ದರ್ಶನ್ಗೆ ಹೇಳಿದ್ದ ಕಥೆ ಧ್ರುವಗೆ ಮಾಡುತ್ತಿದ್ದಾರಾ ಜೋಗಿ ಪ್ರೇಮ್? ಈ ಚಿತ್ರಕ್ಕಿದೆ ಭೂಗತಲೋಕದ ನಂಟು
ಜೋಗಿ ಪ್ರೇಮ್ ಸಿನಿಮಾ ಸೋಲುತ್ತೋ, ಗೆಲ್ಲುತ್ತೋ ಬೇರೆ ಮಾತು. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ತೆಗೆದುಕೊಳ್ಳುತ್ತೆ. ಇಂದು ತೆರೆಕಂಡಿರುವ 'ಏಕ್ ಲವ್ ಯಾ' ಸಿನಿಮಾ ಕೂಡ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿತ್ತು. 'ಏಕ್ ಲವ್ ಯಾ' ರಿಲೀಸ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳ ಹೆಡ್ ಆಫೀಸ್ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಿದ್ಯಂತೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ.
'ಕರಿಯಾ', 'ಜೋಗಿ', 'ಜೋಗಯ್ಯ' ದಂತಹ ಸಿನಿಮಾ ಮಾಡಿರುವ ಪ್ರೇಮ್ ಭೂಗತಲೋಕದ ಕಥೆ ಹೆಣೆಯುವಲ್ಲಿ ಎತ್ತಿದ ಕೈ. ಹೀರೋಗಳಿಗೆ ಹೊಸ ಇಮೇಜ್ ಕೊಟ್ಟು ಭೂಗತಲೋಕದ ಹೊಸ ಚರಿತ್ರೆಯನ್ನು ಈ ಹಿಂದೆ ತೆರೆಮೇಲೆ ತಂದಿಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಕಥೆಯನ್ನು ತೆರೆಮೇಲೆ ಜೋಗಿ ಪ್ರೇಮ್ ತರುತ್ತಿದ್ದಾರೆ ಅನ್ನುವುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾತು. ಅಸಲಿಗೆ ಧ್ರುವ ಸರ್ಜಾಗಾಗಿ ಪ್ರೇಮ್ ಹೆಣೆದ ಕಥೆಯ ಗುಟ್ಟೇನು? ಈ ಕಥೆ ಮಾಡಿದ್ದು ಯಾರಿಗೆ? ನಿರ್ಮಾಪಕ ಉಮಾಪತಿಗೂ ಈ ಸಿನಿಮಾಗೂ ಏನು ಸಂಬಂಧ? ಗಾಂಧಿನಗರದಲ್ಲಿ ಈ ಮೂವರ ಬಗ್ಗೆ ಓಡಾಡುತ್ತಿರುವ ಅಸಲಿ ಕಥೆಯೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಧ್ರುವ-ಪ್ರೇಮ್ ಚಿತ್ರಕ್ಕೆ 70ರ ದಶಕದ ಸೆಟ್
ಜೋಗಿ ಪ್ರೇಮ್ ಸ್ಮಾಲ್ ಬಜೆಟ್ನಲ್ಲಿ ಸಿನಿಮಾ ಮಾಡಿದ್ದು ತೀರಾ ವಿರಳ. ಅದರಲ್ಲೂ ಸ್ಟಾರ್ ಸಿನಿಮಾಗೆ ಕೈ ಹಾಕಿದ್ದಾರೆ ಅಂದರೆ ಮುಗೀದು ದುಬಾರಿ ಸೆಟ್ಟು, ಫಾರಿನ್ ಶೂಟ್ ಅಂತ ಬಜೆಟ್ ಗಗನಕ್ಕೆ ಏರುತ್ತೆ. ಈಗ ಧ್ರುವ ಸರ್ಜಾ ಜೊತೆ ಮಾಡುತ್ತಿರುವ ಸಿನಿಮಾಗೂ ದುಬಾರಿ ಸೆಟ್ ಒಂದನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ. ಸೀಗೆಹಳ್ಳಿ ಸಮೀಪ 70ರ ದಶಕದ ಸೆಟ್ ಅನ್ನು ಹಾಕುತ್ತಿದ್ದಾರೆ. ಈ ಮೂಲಕ ಮದ್ರಾಸ್ ಪ್ರಾಂತ್ಯವನ್ನು ಸೃಷ್ಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕೋಟಿ ವೆಚ್ಚದಲ್ಲಿ ಈ ಸೆಟ್ ನಿರ್ಮಾಣ ಆಗುತ್ತಿದೆ ಎಂಬುದು ಗಾಂಧಿನಗರದ ಗಲ್ಲಿಗಳಲ್ಲಿ ಗುಲ್ಲೆದ್ದಿರುವ ಸುದ್ದಿ.

ಅಂಡರ್ವರ್ಲ್ಡ್ ಕಥೆ ಹೇಳ್ತಿದ್ದಾರಾ?
ಧ್ರುವ ಸರ್ಜಾಗೆ ಆಕ್ಷನ್ ಹೇಳುತ್ತಿರುವ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಅಂದ್ಹಾಗೆ ಇದು ಜೋಗಿ ಪ್ರೇಮ್ ನಿರ್ದೇಶನ 9ನೇ ಸಿನಿಮಾ. 'ಏಕ್ ಲವ್ ಯಾ' ಚಿತ್ರ ರಿಲೀಸ್ ವಿಚಾರದಲ್ಲಿ ಬ್ಯುಸಿಯಾಗಿದ್ದ ಪ್ರೇಮ್ ಈಗ ನಿರಾಳರಾಗಿದ್ದಾರೆ. ಒಂದೆರಡು ವಾರದ ಬಳಿಕ ಧ್ರುವ ಸರ್ಜಾ ಸಿನಿಮಾ ಕಡೆ ಮುಖ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೆ 70 ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿದೆ.

ಈ ಕಥೆ ದರ್ಶನ್ಗೆ ಮಾಡ್ಬೇಕಿತ್ತಾ ಪ್ರೇಮ್?
ಧ್ರುವ-ಪ್ರೇಮ್ ಸಿನಿಮಾ ಬಗ್ಗೆ ದಿಢೀರನೇ ಸುದ್ದಿಯೊಂದು ಹರಿದಾಡುತ್ತಿದೆ. ಜೋಗಿ ಪ್ರೇಮ್ ಈ ಕಥೆಯನ್ನು ದರ್ಶನ್ಗೆ ಹೇಳಿದ್ದರು. ಆ ವೇಳೆ ಪ್ರೇಮ್ 'ದಿ ವಿಲನ್' ಸಿನಿಮಾ ನಿರ್ದೇಶಿಸುತ್ತಿದ್ದರು. ಆದರೆ, 'ದಿ ವಿಲನ್' ಅಂದುಕೊಂಡಿದ್ದಕ್ಕಿಂತ ತಡವಾಗಿತ್ತು. ಈ ಕಾರಣಕ್ಕೆ ದರ್ಶನ್ ಬೇರೊಂದು ಸಿನಿಮಾಗೆ ಹೊರಟು ಹೋದರು. ಈ ಮಧ್ಯೆ ದರ್ಶನ್ ನಿರ್ದೇಶಕ ಪ್ರೇಮ್ಗೆ ಪುಡಾಂಗ್ ಅಂದಿದ್ದು, ಪ್ರೇಮ್ ಬೇಸರ ಮಾಡಿಕೊಂಡು ದರ್ಶನ್ಗೆ ಸಿನಿಮಾ ಮಾಡದೆ ಇರಲು ನಿರ್ಧರಿಸಿದ್ದರು. ಅದೇ ಚಿತ್ರವನ್ನೇ ಧ್ರುವ ಸರ್ಜಾಗೆ ಮಾಡುತ್ತಿದ್ದಾರೆ ಎಂಬುದು ಕನ್ನಡ ಚಿತ್ರರಂಗದ ಲೇಟೆಸ್ಟ್ ಸುದ್ದಿ.

ಕೆವಿಎನ್ ಪ್ರೊಡಕ್ಷನ್ ನಿರ್ಮಾಣ
ಧ್ರುವ ಹಾಗೂ ಪ್ರೇಮ್ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಬಿಗ್ ಬಜೆಟ್ ಸಿನಿಮಾ ಆಗಿದ್ದು, ಈಗಾಗಲೇ ಕೆಲಸ ಆರಂಭ ಆಗಿದೆ. ಅಸಲಿಗೆ ಈ ಸಿನಿಮಾವನ್ನು ದರ್ಶನ್ಗಾಗಿ ನಿರ್ಮಾಪಕ ಉಮಾಪತಿ ಮಾಡಬೇಕಿತ್ತು ಅನ್ನೋದು ಚಿತ್ರರಂಗಕ್ಕೆ ಹತ್ತಿರದಿಂದ ಬಲ್ಲವರ ಮಾತು. ಆದರೆ ಈ ವಿಷಯದ ಬಗ್ಗೆ ಉಮಾಪತಿ, ಪ್ರೇಮ್, ದರ್ಶನ್ ಯಾರೂ ಇದೂವರೆಗೂ ಮಾತಾಡಿಲ್ಲ. ಸದ್ಯ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಮಾತ್ರ ಪಕ್ಕಾ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾ 'ಮಾರ್ಟೀನ್' ಹಾಗೂ ಪ್ರೇಮ್ ಎರಡೂ ಚಿತ್ರಕ್ಕೂ ಒಟ್ಟೊಟ್ಟಿಗೆ ಕೆಲಸ ಮಾಡಲಿದ್ದಾರೆ ಅನ್ನುವ ಮಾತುಗಳು ಕೂಡ ಹರಿದಾಡುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳು ನಿಜನಾ? ಅಥವಾ ಕೇವಲ ಗಾಳಿ ಸುದ್ದಿ ಅಷ್ಟೆನಾ ಅನ್ನುವುದು ಕೆಲವು ದಿನಗಳಂತೂ ಗೊತ್ತಾಗುತ್ತೆ.


Click it and Unblock the Notifications











