₹30 ಕೋಟಿ ಅಡ್ವಾನ್ಸ್ ಕೊಟ್ಟವರಿಗೆ ದರ್ಶನ್ ಸಿನಿಮಾ; ಜಾಮೀನು ಸಿಕ್ಕಿದ ಬಳಿಕ 14 ಚಿತ್ರಗಳಿಗೂ ಸಿಕ್ತಾ ಗ್ರೀನ್ ಸಿಗ್ನಲ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೆಗ್ಯೂಲರ್ ಜಾಮೀನು ಸಿಕ್ಕಿದೆ. ಹೈಕೋರ್ಟ್ನಲ್ಲಿ ಬೇಲ್ ಸಿಕ್ಕಿದ ಬಳಿಕ ಅವರ ಸಿನಿಮಾಗಳ ಬಗ್ಗೆ ಚರ್ಚೆ ಶುರುವಾಗಿದೆ. ಕಳೆದ 7 ತಿಂಗಳುಗಳಿಂದ ನಿರ್ಮಾಪಕರು ದರ್ಶನ್ಗೆ ಅಡ್ವಾನ್ಸ್ ಕೊಟ್ಟು ಕಂಗಾಲಾಗಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ರೇಣುಕಾಸ್ವಾಮಿ ಕೇಸ್ನಲ್ಲಿ ಒಂದೂವರೆ ಎರಡು ವರ್ಷ ದರ್ಶನ್ ಲಾಕ್ ಆದರೆ ಹೇಗಿರುತ್ತೆ? ಅನ್ನೋದು ಅತಂಕ ಕೂಡ ಇತ್ತು.
ಎಲ್ಲ ಸರಿಯಾಗಿ ಇದ್ದಿದ್ದರೆ ದರ್ಶನ್ ನಟಿಸುತ್ತಿರುವ 'ಡೆವಿಲ್' ಸಿನಿಮಾ ಈಗಾಗಲೇ ರಿಲೀಸ್ಗೆ ರೆಡಿಯಾಗುತ್ತಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ 'ಕಾಟೇರ' ಸಿನಿಮಾ ರಿಲೀಸ್ ಆಗಿತ್ತು. ಅದು ಬಾಕ್ಸಾಫೀಸ್ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅದೇ ಸಮಯಕ್ಕೆ 'ಡೆವಿಲ್' ಸಿನಿಮಾವನ್ನು ರಿಲೀಸ್ ಮಾಡುವ ಆಲೋಚನೆ ಇತ್ತು. ಅಷ್ಟರಲ್ಲೇ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ದರ್ಶನ್ ಜೈಲು ಸೇರುವಂತಾಗಿತ್ತು.

ಸುಮಾರು ಆರೂವರೆ ಏಳು ತಿಂಗಳು ಜಾಮೀನಿಗಾಗಿ ಹೋರಾಟ ಮಾಡಿದ ಬಳಿಕ ದರ್ಶನ್ಗೆ ರೆಗ್ಯೂಲರ್ ಬೇಲ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಬಹುದಾದ ಸಿನಿಮಾಗಳ್ಯಾವುವು ಅನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ದರ್ಶನ್ ಜೈಲು ಸೇರುವುದಕ್ಕೂ ಮುನ್ನ 14 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರವಾಗಿ ಒಂದೊಂದೇ ಕಥೆಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಅಂತ ವರದಿಗಳಾಗಿವೆ.
ದರ್ಶನ್ ಬೆನ್ನು ನೋವಿನ ಹಿನ್ನೆಲೆಯಲ್ಲಿ ಜಾಮೀನು ಪಡೆದ ಹೊರಬಂದಿದ್ದರು. ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದಾರೆ ಎನ್ನಲಾಗಿತ್ತು. ಇನ್ನೂ ದರ್ಶನ್ಗೆ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ಈ ವೇಳೆನೆ ರೆಗ್ಯೂಲರ್ ಜಾಮೀನು ಸಿಕ್ಕಿದ್ದರಿಂದ ದರ್ಶನ್ ಸರ್ಜರಿಗೆ ಒಳಗಾಗುತ್ತಾರೆ ಅನ್ನುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಫಿಜಿಯೋಥೆರಪಿ ನಡೆಯುತ್ತಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ 'ಡೆವಿಲ್' ಸಿನಿಮಾದಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಇನ್ನೊಂದು ಕಡೆ ತರುಣ್ ಸುಧೀರ್ ನಿರ್ದೇಶಿಸಲಿರುವ ದರ್ಶನ್ 59ನೇ ಸಿನಿಮಾ 'ಸಿಂಧೂರ ಲಕ್ಷ್ಮಣ'ದ ಕೆಲಸ ಕೂಡ ಫುಲ್ ಸ್ವಿಂಗ್ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗಳೊಂದಿಗೆ ದರ್ಶನ್ 14 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರತಿಯೊಂದು ಸಿನಿಮಾದಿಂದ 2 ರಿಂದ 3 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಆರ್ ಕನ್ನಡ ವರದಿ ಮಾಡಿದೆ.
ಈ ವರದಿಯಲ್ಲಿ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಕೆಲವ ಸಿನಿಮಾಗಳ ಪಟ್ಟಿಯನ್ನು ಮಾಡಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರುವುದಕ್ಕೂ ಮುನ್ನ ನಿರ್ಮಾಪಕ ಸೂರಪ್ಪ ಬಾಬುಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಜಗ್ಗುದಾದ ನಿರ್ದೇಶಕ ರಾಘವೇಂದ್ರ ಹೆಗ್ಡೆ, ತಮಿಳು ನಿರ್ಮಾಪಕ ರಮೇಶ್ ಎಂಬುವವರಿಗೂ ಕಾಲ್ ಶೀಟ್ ಕೊಟ್ಟಿದ್ದರು ಎಂದು ಹೇಳಲಾಗಿದೆ.
ಇನ್ನು ಕೆವಿಎನ್ ಪ್ರೊಡಕ್ಷನ್ ಜೊತೆನೂ ದರ್ಶನ್ ಒಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಜೋಗಿ ಪ್ರೇಮ್ ಆ ಸಿನಿಮಾವನ್ನು ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾ ಅಧಿಕೃತವಾಗಿಯೇ ಘೋಷಣೆ ಆಗಿತ್ತು. ಇದರೊಂದಿಗೆ ಹೊಸ ಕೇಳಿ ಬರುತ್ತಿರುವ ಸುದ್ದಿಯೆಂದರೆ, ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ಜೊತೆನೂ ಒಂದು ಸಿನಿಮಾಗೆ ಒಪ್ಪಿಗೆ ನೀಡಿದ್ದರು ಎಂದು ವರದಿಯಾಗಿದೆ. ಹಾಗೆ ತೆಲುಗು ನಿರ್ಮಾಪಕ ಪ್ರಸಾದ್ ಬಾಬು ಎಂಬುವವರಿಗೂ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ.


Click it and Unblock the Notifications











