'ನಾತಿಚರಾಮಿ' ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಯಾಳ್ ಪದ್ಮನಾಭನ್
ಬೆಂಗಳೂರು, ಆಗಸ್ಟ್ 14: ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚುವ ಮೂಲಕ ಗಮನಸೆಳೆದಿರುವ ಕನ್ನಡ ಸಿನಿಮಾ 'ನಾತಿಚರಾಮಿ'ಗೆ ವಿವಾದದ ಸುರುಳಿ ಸುತ್ತಿಕೊಂಡಿದೆ. ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಗಳನ್ನು ನೀಡಿರುವುದನ್ನು ಪ್ರಶ್ನಿಸಿ ಕನ್ನಡ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ತೀರ್ಪುಗಾರರ ಸಮಿತಿಯಲ್ಲಿರುವ ನಿರ್ದೇಶಕ ಬಿ.ಎಸ್. ಲಿಂಗದೇವರು ಅವರು 'ನಾತಿಚರಾಮಿ' ಚಲನಚಿತ್ರದ ಸಂಕಲನ ಕಾರ್ಯ ನಡೆದಿರುವ 'ಅಕ್ಕಾ' ಕಮ್ಯುನಿಕೇಷನ್ ಪ್ರೈವೇಟ್ ಲಿ. ಎಂಬ ಕಂಪೆನಿ ಜತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿರುವ ದಯಾಳ್ ಪದ್ಮನಾಭನ್, ಈ ಸಂಬಂಧ ಸಿನಿಮೋತ್ಸವ ನಿರ್ದೇಶನಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು 'ದಿ ವೀಕ್' ಪತ್ರಿಕೆಯ ವರದಿ ತಿಳಿಸಿದೆ.
ಈ ಬಗ್ಗೆ ಬಿ.ಎಸ್. ಲಿಂಗದೇವರು ಅವರನ್ನು ಸಂಪರ್ಕಿಸಿದಾಗ ತಮ್ಮ ವಿರುದ್ಧ ಯಾವುದೇ ದೂರು ದಾಖಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾಗಿ ಪತ್ರಿಕೆ ಹೇಳಿದೆ.
ನಗರ ಕೇಂದ್ರಿತ ಗಂಡು-ಹೆಣ್ಣಿನ ಸಂಬಂಧದ ಕುರಿತಾದ ಸೂಕ್ಷ್ಮ ಅಂಶಗಳ ಎಳೆಯನ್ನಿಟ್ಟುಕೊಂಡು ಹೆಣೆದ 'ನಾತಿಚರಾಮಿ' ಸಿನಿಮಾ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಸಿನಿಮಾಗಳೊಂದಿಗೆ ಸಂಬಂಧ ಹೊಂದಿರಬಾರದು
ಬಿ.ಎಸ್. ಲಿಂಗದೇವರು ಅವರು ಅಕ್ಕಾ ಕಮ್ಯುನಿಕೇಷನ್ಸ್ನ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ನಿಯಮಾವಳಿಗಳ ಪ್ರಕಾರ, ಪ್ರಶಸ್ತಿಗಾಗಿ ಸಲ್ಲಿಕೆ ಮಾಡಿರುವ ಸಿನಿಮಾಗಳೊಂದಿಗೆ ಪ್ರಶಸ್ತಿ ಸಮಿತಿಯ ಸದಸ್ಯರು ಅಥವಾ ಅಧ್ಯಕ್ಷರು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರಬಾರದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

'ಲಿಂಗದೇವರು ಪ್ರಭಾವ ಬೀರಿದ್ದಾರೆ'
'ನಾತಿಚರಾಮಿ ಸಿನಿಮಾದಲ್ಲಿ ಲಿಂಗದೇವರು ಅವರು ನೇರವಾಗಿ ಭಾಗಿಯಾಗಿದ್ದಾರೆ ಮತ್ತು ಅವರು ತೀರ್ಪುಗಾರರ ಸಮಿತಿಯ ಭಾಗವಾಗಿದ್ದಾರೆ. ಇದು ಪ್ರಶಸ್ತಿಗಳ ಆಯ್ಕೆಯಲ್ಲಿ ಅವರು ಬಲವಾದ ಪ್ರಭಾವ ಬೀರಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಅಲ್ಲದೆ, ಈ ಸಿನಿಮಾದ ಸಂಕಲನಕ್ಕೆ ಅತ್ಯುತ್ತಮ ಸಂಕಲನದ ಪ್ರಶಸ್ತಿ ಪಡೆದುಕೊಂಡಿರುವ ನಾಗೇಂದ್ರ ಕೆ. ಉಜ್ಜನಿ ಅವರು 2015ರಲ್ಲಿ 62ನೇ ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡ ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ, ಅವಳು' ಚಿತ್ರಕ್ಕೂ ಸಂಕಲನ ಮಾಡಿದ್ದರು' ಎಂದು ದಯಾಳ್ ಆರೋಪಿಸಿದ್ದಾರೆ.

ಡಿವಿಜಿ ಪದ್ಯದ ಬಳಕೆ
ಪದ್ಮನಾಭನ್ ಅವರ ನಿರ್ದೇಶನದ 'ಆ ಕರಾಳ ರಾತ್ರಿ' ಸಿನಿಮಾವು ಪ್ರಸಕ್ತ ವರ್ಷದ ರಾಷ್ಟ್ರೀಯ ಪ್ರಶಸ್ತಿಯ 15 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಿತ್ತು. ಉತ್ತಮ ಸಾಹಿತ್ಯಕ್ಕಾಗಿ ಪ್ರಶಸ್ತಿ ಪಡೆದಿರುವ 'ನಾತಿಚರಾಮಿ' ಸಿನಿಮಾಕ್ಕಿಂತಲೂ ಉತ್ತಮ ಸಾಹಿತ್ಯ ಹೊಂದಿರುವ ಕನ್ನಡ ಕವಿ ಡಿ.ವಿ. ಗುಂಡಪ್ಪ ಅವರ ಪದ್ಯವನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅದನ್ನು ಪರಿಗಣಿಸಿಲ್ಲ ಎಂದು ಅವರು ಹೇಳಿದ್ದಾರೆ.

ಕನ್ನಡಕ್ಕೆ 13 ಪ್ರಶಸ್ತಿಗಳು
'ನಾತಿಚರಾಮಿ' ಚಿತ್ರವು ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಹಿನ್ನೆಲೆ ಗಾಯನ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜತೆಗೆ ನಟಿ ಶ್ರುತಿ ಹರಿಹರನ್ ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗವು ಈ ಬಾರಿ ಫೀಚರ್ ಮತ್ತು ನಾನ್ ಫೀಚರ್ ಎರಡೂ ವಿಭಾಗದಲ್ಲಿ ದಾಖಲೆಯ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದರಲ್ಲಿ 'ನಾತಿಚರಾಮಿ' ಚಿತ್ರ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.


Click it and Unblock the Notifications











