ಕನ್ನಡ ಸಿನಿಮಾ 'ಕರಾವಳಿ'. ಸಿನಿಮಾ ರಿಲೀಸ್ಗೆ ಹತ್ತಿರವಿರುವಾಗಲೇ ತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ವೇಳೆ ಹೈಡ್ರಾಮ ನಡೆದಿದೆ. ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇಳೆ ಅಭಿಮಾನಿಗಳಿಗೂ ಕರಾವಳಿ ತಂಡಕ್ಕೂ ಮಾತಿನ ಚಕಮಕಿ ನಡೆದಿದೆ. ಈ ವಿವಾದಕ್ಕೆ ಹಿಂದಿನ ಅಸಲಿ ಕಾರಣವನ್ನು ಗಾಂಧಿನಗರದ ಮಂದಿ ಬೇರೆ ರೀತಿನೇ ವಿಶ್ಲೇಷಣೆ ಮಾಡುತ್ತಿದ್ದಾರೆ.
ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಕರಾವಳಿ' ಮೇಲೆ ನಿರೀಕ್ಷೆಯಿದೆ. ಈ ಸಿನಿಮಾ ಜುಲೈ 24ಕ್ಕೆ ಬಿಡುಗಡೆಯಾಗುತ್ತಿದ್ದು, ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಅದರಲ್ಲೂ 'ಸು ಫ್ರಮ್ ಸೋ' ಸಿನಿಮಾ ರಿಲೀಸ್ ಆದ ಡೇಟ್ಗೆ 'ಕರಾವಳಿ' ರಿಲೀಸ್ ಆಗುತ್ತಿರೋದು ಗಮನ ಸೆಳೆದಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪ್ರಜ್ವಲ್ ದೇವರಾಜ್ ಜೊತೆ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಕಾಂಬಿನೇಷನ್ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಇಂತಹ ಸಮಯದಲ್ಲಿ ವಿವಾದ ಎದ್ದಿರೋದು ಪ್ರಚಾರಕ್ಕೆ ಅಂತಲೇ ಒಂದು ಕಡೆ ಚರ್ಚೆ ನಡೆಯುತ್ತಿದೆ. ಆದರೆ, ಸ್ಯಾಂಡಲ್ವುಡ್ ಮಂದಿ ಬೇರೆನೇ ಕಥೆ ಹೇಳುತ್ತಿದ್ದಾರೆ. ಅಸಲಿಗೆ ಪ್ರಜ್ವಲ್ ದೇವರಾಜ್ ಮುನಿಸಿಗೆ ಕಾರಣವೇನು? ಪ್ರಜ್ವಲ್ ಹಾಗೂ ರಾಜ್ ಬಿ ಶೆಟ್ಟಿ ನಡುವೆ ಏನಾದರೂ ಸಮಸ್ಯೆ ಇದೆಯೇ? ಸಂಭಾವನೆ ವಿಚಾರದಲ್ಲಿ ಸಮಸ್ಯೆ ಆಗಿದೆಯಾ? ಸಿನಿಮಾ ಮಂದಿ ಏನು ಹೇಳುತ್ತಿದ್ದಾರೆ ಅಂತ ನೋಡುವುದಾರೇ..
ಏನಿದು ಕರಾವಳಿ ವಿವಾದ?
'ಕರಾವಳಿ' ಸಿನಿಮಾದ ಟ್ರೈಲರ್ನಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಇರಲಿಲ್ಲ. ಇತ್ತ ಟ್ರೈಲರ್ ಲಾಂಚ್ಗೂ ಅವರು ಬಂದಿರಲಿಲ್ಲ. ಈ ವಿಚಾರವಾಗಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು. ಆಗಲೇ ಪ್ರಜ್ವಲ್ ದೇವರಾಜ್ ಹಾಗೂ ಕರಾವಳಿ ಸಿನಿಮಾ ನಿರ್ದೇಶಕ ಕಮ್ ನಿರ್ಮಾಪಕ ಗುರದತ್ ಗಾಣಿಕ ನಡುವೆ ಏನೋ ನಡೆದಿದೆ ಅನ್ನೋದು ಗೊತ್ತಾಗಿತ್ತು. ಪ್ರಜ್ವಲ್ ಸಂಭಾವನೆ ಬಂದಿಲ್ಲ ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರೆ, ಇತ್ತ ಗುರುದತ್ ಗಾಣಿಗ ಒಂದು ಕೋಟಿ ರೂಪಾಯಿ ಕೊಟ್ಟಿದ್ದೇವೆ. ಇನ್ನು 25 ಲಕ್ಷ ರೂ. ಬಾಕಿಯಿದೆ ಡಬ್ಬಿಂಗ್ ಮುಗಿಸಿದ ಬಳಿಕ ಕೊಡುತ್ತೇವೆ ಎಂದಿದ್ದೆ. ಆದರೆ, ಅವರ ಕಡೆ ಪ್ರತಿಕ್ರಿಯೆ ಇಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ, ಮ್ಯಾಟರ್ ಇಷ್ಟೇನಾ? ಇಷ್ಟಕ್ಕೆ ವಿವಾದ ಹುಟ್ಟಿಕೊಂಡಿತೇ..? ಗಾಂಧಿನಗರದಲ್ಲಿ ಹಬ್ಬಿರೋ ಸುದ್ದಿ ಬೇರೆನೇ ಇದೆ.
ಎಡವಟ್ಟು ಆಗಿದ್ದು ಎಲ್ಲಿ?
ಸ್ಯಾಂಡಲ್ವುಡ್ ಮಂದಿಯ ಪ್ರಕಾರ ಗುರುದತ್ ಗಾಣಿಗ 'ಕರಾವಳಿ' ಮಾಡುವಾಗ ಪ್ರಜ್ವಲ್ಗೆ 1.25 ಕೋಟಿ ರೂಪಾಯಿ ಸಂಭಾವನೆ ಎಂದು ಮಾತಾಡಿದ್ದರು. ಅದಕ್ಕೆ ಪ್ರಜ್ವಲ್ ಕೂಡ ಒಪ್ಪಿದ್ದರು. ಗಾಣಿಗ ಹೇಳಿದಂತೆ ಈಗಾಗಲೇ ಒಂದು ಕೋಟಿ ರೂಪಾಯಿ ಸಂಭಾವನೆ ಕೂಡ ಕೊಟ್ಟಿದ್ದಾಗಿದೆ. 25 ಲಕ್ಷ ರೂ. ಅಷ್ಟೇ ಬಾಕಿ ಉಳಿದಿದೆ. ಹಾಗಿದ್ಮೇಲೆ ವಿವಾದ ಏನಕ್ಕೆ? ಪ್ರಜ್ವಲ್ ದೇವರಾಜ್ ತಮ್ಮ ಸಹಾಯಕರಿಗೆ ಸಂಭಾವನೆಯನ್ನು 20 ಲಕ್ಷ ರೂ. ಚಾರ್ಜ್ ಮಾಡಿದ್ದಾರೆ. ಹೀಗಾಗಿ ಗುರುದತ್ ಗಾಣಿಗ ಈಗಾಗಲೇ ಉಳಿದಿರೊ 25 ಲಕ್ಷಕ್ಕೆ ಇಪ್ಪತ್ತು 20 ಲಕ್ಷ ಸೇರಿಸಿ ಕೊಡಬೇಕು, ಜೊತೆ ಜಿಎಸ್ಟಿ ಹಣವನ್ನು ನೀಡಬೇಕು ಅನ್ನೋದು ಪ್ರಜ್ವಲ್ ವಾದ. ಅದಕ್ಕೆ ಗುರುದತ್ ಗಾಣಿಗ ರೆಡಿಯಿಲ್ಲ. ಇಲ್ಲಿಂದ ಇವರಿಬ್ಬರ ನಡುವೆ ವೈಮನಸ್ಸು ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ ಎಂಟ್ರಿ ಇಷ್ಟವಿರಲಿಲ್ಲ?
'ಕರಾವಳಿ' ಸಿನಿಮಾದ ಕಥೆ ಒಪ್ಪಿಸಿದಾಗಲೇ ನಿರ್ದೇಶಕ ಗುರುದತ್ ಗಾಣಿಗ ದೊಡ್ಡ ಸ್ಟಾರ್ ನಟ ಎಂಟ್ರಿ ಕೊಡುತ್ತಾರೆ ಎಂದು ಹೇಳಿದ್ದರು. ಅದಕ್ಕೆ ಪ್ರಜ್ವಲ್ ಕೂಡ ಸಮ್ಮಿತಿ ನೀಡಿದ್ದರಂತೆ. ಟ್ರೈಲರ್ ಲಾಂಚ್ ವೇಳೆ ರಾಜ್ ಬಿ ಶೆಟ್ಟಿ ಹೇಳಿದಂತೆ ಅವರು ಮೊದಲ ಆಯ್ಕೆ ಆಗಿರಲಿಲ್ಲ. ಆ ದೊಡ್ಡ ನಟ ಅನಿವಾರ್ಯ ಕಾರಣದಿಂದ ಸಿನಿಮಾಗೆ ಬರಲು ಆಗಿರಲಿಲ್ಲ. ಹೀಗಾಗಿ ರಾಜ್ ಬಿ ಶೆಟ್ಟಿ ಎಂಟ್ರಿ ಕೊಡಬೇಕಾಯ್ತು. ಇದು ಪ್ರಜ್ವಲ್ ದೇವರಾಜ್ಗೆ ಇಷ್ಟವಿರಲಿಲ್ಲ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ಆದರೆ, ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ರಾಜ್ ಬಿ ಶೆಟ್ಟಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
24ಕ್ಕೆ ಸಿನಿಮಾ ರಿಲೀಸ್ ಆಗುತ್ತಾ?
ಕೆವಿಎನ್ ಪ್ರೊಡಕ್ಷನ್ಸ್ 'ಕರಾವಳಿ' ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಹೀಗಾಗಿ ಡೇಟ್ ಅನೌನ್ಸ್ ಮಾಡಿದಂತೆ ಜುಲೈ 24ರಂದು ಬಹುತೇಕ ರಿಲೀಸ್ ಆಗುತ್ತೆ. ಆದರೆ, ಗಾಂಧಿನಗರದ ಮಂದಿಯ ಪ್ರಕಾರ, ಬಾಕಿ ಹಣ ನೀಡುವವರೆಗೂ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡುವುದು ಅನುಮಾನ. ಒಂದು ವೇಳೆ ಡಬ್ಬಿಂಗ್ ಮಾಡದೇ ಇದ್ದರೆ, ಬೇರೆಯವರೊಂದಿಗೆ ಡಬ್ ಮಾಡಿಸಿ ರಿಲೀಸ್ ಮಾಡುವುದಕ್ಕೆ ಅನುಮತಿ ನೀಡದೇ ಇದ್ದರೆ ಜುಲೈ 24ಕ್ಕೆ ರಿಲೀಸ್ ಆಗೋದು ಅನುಮಾನ ಎನ್ನುತ್ತಿದ್ದಾರೆ. ಸದ್ಯ ಇದನ್ನು ಗುರುದತ್ ಗಾಣಿಗ ಹೇಗೆ ಪರಿಹರಿಸಿಕೊಳ್ಳುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications